ದೆಹಲಿ: ಸರ್ಕಾರದ ಬಲವಾದ ನಿಯಂತ್ರಣದಲ್ಲಿರುವ ನಾಗರಿಕ ಅಣು ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ತೆರೆಯುವ ಅವಕಾಶ ಸೇರಿದಂತೆ ಒಟ್ಟು ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ.
ದೇಶದ ವಿಶ್ವವಿದ್ಯಾಲಯಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು ಸ್ವತಂತ್ರವಾಗಿ ಮತ್ತು ಸ್ವಯಂ-ಆಡಳಿತದಿಂದ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿರುವ ‘ವಿಕಸಿತ್ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ’ಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸದನದಲ್ಲಿ ಮಂಡಿಸಿದರು.
ಇನ್ನು, ನಾಗರಿಕ ಅಣು ವಿದ್ಯುತ್ ವಲಯಕ್ಕೆ ಖಾಸಗಿ ಸಹಭಾಗಿತ್ವವನ್ನು ಆಹ್ವಾನಿಸುವ ಉದ್ದೇಶದ ‘ಸಸ್ಟೈನಬಲ್ ಹಾರ್ನೆಸಿಂಗ್ ಅಂಡ್ ಅಡ್ವಾನ್ಸ್ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ’ (ಶಾಂತಿ) ಮಸೂದೆಯನ್ನು ಪಿಎಂಒ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಮಂಡಿಸಿದರು. ಈ ಮಸೂದೆಯ ಮೂಲಕ ‘ಅಟಾಮಿಕ್ ಎನರ್ಜಿ ಆಕ್ಟ್, 1962’ ಮತ್ತು ‘ಸಿವಿಲ್ ಲೈಬಿಲಿಟಿ ಫಾರ್ ನ್ಯೂಕ್ಲಿಯರ್ ಡ್ಯಾಮೇಜ್ ಆಕ್ಟ್, 2010’ ಅನ್ನು ರದ್ದುಗೊಳಿಸಲು ಸರ್ಕಾರವು ಉದ್ದೇಶಿಸಿದೆ.
ಈ ಕಾಯಿದೆಗಳನ್ನು ರದ್ದುಪಡಿಸುವ ಮಸೂದೆಯನ್ನು ನ್ಯಾಯಾಂಗ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಯ ಪ್ರತಿಗಳನ್ನು ವಿಳಂಬವಾಗಿ ವಿತರಿಸಿದ ಕಾರಣ, ಅವುಗಳನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯ ಸಿಗಲಿಲ್ಲ ಎಂದು ವಿರೋಧ ಪಕ್ಷದ ಸಂಸದರಾದ ಮನೀಶ್ ತಿವಾರಿ, ಸೌಗತಾ ರಾಯ್ ಮತ್ತು ಜ್ಯೋತಿಮಣಿ ಆಕ್ಷೇಪ ವ್ಯಕ್ತಪಡಿಸಿದರು.
