Friday, June 20, 2025

ಸತ್ಯ | ನ್ಯಾಯ |ಧರ್ಮ

ಮಾಶಾಸನ ಪಡೆಯಲು ಎರಡು ಕಿಲೋಮೀಟರ್‌ ತೆವಳಿಕೊಂಡೇ ಬಂದ ಅಜ್ಜಿ!

ದಾವಣಗೆರೆ: ಜಿಲ್ಲೆಯ ಹರಿಹರದ ಕುಣಿಬೆಳಕೆರೆ ಎನ್ನುವಲ್ಲಿ ತಿಂಗಳ ಹಿರಿಯ ನಾಗರಿಕರ ಪಿಂಚಣಿ ಪಡೆಯುವ ಸಲುವಾಗಿ ಅಜ್ಜಿಯೊಬ್ಬರು ಎರಡು ಕಿಲೋಮೀಟರ್‌ ದೂರ ತೆವಳಿಕೊಂಡೇ ಬಂದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕುಣೆಬೆಳಕೆರೆ ಪೋಸ್ಟ್‌ ಆಫೀಸ್‌ ಮೂಲಕ ಈ ಅಜ್ಜಿಗೆ ತಿಂಗಳ ಪಿಂಚಣಿ ಬರುತ್ತಿತ್ತು. ಆದರೆ, ಕಳೆದ ಎರಡು ತಿಂಗಳುಗಳಿಂದ ಈ ಹಣ ಅಜ್ಜಿಯ ಕೈಸೇರಿಲ್ಲ. ಈ ಬಗ್ಗೆ ಪೋಸ್ಟ್ ಮ್ಯಾನ್ ಬಳಿ ವಿಚಾರಿಸಿದಾಗ 2 ತಿಂಗಳುಗಳಿಂದ ಹಣ ಬಂದಿಲ್ಲ ಎಂದು ಹೇಳಿದ್ದ. ಮಕ್ಕಳಿಲ್ಲದ ಈ ಅಜ್ಜಿಯ ಪಾಲಿಗೆ ಪಿಂಚಣಿ ಹಣವೇ ಬದುಕಿಗೆ ಆಧಾರವಾಗಿತ್ತು. ಹೀಗಾಗಿ ಅಜ್ಜಿ ಗಿರಿಜಮ್ಮ ಪಿಂಚಣಿ ಕುರಿತು ವಿಚಾರಿಸಲೆಂದು 2 ಕಿಮೀ ತೆವಳಿಕೊಂಡು ಕುಣಿಬೆಳೆಕೆರೆ ಗ್ರಾಮದ ಅಂಚೆ ಕಚೇರಿಗೆ ಬಂದಿದ್ದಾರೆ. ಪಿಂಚಣಿ ತೆಗೆದುಕೊಳ್ಳಲು ತೆವಳಿಕೊಂಡು ಬಂದಿದ್ದರಿಂದ ಅಜ್ಜಿಗೆ ಕಾಲಲ್ಲಿ ಬೊಬ್ಬೆಗಳೆದ್ದಿವೆ. ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಜ್ಜಿಯನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಕುರಿತು ಗಿರಿಜಮ್ಮ ಮಾತನಾಡಿ, “ಪಿಂಚಣಿ ಬಗ್ಗೆ ವಿಚಾರಿಸಲು ಬೆಳಗ್ಗೆ 8 ಗಂಟೆಗೆ ನಂದಿತಾವರೆ ರೇಣುಕಾ ಕ್ಯಾಂಪ್‌ನಿಂದ ಹೊರಟು ಸಂಜೆ 4 ಗಂಟಗೆ ಕುಣೆಬೆಳೆಕೆರೆಯ ಪೋಸ್ಟ್ ಆಫೀಸ್‌ ತಲುಪಿದೆ. ನನಗೆ ಎರಡು ತಿಂಗಳಿನಿಂದ ಪಿಂಚಣಿ ಹಣ ಬಂದಿಲ್ಲ. ಈ ಬಗ್ಗೆ ಪೋಸ್ಟ್ ಮ್ಯಾನ್ ಬಳಿ ಕೇಳಿದರೆ ಹಣ ಬಂದಿಲ್ಲ ನಡಿ ಎಂದು ಗದರಿಸಿ ಕಳುಹಿಸುತ್ತಾನೆ. ನನ್ನ ಮೃತ ಪತಿಯ 10 ಸಾವಿರ ರೂಪಾಯಿ ಹಣ ಬರಬೇಕಿತ್ತು ಅದನ್ನು ಸಹ ಕೊಟ್ಟಿಲ್ಲ. ಆಟೋಗೆ ಹಣ ಇಲ್ಲದ ಕಾರಣ ತೆವಳಿಕೊಂಡು ಬಂದಿದ್ದೇನೆ. ನನಗೆ ಮಕ್ಕಳು ಯಾರೂ ಇಲ್ಲ” ಎಂದು ಅಳಲು ತೊಡಿಕೊಂಡರು.

ಕುಣೆಬೆಳೆಕೆರೆ ಆಶಾ ಕಾರ್ಯಕರ್ತೆ ಆಶಾ ಎನ್ನುವವರು ಮಾತನಾಡಿ, “ಹಿರಿಯರಾದ ಗಿರಿಜಮ್ಮ ಪಿಂಚಣಿ ಹಣ ಬಂದಿಲ್ಲ ಎಂದು ಕುಣೆಬೆಳಕೆರೆ ಗ್ರಾಮಕ್ಕೆ ತೆವಳಿಕೊಂಡು ಬರುತ್ತಿದ್ದರು. ಅವರ ವಿಡಿಯೋವನ್ನು ಸಾರ್ವಜನಿಕರು ಯಾರೋ ತಹಶೀಲ್ದಾರ್‌ಗೆ ಕಳುಹಿಸಿದ್ದಾರೆ. ವೃದ್ಧೆಗೆ ಸಮಸ್ಯೆಯಾಗಿದ್ದು, ನೀವು ನೋಡಿಕೊಳ್ಳಿ ಎಂದು ನನಗೆ ಸೂಚಿಸಿದರು. ಅದರಂತೆ ನಾನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದೇನೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಸಂಬಂಧಿಕರು ಯಾರೂ ಇಲ್ಲ. ಅವರು ಒಬ್ಬರೇ ಇರುವುದು” ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page