Sunday, June 8, 2025

ಸತ್ಯ | ನ್ಯಾಯ |ಧರ್ಮ

ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತ, ಸಾವು; ಬಾಗಲಕೋಟೆಯಲ್ಲೊಂದು ಘೋರ ದುರಂತ

ಮದುವೆ ಮನೆ ಎಂದರೆ ಅದೊಂದು ಸಂಭ್ರಮ ಸಡಗರ. ಹೊಸ ಸಂಬಂಧಗಳಿಂದ ವಧು ವರರಾಧಿಯಾಗಿ ಎರಡೂ ಮನೆಯವರು ಖುಷಿ ಮತ್ತು ಲವಲವಿಕೆಯಿಂದ ಇರುವ ಒಂದು ತಾಣ. ಆದರೆ ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತವಾಗಿ ಇಡೀ ಮದುವೆಯ ಸಂಭ್ರಮವೇ ಸೂತಕದ ಮನೆಯಾಗಿ ಮಾರ್ಪಟ್ಟಿದೆ.

ಹೌದು. ಬಾಗಲಕೋಟೆ ಜಿಲ್ಲೆ ಜಮಖಂಡಿ ‌ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭದಲ್ಲಿ ವಧುವಿಗೆ ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರ್ನೆ ಎಂಬಾತನೇ ಮೃತ ದುರ್ದೈವಿ. ಕಲ್ಯಾಣಮಂಟಪದಲ್ಲಿ ಪ್ರವೀಣ ಕುರ್ನೆ ಹಾಗೂ ಯುವತಿಯ ಮದುವೆ ಸಮಾರಂಭ ನಡೆಸುತ್ತಿತ್ತು. ತಾಳಿ ಕಟ್ಟಿದ ನಂತರ ಆರತಕ್ಷತೆಗೆ ವಧು ವರರನ್ನು ವೇದಿಕೆಗೆ ಕರೆತರುವ ವೇಳೆಗೆ ವರ ಪ್ರವೀಣ್ ಕುರ್ನೆಗೆ ತೀವ್ರ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ಮದುಮಗ ಪ್ರವೀಣನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು ಎನ್ನುವಾಗಲೇ ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ಸಾವು ಕಂಡಿದ್ದಾನೆ. ಕುಸಿದು ಬಿದ್ದ ಬಳಿಕ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ ಪ್ರವೀಣ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಪೋಷಕರ‌ ಆಕ್ರಂದನ ಮುಗಿಲು ಮುಟ್ಟಿದೆ. 

ಮೃತ ದುರ್ದೈವಿ ಪ್ರವೀಣ ಕುರ್ನೆ ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಕುರ್ನೆ ಪುತ್ರ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page