ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಮತ್ತೆ ಮುನ್ನೆಲೆಗೆ ಬಂದಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಗರಣ ಮತ್ತು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಎಸ್ಸಿ/ಎಸ್ಟಿಗಳ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಬೇರೆ ಉದ್ದೇಶಕ್ಕಾಗಿ ಬಳಸಿಕೊಂಡ ಕುರಿತು ಅತೃಪ್ತ ನಾಯಕರ ಗುಂಪು ತಾನು ಪಾದಯಾತ್ರೆಯನ್ನು ಕೈಗೊಳ್ಳುವುದಾಗಿ ಘೋಷಿಸಿದೆ.
ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಯಲಿದೆ.
ಮೈಸೂರು ಚಲೋ ಪಾದಯಾತ್ರೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪಕ್ಷದ 10ಕ್ಕೂ ಹೆಚ್ಚು ಅತೃಪ್ತ ಮುಖಂಡರು ಭಾನುವಾರ ಬೆಳಗಾವಿ ತಾಲೂಕಿನ ಕಿಣಯೆ ಗ್ರಾಮದ ರೆಸಾರ್ಟ್ನಲ್ಲಿ ಗೌಪ್ಯ ಸಭೆ ನಡೆಸಿದರು.
ಶಾಸಕರಾದ ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ ಸಿಂಹ ಮತ್ತು ಜಿ ಎಂ ಸಿದ್ದೇಶ್ವರ; ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖಂಡರು, ಮತ್ತೊಂದು ಪಾದಯಾತ್ರೆ ಕೈಗೊಳ್ಳುವ ನಿರ್ಧಾರ ಕೈಗೊಂಡಿರುವ ಕುರಿತು ಮಾಹಿತಿ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನಗೊಂಡಿರುವ ನಾಯಕರು ಈ ಸಭೆ ನಡೆಸಿದ್ದಾರೆ. ಇಬ್ಬರ ವಿರುದ್ಧ ಪಕ್ಷದ ಕೇಂದ್ರ ನಾಯಕರಿಗೆ ದೂರು ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ.
ಆದರೆ, ಇದು ಭಿನ್ನಮತೀಯ ಚಟುವಟಿಕೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಾದಯಾತ್ರೆ ಹೊರಡುವ ಮುನ್ನ ಪಕ್ಷದ ಕೇಂದ್ರ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗುವುದು, ಇದಲ್ಲದೇ ಇನ್ನೂ ಕೆಲವು ನಾಯಕರು ಬೆಂಗಳೂರಿನಲ್ಲಿ ಸೇರಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
“ಮುಡಾ ಹಗರಣದ ವಿರುದ್ಧದ ಪಾದಯಾತ್ರೆ ಮೈಸೂರಿಗೆ ಸೀಮಿತವಾಗಿತ್ತು. ಆದರೆ, ನಮ್ಮ ಹೋರಾಟ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ಪಾದಯಾತ್ರೆಗೆ ಕೇಂದ್ರ ನಾಯಕರನ್ನು ಆಹ್ವಾನಿಸುವ ಯೋಜನೆಯೂ ಇದೆ” ಎಂದು ಅವರು ಹೇಳಿದರು.
ಇದು ಒಬ್ಬ ವ್ಯಕ್ತಿಯನ್ನು ಹೀರೋ ಮಾಡುವ ಆಂದೋಲನವಲ್ಲ ಎಂದೂ ಯತ್ನಾಳ್ ಹೇಳಿದರು.