ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ 2023 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಖ್ಯಾತ ಕವಿ ಮತ್ತು ಚಲನಚಿತ್ರ ಸಾಹಿತಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಪ್ರದಾನ ಮಾಡಿದರು.
ಗುಲ್ಜಾರ್ ಅವರ ನಿಜವಾದ ಹೆಸರು ಸಂಪೂರ್ಣ ಸಿಂಗ್ ಕಲಾರ. ಅವರು ಹಿಂದಿ ಚಲನಚಿತ್ರಗಳಲ್ಲಿ ಶ್ರೇಷ್ಠ ಗೀತರಚನೆಕಾರರಾಗಿ ಹೆಸರುವಾಸಿ. ಅವರು ಶ್ರೇಷ್ಠ ಉರ್ದು ಕವಿಗಳಲ್ಲಿ ಒಬ್ಬರು. ಆರೋಗ್ಯ ಕಾರಣಗಳಿಂದ ಗುಲ್ಜಾರ್ ಅವರಿಗೆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.
75 ವರ್ಷ ವಯಸ್ಸಿನ ಜಗದ್ಗುರು ರಾಮಭದ್ರಾಚಾರ್ಯರು ಚಿತ್ರಕೂಟದಲ್ಲಿ ತುಳಸಿ ಪೀಠದ ಸ್ಥಾಪಕರು. ಒಬ್ಬ ಪ್ರಮುಖ ಹಿಂದೂ ಆಧ್ಯಾತ್ಮಿಕ ಶಿಕ್ಷಕ ಮತ್ತು ಸಂಸ್ಕೃತ ವಿದ್ವಾಂಸ. ಅವರು 240 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರು ರಾಷ್ಟ್ರಪತಿಗಳ ಕೈಯಿಂದ ನಗದು ಪ್ರಶಸ್ತಿ ಮತ್ತು ಸರಸ್ವತಿಯ ಕಂಚಿನ ಪ್ರತಿಮೆಯನ್ನು ಪಡೆದರು.
ರಾಮಭದ್ರಾಚಾರ್ಯರು ಸಾಹಿತ್ಯ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುರ್ಮು ಶ್ಲಾಘಿಸಿದರು. ಜೊತೆಗೆ 90 ವರ್ಷ ತುಂಬಿದ ಗುಲ್ಜಾರ್ ಅವರನ್ನು ಅವರು ಅಭಿನಂದಿಸಿದರು. ನೀವು ಅನಾರೋಗ್ಯದಿಂದ ಶೀಘ್ರವಾಗಿ ಚೇತರಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.