Thursday, June 19, 2025

ಸತ್ಯ | ನ್ಯಾಯ |ಧರ್ಮ

ʼಗುತ್ತಿದಾರರ ಸಂಘಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ, ನಮ್ಮನ್ನು ರಕ್ಷಿಸಿʼ: ಕೆಂಪಣ್ಣ

ಬೆಂಗಳೂರು: ಕಾಮಗಾರಿ ಮಾಡಬೇಕಾದರೆ ನಾನು ಹೇಳಿದಷ್ಟು ಹಣ ತಂದು ಕೊಡಲಿಲ್ಲ ಅಂದರೆ ಕೆಲಸದಿಂದ ತೆಗೆಯುತ್ತೇನೆ ಎಂದು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಮುನಿರತ್ನ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ಎಲ್ಲ ಎಂಎಲ್‌ ಎಗಳೂ ಕಮಿಷನ್‌ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. 40% ಕಮಿಷನ್‌ ಇಲ್ಲದೆ ಕೆಲಸ ಆಗುತ್ತಿಲ್ಲ. ಇದನ್ನು ಪ್ರಶ್ನೆ ಮಾಡುತ್ತಿರುವ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತೋಟಗಾರಿಕೆ ಸಚಿವ ಮುನಿರತ್ನ, ಸಂಪೂರ್ಣ ದಾಖಲೆ ಕೊಟ್ಟು ಮಾತಾಡಲಿ, ಆರೋಪಗಳಿಗೆ ದಾಖಲೆ ಕೊಡದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಮತ್ತು ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘವನ್ನು ವಿಭಜಿಸಲು ಸಚಿವರು ಯತ್ನಿಸುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ 10,000 ಕೋಟಿ ರುಪಾಯಿ ಕಾಮಗಾರಿ ಆಗಿದೆಯೇ ಎಂದು ಪ್ರಶ್ನಿಸಿದ ಕೆಂಪಣ್ಣ, ಮುನಿರತ್ನ ಅವರು ನಡೆಸಿರುವ ಕಾಮಗಾರಿಯ ಬಗ್ಗೆ ಉನ್ನತಮಟ್ಟದ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

ಕೆಂಪಣ್ಣ ಹೇಳಿಕೆಗೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಗುತ್ತಿಗೆದಾರರ ಸಂಘದವರು ವಿರೋಧ ಪಕ್ಷದ ನಿರ್ದೇಶನದಂತೆ ಆರೋಪ ಮಾಡುತ್ತಿದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುತ್ತಿಗೆದಾರರ ಆರೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಮೇಲೆ ಕೆಂಪಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ, ಇದು ರಾಜಕೀಯ ಪ್ರೇರಿತ ಆರೋಪ ಎಂದು ಕಿಡಿಕಾರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page