Sunday, June 22, 2025

ಸತ್ಯ | ನ್ಯಾಯ |ಧರ್ಮ

ಹಂಸಲೇಖ ಎಂದರೆ ಬರೀ ಹೆಸರಲ್ಲ ಅದು ಚಂದನವನದ ಅಸ್ಮಿತೆ!

ಹಂಸಲೇಖ ಅವರು ಚಿತ್ರ ಸಾಹಿತ್ಯ ಮತ್ತು ಸಂಗೀತಕ್ಕೆ ದೇಸೀಯತೆಯ, ಜಾನಪದ, ಜನಜೀವನದ ಸ್ಪರ್ಶನೀಡಿ ತಮ್ಮದೇ ಭಿನ್ನ ಅಸ್ಮಿತೆ ನೀಡಿದವರು.ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ಶೈಲಿಯ ಸಾಂಸ್ಕೃತಿಕ ಛಾಪು ಒತ್ತಿದ ಈ ಅಗಾಧ ಪ್ರತಿಭೆಯಿಂದ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಲು ರಾಜ್ಯಸರ್ಕಾರ ತೀರ್ಮಾನಿಸಿರುವುದು ದೊಡ್ಡ ಇತಿಹಾಸ ಮತ್ತು ಪರಂಪರೆ ಹೊಂದಿರುವ ಇಡೀ ಚಿತ್ರರಂಗಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ – ಡಾ. ಚಮರಂ, ಚಿತ್ರ ನಿರ್ದೇಶಕರು

ದೇಸಿದೊರೆ, ನಾದಬ್ರಹ್ಮ ಎಂದೇ ಕನ್ನಡ ಜನಮಾನಸದಲ್ಲಿ ನೆಲೆಗೊಂಡಿರುವ ಸಂಗೀತ ಸಾಮ್ರಾಟ, ಸ್ವರಮಾಂತ್ರಿಕ, ಪದಪ್ರವೀಣ ಕನ್ನಡ ಚಿತ್ರರಂಗದ ಸಂಗೀತ-ಸಾಹಿತ್ಯ ದಿಗ್ಗಜ ಹಂಸಲೇಖ ಅವರಿಂದ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಬಹುಜನರು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ. ಅನೇಕರು ಬಹಳ ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ನಿಜಕ್ಕೂ ಇದೊಂದು ಸಮಯೋಚಿತ ಆಯ್ಕೆ ಎಂದರೆ ತಪ್ಪಾಗಲಾರದು.

ಅತ್ಯಂತ ಕಡುಬಡತನದ ಕಷ್ಟಕೋಟಲೆಗಳ ಶ್ರೀಮಂತ ಅನುಭವದ ಮೂಟೆಯನ್ನು ಹೊತ್ತುಕೊಂಡು ಬಂದ ಮೈಸೂರು ಕನ್ನಂಬಾಡಿಯ ಗಂಗರಾಜು ಎಂಬ ತಳಸಮುದಾಯದ ಯುವಕ ತನ್ನೆಲ್ಲಾ ತ್ರಾಸಗಳನ್ನೂ ಚಂದದ ಪದವಾಗಿಸಿ ಅವುಗಳನ್ನೇ ಮುತ್ತಿನ ಹಾರಗಳಾಗಿ ನೇಯ್ದು ಪ್ರಾಸಬದ್ದವಾಗಿ ಜೋಡಿಸಿ, ಹದವಾಗಿ ಹೃದಯ ಮೀಟುವ, ಮನೋಲ್ಲಾಸಗೊಳಿಸುವ ಹಾಡುಗಳಾಗಿಸಿದ ಸಾಹಸಿ. ನೋವನ್ನೇ ನಲಿವನ್ನಾಗಿ ಪರಿವರ್ತಿಸಿಕೊಳ್ಳುವ ಪರಿ ಎಂದರೆ ಇದೇನೆ.

ತನ್ನ ಸಿರಿವಂತ ಅನುಭವಗಳನ್ನೇ ವರಕವಿ ಬೇಂದ್ರೆ ಹೇಳುವಂತೆ ಅದಕು ಇದಕು ಎಲ್ಲದಕೂ ಬಳಸಿ ನಾಟಕವಾಗಿಸಿ, ನಾದವಾಗಿಸಿ, ಕಥೆಯಾಗಿಸಿ, ಕವಿತೆಯಾಗಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ಶೈಲಿಯ ಸಾಂಸ್ಕೃತಿಕ ಛಾಪು ಒತ್ತಿದವರು ಗಂಗರಾಜು ಅಲಿಯಾಸ್ ಹಂಸಲೇಖ!

ಆಡು ಮಾತುಗಳನ್ನೇ ಹಾಡಗಿಸಿದ ಹಂಸಲೇಖರು ಚಂದನವನವನ್ನು ಜನಮಾನಸದಲ್ಲಿ ನೆಲೆಗೊಳಿಸಿದರು.
ಕನ್ನಡ ಚಿತ್ರ ಸಾಹಿತ್ಯ ಮತ್ತು ಸಂಗೀತವನ್ನು ಹಂಸಲೇಖ ಪೂರ್ವ ಮತ್ತು ಹಂಸಲೇಖೋತ್ತರ ಎಂದೇ ಪರಿಗಣಿಸಬೇಕು. ಅಂತಹ ಮೈಲುಗಲ್ಲು ಸೃಷ್ಟಿಸಿದವರು ಹಂಸಲೇಖ.

ಇಂದು ಹಂಸಲೇಖ ಎಂದರೆ ಒಂದು ಸಂಸ್ಥೆ. ಹಂಸಲೇಖ ಚಿತ್ರ ಸಾಹಿತ್ಯ ಮತ್ತು ಸಂಗೀತಕ್ಕೆ ದೇಸೀಯತೆಯ, ಜಾನಪದ, ಜನಜೀವನದ ಸ್ಪರ್ಶನೀಡಿ ತಮ್ಮದೇ ಭಿನ್ನ ಅಸ್ಮಿತೆ ನೀಡಿದವರು.

ಅವರೆಲ್ಲಾ ಸಾಹಿತ್ಯದ ಮೂಲ ಸೆಲೆಯೇ ಜಾನಪದ ಮತ್ತು ದೇಸಿತನ. ಇದನ್ನು ಜನಪ್ರಿಯ ಧಾಟಿಗೆ ಒಗ್ಗಿಸಿ ಚಿತ್ರಸಂಗೀತಕ್ಕೆ ಬಳಸಿ ಜನಮನವನ್ನು ತಣಿಸಿದವರು ಹಂಸಲೇಖ. ತಮ್ಮ ಕಾಯಕವನ್ನು ಕೇವಲ ಜನಪ್ರಿಯತೆ, ಧನಪ್ರಿಯತೆಗಷ್ಟೇ ಸೀಮಿತಗೊಳಿಸದೆ ಸೀಮಾತೀತವಾಗಿಸಲು ಅದನ್ನೊಂದು ಸಂಸ್ಥೆಯಾಗಿಸಿ, ಸಂಶೋಧನೆಗೆ ಒಳಪಡಿಸಿ ಸಂಗೀತವೆಂದರೆ ಮೂಲ ಜನರದು, ಸಂಗೀತವೆಂದರೆ ಜನಪದರ ನಾಡಿಮಿಡಿತ ಎಂದು ಸಾರಿದವರು. ಕನ್ನಡ ಚಿತ್ರರಂಗಕ್ಕೆ ವ್ಯವಹಾರದ ದೃಷ್ಟಿಯಿಂದಲೂ ಸಂಗೀತದ ದೃಷ್ಟಿಯಿಂದಲೂ ವಿಶಾಲತೆಯನ್ನೂ ಘನತೆಯನ್ನು ತಂದುಕೊಟ್ಟವರು ಹಂಸಲೇಖ. ತನ್ನದೇ ಸಾಹಿತ್ಯಕ್ಕೆ ತಾನೇ ಸಂಗೀತ ಸಂಯೋಜಿಸಿ ಅಸಂಖ್ಯಾತ ಚಿತ್ರಗಳಿಗೆ ಸಂಗೀತ ಸಾಹಿತ್ಯ ನೀಡಿದ ಹಂಸಲೇಖರದು ಅಪರೂಪದ ಮತ್ತು ಸರಿಗಟ್ಟಲಾಗದ ದಾಖಲೆಯೇ ಸರಿ.

ಈ ಕಾರಣದಿಂದಲೇ ಕೆಲವರ ಕುಹಕಗಳಿಗೆ ಒಳಗಾದರು. ಯಾವುದೇ ವ್ಯಕ್ತಿ ಟೀಕಾತೀತರಾಗಿರಲು ಸಾಧ್ಯವೇ ಇಲ್ಲ. ಆದರೆ ತನ್ನ ಅಗಾಧ ಪ್ರತಿಭೆ ಮತ್ತು ಬುದ್ದಿಶಕ್ತಿಗಾಗಿಯೇ ಟೀಕೆಗೊಳಗಾಗುವವರು ಹಂಸಲೇಖ ಅವರಂತಹವರು. ಅದಕ್ಕೆ ಕಾರಣ ಆಯಾ ಕ್ಷೇತ್ರಗಳನ್ನು ತಮ್ಮದೆಂದೂ ಇತರರು ಅದನ್ನು ಅತಿಕ್ರಮಿಸಬಾರದೆಂದೂ ನಂಬಿರುವವರ ಕಿಚ್ಚು. ಇಂತಹ ಹೊಟ್ಟೆಯೊಳಗಿನ ಕಿಚ್ಚುಗಳನ್ನು ಸಮಯ ಕಾದು ವಿವಾದವಾಗಿಸಲು ಕೆಲವರು ಕಾಯುತ್ತಿದ್ದರು. ಅದಕ್ಕೊಂದು ಅಪೂರ್ವ ಅವಕಾಶವನ್ನು ಹಂಸಲೇಖ ಅವರೇ ಒದಗಿಸಿಬಿಟ್ಟರು!!

ಅದು ಅಕ್ಟೋಬರ್ 2021, ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಂ.ಶ್ರೀ ಸಭಾಂಗಣದಲ್ಲಿ. “ಮುಳ್ಳೂರು ನಾಗರಾಜ ರಾಜ್ಯಮಟ್ಟದ ಕಾವ್ಯ ಪುರಸ್ಕಾರ” ದ ಕಾರ್ಯಕ್ರಮ. ಮೈಸೂರಿನ ನೆಲೆಹಿನ್ನೆಲೆ ಮತ್ತು ಚಾಮರಾಜನಗರದ ರಂಗವಾಹನಿ ಸಂಸ್ಥೆಯ ಸಿ.ಎಂ ನರಸಿಂಹಮೂರ್ತಿ ಮತ್ತು ಗೋಪಾಲಕೃಷ್ಣ ಅವರುಗಳು ಮತ್ತು ಅವರ ಸಮಾನ ಮನಸ್ಕ ಗೆಳೆಯರು ಸೇರಿ ಮಾಡಿದ ಕಾರ್ಯಕ್ರಮವದು. ಅಲ್ಲಿ ಪ್ರಶಸ್ತಿ ಪುರಸ್ಕೃತ ಕವಿಯನ್ನು ಸನ್ಮಾನಿಸಲು ನಾದಬ್ರಹ್ಮ ಹಂಸಲೇಖರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಾಹಿತ್ಯ ಕ್ಷೇತ್ರದ ಗಣ್ಯರು, ರಾಜಪ್ಪ ದಳವಾಯಿ, ಸಂಗೀತ ವಿವಿಯ ಕುಲಪತಿ ಡಾ.ನಾಗೇಶ ಬೆಟ್ಟಕೋಟೆ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮವದು. ಮಾನಸ ಗಂಗೋತ್ರಿಯ ಸಾಹಿತ್ಯದ ವಿದ್ಯಾರ್ಥಿಗಳು, ಸಂಶೋಧಕರು, ವಿದ್ಯಾರ್ಥಿ ಸಂಘಟನೆಯವರು, ಸಾಹಿತ್ಯಪ್ರಿಯರು, ಹೋರಾಟಗಾರರು, ಚಿಂತಕರು ಮತ್ತು ವಿದ್ವಜ್ಜನರಿಂದ ಸಭೆ ಕಿಕ್ಕಿರಿದು ತುಂಬಿತ್ತು. ಹಂಸಲೇಖರ ಮಾತು ಕೇಳಲೇ ಅಷ್ಟು ಜನ ಬಂದಿದ್ದರು. ಅಂದಿನ ಸಭೆಯಲ್ಲಿ ರಾಜ್ಯ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿ ಸನ್ಮಾನಕ್ಕೆ ಭಾಜನವಾಗಿದ್ದು ಡಾ.ಕೃಷ್ಣಮೂರ್ತಿ ಚಮರಂ ಎಂಬ ನಾನೇ!
ನನ್ನ ಕಾವ್ಯಕೃತಿ “ಬುದ್ದನ ಮಾರ್ಗದಲ್ಲಿ” ಈ ಪುರಸ್ಕಾರಕ್ಕೆ ಭಾಜನವಾಗಿತ್ತು. ನನ್ನ ಮತ್ತು ಹಂಸಲೇಖರ ನಡುವೆ ಬಹಳ ವರ್ಷಗಳ ಆಪ್ತ ಒಡನಾಟವಿದ್ದ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಬಹಳ ಆಪ್ತವಾದ ಕಾರ್ಯಕ್ರಮವಾಗಿತ್ತು.

ಕಾರ್ಯಕ್ರಮದಲ್ಲಿ ಹಂಸಲೇಖರು ಮಾತಾಡುತ್ತಾ ಬಹಳ ಗಂಭೀರವಾದ ವಿಷಯಗಳನ್ನೇ ಪ್ರಸ್ತಾಪಿಸಿದರು. ಮೂಲನಿವಾಸಿಗಳು ಪರಕೀಯರಿಂದ ಹೇಗೆ ತಮ್ಮದೇ ದೇಶದಲ್ಲಿ ಮೂಲೆಗುಂಪಾಗಿದ್ದಾರೆ ಎಂದು ಬಹಳ ಪ್ರಾಚೀನ ಮತ್ತು ಐತಿಹಾಸಿಕ ದಾಖಲೆಗಳ ಸಹಿತ ಸಾಂಸ್ಕೃತಿಕ ಪಲ್ಲಟಗಳನ್ನು ವಿವರಿಸುತ್ತಿದ್ದರು. ಕೊನೆಯಲ್ಲಿ “ನಮ್ಮ ಜನರ ಪರಂಪರೆ ಹೇಗಿದೆಯೆಂದರೆ ಮೈಸೂರಿಗೆ ಬಂದಾಗಲೆಲ್ಲಾ ನಮ್ಮ ಚಮರಂ ನಮ್ಮ ಮನೆಗೆ ಬನ್ನಿ ಗುರುಗಳೇ ನಾಟಿ ಕೋಳಿ ಸಾಂಬಾರ್ ಮಾಡ್ತೀವಿ, ಫಿಶ್ ಫ್ರೈ ಮಾಡ್ತೀವಿ, ಬೋಟಿ ಫ್ರೈ ಮಾಡ್ತೀವಿ…ಎನ್ನುತ್ತಾನೆ…
ಇದು ಮೂಲಜನರ ಮೂಲಗುಣ” ಎಂದು ಹಾಸ್ಯದ ದಾಟಿಯಲ್ಲಿ ಹೇಳುತ್ತಾ “ದಲಿತರ ಮನೆಯ ವಾಸ್ತವ್ಯದ ಮಾತಾಡುವ ಮಂತ್ರಿ ಮಹೋದಯರು, ದಲಿತರ ಕೇರಿಗೆ ಬರುತ್ತೇವೆ ಎಂಬ ಮಠಮಾನ್ಯರು ಹೀಗೆ ದಲಿತರ ಮನೆಗೆ ಬಂದಾಗ ದಲಿತರು ಕೊಡುವ ಪ್ರೀತಿಯ ಈ ಆಹಾರಗಳನ್ನು ಸೇವಿಸುವರೇ?? ಹಾಗಲ್ಲದಿದ್ದ ಮೇಲೆ ಇದೆಲ್ಲಾ ಬೂಟಾಟಿಕೆ ಅಲ್ಲವೇ? ಇದರಿಂದ ಆಗುವ ಸಾಮಾಜಿಕ ಪರಿವರ್ತನೆ ಏನು?” ಎಂದಷ್ಟೇ ಹೇಳಿದರು.
ಕೊನೆಯ ಎರಡು ಲೈನನ್ನು ಕಿಡಿಗೇಡಿ ಪತ್ರಕರ್ತನೊಬ್ಬ ಸುದ್ದಿ ಮಾಡಿದ. ಅದನ್ನೇ ಕಾದಿದ್ದ ಉಳಿದ ಮನುವಾದಿ ಮಾಧ್ಯಮಗಳು ಹರಿಹಾಯ್ದು ರಾದ್ದಾಂತ ಸೃಷ್ಟಿಸಿದವು.

ಇಂತಹ ಅವಕಾಶಕ್ಕಾಗಿ ಕಾದಿದ್ದ ಸಂಗೀತ ಸಾಹಿತ್ಯ ಎಂದರೆ ತಮ್ಮ ಒಡೆತನದ್ದು ಮಾತ್ರ ಎಂಬ ಧೂರ್ತರು ಬೀದಿಗೆ ಬಿದ್ದು ಅರಚಾಡತೊಡಗಿದರು. ಇದೊಂದು ವಿವಾದವಾಗಬಹುದು ಎಂದು ಅದೇ ರಾತ್ರಿ ನಮ್ಮ ಮನೆಯಲ್ಲಿ ನಾಟಿಕೋಳಿ, ಫಿಶ್ ಫ್ರೈ ಊಟ ಸವಿಯುತ್ತಲೇ ಹಂಸಲೇಖ ಮತ್ತು ಅವರ ಸಕುಟುಂಬ ಹಾಗೂ ನರಸಿಂಹಮೂರ್ತಿ, ಗೋಪಾಲಕೃಷ್ಣ, ಸಂಗೀತ ವಿವಿ.ಕುಲಪತಿ ಡಾ.ನಾಗೇಶ್ ಬೆಟ್ಟಕೋಟೆ ಎಲ್ಲರೂ ಮಾತಾಡಿದ್ದೆವು.

ಹಾಗೊಂದು ವೇಳೆ ಅದೊಂದು ವಿವಾದವಾದರೆ ನಮ್ಮ ಜನ ಸ್ವಪ್ರೇರಣೆಯಿಂದ ಅದನ್ನು ಹತ್ತಿಕ್ಕುತ್ತಾರೆ ಎಂದು ಭರವಸೆ ನೀಡಿದ್ದೆವು. ಅಂತೆಯೇ ಅದು ವಿವಾದವಾಯ್ತು. ಎಂದೂ ಭಾರತದ ಯಾವುದೇ ಅನ್ಯಾಯ, ಅಕ್ರಮ ಮತ್ತು ತಾರತಮ್ಯಗಳನ್ನು ಪ್ರಶ್ನೆ ಮಾಡದಿದ್ದ, ಅದರ ಕುರಿತು ತಮ್ಮ ಅಭಿಪ್ರಾಯವನ್ನೂ ಮಂಡಿಸದೇ ಮುಗುಮ್ಮಾಗಿ ತಾವಾಯಿತು ತಮ್ಮ ಸುಖವಾಯ್ತು ಎಂಬಂತಿದ್ದ ಜನಸಮುದಾಯದ ಮುದುಕರು, ಮಕ್ಕಳು, ಮಹಿಳೆಯರೂ ಸಹ ತಮಗೆ ಬಹಳ ಅವಮಾನವಾಯ್ತು ಎಂದು ಬೊಬ್ಬಿಟ್ಟರು. ಕೇಸು ಕೊಟ್ಟರು.

ಅದೇ ವೇಳೆಗೆ ಮೈಸೂರಿನಲ್ಲಿ ನಾವೂ ಹಂಸಲೇಖರನ್ನು ಬೆಂಬಲಿಸಿ ಚಳವಳಿ ಆರಂಭಿಸಿದೆವು. ಮಾನಸ ಗಂಗೋತ್ರಿಯ ಸಂಶೋಧಕರಾದ ಸೋಸಲೇ ಮಹೇಶ, ಮರಿದೇವಯ್ಯ, ಕುಮಾರ, ನಟರಾಜ್ ಶಿವಣ್ಣ ಮುಂತಾದ ದಲಿತ ವಿದ್ಯಾರ್ಥಿ ಒಕ್ಕೂಟದ ಗೆಳೆಯರು ಬೆಳಗಿನಿಂದ ಚಳವಳಿ ರಾತ್ರಿಯಲ್ಲಿ ಪಂಜಿನ ಮೆರವಣಿಗೆ ಮೂಲಕ ಹಂಸಲೇಖರ ಬೆಂಬಲಕ್ಕೆ ನಿಂತರು. ಮಾನಸ ಗಂಗೋತ್ರಿಯ ಈ ಚಳವಳಿಯ ಕಾವು ಏಕಕಾಲಕ್ಕೆ ರಾಜ್ಯಾದ್ಯಂತ ಪಸರಿಸಿತು. ಅದು ಸಸ್ಯಾಹಾರ ವರ್ಸಸ್ ಮಾಂಸಾಹಾರದ ಚಳವಳಿಯಾಗಿ ಮಾರ್ಪಟ್ಟಿತು! ಜಾಲತಾಣದ ಗೆಳೆಯರು “ಬಾಡೇ ನಮ್ ಗಾಡು” ಎಂಬ ಹ್ಯಾಷ್ ಟ್ಯಾಗ್ ಬಳಸಿ ಕಾಡ್ಗಿಚ್ಚಂತೆ ಹಬ್ಬಿಸಿದರು.

ಬೆಂಗಳೂರಲ್ಲಿ ಸೋದರ ಹ.ರಾ‌ ಮಹೇಶ್ ಮತ್ತು ತಂಡ ಬಾಡಿನ ಹಾಡನ್ನೇ ಬರೆದು ಹಂಸಲೇಖರಿಗೆ ಆ ಹಾಡನ್ನೇ ಅರ್ಪಿಸುತ್ತಾ ಮನುವಾದಿಗಳ ತೊಳ್ಳೆನಡುಗಿಸಿದರು!

ಇದರಿಂದ ದಿನದಿಂದ ದಿನಕ್ಕೆ ಚಳವಳಿ ರಾಜ್ಯದ ಮೂಲೆಮೂಲೆಗೂ ಪಸರಿಸಿ ಮನುವಾದಿಗಳನ್ನು ಹತ್ತಿಕ್ಕಿತು. ದಲಿತರು ಮತ್ತು ಬಹುಜನರ ಸಂಘಟನಾತ್ಮಕ ಚಳವಳಿಯ ಝಳಕ್ಕೆ ಎಲ್ಲವೂ ತಣ್ಣಗಾಯ್ತು. ಹಂಸಲೇಖ ಚಲನಚಿತ್ರಗಳ ಅಭಿರುಚಿಯೇ ಇರದ ನಾಡಿನ ಇತರೆಲ್ಲಾ ವರ್ಗದ ಬಹುಜನರೆಲ್ಲರ ಎದೆಯೊಳಗೆ ಮಹಾನಾಯಕರಾಗಿ ಪ್ರತಿಷ್ಟಾಪಿಸಲ್ಪಟ್ಟರು!

ಈ ವಿವಾದದಿಂದ ವಿಚಲಿತರಾಗಿ ಜೀ ಟೀವಿ ಸರಿಗಮಪ ಸಂಗೀತ ಕಾರ್ಯಕ್ರಮಕ್ಕೆ ಸಂಘಟಕರು ಇವರನ್ನು ಒಂದು ವಾರ ತಪ್ಪಿಸಿದರು. ಆದರೆ ಜೀ ಟಿವಿಯನ್ನೇ ಬಹಿಷ್ಕರಿಸುವ ಅಭಿಯಾನವನ್ನು ಜನ ಶುರುಮಾಡಿದರು. ಈ ಅಭಿಯಾನಕ್ಕೆ ಬೆಚ್ಚಿದ ಜೀ ಟಿವಿಯ ರಾಘವೇಂದ್ರ ಹುಣಸೂರು ತಕ್ಷಣ ಕ್ಷಮೆಯಾಚಿಸಿದರು. ಹಂಸಲೇಖ ಮರುದಿನ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಎಂದಿನಂತೆ ವಿರಾಜಮಾನಗೊಂಡರು! “ನನ್ನ ಜನ ನನ್ನ ಬೆನ್ನಿಗಿರುವಾಗ ನನಗೆ ಭೀಮಬಲ ಬಂದಿದೆ” ಎಂದು ಹಂಸಲೇಖ ಅಂದು ಘರ್ಜಿಸಿದ್ದರು.

ಮೊನ್ನೆ ಸಹ ಮೈಸೂರಿನ ಕಲಾಂಮದಿರದಲ್ಲಿ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪನವರ ಪುಸ್ತಕ ಬಿಡುಗಡೆಗಾಗಿ ಬಂದಿದ್ದ ಹಂಸಲೇಖ ಕಲಾಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿವಾದವನ್ನು ನೆನಪಿಸಿಕೊಂಡು ಚಾಮರಾಜನಗರದಿಂದ ರಾಯಚೂರಿನ ತನಕ ನನಗೆ ಭೀಮಸೈನಿಕರು ಬೆಂಬಲ ನೀಡಿ ಆನೆಬಲ ತಂದಿರಿ. ನಾನದನ್ನು ಎಂದೂ ಮರೆಯಲಾರೆ ಎಂದರು.

ಈಗ ಬದಲಾದ ಕಾಲಘಟ್ಟದಲ್ಲಿ, ಮೈಸೂರಿನ ಕನ್ನಂಬಾಡಿಯ ಹಂಸಲೇಖ ಅವರನ್ನು ಮೈಸೂರು ವಿಶ್ವವಿಖ್ಯಾತ ದಸರಾ ಉದ್ಘಾಟನೆ ನೆರವೇರಿಸಲು ಸರ್ಕಾರವೇ ಅತಿಥಿಯಾಗಿ ಆಹ್ವಾನಿಸಿದೆ. ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರಿಂದ ಉದ್ಘಾಟನೆಯಾಗುವ ಪರಂಪರೆ ಹೊಂದಿರುವ ದಸರಾ ಕಾರ್ಯಕ್ರಮ ಈ ಬಾರಿ ಕನ್ನಡ ಚಿತ್ರರಂಗದ ಗಣ್ಯರಾದ ಹಂಸಲೇಖರಿಂದ ಉದ್ಘಾಟನೆಗೊಳ್ಳುತ್ತಿರುವುದು ದೊಡ್ಡ ಇತಿಹಾಸ ಮತ್ತು ಪರಂಪರೆ ಹೊಂದಿರುವ ಇಡೀ ಚಿತ್ರರಂಗಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಸಾಹಿತಿಯಾಗಿ, ಚಿತ್ರನಿರ್ದೇಶನಕನಾಗಿ ಸಹ ಈ ಸಮ್ಮಾನ ನನಗೂ ಸೇರಿದ್ದೇ ಎಂಬ ಹೆಮ್ಮೆ ನನ್ನದೂ ಹೌದು.

ನಾನು ಬರೆದಿರುವ ಬಾಬಾಸಾಹೇಬರ ಕುರಿತ “ಭಾರತ ಭಾಗ್ಯ ವಿಧಾತ” ಕೃತಿಗೆ ಬೆನ್ನುಡಿ, ಚಿತ್ರರಂಗ ಕುರಿತ “ನೀಲಾಕಾಶ” ಕೃತಿಗೆ ಮುನ್ನುಡಿ, “ಅಂಬೇಡ್ಕರ್ ವಾದಿ ಅಭಿವ್ಯಕ್ತಿ ಸ್ವಾತಂತ್ರ್ಯ” ಕೃತಿಗೆ ಅಭಿಪ್ರಾಯ, ನನ್ನ ಚಲನಚಿತ್ರ “ಭಾರತದ ಪ್ರಜೆಗಳಾದ ನಾವು” ಚಿತ್ರ ಸಮರ್ಪಣೆ ಮತ್ತು ಟ್ರೈಲರ್ ಬಿಡುಗಡೆ ಮತ್ತು ಇಪ್ಪತ್ತು ವರ್ಷ ನಿರಂತರವಾಗಿ ಪ್ರಕಟಗೊಂಡ ನಮ್ಮ “ಸಮಾಜ ಪರಿವರ್ತನ” ಪತ್ರಿಕೆಯ ನಿರಂತರ ಓದುಗರಾಗಿ..ಹೀಗೆ ಹಲವು ರೀತಿಯಲ್ಲಿ ನನ್ನ ಬೆನ್ನೆಲುಬಾಗಿ, ಬೆನ್ನುತಟ್ಟುತ್ತಾ ಬಂದ ಹಂಸಲೇಖ ಕಳೆದ ಎಂಟು ವರ್ಷಗಳ ಹಿಂದೆ ಮೈಸೂರು ದಸರಾ ಕವಿಗೋಷ್ಟಿ ಉದ್ಘಾಟಿಸಿದ್ದರು. ಆ ಕವಿಗೋಷ್ಟಿಯಲ್ಲೂ ನಾನು ಕವಿತೆ ವಾಚಿಸಿದ್ದೆ. ನನ್ನ ಗೌರಿ ಲಂಕೇಶ್, ದಾಬೋಲ್ಕರ್, ಕಲ್ಬುರ್ಗಿ, ಬುದ್ದ, ಗಾಂಧೀ, ಬಸವಣ್ಣ, ಹಿರಣ್ಯಕಶ್ಯಪ, ಹಿರಣ್ಯಾಕ್ಷ ಹೀಗೆ ಪುರಾಣ, ಇತಿಹಾಸದಿಂದ ವರ್ತಮಾನದ ತನಕ ಮುಖವಾಡಗಳನ್ನು ತೊಟ್ಟು ಕೊಂದವರ ಕುರಿತ ನನ್ನ “ಮುಖವಾಡ” ಕವಿತೆಯನ್ನು ಬಹಳ ಮೆಚ್ಚಿ ಮಾತಾಡಿದ್ದ ಮಹಾಗುರುಗಳಿಗೆ ಇಂದು ಮಹಾಸಮ್ಮಾನ. ನಾಡಿನ ಹೆಮ್ಮೆಯ ದಸರಾ ಉದ್ಘಾಟನೆಯನ್ನು ನೆರವೇರಿಸುವ ಸುಯೋಗ ಒದಗಿ ಬಂದಿದೆ. ನಾಡಿಗೆ ನಾಡೇ ಈ ಕ್ಷಣದಲ್ಲಿ ಸಂಭ್ರಮಿಸುತ್ತಿದೆ. ಬಹುತೇಕರು ಗುರುಗಳನ್ನು ಸಂಪರ್ಕ ಮಾಡಿ ಅಭಿನಂದನೆ ತಿಳಿಸಲು ಸಾಧ್ಯವಾಗದೆ ನನಗೇ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ! ನಾನೇ ಆನಂದದಲ್ಲಿ ಮೀಯುತ್ತಿದ್ದೇನೆ!!

ನಿಮ್ಮಿಂದ ದಸರಾ ಇನ್ನಷ್ಟು ಕಳೆಗಟ್ಟಲಿ ಗುರುಗಳೇ.. ಅವಮಾನಗಳು ಒಂದಲ್ಲ ಒಂದು ದಿನ ಅಭಿಮಾನವಾಗಿ ಅಭಿಮಾನ ಸಮ್ಮಾನವಾಗಿ ಬಂದೇ ಬರುತ್ತದೆ ಎಂಬ ನಿಮ್ಮದೇ ಒಂದು ಹಾಡಿದೆ. ಅದರಂತೆ ಇಂದು ನೀವು ನಾಡಿನಾದ್ಯಂತ ಸಂತಸಕ್ಕೆ ಕಾರಣರಾಗಿರುವಿರಿ…
ಮತ್ತೊಮ್ಮೆ ನಿಮಗೆ ಹೃದಯಪೂರ್ವಕ ಅಭಿನಂದನೆಗಳು.


ಡಾ.ಚಮರಂ

ಚಿತ್ರ ನಿರ್ದೇಶಕರು

ಇದನ್ನೂ ಓದಿ- ರಂಗಸಂಪದ ಸುವರ್ಣ ಸಂಭ್ರಮದಲ್ಲಿ ‘ಲೋಕದ ಒಳಹೊರಗೆ’

Related Articles

ಇತ್ತೀಚಿನ ಸುದ್ದಿಗಳು

You cannot copy content of this page