ಹರಿಹರ: ಹರಿಹರ ಪಂಚಮಸಾಲಿ ಗುರುಪೀಠದ ವಿವಾದವು ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಗುರುಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಗೊಳಿಸಿದ ಕೆಲವೇ ದಿನಗಳ ಅಂತರದಲ್ಲಿ, ಇದೀಗ ರಾಜ್ಯ ವೀರಶೈವ-ಲಿಂಗಾಯತ ಪಂಚಮಸಾಲಿ ಸಂಘವು ಪ್ರಮುಖ ಧರ್ಮದರ್ಶಿ ಬಿ.ಸಿ. ಉಮಾಪತಿ ಸೇರಿದಂತೆ ಮೂವರು ಟ್ರಸ್ಟಿಗಳನ್ನು ಉಚ್ಚಾಟಿಸಿದೆ.
ಸಮಾಜದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬೀದಿಗಿಳಿಸಿದ್ದು, ನಿಯಮಗಳ ಉಲ್ಲಂಘನೆ ಹಾಗೂ ನಂಬಿಕೆ ದ್ರೋಹ ಎಸಗಿದ್ದಕ್ಕಾಗಿ ಧರ್ಮದರ್ಶಿ ಬಿ.ಸಿ. ಉಮಾಪತಿ, ಕಾರ್ಯದರ್ಶಿ ಜ್ಯೋತಿಪ್ರಕಾಶ್ ಮತ್ತು ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರನ್ನು ಟ್ರಸ್ಟ್ನಿಂದ ಹೊರಹಾಕಲಾಗಿದೆ ಎಂದು ವೀರಶೈವ-ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷ ಸೋಮನಗೌಡ ಎಂ. ಪಾಟೀಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಮೂವರು ಟ್ರಸ್ಟಿಗಳನ್ನು ಉಚ್ಚಾಟಿಸುವ ನಿರ್ಧಾರವನ್ನು ಏಪ್ರಿಲ್ 13ರಂದೇ ಕೈಗೊಳ್ಳಲಾಗಿತ್ತು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸಿರಲಿಲ್ಲ. ಅಂದಿನಿಂದಲೇ ಈ ಟ್ರಸ್ಟಿಗಳಿಗೆ ಯಾವುದೇ ಹಣಕಾಸಿನ ವಹಿವಾಟು ನಿರ್ವಹಿಸಲು ಅಥವಾ ಗುರುಪೀಠಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧ ಹೇರಲಾಗಿತ್ತು ಎಂದು ಸೋಮನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಟ್ರಸ್ಟ್ನ ಬೈಲಾಗಳ ಪ್ರಕಾರ, ಗುರುಪೀಠ ಮತ್ತು ಟ್ರಸ್ಟ್ಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ವೀರಶೈವ-ಲಿಂಗಾಯತ ಪಂಚಮಸಾಲಿ ಸಂಘಕ್ಕೆ ಪೂರ್ಣ ಅಧಿಕಾರವಿದೆ. ಲಭ್ಯವಿರುವ ಮಾಹಿತಿ ಮತ್ತು ದಾಖಲೆಗಳ ಆಧಾರದ ಮೇಲೆ, ಲೆಕ್ಕಪತ್ರದಲ್ಲಿನ ಲೋಪ ಅಥವಾ ಗುರುಪೀಠಕ್ಕೆ ಸಂಬಂಧಿಸಿದ ವಿವಾದಗಳ ಸಂದರ್ಭದಲ್ಲಿ ಸಂಘವು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ವಿವರಿಸಿದ್ದಾರೆ.
2008ರಲ್ಲಿ ಸ್ಥಾಪನೆಯಾದ ಟ್ರಸ್ಟ್, ಕಳೆದ 18 ವರ್ಷಗಳಲ್ಲಿ ತನ್ನ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರವನ್ನು ಒದಗಿಸಿಲ್ಲ. ಗುರುಪೀಠ ಸ್ಥಾಪನೆಯ ಮೂಲ ಉದ್ದೇಶವೇ ಇಲ್ಲಿ ವಿಫಲವಾಗಿದೆ. ಈವರೆಗೆ ಒಂದು ಶಿಕ್ಷಣ ಸಂಸ್ಥೆಯಾಗಲೀ ಅಥವಾ ವಿದ್ಯಾರ್ಥಿನಿಲಯವನ್ನಾಗಲೀ ನಿರ್ಮಿಸಿಲ್ಲ. ಈ ಟ್ರಸ್ಟಿಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ದಾರಿ ತಪ್ಪಿಸಿದ್ದಾರೆ ಎಂದು ಸೋಮನಗೌಡ ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಟ್ರಸ್ಟ್ ಲೆಕ್ಕಪತ್ರಗಳನ್ನು ಒದಗಿಸಲು ಏಪ್ರಿಲ್ 27ರ ಗಡುವು ನೀಡಿದೆ. ಆದರೆ ಸಮಾಜದ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಜೂನ್ ತಿಂಗಳಲ್ಲಿ ಲೆಕ್ಕಪತ್ರಗಳನ್ನು ಮಂಡಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಅರುಣಕುಮಾರ್ ಪೂಜಾರ್, ನಂದಿಹಳ್ಳಿ ಹಾಲಪ್ಪ, ವೀರಶೈವ-ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರೇಗೌಡ ಬುರುಪನಹಳ್ಳಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೆೇವಿನಮರದ ಹಾಗೂ ಇತರರು ಉಪಸ್ಥಿತರಿದ್ದರು.
