ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕುರಗುಂದ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದ ಪರಿಶಿಷ್ಟ ಸಮುದಾಯದ ರವಿಸಿದ್ದಯ್ಯ ಎಂಬುವವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಕುರಿತು ಜಾವಗಲ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಆ.5 ರಂದು ಅವರು ದರ್ಶನಕ್ಕೆಂದು ಹೋದಾಗ, ಅದೇ ಗ್ರಾಮದ ಹೇಮಂತ, ಪ್ರವೀಣ, ರಮೇಶರೆಡ್ಡಿ, ಪ್ರತಾಪ್, ಮಹದೇವಪ್ಪ, ಮನೋಜ, ಸುನಿಲ್, ಅಮಿತ್, ಸಂಜು, ರವಿಕುಮಾರ, ರೇಣುಕ ಎಂಬುವವರು ತಡೆಯೊಡ್ಡಿದ್ದರು.
‘ಟವೆಲ್ನಿಂದ ಕುತ್ತಿಗೆ ಬಿಗಿದು, ಕೆಳಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದು, ರಸ್ತೆಯ ಮೇಲೆ ಎಳೆದು, ಊಟ ಮಾಡಿ ಬಿಸಾಕಿದ ಎಲೆಗಳನ್ನು ಮೈಮೇಲೆ ಹಾಕಿದರು. ಬಟ್ಟೆಗಳನ್ನು ಹರಿದು, ಅರೆಬೆತ್ತಲೆ ಮಾಡಿ, ದೊಣ್ಣೆಗಳಿಂದ ಹಲ್ಲೆ ಮಾಡಿದರು. ಜಾತಿ ನಿಂದನೆ ಮಾಡಿದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ದೇವಾಲಯಕ್ಕೆ ಬಂದರೆ ಮನೆಗೆ ಬೆಂಕಿ ಹಾಕಿ ಕುಟುಂಬವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಯಾರೂ ಅವನಿಗೆ ಅನ್ನ, ನೀರು ಕೊಡಬೇಡಿ ಎಂದು ಬಹಿಷ್ಕಾರ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.