ಹಾಸನ : ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರು ಪತ್ನಿ ಗೀತಾ ಶಿವರಾಜಕುಮಾರ್ ಅವರೊಂದಿಗೆ ಭಾನುವಾರ ಹಾಸನಾಂಬ ದೇವಾಲಯಕ್ಕೆ ಆಗಮಿಸಿ ತಾಯಿ ಹಾಸನಾಂಬೆಯ ದರ್ಶನ ಪಡೆದು ಪುನಿತರಾದರು. ಬಳಿಕ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವರ ದರ್ಶನ ಮಾಡಿಕೊಂಡರು.
ದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜಕುಮಾರ್ ಅವರು, ಹಾಸನಾಂಬೆ ತಾಯಿಯ ದರ್ಶನ ಮಾಡಲು ನಾವು ಬಹಳ ದಿನಗಳಿಂದ ಬಯಸುತ್ತಿದ್ದೆವು. ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಸ್ವತಃ ಮನೆಗೆ ಬಂದು ಆಹ್ವಾನಿಸಿದರು. ತಾಯಿ ಆಶೀರ್ವಾದ ಇದ್ದರೆ ನಮ್ಮನ್ನು ತಾನೇ ಕರೆಯಿಸಿಕೊಳ್ಳುತ್ತಾಳೆ ಎನ್ನುವುದು ನನ್ನ ವಿಶ್ವಾಸ.
ಜಿಲ್ಲಾ ಉಸ್ತುವಾರಿ ಸಚಿವರು ಕೂಡ ದೇವಾಲಯದ ಒಳಗೆ ಇದ್ದು, ಭಕ್ತರಿಗೆ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಸನಕ್ಕೆ ಬಂದು ತುಂಬಾ ದಿನಗಳಾದವು, ಈಗ ಬಂದು ತುಂಬ ಸಂತೋಷವಾಗಿದೆ ಎಂದರು. ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಸ್ವಾರ್ಥಿಯಲ್ಲ, ಎಲ್ಲರಿಗೂ ಚೆನ್ನಾಗಿರಲಿ ಎಂದು ತಾಯಿಯ ಬಳಿಗೆ ಬೇಡಿಕೊಂಡಿದ್ದೇನೆ.. ಮುಂದಿನ ಚಿತ್ರ ಎ.ಕೆ.೪೫ ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದ್ದು, ಇನ್ನೂ ಹಲವಾರು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿಸಿದರು.
ಹಿರಿಯ ನಟ ಶಿವರಾಜಕುಮಾರ್ ಅವರು ಪ್ರೋಟೋಕಾಲ್ ಪ್ರಕಾರ ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿದರು. ದೇವಾಲಯದ ಒಳಗೆ ಇಳಿಯುತ್ತಿದ್ದಂತೆ ಅಭಿಮಾನಿಗಳಿಂದ “ಶಿವಣ್ಣಾ! ಶಿವಣ್ಣಾ!” ಎಂದು ಕೂಗುಗಳು ಮೊಳಗಿದವು. ಅವರು ಅಭಿಮಾನಿಗಳತ್ತ ಕೈಬೀಸಿ, ಕೆಲವರ ಕೈ ಕುಲುಕಿ, ಉತ್ಸಾಹ ತುಂಬಿದ ಕ್ಷಣ ಸೃಷ್ಟಿಸಿದರು. ಬಳಿಕ ಪತ್ನಿ ಗೀತಾ ಸಮೇತ ವಾಹನದೊಳಗೆ ಕುಳಿತು ಮುಂದಿನ ಪ್ರಯಾಣ ಮುಂದುವರೆಸಿದರು.