Tuesday, June 24, 2025

ಸತ್ಯ | ನ್ಯಾಯ |ಧರ್ಮ

HDK ಫ್ಯಾಮಿಲಿ ಜಾಲಿ ಟ್ರಿಪ್ ; ‘ಬ್ರದರ್ ಸ್ವಾಮಿ’ ಕಾಲೆಳೆದ ಕಾಂಗ್ರೆಸ್

ಅಶ್ಲೀಲ ಪೆನ್ ಡ್ರೈವ್ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಿ ಪ್ರಜ್ವಲ್ ರೇವಣ್ಣ ಬೆಂಗಳೂರು ವಾಪಸ್ಸಾಗುವ ಸೂಚನೆ ಸಿಗುತ್ತಿದ್ದಂತೆ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಸಮೇತ ಕಬಿನಿ ಹಿನ್ನೀರಿನ ಪ್ರದೇಶ ಹಾಗೂ ಕೇರಳದ ವಯನಾಡ್ ಕಡೆ ಟ್ರಿಪ್ ಹೋಗಿದ್ದಾರೆ. ಇದನ್ನು ಉಲ್ಲೇಖಿಸಿದ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿ ಹೊಣೆಗೇಡಿ ಎಂದು ಟೀಕಿಸಿದೆ.

ಪ್ರಜ್ವಲ್ ರೇವಣ್ಣನ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದ್ಧಂತೆ, ದಿನಕ್ಕೊಂದರಂತೆ ಸರಣಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಮತ್ತು ಡಿಕೆ ಶಿವಕುಮಾರ್ ಮೇಲೆ ನಿರಂತರ ವಾಗ್ದಾಳಿ ನಡೆಸಿದ್ದರು. ಕುಂತಲ್ಲಿ ನಿಂತಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಅಸ್ತಿತ್ವ ಉಳಿಸುವ ಭರದಲ್ಲಿ ಪರೋಕ್ಷವಾಗಿ ಈ ಲೈಂಗಿಕ ದೌರ್ಜನ್ಯದ ಪ್ರಕರಣದ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದರು.

ಆದರೆ ಯಾವಾಗ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬರುವ ಸೂಚನೆ ಸಿಗುತ್ತಿದ್ದಂತೆ ಕುಮಾರಸ್ವಾಮಿ ದಿಢೀರನೆ ಮಾಧ್ಯಮಗಳಿಂದ ದೂರವಾದರು. ಸಧ್ಯ ಪ್ರಜ್ವಲ್ ಬೆಂಗಳೂರಿಗೆ ಬರುವ ಹಿಂದಿನ ದಿನ ಅಂದ್ರೆ ನಿನ್ನೆ ಕುಟುಂಬ ಸಮೇತರಾಗಿ ಜಾಲಿ ಟ್ರಿಪ್ ಹೋಗಿದ್ದಾರೆ. ಕಬಿನಿ ಜಲಾಶಯದ ಹಿನ್ನೀರು ಪ್ರದೇಶ, ಕೇರಳದ ವಯನಾಡ್ ಕಡೆಗೆ ಪಯಣ ಬೆಳೆಸಿದ್ಧಾರೆ.

ಈ ಬಗ್ಗೆ ಕುಮಾರಸ್ವಾಮಿ ಕಾಲೆಳೆದ ಕಾಂಗ್ರೆಸ್ ಪಕ್ಷ, “ಜಾಲಿ ಟ್ರಿಪ್ ಗೆ ಹೋಗಿದ್ದು ಪ್ರಕರಣದ ಕುರಿತು ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಹೇಡಿತನವೊ ಅಥವಾ ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ ಎಂದು ಸಂದೇಶ ನೀಡುವುದಕ್ಕೋ?” ಎಂದು ಕಾಲೆಳೆದಿದೆ.

“ಪ್ರಜ್ವಲ್ ಪ್ರಕರಣದಲ್ಲಿ ಬ್ರದರ್ ಸ್ವಾಮಿಗಳು ಇದುವರೆಗೂ ಒಮ್ಮೆಯೂ ಹೊಣೆಗಾರಿಕೆಯಿಂದ ವರ್ತಿಸಿದ ಉದಾಹರಣೆ ಇಲ್ಲ. ತಮ್ಮದೇ ಪಕ್ಷದ, ತಮ್ಮದೇ ಕುಟುಂಬದ ವ್ಯಕ್ತಿಯೊಬ್ಬನಿಂದ ಇಡೀ ರಾಜ್ಯವೇ ತಲೆತಗ್ಗಿಸುವ ಕೆಲಸ ನಡೆದಿದ್ದರೂ ಬ್ರದರ್ ಸ್ವಾಮಿಗಳಿಗೆ ಕಿಂಚಿತ್ ಪಶ್ಚಾತ್ತಾಪವಿಲ್ಲದೆ ಜಾಲಿ ಟ್ರಿಪ್ ಹೊಡೆಯುತ್ತಿರುವುದು ನಾಚಿಕೆಗೇಡು” ಎಂದು ಆರೋಪಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page