ಹಾಸನ : ಹಾಸನ ಜಿಲ್ಲೆಯ ಮಲೆನಾಡು & ಪಶ್ಚಿಮಘಟ್ಟ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು ಬಾರಿ ಮಳೆಗೆ ರೈಲ್ವೆ ಹಳಿ ಮೇಲೆ ದೈತ್ಯಾಕಾರದ ಬಂಡೆಗಳು ಹಾಗೂ ಗುಡ್ಡ ಕುಸಿತವಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಯಡೆಕುಮಾರಿ ಬಳಿ ನಡೆದಿದೆ. ಕಿಲೋಮೀಟರ್ 74 & 75 ಅರೆಬೆಟ್ಟ ಮತ್ತು ಯಡೆಕುಮಾರಿ ಬಳಿ ರೈಲ್ವೆ ಹಳಿ ಮೇಲೆ ಬಂಡೆಗಳು ಹಾಗೂ ಗುಡ್ಡ ಕುಸಿತವಾಗಿರುವುದರಿಂದ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ

ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಅನತಿ ದೂರಕ್ಕೆ ಬಂದು ನಿಂತಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಬಂಡೆ ಉರುಳಿ ಬಿದ್ದಿರುವುದರಿಂದ ರೈಲ್ವೇ ಹಳಿ ಕೂಡ ಡ್ಯಾಮೇಜ್ ಆಗಿದ್ದು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿಯಿಂದ ರೈಲು ನಿಲುಗಡೆಗೊಂಡಿದೆ. ನೂರಾರು ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದು ರೈಲ್ವೆ ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳುತ್ತಿದ್ದಾರೆ. ಬಂಡೆ ಬಿದ್ದಿರುವ ಸ್ಥಳಕ್ಕೆ ರೈಲ್ವೆ ಇಲಾಖೆ ರಕ್ಷಣಾ ಸಿಬ್ಬಂದಿ ತೆರಳಿದ್ದು ಬಂಡೆ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.