ಹಾಸನ : ಬೇಲೂರು ನಿಂದ ಹಾಸನ ರೈಲ್ವೆ ಮಾರ್ಗಕ್ಕೆ 503 ಎಕರೆ ಭೂಸ್ವಾಧೀನ ಪಡಿಸಿಕೊಂಡು ಒಂದು ತಿಂಗಳೊಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಕೇಂದ್ರ ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಅವರು ಸೂಚಿಸಿದ್ದುಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈಲ್ವೆ, ಕೆ.ಪಿ.ಟಿ.ಎಲ್, ರೈಟ್ಸ್ ಸಂಸ್ಥೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರೈಲ್ವೆ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿವಹಿಸಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆದು 2 ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೋಳಿಸಲು ಕ್ರಮವಹಿಸುವಂತೆ ಸೂಚಿಸಿದರು.
ಕೆ.ಪಿ.ಟಿ.ಎಲ್ ಅಧಿಕಾರಿಗಳು ವಿದ್ಯುತ್ ಲೈನ್ ಹಾಗೂ ಸಬ್ ಸ್ಟೇಷನ್ಗಳಿಗೆ ಸಂಬಂದಿಸಿದ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು. ಸಕಲೇಶಪುರ ಭಾಗದಲ್ಲಿ ರೈಲ್ವೆ ಮಾರ್ಗದ ಮೇಲೆ ಭೂ ಕುಸಿತವಾಗುತ್ತಿದ್ದು ಈ ಸಮಸ್ಯೆ ನಾಲ್ಕು ತಿಂಗಳಲ್ಲಿ ಬಗೆಹರಿಸಲು ಕ್ರಮವಹಿಸುವಂತೆ ತಿಳಿಸಿದರು.
ರೈಲ್ವೆಯೂ ಸಾಮಾನ್ಯ ಜನರ ಜೀವನಾಡಿ ಅಧಿಕಾರಿಗಳು ನಿರ್ಲಕ್ಷ ಮಾಡದೇ ಹೆಚ್ಚಿನ ಮುತುವರ್ಜಿವಹಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲವಾಗುವಂತೆ ಲೋರ್ಕಾಪಣೆ ಮಾಡಲು ಸಹಕಾರ ನೀಡಬೇಕು ಎಂದು ತಿಳಿಸಿದರು, ಸಕಲೇಶಪುರದಿಂದ ಸುಬ್ರಮಣ್ಯದವರೆಗೆ ರೈಲ್ವೆ ಮಾರ್ಗವನ್ನು 57 ಟರ್ನಲ್ಗಳು, 7೦೦ ಸೇತುವೆಗಳು ಹಾಗೂ ಎರಡು ಬದಿಯ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕಷ್ಟವಾಗುವುದರಿಂದ ಪ್ರತ್ಯೇಕ ರೈಲ್ವೆ ಮಾರ್ಗ ಡಿಪಿಆರ್ ಮಾಡಿ ಟೆಂಡರ್ ಕರೆದು 2026 ಪೂರ್ಣಗೊಳಿಸಲು ಅಧಿಕಾರಿಗಳಿಗೆ ಎಂದರು.
ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ೩೪ ಕೋಟಿ ರೂ ವೆಚ್ಚದಲ್ಲಿ, ಹಾಸನ ರೈಲ್ವೆ ನಿಲ್ದಾಣದಲ್ಲಿ 22 ಕೋಟಿ ಸಕಲೇಶಪುರದ ರೈಲ್ವೆ ನಿಲ್ದಾಣದಲ್ಲಿ 26 ಕೋಟಿ ರೂ ವೆಚ್ಚದಲ್ಲಿ ಆಧುನಿಕರಣ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಸಂಸದರಾದ ಶ್ರೇಯಸ್ ಪಟೇಲ್ ಅವರು ಮಾತನಾಡಿ ಅರಸೀಕೆರೆಯಿಂದ ಮೈಸೂರಿಗೆ ಹೆಚ್ಚುವರಿಯಾಗಿ ಒಂದು ಪ್ಯಾಸೆಂಜರ್ ರೈಲು ಒದಗಿಸುವಂತೆ, ದುದ್ದದಿಂದ ತಿಪಟೂರಿಗೆ ಹೊಸ ರೈಲ್ವೆ ಲೈನ್ ಆದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು. ಕಡೂರು ,ಬೀರೂರು ನಿಲ್ದಾಣ ದುಸ್ಥಿತಿಯಲ್ಲಿದ್ದು, ಇವುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಆಧುನಿಕರಣ ಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ಹಾಸನ -ಸೋಲಾಪುರ ಎಕ್ಸ್ ಪ್ರೆಸ್ ರೈಲನ್ನು ಶ್ರವಣಬೆಳಗೊಳ, ಚನ್ನರಾಯಪಟ್ಟಣ ಹಾಗೂ ಹಿರಿಸಾವೆಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.ಮುಂಬೈಗೆ ಹೊಗುವ ರೈಲು ವಾರದಲ್ಲಿ ೩ ದಿನ ಸಂಚರಿಸಿದರೆ ಚನ್ನರಾಯಪಟ್ಟಣ ತಾಲೂಕಿನ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.ಮಳೆಗಾಲದಲ್ಲಿ ಗದ್ದೆ ಬಿಂಡೆನಹಳ್ಳಿ, ಬೆಕ್ಕ, ಬೂಕನಬೆಟ್ಟ, ಚನ್ನರಾಯಪಟ್ಟಣದ ಅಂಡರ್ ಪಾಸ್ ನಲ್ಲಿ ನೀರು ನಿಲ್ಲದಂತೆ ನಿರ್ವಹಣೆ ಮಾಡಬೇಕಿದೆ ಎಂದರು.
ಶಾಸಕರಾದ ಸಿಮೆಂಟ್ ಮಂಜು ಅವರು ಮಾತನಾಡಿ ಆಲೂರು ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಆಧುನಿಕರಣ ಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಶಾಸಕರಾದ ಹೆಚ್.ಕೆ ಸುರೇಶ್ ಅವರು ಮಾತನಾಡಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ರೈತರಿಗೆ ನೀಡುವ ಪರಿಹಾರವನ್ನು ದುಪ್ಪಟ್ಟು ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ,
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ರೈಲ್ವೆ ಇಲಾಖೆ ಹಾಗೂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.