ಹಾಸನ: ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮೂರು ಬಂಡೆಗಳನ್ನು ರೈಲ್ವೇ ಇಲಾಖೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ರೈಲು ಸಂಚಾರ ಪುನರಾರಂಭವಾಗಿದೆ.
ಮೊದಲು ಗುಡ್ಡ ಕುಸಿತದಿಂದ ಘಟನೆ ನಡೆದಿದೆ ಎಂದು ಭಾವಿಸಲಾಗಿತ್ತು. ಆದರೆ ರೈಲ್ವೆ ವ್ಯಾಗನ್ ನಲ್ಲಿ ಸಾಗಿಸುತ್ತಿದ್ದ ಬಂಡೆಗಳು ಉರುಳಿದ್ದರಿಂದ ಸಮಸ್ಯೆ ಆಗಿತ್ತು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರೈಲ್ವೆ ಕಾರ್ಯಾಚರಣೆಗೆ ಬಳಸಲು ವ್ಯಾಗನ್ನಲ್ಲಿ ಬಂಡೆಗಳನ್ನು ಹೊತ್ತೊಯ್ಯುತ್ತಿದ್ದಾಗ, ಕೆಲವು ಬಂಡೆಗಳು ಆಯ ತಪ್ಪಿ ಹಳಿಯ ಮೇಲೆ ಬಿದ್ದಿದ್ದವು. ಇದರಿಂದ ಸಕಲೇಶಪುರದಲ್ಲಿ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ಹಾಗೂ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಯಡಕುಮೆರಿಯಲ್ಲಿ ವಿಜಯಪುರ-ಮಂಗಳೂರು ಸೆಂಟ್ರಲ್ ರೈಲು ನಿಂತಿದ್ದವು.
ರೈಲ್ವೆ ಸಿಬ್ಬಂದಿ ಸುಮಾರು 5 ಗಂಟೆಗಳ ಕಾಲ ಶ್ರಮಿಸಿ ಬಂಡೆಗಳನ್ನು ತೆರವುಗೊಳಿಸಿದರು. ಈ ಅವಧಿಯಲ್ಲಿ ಪ್ರಯಾಣಿಕರು ರೈಲಿನಲ್ಲೇ ಕಾಲ ಕಳೆಯಬೇಕಾಯಿತು. ಪ್ರಸ್ತುತ ಎಲ್ಲಾ ಮೂರು ರೈಲುಗಳ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.