Wednesday, June 26, 2024

ಸತ್ಯ | ನ್ಯಾಯ |ಧರ್ಮ

ಚಿತ್ರ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧೋರಣೆಯಿಂದಾಗುತ್ತಿರುವ ಪಲ್ಲಟಗಳು | ಭಾಗ 3

ಬಲಪಂಥೀಯ ರಾಜಕಾರಣ ವಿಜೃಂಭಿಸಲಾರಂಭಿಸಿದ 2014 ರ ನಂತರ ಸಿನಿಮಾವೊಂದನ್ನು ಮಾಡುವುದು ಬಹಳ ಸವಾಲಿನ ಮತ್ತು ಅಪಾರ ಆರ್ಥಿಕ ನಷ್ಟದ ಕೆಲಸವಾಗುತ್ತಿದೆ. ಈ ಬಗೆಗಿನ ಅನೇಕ ಒಳನೋಟಗಳನ್ನು ಸಿನಿಮಾ ವಿದ್ಯಾರ್ಥಿಯೇ ಅಗಿರುವ ವಿವೇಕ ಅವರು ಮೂರು ಭಾಗಗಳಲ್ಲಿ ನೀಡಿದ್ದಾರೆ. ಕೊನೆಯ ಭಾಗ ಇಲ್ಲಿದೆ. ನಾವು ಎಚ್ಚರಗೊಳ್ಳಬೇಕಾದ ಸಮಯವಿದು. ಸಿನೆಮಾ ಕ್ಷೇತ್ರದ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದರೆ ಬಲಪಂಥೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ನಮಗಿರುವ ಮತಾಧಿಕಾರವನ್ನು ಬಳಸಿಕೊಳ್ಳಬೇಕು.

ದಿ ಕಾಶ್ಮೀರ್ ಫೈಲ್ಸ್

ಈ ವರೆಗೆ ಹೇಳಿರುವುದು ಆಡಳಿತದ ವಿರುದ್ಧವಿರುವ ಕಲಾವಿದರ ಕಥೆಯಾದರೆ, ಆಡಳಿತದ ಪರವಿರುವವರ ಕಥೆ ಇನ್ನೂ ಭಿನ್ನ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಬಿಡುಗಡೆಯಾದಾಗ ಹೊರಬಂದ ಕೆಲವು ವಿಡಿಯೊಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ ನಮ್ಮ ಸಮಾಜವನ್ನು ಎಷ್ಟು ಆಳಕ್ಕೆ ಹೋಗಿ ಒಡೆಯಲಾಗಿದೆ ಎಂದು. ಚಿತ್ರಮಂದಿರದಲ್ಲಿ ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಹಾಗು ಇನ್ನೂ ಹಲವು ಘೊಷಣೆಗಳು ಹೊಮ್ಮಿದವು. ಇವೆಲ್ಲವೂ ಮತ್ತೆ ಹಗೆಯಿಂದಲೇ ಕೂಗುತ್ತಿದ್ದ ಜನರ ಗುಂಪಾಗಿತ್ತು. ‘ಫೈಲ್ಸ್’ ಚಿತ್ರ ಬಿಡುಗಡೆಯಾದಾಗ ನಮ್ಮ ಪ್ರಧಾನಿ ಮೋದಿಯಿಂದ ಹಿಡಿದು ಪ್ರತಿ ರಾಜ್ಯದ ಮುಖ್ಯಮಂತ್ರಿಗಳು (ಬಿಜೆಪಿ ಆಡಳಿತದ ರಾಜ್ಯಗಳ), ಮಂತ್ರಿಗಳು, ಸಂಸದರು ಹಾಗು ಶಾಸಕರಿಂದ ಈ ಚಿತ್ರದ ಬಗೆಗೆ ಟ್ವೀಟ್ ಮಾಡಿಸಲಾಯಿತು. ಈ ಪಟ್ಟಿಗೆ ನಮ್ಮ ‘ಬೊಮ್ಮಾಯಿ’ಯವರೂ ಸೇರಿದರು. ವಿಪರ್ಯಾಸವೆಂದರೆ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಕೇವಲ ಎರಡು ಘಂಟೆಗಳಲ್ಲಿ 36 ಜನ ಪ್ರಾಣ ಕಳೆದುಕೊಂಡಾಗ ಗೃಹಸಚಿವರಾಗಿದ್ದ ಬೊಮ್ಮಾಯಿಯವರು ಇನ್ನೂ ಸಹ ಆ ದುರಂತದ ಬಗೆಗೆ ಹಾಗು ಪ್ರಾಣ ಕಳೆದುಕೊಂಡ ಜನರ ಪರವಾಗಿ ಏನೂ ಮಾತನಾಡಿಲ್ಲ, ಆದರೆ ಸುಮಾರು ಎರಡು ದಶಕಗಳ ಹಿಂದಿನ ಕಾಶ್ಮೀರಿ ಪಂಡಿತರ ನೋವಿಗೆ ಬೊಮ್ಮಾಯಿ ಸ್ಪಂದಿಸಿದ್ದು ನೋಡಿದರೆ ಗೊತ್ತಾಗುವುದು ಒಂದು ವಿಷಯ, ಅದು ಮುಖ್ಯಮಂತ್ರಿಯಾಗಲಿ, ಸಂಸದರಾಗಲಿ, ಮಂತ್ರಿಯಾಗಿರಲಿ, ಇಲ್ಲಾ ಪ್ರಧಾನಿಯೇ ಆಗಿರಲಿ, ಎಲ್ಲರೂ ಸಹ ಒಂದು ದೊಡ್ಡ ಮೆಶಿನರಿಯ ಭಾಗವಾಗಿದ್ದಾರೆಂದು. ಈ ಮೆಶಿನರಿ ಬಿಜೆಪಿಯ ಮಾತೃಸಂಸ್ಥೆ ಆರ್.ಎಸ್.ಎಸ್ ನ ಬಹುದಶಕಗಳ ಕನಸನ್ನು (ಒಂದು ರಾಷ್ಟ್ರ ಒಂದು ಧರ್ಮ) ಸಾಕಾರಗೊಳಿಸಿಕೊಳ್ಳುವ ಕಾರಣಕ್ಕೆ ಅಸ್ತಿತ್ವಕ್ಕೆ ಬಂದಿದೆ ಎಂಬುದು ಕಣ್ಣಿಗೆ ರಾಚುವ ಸತ್ಯ. ಸರ್ಕಾರದ ಅನುರಾಗಿಗಳಾದ ಹಲವು ಕಲಾವಿದರಿಗೆ ಎಲ್ಲಿಲ್ಲದ ಸವಲತ್ತುಗಳನ್ನು ಸಹ ಪ್ರತಿಕಾಣಿಕೆಯಾಗಿ ಸರ್ಕಾರ ನೀಡಿದೆ. ಅದು ಕಂಗನಾ ರಣೌತ್ ಪಡೆದ ವೈ ಪ್ಲಸ್ ಸೆಕ್ಯುರಿಟಿ ಇರಬಹುದು, ಅಕ್ಷಯ್ ಕುಮಾರ್ ಗೆ ಮೋದಿಯವರು ಸಂದರ್ಶನ ನೀಡಿದ್ದಾಗಿರಬಹುದು ಅಥವಾ ಗಾಂಧಿ ಕುಟುಂಬದ ಬಗೆಗೆ ಎಗ್ಗು ಸಿಗ್ಗಿಲ್ಲದೇ ಮಾತನಾಡುವ ‘ಆರ್.ಆರ್.ಆರ್’ ನ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರಿಗೆ ನೀಡಿದ ರಾಜ್ಯಸಭೆಯ ಸದಸ್ಯತ್ವ ಇರಬಹುದು. ಹೀಗೇ ಸರ್ಕಾರದ ಪರವಾಗಿರುವ ಅನೇಕ ಕಲಾವಿದರಿಗೆ ಪಾರಿತೋಷಕಗಳು ರತ್ನಗಂಬಳಿ ಹಾಕಿ ನೀಡಲಾಗುತ್ತಿದೆ. ಆದರೆ ೮೦ ವರ್ಷ ದಾಟಿದ್ದ ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತ ಹಾಗು ಆದಿವಾಸಿಗಳ ಪರವಾಗಿ ಬಿಡುವಿಲ್ಲದೆ ದುಡಿದಿದ್ದ ಸ್ಟಾನ್ ಸ್ವಾಮಿಯವರು ನೀರು ಕುಡಿಯಲು ‘ಸಿಪ್ಪರ್’ ಕೇಳಿದರೆ ನಮ್ಮ ಕೋರ್ಟುಗಳು ಕೊಡಲಿಲ್ಲ!

ಅಲ್ಲಾ ಅಲ್ಲಾ ನೀನೇ ಎಲ್ಲಾ

ನಮ್ಮ ದೇಶದ ಚಿತ್ರರಂಗವು ಅತ್ಯಂತ ಉಜ್ವಲ ಅತೀತವನ್ನು ಹೊಂದಿದೆ. ಇಲ್ಲಿ ಮೊಹಮ್ಮದ್ ರಫಿ ‘ಹರಿ ಓಂ…’ ಎಂದು ಹಾಡಿದ ಹಾಡು ಮನೆಮನೆಯಲ್ಲಿ ಮೊಳಗಿದ ಕಾಲವೊಂದಿತ್ತು. ಮತ್ತೊಂದು ವಿಷಯವೆಂದರೆ ಈ ಹಾಡು ‘ಬೈಜು ಬಾವ್ರಾ’ ಚಿತ್ರದ್ದು. ಈ ಚಿತ್ರವನ್ನು ಬರೆದದ್ದು ಪಾಕಿಸ್ತಾನದ ಖ್ಯಾತ ಚಿತ್ರಕಥೆಗಾರ ಹಾಗು ನಿರ್ದೇಶಕ ಝಿಯಾ ಸರ್ಹದಿ, ಸಂಗೀತ ನೌಶಾದ್ ಅವರದ್ದು, ಸಾಹಿತ್ಯ ಶಕೀಲ್ ಬದಾಯುನಿ ಹಾಗು ಹಾಡಿದ್ದು ನಮ್ಮ ಪ್ರೀತಿಯ ರಫಿ. ಈಗ ಈ ಬೆಳವಣಿಗೆ ಸಾಧ್ಯವಾ ಎಂದು ಒಮ್ಮೆ ಯೋಚಿಸಿ ನೋಡಿ. ನಮ್ಮ ಕರ್ನಾಟಕ ರತ್ನ ರಾಜಕುಮಾರ್ ಅವರು ಹಾಡಿದ ‘ಅಲ್ಲಾ ಅಲ್ಲಾ ನೀನೇ ಎಲ್ಲಾ…’ ಎಂಬ ಹಾಡು ಇಂದಿಗೂ ಪ್ರತಿ ಈದ್ ಗೆ ಟಿವಿ ಹಾಗು ರೇಡಿಯೋದಲ್ಲಿ ಪ್ರಸಾರವಾಗುತ್ತದೆ. ‘ಅಲ್ಲಾ ಅಲ್ಲಾ…’ ಹಾಡು ಬರೆದದ್ದು ಚಿ. ಉದಯಶಂಕರ್ ಹಾಗು ಸಂಗೀತ ರಾಜನ್-ನಾಗೇಂದ್ರ ಅವರದ್ದಾಗಿತ್ತು. ಇಷ್ಟು ಮುಕ್ತವಾಗಿದ್ದ ನಮ್ಮ ಚಿತ್ರರಂಗ ಹೇಗೆ ಸಂಕುಚಿತವಾಯಿತು ಎಂಬುದು ಯಾರಾದರೂ ಸಂಶೋಧಿಸಬಹುದಾದ ವಿಷಯ.

ಧ್ವನಿಯನ್ನು ಎತ್ತುವ ನಟರು/ನಿರ್ದೇಶಕರು

ಆದರೆ ಇಂತಹ ಸಂಕಟದ ಪರಿಸ್ಥಿತಿಯಲ್ಲೂ ತಮ್ಮ ಧ್ವನಿಯನ್ನು ಎತ್ತುವ ನಟರು/ನಿರ್ದೇಶಕರೂ ಇದ್ದಾರೆ. ತಮಿಳಿನ ವೆಟ್ರಿಮಾರನ್, ಪ ರಂಜಿತ್, ವೆಂಕಟ್ ಪ್ರಭು, ಹಿಂದಿಯ ಅನುರಾಗ್ ಕಶ್ಯಪ್, ಹನ್ಸಲ್ ಮೆಹ್ತಾ, ಸುಧೀರ್ ಮಿಶ್ರಾ, ಕೇರಳದ ರಾಜೀವ್ ರವಿ, ಆಶಿಕ್ ಅಬು, ಕನ್ನಡದ ಕಿಶೋರ್, ಡಾಲಿ ಧನಂಜಯ ಹೀಗೆ ಹಲವು ಜನ ಕಲಾವಿದರು ತಮ್ಮ ತಮ್ಮ ಪರಿಧಿಯಲ್ಲಿ ಬಲಪಂಥಿಯ ಪ್ರೊಪಗಾಂಡವನ್ನು ಜನರಿಗೆ ತಿಳಿಸಿ ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ‘state-support’ ಇರುವುದು ಸರ್ಕಾರದ ಪರವಿರುವ ಜನರಿಗೆ, ಮುಕ್ತವಾಗಿ ಮಾತನಾಡುವ ಕಲಾವಿದರಿಗಲ್ಲ. ಮುಕ್ತವಾಗಿ ಮಾತನಾಡುವ ಜನರಿಗೆ ಎಂದಿಗೂ ಯಾವ ರೀತಿಯ ಬೆಂಬಲವೂ ಸರ್ಕಾರದ ಕಡೆಯಿಂದ ಸಿಕ್ಕಿಲ್ಲ ಎನ್ನುವುದು ನಿಮಗೂ ತಿಳಿದಿದೆ.

ಮಾನಾಡು ಚಿತ್ರದ ವಿಶೇಷ

ಇದೇನು ಹೊಸ ವಿಚಾರವಲ್ಲ. ಇತ್ತೀಚೆಗೆ ಬಂದ ತಮಿಳಿನ ‘ಮಾನಾಡು’ ಎಂಬ ಚಿತ್ರವು ಅದ್ಭುತ ಯಶಸ್ಸನ್ನು ಗಳಿಸಿತು. ಈ ಚಿತ್ರವು ಒಬ್ಬ ಮುಸಲ್ಮಾನನನ್ನು ಬಳಸಿಕೊಂಡು ಒಂದು ವ್ಯವಸ್ಥೆ ಹೇಗೆ ಸಮಾಜದಲ್ಲಿ ಶಾಂತಿ ಕದಡಲು ಬಯಸುತ್ತದೆ ಎಂದು ನಿರ್ದೇಶಕ ‘ವೆಂಕಟ್ ಪ್ರಭು’ ಬಹಳ ಮೊನಚಾಗಿ ಹೇಳಿದ್ದಾರೆ. ಇಂತಹ ಸಿನಿಮಾಗಳ ಯಶಸ್ಸು ತುಂಬಾ ಮುಖ್ಯ. ಇನ್ನು ‘state-support’ ನೇರವಾಗಿ ಪಡೆಯದೇ ಇದ್ದರು ಯಾವುದಾದರೂ ಚಿತ್ರ ಸರ್ಕಾರದ ವಿಚಾರಧಾರೆಗೆ ತಳುಕು ಹಾಕಿಕೊಂಡರೆ ಅದನ್ನು ಯಶಸ್ವಿಗೊಳಿಸಲು ‘ಹೊರಗಿನ ಗುಂಪು’ಗಳು ತುಂಬಾ ಕೆಲಸ ಮಾಡುತ್ತವೆ. ತೆಲುಗಿನ ‘ಕಾರ್ತಿಕೇಯ’, ಹಿಂದಿಯ ‘ತಾನ್ಹಾಜಿ’ ಹಾಗು ಇನ್ನು ಮುಂದೆ ಬರಲಿರುವ ಶ್ರೀರಾಮನ ಜನ್ಮಚರಿತ್ರೆ ಆಧಾರಿತ ‘ಆದಿಪುರುಶ್’ ಈ ಸಾಲಿಗೆ ಸೇರುವ ಚಿತ್ರಗಳು.

ಇದನ್ನೂ ಓದಿ-https://peepalmedia.com/shifts-in-the-film-world-due-to-extreme-right-wing-attitudes-part-one/ ಚಿತ್ರ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧೋರಣೆಯಿಂದಾಗುತ್ತಿರುವ ಪಲ್ಲಟಗಳು | ಭಾಗ ಒಂದು

ಧೈರ್ಯ ಎಲ್ಲಿಂದ ಇವರಿಗೆ ಬರುತ್ತಿದೆ?

ಕಾರ್ತಿಕೇಯ ಚಿತ್ರದ ನಾಯಕ ನಿಖಿಲ್ ಪ್ರಕಾರ ನಮ್ಮ ದೇಶ ಉದ್ಧಾರವಾಗದೇ ಇರಲು ಕಾರಣ ‘ಜಾತ್ಯಾತೀತತೆ’ ಅಂತೆ. ಹಾಗೆಂದು ಅವರೇ ಹೇಳಿದ್ದಾರೆ. ಮೊದಲೆಲ್ಲ ಈ ತರಹದ ಮಾತುಗಳಾಡಲು ಹತ್ತು ಬಾರಿ ಯೋಚಿಸುತ್ತಿದ್ದರು. ಈಗ ಅಧಿಕಾರದ ತುತ್ತತುದಿಯಲ್ಲಿ ಕುಳಿತಿರುವವರ ಆಸರೆಯಿಂದ ಈ ತರಹದ ಮಾತುಗಳು ಸಾರಾಸಗಟಾಗಿ ಕೇಳಿಬರುತ್ತಿವೆ. ವಿಜಯೇಂದ್ರ ಪ್ರಸಾದ್ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಾಂಧಿ-ನೆಹರು ಕಂಡರೆ ನನಗಾಗುವುದಿಲ್ಲ ಏಕೆಂದರೆ ಪಟೇಲ್ ಅವರನ್ನು ಪ್ರಧಾನಿಯಾಗಲು ಅವರೆಲ್ಲ ತಡೆದರು ಎಂಬ ಅಡಗೂಲಜ್ಜಿ ಕಥೆಯನ್ನೇ ನಂಬಿಕೊಂಡಿದ್ದಾರೆ. ಈ ಅಪರಿಮಿತ ಧೈರ್ಯ ಇವರಿಗೆಲ್ಲ ಎಲ್ಲಿಂದ ಬರುತ್ತಿದೆ? ದೇಶ ಕಟ್ಟಿದ ಸೇನಾನಿಗಳ ಬಗೆಗೆ ಹೀಗೆ ಮಾತನಾಡಲು ಸ್ವಲ್ಪವೂ ಅಳುಕು ಬರದೇ ಇರಲು ಕಾರಣವೇನು? ಮತ್ತೆ ನಾನು ಅದೇ ಮಾತನ್ನು ಹೇಳುತ್ತೇನೆ – “ಅಧಿಕಾರದ ಚುಕ್ಕಾಣಿ ಹಿಡಿದವರು ಕೊಡುತ್ತಿರುವ ಧೈರ್ಯವೇ ಇದಕ್ಕೆಲ್ಲ ಕಾರಣ.”

ಡ್ಯಾಮೇಜ್‌ ಆಗೋಗಿದೆ

ಈ ಎಲ್ಲ ಬೆಳವಣಿಗೆಗಳೂ ಬಹುಶಃ ಬಿಜೆಪಿ ಅಧಿಕಾರದಿಂದ ಕೆಳಗಿಳಿದ ಮೇಲೆ ಕಡಿಮೆಯಾಗಬಹುದು ಅಥವಾ ನಶಿಸಿಯೂ ಹೋಗಬಹುದು. ಆದರೆ ‘Damage has been already done’ ಎನ್ನುವ ಹಾಗೆ ರಿಪೇರಿ ಮಾಡಲಾಗದಷ್ಟು ಮಟ್ಟಕ್ಕೆ ಈ ದ್ವೇಶ ಬೆಳೆದಿದೆ. ಇದು ಕೇವಲ ಕಲಾವಿದರಿಗೆ ಮುಕ್ತವಾಗಿ ಸಿನಿಮಾ, ನಾಟಕ ಹಾಗು ಇನ್ನಿತರೆ ಪ್ರದರ್ಶನಗಳನ್ನು ಮಾಡುವ ಬಗೆಯಲ್ಲ, ಬದಲಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯವೂ ಆಗಿರುತ್ತದೆ. ಏಕೆಂದರೆ ಒಮ್ಮೆ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರ ನೀಡಿದ ನಂತರ ಯಾವುದೇ ಚಿತ್ರವಾದರೂ ಅದರ ಪ್ರದರ್ಶನವನ್ನು ಆತಂಕವಿಲ್ಲದೇ ನಡೆಯುವಂತೆ ಮಾಡುವುದು ಕಾನೂನು ಪಾಲಕರ ಕರ್ತವ್ಯ. ಆದರೆ ಅದು ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದು ನಿಮ್ಮ ಕಣ್ಣಲ್ಲೇ ನೋಡುತ್ತಿರುವಿರಿ. ಇದಕ್ಕೆಲ್ಲ ಪರಿಹಾರ ಇರುವುದು ನಮ್ಮ ಮುಂದಿನ ಪೀಳಿಗೆಯಲ್ಲಿ. ನಮ್ಮ ಮಕ್ಕಳನ್ನು ಎಷ್ಟರ ಮಟ್ಟಿಗೆ ಧರ್ಮನಿರಪೇಕ್ಷರಾಗಿಸಬಹುದೋ ಅಷ್ಟು ಆಗಿಸಬೇಕು. ಏಕೆಂದರೆ 40-50ರ ಹರೆಯದ ಜನರ ಯೋಚನೆ ಬದಲಿಸುವ ಶಕ್ತಿ ಯಾರಿಗೂ ಇಲ್ಲ. ಹಾಗಾಗಿ ನಮ್ಮ ಮುಂದೆ ಬೆಳೆಯುತ್ತಿರುವ ಮಕ್ಕಳನ್ನು ಪ್ರಗತಿಪರತೆಯ ಕಡೆಗೆ ಒಯ್ಯಬೇಕಿರುವುದು ನಮ್ಮ ಕರ್ತವ್ಯ.

ಪ್ರತೀಕಾರದ ದಾಹ ಒಳಿತಲ್ಲ

9/11 ದುರಂತ ನಡೆದಾಗ ಅಮೆರಿಕದ ಸಂಸತ್ತಿನಲ್ಲಿ ಪ್ರತೀಕಾರದ ಪರವಾಗಿ ಪ್ರತಿಯೊಬ್ಬ Senetor ಸಹ ಮತ ಹಾಕಿದ್ದರು, ಕೇವಲ ಒಬ್ಬರನ್ನು ಬಿಟ್ಟು. ಜಾರ್ಜ್ ಬುಶ್ ಅಂದಿನ ಅಧ್ಯಕ್ಷರಾಗಿದ್ದರು. ಎಗ್ಗು ಸಿಗ್ಗಿಲ್ಲದೆ ದೇಶಗಳ ಮೇಲೆ ಹರಿಹಾಯ್ದು ನಿಖರತೆಯಿಲ್ಲದೇ ಮಾಡಿದ ಯುದ್ಧವೇ ಇಂದಿನ ಐಸಿಸ್ ಸೃಷ್ಟಿಗೆ ಕಾರಣವಾಯಿತು. ಅಂದು ಪ್ರತೀಕಾರದ ದಾಹದಲ್ಲಿದ್ದ ಅಮೆರಿಕದ ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಮುಂದಿನ ದಾರಿ ಮಸುಕಾಯಿತು. ಸಂಸತ್ತಿನಲ್ಲಿ ಯುದ್ಧದ ವಿರುದ್ಧ ಮತ ಹಾಕಿದವರು ಬಾರ್ಬರ ಲೀ ಎಂಬ ಮಹಿಳಾ ಸೆನೆಟರ್. ಅವರು ಹೇಳಿದ ಮಾತು ಇಂದಿಗೂ ಪ್ರಸ್ತುತ. “ನೀವು ಮಾಡುವ ಯುದ್ಧವು ನಿಮಗೇ ತಿರುಗಿ ಹೊಡೆಯುತ್ತದೆ ಹಾಗಾಗಿ ಪ್ರತೀಕಾರದ ದಾಹ ಒಳ್ಳೆಯದಲ್ಲ.” ಎಂದು ಸಾರಿ ಸಾರಿ ಹೇಳಿದ್ದರು. ಇಂದಿನ ಅಮೆರಿಕದ ಶಾಂತಿಪ್ರಿಯ ರಾಜಕಾರಣಿಗಳೆಲ್ಲರೂ ಅಂದು ಪ್ರತೀಕಾರ ಬಯಸಿದವರೇ.

ಭಾರತದಲ್ಲಿ ಆರ್.ಎಸ್.ಎಸ್. ಮಾಡುತ್ತಿರುವುದು ಯುದ್ಧ ಎಂದು ಕರೆಯಲು ಸಾಧ್ಯವಿಲ್ಲದಿದ್ದರೂ ಸಹ, ಇದು ಯಾವುದೇ ಯುದ್ಧಕ್ಕೂ ಕಡಿಮೆಯಿಲ್ಲ. ಜಾತ್ರೆಗಳಲ್ಲಿ ಮುಸ್ಲಿಮರ ಅಂಗಡಿಗೆ ಅವಕಾಶ ನೀಡದಿರುವುದು, ನಮಾಝ್ ಮಾಡಲು ಅಡ್ಡಿಪಡಿಸುವುದು, ಹಿಜಾಬ್ ವಿವಾದ, ಹೀಗೇ ಹತ್ತು ಹಲವು ಪ್ರಯತ್ನಗಳು ಅಲ್ಪಸಂಖ್ಯಾತರನ್ನು ಮೂಲೆಗುಂಪಾಗಿಸುವ ಯೋಜನೆಯನ್ನೇ ಹೊಂದಿವೆ. ಇದು ಈಗಾಗಲೇ ಕೈಮೀರುವ ಸರಹದ್ದಿನಲ್ಲಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳಬೇಕು. ಇದರ ಶುರುವಾಗಬೇಕಿರುವುದು ಸಾಂಸ್ಕೃತಿಕ ಜಗತ್ತಿನಿಂದ. ಪ್ರಗತಿಪರ ಸಿನಿಮಾಗಳನ್ನು ಹೆಚ್ಚು ನೋಡಿ ಪಸರಿಸಬೇಕಾಗಿರುವುದು ಇಂದಿನ ತುರ್ತು. ಜರ್ಮನಿಯಲ್ಲಿ ಚಿತ್ರಹಿಂಸೆಯನ್ನು ಅನುಭವಿಸಿದ ಯೆಹೂದಿಗಳೇ ಇಂದು ಪ್ಯಾಲೆಸ್ತೇನ್ ನ ಅರಬ್ ಜನರಿಗೆ ಸಂಕಟ ಕೊಡುತ್ತಿರುವುದು. ಇತಿಹಾಸದಿಂದ ನಾವೇನು ಕಲಿಯದೇ ಇದ್ದರೂ ಸಹಬಾಳ್ವೆಯನ್ನು ಒಡೆದ ಎಲ್ಲ ಜನರೂ ಕೊನೆಗೆ ಏನಾದರು ಎಂಬುದನ್ನಾದರೂ ಕಲಿಯಬಹುದಲ್ಲವೇ?

2002 ರಲ್ಲಿ ಮಣಿರತ್ನಂ ಅವರ ‘ಕನ್ನತ್ತಿಲ್ ಮುತ್ತಮಿಟ್ಟಾಲ್’ ಚಿತ್ರದ ವೈರಮುತ್ತು ಅವರ ಹಾಡಿನ ಮೂಲಕ ಈ ಲೇಖನಕ್ಕೊಂದು ಅಲ್ಪವಿರಾಮ ಕೊಡಲು ಬಯಸುತ್ತೇನೆ… ನಮಸ್ಕಾರ.

ಬಿಳಿಹೂವುಗಳು ಎಲ್ಲೆಡೆ ಅರಳಲಿ

ಬಿಸಿಲಿನಂತೆ ಶಾಂತಿಯು ಭೂಮಿಯನ್ನು ಪಸರಿಸಲಿ

ಕಾಂತಿ ತುಂಬಿದ ಬೆಳ್ಕಿರಣಗಳು ಇಳೆತಾಕಲಿ

ಮೈ ಮುರಿದು ನಿಂತು ಅರಳು, ಓ ಹೂವೇ!

ಅಮ್ಮನ ಮಡಿಲಲ್ಲಿ ಮಗು ನಿದ್ದೆಯಿಂದ ಏಳಲಿ

ಮಗುವಿನ ನಗುವ ಸದ್ದಿನಲ್ಲಿ ಜಗತ್ತು ಅರಳಲಿ.

ವಿವೇಕ,  ಬೆಂಗಳೂರು.

ಕಳೆದ ಹತ್ತು ವರ್ಷಗಳಿಂದ ಮಾಧ್ಯಮ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ವಿವೇಕ್‌,6 ವರ್ಷಗಳಿಂದ ಸಿನಿಮಾ ರಂಗದಲ್ಲಿ ಬರಹಗಾರನಾಗಿ ಹಾಗು ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ ಇದರ ನಡುವೆ ಮುಂಬಯಿನಲ್ಲಿ ನೆಲೆಸಿ ಇರಾಸ್ಇಂಟರ್ನ್ಯಾಶನಲ್ ಸ್ಟುಡಿಯೋಗೆ ಚಿತ್ರಕಥಾ ಬರಹಗಾರನಾಗಿ ಕೆಲಸಮಾಡಿದ್ದಾರೆ.ಎಲ್ಲಕಿಂತ ಹೆಚ್ಚಾಗಿ ಇವರು ಸಿನಿಮಾ ವಿದ್ಯಾರ್ಥಿ.

ಇದನ್ನು ಓದಿದ್ದೀರಾಚಿತ್ರ ಜಗತ್ತಿನಲ್ಲಿ ತೀವ್ರ ಬಲಪಂಥೀಯ ಧೋರಣೆಯಿಂದಾಗುತ್ತಿರುವ ಪಲ್ಲಟಗಳು|ಭಾಗ 2 https://peepalmedia.com/extreme-right-wing-shifts-in-the-film-world-part-2/

Related Articles

ಇತ್ತೀಚಿನ ಸುದ್ದಿಗಳು