ನಮ್ಮ ಸುತ್ತ ಹಬ್ಬುತ್ತಿರುವ ಯುದ್ಧ, ದೇವರು-ಧರ್ಮ ಮುಂತಾದ ಭಾವನೆಗಳನ್ನು ಕೆರಳಿಸುವ ವಿಷಯಗಳ ಮೇಲೆ ಜಗಳ- ಇಂಥ ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ನಾವು ಒಮ್ಮೆ ಬುದ್ಧ ಚಿಂತನೆಯತ್ತ ನಮ್ಮ ಮನಸನ್ನು ಹೊರಳಿಸಿ ಮೌನವಾಗಿ ವಸ್ತುನಿಷ್ಠವಾಗಿ ಚಿಂತಿಸಬೇಕು ಎನ್ನುತ್ತಾರೆ ವಿಶ್ವ ಶಾಂತಿ ದಿನ (ಸೆ.೨೧)ದ ನೆನಪಲ್ಲಿ ಉಪನ್ಯಾಸಕಿ, ಕವಯಿತ್ರಿ ಜ್ಯೋತಿ ಗುರುಪ್ರಸಾದ್. ಓದಿ..ಪೀಪಲ್ ಮೀಡಿಯಾ ವಿಶೇಷ ಲೇಖನ.
2500 ವರ್ಷಗಳ ಹಿಂದೆಯೇ ಜೀವಿಸಿ, ಆ ಕಾಲದಲ್ಲೇ ಮನುಜ ಕುಲ ಶಾಂತಿಯಿಂದ ಜೀವಿಸ ಬಹುದಾದ ಜೀವನ ಕಲೆಯನ್ನು ಅನ್ವೇಷಿಸಿ ಸಾಧಿಸಿ ತೋರಿಸಿದವನು ಗೌತಮ ಬುದ್ಧ. ಈತನದು ಸಂತನ ಅರಿವು ಹಾಗೂ ವಿಜ್ಞಾನಿಯ ತರ್ಕಶುದ್ಧಿ ಬೆರೆತ ಧರ್ಮ ಮಾರ್ಗ.
ಸಂತನ ಅರ್ಹತೆ ಪಡೆದವನು ಬುದ್ಧ
ಧರ್ಮ ಎಂದರೆ ಧರ್ಮವಾಗಿರುವುದು ಎಂದಷ್ಟೇ ಅರ್ಥ. ಅದನ್ನೇ ಬುದ್ಧ ತನ್ನ ಸ್ಥಳೀಯ ಪಾಲಿ ಭಾಷೆಯಲ್ಲಿ ಬರೆದದ್ದು ‘ಧಮ್ಮ’ ಎಂದು. ಅಷ್ಟೇ ಹೊರತು, ಬುದ್ಧ ಮನುಷ್ಯ- ಮನುಷ್ಯರ ಸೌಹಾರ್ದ ಸಂಬಂಧವನ್ನು ಒಡೆಯುವಂತಹ ಯಾವ ಮತ ಪ್ರಚಾರಕನೂ ಆಗಿರಲಿಲ್ಲ. ತನ್ನನ್ನು ತಾನು ಅರಿಯುವ ಮನುಷ್ಯ ತನ್ನ ಮನೋ ವಿಕಾರಗಳಿಂದ ಮುಕ್ತನಾಗಿ ಸ್ವಸ್ಥವಾದ ಜೀವನವನ್ನು ನಡೆಸುವಂತಾದರೆ, ಅದೇ ಜೀವಿತವಾಗಿರುವಾಗಲೇ ಸಿಗುವಂತಹ ಮುಕ್ತಿ, ಶಾಂತಿಗೆ ಸೇತು ಎಂಬುದೇ ಬುದ್ಧ ನೀಡಿದ ಸಾಧನೆಯ ತತ್ತ್ವ. ಈ ಸಾಧನೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟು ಸಾಮಾನ್ಯ ಮನುಷ್ಯನನ್ನು ದುಃಖದಿಂದ ಬಿಡುಗಡೆ ಗೊಳಿಸುವ ಉನ್ನತ ಮಾರ್ಗಕ್ಕಾಗಿ ಶ್ರಮಿಸಿದವನು. ಮತ್ತೊಬ್ಬರನ್ನು ದುಃಖದಿಂದ ಬಿಡುಗಡೆ ಗೊಳಿಸುವುದು ಎಂದರೆ, ನಾವು ಮೊದಲು ದುಃಖದಿಂದ ಬಿಡುಗಡೆ ಹೊಂದಿದವರಾಗಿ ಸಾಧಕರಾಗಿರಬೇಕು. ಬುದ್ಧ ಇಂತಹ ಪ್ರಯೋಗ ಶೀಲತೆಯನ್ನು ಹೊಂದಿದ್ದವನು. ಅರಮನೆಯ ಭೋಗದಲ್ಲಿ ರಾಜಕುಮಾರನಾಗಿ ಮೆರೆಯ ಬಹುದಾಗಿದ್ದರೂ, ಅವನ ಅಂತರಂಗದ ಅರಿವಿನ ಕಣ್ಣು ಇದಕ್ಕೆ ಆಸ್ಪದ ಕೊಡದೆ, ಆ ಸುಖ ಭೋಗವನ್ನು ತ್ಯಜಿಸಿ, ಸರಳವಾದ ವಿರಕ್ತ ಜೀವನವನ್ನು ನಡೆಸಿ, ತನ್ನ ಸುತ್ತಲಿನ ದುಃಖಿತ ಜನರಿಗೆ ಮಾರ್ಗ ತೋರಲು ಅರ್ಹತೆ ಪಡೆಯಬೇಕೆಂದು ಹೇಳಿಕೊಟ್ಟಿತು. ಹೀಗೆ ಸಂತನ ಅರ್ಹತೆ ಪಡೆದವನು ಬುದ್ಧ.

ಎರಡು ರಾಜ್ಯಗಳ ನಡುವೆ ನೀರಿಗಾಗಿ ವ್ಯಾಜ್ಯವಿದ್ದು, ರಕ್ತಪಾತ ಸಂಭವಿಸುವಂತಹ ಚಿಂತಾಜನಕ ಸ್ಥಿತಿ ಸಂಭವಿಸಿದಾಗ, ತಾನು ಮೊದಲು ತನ್ನ ಸಿಂಹಾಸನವನ್ನು ಬಿಟ್ಟುಕೊಟ್ಟು, ಒಬ್ಬ ಸಾಮಾನ್ಯನಾಗಿ ಅವನು ಚಿಂತಿಸಿದನು. ನೀರು ಎರಡೂ ರಾಜ್ಯಗಳಿಗೂ ಮುಖ್ಯ; ಅದು ತಾಯಿಯಂತೆ. ತಾಯಿಯನ್ನು ಅರ್ಧ ಮಾಡಿಕೊಳ್ಳಲು ಸಾಧ್ಯವೇ? ಒಂದು ಮನೆಯ ಸಹೋದರರಾಗಿ ಮಾತ್ರ ಎರಡೂ ರಾಜ್ಯದವರು ಒಂದಾಗಿ ಬದುಕಲು ಕಲಿಯಬೇಕು ಎಂಬ ಸೌಹಾರ್ದ ತತ್ತ್ವವನ್ನು ಸಕಾಲದಲ್ಲಿ ಅರ್ಹನಾಗಿ ಬೋಧಿಸಿ ಯುದ್ಧವನ್ನು ನಿಲ್ಲಿಸಿ ಜೀವದಾಯಿಯಾಗಿ ಶಾಂತಿ ಕಾಪಾಡಿದವನು ಗೌತಮ ಬುದ್ಧ.
ಅವನೇನು ಹುಟ್ಟುತ್ತಲೇ ಬುದ್ಧನಾಗಿರಲಿಲ್ಲ!
ಅವನೇನೂ ಹುಟ್ಟುತ್ತಲೇ ಬುದ್ಧನಾಗಿರಲಿಲ್ಲ; ಶಾಂತಿ ದೂತನೂ ಆಗಿರಲಿಲ್ಲ. ಆದರೆ, ಬೆಳೆಯುತ್ತ, ತನ್ನ ಸುತ್ತಲನ್ನು ಗಮನಿಸುತ್ತ, ತನ್ನ ಒಳಗನ್ನೂ ಗಮನಿಸಿಕೊಳ್ಳುತ್ತಾ, ಅವನು ‘ಮನುಷ್ಯ ದುಃಖಿತನಾಗಿದ್ದಾನೆ, ಆ ದುಃಖದ ಬಿಡುಗಡೆಗೆ ಅವನೇ ಸ್ವಂತ ಪ್ರಯತ್ನ ಮಾಡಬೇಕು’ ಎಂಬ ಕಾರಣವನ್ನು ಕಂಡುಕೊಂಡ. ನಿಸರ್ಗದ ನಡುವೆ ಅರಳಿ ಮರದ ಕೆಳಗೆ ಎರಡು ಕಾಲನ್ನು ಮಡಿಸಿ ಏಕಾಗ್ರತೆಯಲ್ಲಿ ಕಣ್ಣು ಮುಚ್ಚಿ ಕುಳಿತು ಸಂವೇದನೆಗಳನ್ನು ಗಮನಿಸಲು ಕಲಿತ ಗೌತಮನಿಗೆ ಧ್ಯಾನವೆಂದರೇನೆಂದು ತಿಳಿಯಿತು. ದುಃಖದ ಬಿಡುಗಡೆಗೆ ಮಾರ್ಗವೂ ಹೊಳೆಯಿತು. ಒಲುಮೆಯ ಹೆಂಡತಿ ಯಶೋಧರೆ, ಮುದ್ದಾದ ಮಗ ರಾಹುಲ, ಅರಮನೆಯ ವೈಭೋಗ ಎಲ್ಲವನ್ನೂ ತ್ಯಜಿಸಿ ಬುದ್ಧನಾಗಲು ಹೊರಟ ಸಿದ್ಧಾರ್ಥ ಗೌತಮನು ಪರೋಪಕಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಡುವ ದೃಢ ನಿರ್ಧಾರ ಮಾಡಿದ್ದ. ಇಂತಹ ದೃಢ ಚಿತ್ತ ಸಿದ್ಧಿಯಾಗದೆ, ಯಾವುದೇ ತಪಸ್ಸು ಸಾಧ್ಯವೇ? ಸಂತನಾಗಲು ಋಷಿಯಾಗಲು ಸಾಧ್ಯವೇ? ತಾನು ಜ್ಞಾನೋದಯ ಪಡೆದುಕೊಂಡ ಮೇಲೆ ಮಾತ್ರ ಬುದ್ಧನೆನೆಸಿಕೊಂಡು ಅವನ ಪ್ರವಚನ ಬೋಧನೆ ಸುತ್ತಲಿನ ಪರಿಸರದ ಮೇಲೆ ಪ್ರಭಾವವಾಗಿ, ಶಿಷ್ಯ ವೃಂದ ಹುಟ್ಟಿಕೊಂಡಿತೇ ವಿನಃ ಗೌತಮಬುದ್ಧ ಯಾವುದೇ ಮಠ ಕಟ್ಟಲಿಲ್ಲ. ಯಾವ ಮಠದ ಪದವಿಯನ್ನೂ ಬಯಸಲಿಲ್ಲ. ಪಾರದರ್ಶಕವಾಗಿ ತನ್ನ ಶುದ್ಧ ನಡೆ ನುಡಿಯುಳ್ಳವನಾಗಿ ಪ್ರಪಂಚಕ್ಕೆ ‘ವಿಪಶ್ಶನ’ ಸಾಧನಾ ತತ್ತ್ವವನ್ನು ಒದಗಿಸಿದ.
‘ವಿಪಶ್ಶನ’ ಎಂದರೆ..
ʼವಿಪಶ್ಶನ’ ಎಂದರೆ ಇರುವುದನ್ನು ಇರುವ ಹಾಗೆಯೇ ನೋಡುವುದು ಎಂದರ್ಥ. ಇಂತಹ ನೋಟ ಅನುಭವಕ್ಕೆ ಬಂದಾಗ ಮನುಷ್ಯನಿಗೆ ತನ್ನ ಮಿತಿ ಅರ್ಥವಾಗಿ, ಅತಿಯಾಸೆಯ ಮನೋವಿಕಾರವನ್ನು ತನಗೆ ತಾನೇ ತ್ಯಜಿಸುತ್ತಾನೆ. ಮತ್ತೊಬ್ಬರಿಗೆ ಕೇಡು, ವಂಚನೆ ಮಾಡುವ ದಾರಿಯನ್ನು ಬಿಟ್ಟು ತನ್ನ ಪರಿಸರಕ್ಕೆ ಯಾವುದು ಒಳಿತೋ, ತನಗೆ ಯಾವುದು ಒಳಿತೋ, ಅದನ್ನು ಆಯ್ದುಕೊಂಡು ದುಃಖ ರಹಿತನಾಗಿ ಜೀವನ ಸಾಗಿಸಲು ಕಲಿಯುತ್ತಾನೆ. ಇಂತಹ ಬೋಧೆಯನ್ನು ಬುದ್ಧ ಕಿಸಾ ಗೌತಮಿಗೆ ಕಲಿಸಿ ಅವಳು ತನ್ನ ಮಗು ಸತ್ತ ಮೇಲೂ ವ್ಯರ್ಥವಾಗಿ ದುಃಖಿಸುವುದನ್ನು ಬಿಡಿಸಿದ. ‘ಈ ದೇಹ ಶಾಶ್ವತವಲ್ಲ, ಸಾವು ಎಲ್ಲರಿಗೂ ನಿಶ್ಚಿತ’ ಎಂಬ ವಾಸ್ತವ ಸತ್ಯವನ್ನು ಕಲಿಸಿದ. ಅಂಗುಲಿಮಾಲ ಎಂಬ ಕ್ರೂರಿಗೆ ಪ್ರೀತಿಯ ಅಪ್ಪುಗೆ ಕೊಟ್ಟು, ಮನುಷ್ಯನನ್ನು ಕೊಂದು ಜೀವಿಸುವ ರಾಕ್ಷಸತನ ಒಡ್ಡುವ ಅರಿವು ಮಾಡಿಕೊಟ್ಟು, ಅವನಲ್ಲಿ ಶಾಂತಿ ನೆಲೆಸುವಂತೆ ಮಾಡಿದ. ಚಕ್ರವರ್ತಿ ಅಶೋಕನಿಗೆ ಯುದ್ಧದ ಭೀಕರತೆಗೆ ರಕ್ತಪಾತದ ಶೋಕವನ್ನು ಅರಿವು ಮಾಡಿಕೊಟ್ಟು, ಯುದ್ಧವನ್ನು ತ್ಯಜಿಸುವಂತೆ ಮಾಡಿದ್ದು ಬುದ್ಧನ ಶಾಂತಿ ಮಂತ್ರ.
ಬುದ್ಧ ಪ್ರಸ್ತುತವಾಗುವುದು ಹೀಗೆ..
ವಿಶ್ವಶಾಂತಿಯ ದಿನವಾಗಿ, ಅಹಿಂಸಾ ದಿನವಾಗಿ ಈ ಸೆಪ್ಟಂಬರ್ 21 ರಂದು ಬುದ್ಧ ಪ್ರಸ್ತುತವಾಗುವುದು ಅವನು ಅನುಸರಿಸಿದ ‘ಬೋಧ’ ಮಾರ್ಗದಿಂದಲೇ. ಅವನ ಪಾರದರ್ಶಕ ವ್ಯಕ್ತಿತ್ವ ಶಾಂತಿ ಮೂಲದ್ದಾಗಿತ್ತು. ದುಃಖ ಒಡ್ಡುವ ಸಂಗತಿಗಳಿಗೆ ಆತನ ಪ್ರತಿಕ್ರಿಯೆಯೇ ಇರುತ್ತಿರಲಿಲ್ಲ. ಈಗಲೂ ನಮ್ಮ ಸುತ್ತ ಹಬ್ಬುತ್ತಿರುವ ಯಾವುದೇ ಅಶಾಂತಿಗೆ, ಎಂದರೆ ಯುದ್ಧ, ʼದೇವರು-ಧರ್ಮʼ ಮುಂತಾದ ಭಾವನೆಗಳನ್ನು ಕೆರಳಿಸುವ ವಿಷಯಗಳ ಮೇಲೆ ಜಗಳ-ಇಂಥ ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ನಾವು ಒಮ್ಮೆ ಬುದ್ಧ ಚಿಂತನೆಯತ್ತ ನಮ್ಮ ಮನಸನ್ನು ಹೊರಳಿಸಿ ಮೌನವಾಗಿ ವಸ್ತುನಿಷ್ಠವಾಗಿ ಚಿಂತಿಸಬೇಕು. ಆಗ ನಮ್ಮಲ್ಲಿ ಮಾನವತೆಯ ಅರ್ಥ ಹೊಳೆಯುತ್ತದೆ. ಬುದ್ಧನ ಮುಖವಾಡ ಹಾಕಿಕೊಂಡರೆ ನಾವು ಬುದ್ಧರಾಗಲು ಸಾಧ್ಯವಿಲ್ಲ. ಪ್ರತಿಮೆಗಳನ್ನು ಸೃಷ್ಟಿಸಬಹುದು. ಆದರೆ ಒಳಗಿಂದ ನಾವೇ ಆ ಪ್ರತಿಮೆಗಳಾಗುವುದು ಮುಖ್ಯ. ತೆರೆದ ಮನಸಿನಿಂದ ಅನಿಕೇತನರಾಗುವುದು ಮುಖ್ಯ. ಒಳಗೆ ನೂರೆಂಟು ರಾಜಕೀಯ ಪದವಿ, ಪಟ್ಟ, ಗದ್ದುಗೆಗಳ ಆಸ್ತಿ, ಅಂತಸ್ತುಗಳ ಅತಿಯಾಸೆ, ಕ್ರೌರ್ಯಗಳನ್ನು ಇಟ್ಟುಕೊಂಡು ಹೊರಗೆ ಮಾತ್ರ ಜನಹಿತಕ್ಕೆ ತಾನು ಬದ್ಧ ಎಂಬ ಸರಳತೆಯ ಮಾತಿನ ವೇಷ ಹಾಕಿದರೆ ಬರೀ ಪೊಳ್ಳು ಮಾತುಗಳಿಂದ ಶಾಂತಿ ಉಳಿಯುವುದಿಲ್ಲ. ಪ್ಲಾಸ್ಟಿಕ್ ಬೀಜ ಬಿತ್ತಿ ಭೂಮಿ ತಾಯಿಯ ಒಡಲಿನಿಂದ ಫಲ ತೆಗೆಯಲು ಸಾಧ್ಯವಿಲ್ಲ. ಅದು ಚಿಗುರದು. ಫಲ ತೆಗೆಯಬಲ್ಲ ಫಲವತ್ತಾದ ಶಾಂತಿ ಬೀಜವೇ ಬುದ್ಧ ಚಿಂತನೆ. ಅದೇ ಕರುಣೆ ತುಂಬಿದ ಹೃದಯ. ಇರುವುದೊಂದೇ ಭೂಮಿ. ಈ ಭೂಮಿಯ ಮೇಲಿನ ಸಮಸ್ತ ಜನರು ಶಾಂತಿಯಿಂದ ಇರಬೇಕೆಂದರೆ ಮೊಟ್ಟ ಮೊದಲು ‘ನಾವೆಲ್ಲರೂ ಮನುಜರು’ ಎಂಬ ಸೌಹಾರ್ದ ಭಾವ ಮೊಳೆಯಬೇಕು. ಕ್ರೌರ್ಯದ ಬೆಂಕಿಯನ್ನು ಶಮನ ಮಾಡುವ ಕರುಣೆಯ ಅಂತರ್ಜಲ ಸ್ಫುರಿಸಬೇಕು. ‘ಅಗ್ನಿಪಥ’ ಕ್ಕಿಂತ ಮುಖ್ಯವಾಗಿ ಇಂದು ‘ಬುದ್ಧಪಥ’ದ ಅಗತ್ಯ ಖಂಡಿತ ಇದೆ ಎಂದು ನನಗನಿಸುತ್ತದೆ. ಆಗ ದೇಶ ದೇಶಗಳ ನಡುವೆ ಯುದ್ಧಕ್ಕೆ ರಕ್ಷಣೆಯ ತಂತ್ರ ರೂಪಿಸುವ ಬದಲು ಶಾಂತಿ ಸಂಧಾನ ಮಾತುಕತೆಗೆ ಪ್ರಾಧಾನ್ಯತೆ ಸಿಗುತ್ತದೆ. ಆಗ ಬಡವರು, ದೀನ ದಲಿತರು ಮುಂತಾದ ನೊಂದವರಿಗೆ ನ್ಯಾಯ ಸಿಕ್ಕಿ ಸಮಾನತೆಯ ಹೂವು ಅರಳುತ್ತದೆ. ಆಗ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಪದಗಳು ತಮ್ಮ ಶೀಲವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ; ಪ್ರಜಾಪ್ರಭುತ್ವದ ಸತ್ವ ಉಳಿಯುತ್ತದೆ.
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಜ್ಯೋತಿ ಗುರುಪ್ರಸಾದ್
ಉಪನ್ಯಾಸಕಿ, ಕವಯಿತ್ರಿ, ಲೇಖಕಿ