ಹಾಸನ : ಹೊಳೆನರಸೀಪುರ ತಾಲ್ಲೂಕಿನ ಪೆದ್ದನಹಳ್ಳಿ ಗೇಟ್ ಬಳಿಯ ಮೈಸೂರು-ಹಾಸನ ರಸ್ತೆಯ ಹಳೇ ಬಸ್ ನಿಲ್ದಾಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 11 ಲಕ್ಷ ರೂಪಾಯಿ ಮೌಲ್ಯದ 23 ಕೆ.ಜಿ. ಹಸಿ ಮತ್ತು ಒಣ ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಆಧರಿಸಿ, ಗ್ರಾಮಾಂತರ ಪಿಎಸ್ಐ ರಮೇಶ್ಕುಮಾರ್.ಪಿ. ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ಪೊಲೀಸರು ತಕ್ಷಣ ಬೆನ್ನಟ್ಟಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೆ.ಆರ್.ನಗರ ತಾಲ್ಲೂಕಿನ ಗಾಂಧಿನಗರದ ಷಫೀವುಲ್ಲಾಖಾನ್ (38), ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಕೈಸರ್ಖಾನ್ (45), ಮತ್ತು ಬೆಂಗಳೂರಿನ ಅಕ್ಷಯನಗರದ ರೇಷ್ಮಾ.ಹೆಚ್.ಎಸ್. (30) ಎಂದು ಗುರುತಿಸಲಾಗಿದೆ. ಪ್ರಕರಣವನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.