ಪ್ರಮುಖ ತಂತ್ರಜ್ಞಾನ ಹೂಡಿಕೆದಾರ ಮತ್ತು ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನದಾಸ್ ಪೈ, ಕರ್ನಾಟಕದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸ್ಥಳೀಯ ಭಾಷೆಯನ್ನು ಕಲಿಯಬೇಕು ಮತ್ತು ಸಾರ್ವಜನಿಕ ವ್ಯವಹಾರಗಳಲ್ಲಿ ಅದನ್ನು ಬಳಸಬೇಕು ಎಂದು ಸೂಚಿಸಿದ್ದಾರೆ.
ಕೆಲವು ಅಧಿಕಾರಿಗಳು ಕನ್ನಡ ಕಲಿಯಲು ದುರಹಂಕಾರದಿಂದ ನಿರಾಕರಿಸುವುದು ವಿವಾದಗಳಿಗೆ ಕಾರಣ ಎಂದು ಅವರು ಹೇಳಿದರು. ಇದನ್ನು ತಪ್ಪಿಸಲು, ಅವರು ಕನ್ನಡ ಕಲಿಯಬೇಕೆಂದು ಸೂಚಿಸಿದರು.
“ಪ್ರತಿದಿನ ದೊಡ್ಡ ಸಂಖ್ಯೆಯ ಜನರು ಬೆಂಗಳೂರಿಗೆ ಬರುತ್ತಾರೆ. ಕೇವಲ 33 ಪ್ರತಿಶತದಷ್ಟು ಜನರು ಸ್ಥಳೀಯವಾಗಿ ಕನ್ನಡ ಮಾತನಾಡುತ್ತಾರೆ. ಹೊರಗಿನಿಂದ ಬಂದವರು ಇಲ್ಲಿ ಸೌಹಾರ್ದ ರೀತಿಯಲ್ಲಿ ನೆಲೆಯಾಗಿದ್ದಾರೆ. ಆದರೆ ಕೆಲವರು ದುರಹಂಕಾರದಿಂದ ಕೆಲವು ಕನ್ನಡ ಪದಗಳನ್ನು ಮಾತನಾಡಲು ಸಹ ನಿರಾಕರಿಸುತ್ತಾರೆ. ನಾವು ಕೆಲವು ಪದಗಳನ್ನು ಕಲಿಯಬೇಕು ಮತ್ತು ಅವುಗಳನ್ನು ಮಾತನಾಡುವ ಮೂಲಕ ಸ್ಥಳೀಯರಿಗೆ ಗೌರವ ನೀಡಬೇಕು. ಅದು ನಮ್ಮ ಜವಾಬ್ದಾರಿ” ಎಂದು ಮೋಹನದಾಸ್ ಪೈ ಹೇಳಿದರು. ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿ ಮತ್ತು ಗ್ರಾಹಕರೊಬ್ಬರ ನಡುವೆ ನಡೆದ ಭಾಷಾ ಸಂಬಂಧಿ ಘಟನೆಗೆ ಮೋಹನದಾಸ್ ಪೈ ಪ್ರತಿಕ್ರಿಯಿಸುತ್ತಿದ್ದರು. ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ಬ್ಯಾಂಕ್ ಮ್ಯಾನೇಜರ್ ನಿರಾಕರಿಸಿದ್ದು ಸಾರ್ವಜನಿಕರನ್ನು ಕೆರಳಿಸಿದೆ ಎಂದು ಅವರು ಹೇಳಿದರು. ಕೊನೆಗೂ ಬ್ಯಾಂಕ್ ಅಧಿಕೃತ ಕ್ಷಮೆಯಾಚಿಸಬೇಕಾಯಿತು ಎಂದು ಅವರು ನೆನಪಿಸಿಕೊಂಡರು. ‘ಸರ್!, ನನಗೆ ಭಾಷೆ ಗೊತ್ತಿಲ್ಲ.. ನಾನು ಕಲಿಯುತ್ತಿದ್ದೇನೆ.. ನಾನು ನನ್ನ ಸಹೋದ್ಯೋಗಿಯಿಂದ ಸಹಾಯ ಪಡೆಯುತ್ತೇನೆ’ ಎಂದು ಗೌರವದಿಂದ ಉತ್ತರಿಸಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಅವರು ಹೇಳಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಗ್ರಾಹಕ ಸೇವೆಯಲ್ಲಿರುವವರು ಆ ಸ್ಥಳದ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಗ್ರಾಹಕರಿಗೆ ಹಿಂದಿ ಅಥವಾ ಇಂಗ್ಲಿಷ್ ತಿಳಿದಿಲ್ಲದಿದ್ದರೆ, ನೌಕರರು ಸ್ಥಳೀಯ ಭಾಷೆಯನ್ನು ಮಾತನಾಡಲು ಪ್ರಯತ್ನಿಸಬೇಕು ಎಂದು ಅವರ ಅಭಿಪ್ರಾಯಪಟ್ಟರು.