Tuesday, April 30, 2024

ಸತ್ಯ | ನ್ಯಾಯ |ಧರ್ಮ

ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್‌ ಅಂತ್ಯಕ್ರಿಯೆ: ಮೈಸೂರು ಚಾಮರಾಜನಗರ ಜಿಲ್ಲೆಗಳಿಗೆ ಇಂದು ಸರ್ಕಾರಿ ರಜೆ

ಮೈಸೂರು : ಏಪ್ರಿಲ್ -29, ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು . ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಚಾಮರಾಜನಗರದ ಹಾಲಿ ಸಂಸದರಾಗಿದ್ದ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ ಪ್ರಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

15 ದಿನಗಳ ಹಿಂದೆ ಭೇಟಿಯಾಗಿದ್ದಾಗ ರಾಜಕೀಯ ಮಾತನಾಡಿದೆವು. ರಾಜಕೀಯದಲ್ಲಿ ಸಂತೋಷದ ಕ್ಷಣ ಬಹಳ ಕಡಿಮೆ. ಹೋರಾಟ ಮಾಡುವಾಗ ಸಂತೋಷದ ಕ್ಷಣಗಳು ಕಡಿಮೆ. ಬಹಳ ವರ್ಷ ಗಳ ನಂತರ ಭೇಟಿಯಾಗಿದ್ದ ಕಾರಣ ಸಂತೋಷವಾಗಿದೆ ಎಂದು ಹೇಳಿರಬಹುದು ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೊತೆಯಲ್ಲಿಯೇ ರಾಜಕಾರಣ ಮಾಡಿದವರು, ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಲ್ಲಿ ಒಟ್ಟಿಗಿದ್ದವರನ್ನು ಕಳೆದುಕೊಂಡಾಗ ಬಹಳ ದುಃಖವಾಗುತ್ತದೆ ಎಂದರು.

ದಮನಿತರ ಧ್ವನಿಯಾಗಿ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ

ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬ ವರ್ಗದವರೊಂದಿಗೆ ಮಾತನಾಡಿದ್ದೆ.ಆದರೆ ಅಂಗಾಂಗ ವೈಫಲ್ಯದಿಂದಾಗಿ ಅವರ ನಿಧನವಾಗಿದೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. 2013 ರಲ್ಲಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯಾಗಿ ಹಲವು ವರ್ಷಗಳ ಕಾಲ ಆರೋಗ್ಯವಾಗಿದ್ದರು. ಶ್ರೀನಿವಾಸ ಪ್ರಸಾದ್ ಹಾಗೂ ನಾನು ಒಂದೇ ವಯೋಮಾನದವರು. ನೇರ ನುಡಿಯ ಶ್ರೀನಿವಾಸ್ ಪ್ರಸಾದ್ ಅವರು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟ ನಡೆಸಿದವರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದರು. ದಮನಿತರ ಧ್ವನಿಯಾಗಿ ಅಂಬೇಡ್ಕರ್ ರವರ ತತ್ವಾದರ್ಶಗಳು ಹಾದಿಯಲ್ಲಿ ನಡೆದವರು. ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಶ್ರೀನಿವಾಸ್ ಪ್ರಸಾದ್ ರವರು 50 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸೋಲು ಹಾಗೂ ಗೆಲುವನ್ನು ಕಂಡವರು. ಕಾರಣಾಂತರಗಳಿಂದ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದರು ಎಂದರು.

ಕರ್ನಾಟಕ ರಾಜಕಾರಣಕ್ಕೆ ನಷ್ಟವಾಗಿದೆ
ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕೇಳಿದಾಗ ನಾನು ರಾಜಕೀಯದಿಂದ ನಿವೃತ್ತನಾಗಿದ್ದೇನೆ ಎಂದು ಹೇಳಿದ್ದರು. ಸ್ನೇಹಿತರಿಗೆ ಹೇಳುತ್ತೇನೆ., ಆದರೆ ಜೆಡಿಎಸ್ ಗಾಗಲೀ ಕಾಂಗ್ರೆಸ್ ಗಾಗಲಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು.50 ವರ್ಷಗಳ ಕಾಲ ಹೋರಾಟದ ಬದುಕು ನಡೆಸಿದ ಅವರಂಥವರು ನಮ್ಮಮಧ್ಯೆ ಇಲ್ಲ.
ಅವರ ಸಾವಿನಿಂದ ಕರ್ನಾಟಕ ರಾಜಕಾರಣಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಸ್ಮಾರಕ ನಿರ್ಮಾಣದ ಬಗ್ಗೆ ಚರ್ಚೆ
ಸಕ್ಕರೆ ಕಾಯಿಲೆ ಇರುವುದರಿಂದ ಕಾಲಿನ ಗಾಯ ವಾಸಿ ಮಾಡಿಕೊಳ್ಳಲು ಸಲಹೆ ನೀಡಿದ್ದೆ. ಗಾಯ ವಾಸಿಯಾಗದೆ ತೊಂದರೆಯಾಯಿತು ಎಂದರು. ಕುಟುಂಬಸ್ಥರು ಸ್ಮಾರಕ ನಿರ್ಮಾಣದ ಬಗ್ಗೆ ಮಾತನಾಡಿದರೆ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತ್ಯಕ್ರಿಯೆ ಮುಗಿಸಿ ನಂತರ ಚರ್ಚೆ ಮಾಡುವುದಾಗಿ ತಿಳಿಸಿರುವುದಾಗಿ ಹೇಳಿದರು.

ಒಬ್ಬ ಸ್ನೇಹಿತನನ್ನು, ಕಳೆದುಕೊಂಡಿರುವುದು ಬಹಳ ದುಃಖ ತಂದಿದೆ.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Related Articles

ಇತ್ತೀಚಿನ ಸುದ್ದಿಗಳು