Home ಜನ-ಗಣ-ಮನ ಗಣಪತಿಗೆ ಆನೆಯ ಮುಖ ಬಂದಿದ್ದು ಹೇಗೆ?

ಗಣಪತಿಗೆ ಆನೆಯ ಮುಖ ಬಂದಿದ್ದು ಹೇಗೆ?

0

ಟೋಟೆಮ್‌ ವ್ಯವಸ್ತೆಯ ಒಂದು ಮುಖ್ಯ ಸ್ವರೂಪವೆಂದರೆ ಒಂದು ಬುಡಕಟ್ಟು ಗಣದ ಕುಲಚಿನ್ಹೆ. ಪ್ರತಿಯೊಂದು ಬುಡಕಟ್ಟು ಗಣಕ್ಕೂ ಒಂದೊಂದು ಕುಲಚಿನ್ಹೆ ಇರುತ್ತಿತ್ತು. ಅಕಸ್ಮಾತ್‌ ಈ ಬುಡಕಟ್ಟುಗಳ ನಡುವೆ ಕಾದಾಟ ನಡೆದಾಗ ಈ ಕುಲಚಿನ್ಹೆಗಳು ಬೇರಾಗುತ್ತಿದ್ದವು. ಯಾವ ಪಂಗಡ ಸೋಲುತ್ತದೆಯೋ ಆ ಪಂಗಡದ ಕುಲಚಿನ್ಹೆ ಗೆದ್ದ ಪಂಗಡದ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗಜಮುಕದ ಗಣಪತಿಯನ್ನು ಬಿಡಿಸಿ ನೋಡಿದರೆ ಒಂದು ತೀರ್ಮಾನಕ್ಕೆ ಬರಬಹುದು… ಎನ್ನುತ್ತಾರೆ ಲೇಖಕ ಪತ್ರಕರ್ತ ಹರ್ಷಕುಮಾರ್‌ ಕುಗ್ವೆ.

ಗಣಪತಿಗೆ ಆನೆ ಮುಖವಿರುವ ಕುರಿತು ಪೆರಿಯಾರ್‌ ಅವರು ಹೇಳಿದ್ದರೆನ್ನಲಾದ ಮಾತೊಂದು ನೆನ್ನೆ ವೈರಲ್‌ ಆಗಿದೆ. ಪೆರಿಯಾರ್‌ ಇರಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿರಲಿ ವೈದಿಕ ಪುರಾಣಗಳನ್ನು ಬಂಜಿಸುವ ಕ್ರಮದಲ್ಲಿ ಪುರಾಣಗಳಲ್ಲಿರುವ ಅನೇಕ ಸಂಗತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಂಬೇಡ್ಕರ್‌ ಅವರ ರಾಮ ಕೃಷ್ಣರ ಒಗಟುಗಳು ಎಂಬ ಪ್ರಬಂದದಲ್ಲಿ ಸಹ ಪುರಾಣದ ರಾಮ ಕೃಷ್ಣರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ವೈದಿಕ ಪುರಾಣಗಳೇ ಇತಿಹಾಸ ಎಂದು ಕುರುಡಾಗಿ ನಂಬುವ ಅವಿವೇಕಿ ಜನರಿಗೆ ಅಂಬೇಡ್ಕರ್‌ ಮತ್ತು ಪೆರಿಯಾರ್‌ ನೀಡಿರುವ ಈ ಶಾಕ್‌ ಟ್ರೀಟ್ಮೆಂಟ್‌ ಅಗತ್ಯವಿದೆ. ಅಂತವರು ಯಾಕೆ ಬಾಬಾಸಾಹೇಬರು ಹಿಂದೂ ಪುರಾಣಗಳ ಬಗ್ಗೆಯಾಗಲೀ ಭಗವದ್ಗೀತೆಯ ಬಗ್ಗೆಯಾಗಲೀ ಈ ಪರಿ ಟೀಕಿಸಿದ್ದಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಇದು ಒತ್ತಟ್ಟಿಗಿರಲಿ.

ಇತಿಹಾಸ ಮತ್ತು ಮಾನವಶಾಸ್ತ್ರದ ನೆಲೆಯಿಂದ ನಾವು ಒಂದಷ್ಟು ಸಂಗತಿಗಳನ್ನು ನೋಡಬೇಕಿದೆ. ಈಗ ಗಣಪತಿಗೆ ಆನೆಯ ಮುಖವಿರುವ ಸಂಗತಿಯನ್ನೇ ತೆಗೆದುಕೊಳ್ಳೋಣ. ಹನುಮಂತ ದೇವರಿಗೆ ಮಂಗನ ಮುಖವಿರುವುದಾಗಲೀ, ಗಣಪತಿಗೆ ಇಲಿ ವಾಹನ ಅಗಿರುವುದಾಗಲೀ, ಶಣ್ಮುಖನಿಗೆ ನವಿಲಿನ ವಾಹನ ಇರುವುದಾಗಲೀ ಇವೆಲ್ಲಾ ವೈದಿಕ ಸೃಷ್ಟಿಗಳಲ್ಲ. ಯಾಕೆಂದರೆ ನಾಲ್ಕೂ ವೇದಗಳನ್ನು ಹುಡುಕಿದರೂ ಅವುಗಳಲ್ಲಿ ನಿಮಗೆ ಈ ಭಾರತದ ದೇವರುಗಳ ಕುರಿತಾಗಲೀ ಅವರ ಈ ವಿಶಿಷ್ಟ ಸ್ವರೂಪಗಳ ಕುರಿತಾಗಲೀ ಉಲ್ಲೇಖವಾಗಲೀ ವಿವರಣೆಯಾಗಲೀ ನಮಗೆ ಕಂಡು ಬರುವುದಿಲ್ಲ. ವೇದಗಳಲ್ಲಿ ಗಣಗಳ ಪ್ರಸ್ತಾಪ ಬಂದರೂ ಗಣಪತಿ ಅದರಲ್ಲೂ ಆನೆಯ ಮುಖದ ಗಣಪತಿ ಎಲ್ಲೂ ಕಾಣಿಸುವುದಿಲ್ಲ. ಮುಂದೆ ಸ್ಮೃತಿಗಳ ಕಾಲದಲ್ಲಿ ಗಣಪತಿಯನ್ನು ನಿಂದಿಸುವ ಹಲವಾರು ಶ್ಲೋಕಗಳಿವೆ. ಗಣಪತಿ ಒಬ್ಬ ಶೂದ್ರರ ದೇವರು, ಅವನು ಪೂಜೆಗೆ ಯಾವ ರೀತಿಯಲ್ಲೂ ಅರ್ಹನಲ್ಲ ಎಂದು ಯಾಜ್ನವಲ್ಕ ಸ್ಮೃತಿ ಮತ್ತು ಮನುಸ್ಮೃತಿಗಳು ನಿಂದಿಸುತ್ತವೆ. ಗಣಪತಿ ಎಂದರೆ ವಿಗ್ನವನ್ನು ಉಂಟು ಮಾಡುವವನು ಎಂದು ಜರಿಯುತ್ತವೆ. ಆದರೆ ಕಾಲಕ್ರಮೇಣ ಅದೇ ವೈದಿಕ ಪಠ್ಯಗಳು ಗಣಪತಿಯನ್ನು ಆರಾದಿಸಲು ತೊಡಗುತ್ತವೆ. ಇದು ಸಾಮಾಜಿಕ ಪಲ್ಲಟವನ್ನು ಅನುಸರಿಸಿದ ಪೌರಾಣಿಕ ಪಲ್ಲಟವೆನ್ನಬಹುದು.

ಈಗ ಮೂಲ ಪ್ರಶ್ನೆಗೆ ಬರೋಣ. ಗಣಪತಿಗೆ ಆನೆಯ ಮುಖ ಹೇಗೆ ಬಂತು? ಈ ಪ್ರಶ್ನೆಗೆ ಅತ್ಯಂತ ವೈಜ್ಞಾನಿಕ ಮತ್ತು ತಾರ್ಕಿಕವಾದ ಉತ್ತರ ನೀಡಿರುವುದು ಇತಿಹಾಸಕಾರರೂ, ಸಮಾಜ ಶಾಶ್ತ್ರಜ್ಞರೂ ಆದ ದೇವಿಪ್ರಸಾದ್‌ ಚಟ್ಟೋಪಾದ್ಯಾಯ ಹಾಗೂ ದಾಮೋದರ ಧರ್ಮಾನಂದ ಕೋಸಾಂಬಿಯವರು. ಚಟ್ಟೋಪಾದ್ಯಾಯರ ʼಲೋಕಾಯತʼ ಪುಸ್ತಕ ಮತ್ತು ಕೋಸಾಂಬಿಯವರ “ಪುರಾಣ ಮತ್ತು ವಾಸ್ತವ” (Myth and Reality) ಹಾಗೂ An Introduction to the study of Indian History ಪುಸ್ತಕಗಳ ಅದ್ಯಯನ ಅತ್ಯಗತ್ಯ.

ಭಾರತೀಯ ಸಮಾಜದಲ್ಲಿನ ಇಂತಹ ಸಂಗತಿಗಳನ್ನು ಪ್ರಾಚೀನ ಭಾರತದ ಅಂದರೆ ವೈದಿಕ ಆರ್ಯ ಸಮುದಾಯಗಳು ಬರುವುದಕ್ಕೂ ಮೊದಲಿನ ದ್ರಾವಿಡ ಬುಡಕಟ್ಟು ವ್ಯವಸ್ಥೆಯ ಅಧ್ಯಯನದ ಮೂಲಕ ಮಾತ್ರ ಅರ್ಥ ಮಾಡಿಕೊಳ್ಳಲು ಸಾದ್ಯ. ಈ ನಿಟ್ಟಿನಲ್ಲಿ ಮೇಲೆ ಹೇಳಿಕ ಪುಸ್ತಕಗಳು ಅತ್ಯುತ್ತಮ ಹೊಳಹುಗಳನ್ನು ನೀಡುತ್ತವೆ.

ಪ್ರಾಚೀನ ದ್ರಾವಿಡ ಬುಡಕಟ್ಟು ವ್ಯವಸ್ಥೆ ಟೊಟೆಮಿಕ್‌ ವ್ಯವಸ್ಥೆಯಾಗಿತ್ತು. ಅಂದರೆ ಬುಡಕಟ್ಟುಗಳು ಟೊಟೆಮ್‌ ಅಂದರೆ ಕುಲಚಿನ್ಹೆ ಅಥವಾ ಬಳಿಗಳನ್ನು ಹೊಂದಿರುತ್ತಿದ್ದವು. ಇಂದಿಗೂ ದ್ರಾವಿಡ ಬುಡಕಟ್ಟು ಜಾತಿಗಳಲ್ಲಿ ಈ ಬಳಿ ವ್ಯವಸ್ಥೆ ಚಾಲ್ತಿಯಲ್ಲಿದೆ. ಈ ಬಳಿ ಅತವಾ ಟೊಟೆಮ್‌ ಗಳು ಬಹುಪಾಲು ಯಾವುದಾದರೂ ಮರ ಗಿಡ ಇಲ್ಲವೇ ಪ್ರಾಣಿಯ ಸಂಕೇತಗಳೇ ಅಗಿರುತ್ತಿದ್ದವು. ಈ ಬುಡಕಟ್ಟು ವ್ಯವಸ್ಥೆಗಳು ಗಣಗಳ ವ್ಯವಸ್ಥೆಗಳೂ ಆಗಿದ್ದವು. ಒಂದೊಂದು ಗಣಕ್ಕೆ ಒಬ್ಬೊಬ್ಬ ನಾಯಕ ಅತವಾ ನಾಯಕಿ ಇರುತ್ತಿದ್ದಳು. ಈ ಬುಡಕಟ್ಟು ಗಣ ವ್ಯವಸ್ಥೆಗಿಂತಲೂ ಮುಂಚಿನ ವ್ಯವಸ್ಥೆ ಮಾತೃಪ್ರದಾನ ವ್ಯವಸ್ಥೆ. ಅಲ್ಲಿ ಬುಡಕಟ್ಟಿನ ತಾಯಿಯೇ ಅದಿನಾಯಕಿ. ಸಿಂಧೂ ಅತವಾ ಹರಪ್ಪಾ ಮೊಹೆಂಜೋದಾರೋ ಕೃಶಿ ನಾಗರಿಕತೆ ಇಂತಹ ಒಂದು ಮಾತೃಪ್ರಧಾನ ನಾಗರಿಕತೆಯಾಗಿದ್ದರೆ ಅಲ್ಲಿನ ಪಶುಪಾಲನಾ ಬುಡಕಟ್ಟು ವ್ಯವಸ್ಥೆ ಗಂಡುಪ್ರಧಾನ ವ್ಯವಸ್ತೆಯಾಗಿದ್ದನ್ನು ಕಾಣುತ್ತೇವೆ. ಹೀಗಾಗೇ ನಮಗೆ ಹರಪ್ಪಾ ನಾಗರಿಕತೆಯಲ್ಲಿ ಬಲೂಚಿಸ್ತಾನದ ಮೆಹರಗಡದಿಂದಿಡಿದು ಗುಜರಾತಿನ ದೋಲವೀರದವರೆಗೂ ಇಂತಹ ʼಸ್ತ್ರೀʼ ಪ್ರತಿಮೆಗಳು ದಂಡಿಯಾಗಿ ಕಾಣಸಿಗುತ್ತವೆ. ಇಂತಹ ಯಾವುದರ ಒಂದೇ ಒಂದು ಕುರುಹು ಸಹ ವೇದಗಳಲ್ಲಿ ಕಾಣುವುದಿಲ್ಲ. ಮೇಲೆ ಹೇಳಿದ ಗಣ ವ್ಯವಸ್ಥೆಯಲ್ಲಿ ಅದರ ನಾಯಕರಾದವರು ಗಣನಾಯಕ ಅತವಾ ಗಣಪತಿಯರಾಗಿದ್ದರು. ಈ ಗಣಪತಿಗಳಿಗೆ ಎಲ್ಲರಿಗೂ ಆನೆಯ ಮುಖವೇ ಇರಲಿಲ್ಲ ಎಂಬುದು ಮುಖ್ಯ. ಆನೆಯ ಮುಖದ ಗಣಪತಿಯಂತೆಯೇ ಎತ್ತಿನ ಮುಖದ ಗಣಪತಿ, ಆಡಿನ ಮುಖದ ಗಣಪತಿಗಳು ಇದ್ದರು ಎಂಬುದಕ್ಕೂ ದಾಖಲೆಗಳಿವೆ. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿ ಹೇಳಿದ ಟೋಟೆಮ್‌ ವ್ಯವಸ್ಥೆಯ ಒಂದು ಮುಖ್ಯ ಸ್ವರೂಪವೆಂದರೆ ಒಂದು ಬುಡಕಟ್ಟು ಗಣದ ಕುಲಚಿನ್ಹೆ. ಪ್ರತಿಯೊಂದು ಬುಡಕಟ್ಟು ಗಣಕ್ಕೂ ಒಂದೊಂದು ಕುಲಚಿನ್ಹೆ ಇರುತ್ತಿತ್ತು. ಅಕಸ್ಮಾತ್‌ ಈ ಬುಡಕಟ್ಟುಗಳ ನಡುವೆ ಕಾದಾಟ ನಡೆದಾಗ ಈ ಕುಲಚಿನ್ಹೆಗಳು ಬೇರಾಗುತ್ತಿದ್ದವು. ಯಾವ ಪಂಗಡ ಸೋಲುತ್ತದೆಯೋ ಆ ಪಂಗಡದ ಕುಲಚಿನ್ಹೆ ಗೆದ್ದ ಪಂಗಡದ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗಜಮುಖದ ಗಣಪತಿಯನ್ನು ಬಿಡಿಸಿ ನೋಡಿದರೆ ಒಂದು ತೀರ್ಮಾನಕ್ಕೆ ಬರಬಹುದು. ಇಲ್ಲಿ ಒಂದು ಬುಡಕಟ್ಟು ಗಣವು ಇಲಿಯ ಕುಲಚಿನ್ಹೆ ಹೊಂದಿರುವ ಮತ್ತು ಆನೆಯ ಕುಲಚಿನ್ಹೆ ಹೊಂದಿರುವ ಎರಡು ಬುಡಕಟ್ಟುಗಳನ್ನು ಸೋಲಿಸಿದಾಗ ಆ ಎರಡೂ ಕುಲಚಿನ್ಹೆಗಳು ಗೆದ್ದ ಬುಡಕಟ್ಟು ಗಣದ ಕುಲಚೆನ್ಹೆಗೆ ಸೇರಿಕೊಂಡವು. ಇದರ ಪರಿಣಾಮವಾಗಿಯೇ ಒಂದು ಗಣದ ನಾಯಕ ಅತವಾ ಗಣಪತಿಗೆ ಆನೆಯ ಮುಖ ಸೇರಿಕೊಂಡು ಇಲಿಯು ವಾಹನವಾದದ್ದು.

ಮಹಾಭಾರತದಲ್ಲಿ ಶ್ರೀಕೃಶ್ಣನಿಗೆ 16,000 ಹೆಂಡತಿಯರು ಇದ್ದರೆಂಬ ಪುರಾಣದ ಸಂಗತಿ ಕೆಲವೊಮ್ಮೆ ತಮಾಶೆಯಾಗುತ್ತಿರುತ್ತದೆ. ಆದರೆ ಭಾರತದ ಪ್ರಾಚೀನ ಸಮಾಜದ ಬುಡಕಟ್ಟು ವ್ಯವಸ್ಥೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡಾಗ ಇದು ಬೇರೆಯ ರೀತಿಯಲ್ಲೇ ಕಾಣಿಸುತ್ತದೆ. ಕೃಶ್ಣ ಇಲ್ಲಿ ಪಶುಪಾಲಕ ಸಮಾಜದ ನಾಯಕ. ಅವನು ತನ್ನ ಬುಡಕಟ್ಟು ಸಾಮ್ರಾಜ್ಯವನ್ನು ವಿಸ್ತರಿಸುವ ಸಂದರ್ಭದಲ್ಲಿ ಸಾವಿರಾರು ಮಾತೃಪ್ರದಾನ ಬುಡಕಟ್ಟುಗಳನ್ನು ತನ್ನ ಸಾಮ್ರಾಜ್ಯದೊಳಕ್ಕೆ ಗೆದ್ದುಕೊಳ್ಳವುದನ್ನು ಹದಿನಾರು ಸಾವಿರ ಹೆಂಡತಿಯನ್ನು ಹೊಂದುವಂತೆ ಸಾಂಕೇತಿಸಲಾಗಿದೆ. ಅಷ್ಟೆ.

ಪಶುಪಾಲಕ ದ್ರಾವಿಡರ ಆದಿನಾಯಕ ಅಥವಾ ಮಹಾಪೂರ್ವಿಕ ಎನ್ನಬಹುದಾದ ಶಿವನ ತಲೆಯಿಂದ ಗಂಗೆ ಉದಿಸುವುದಿರಲಿ, ಫಲವಂತಿಕೆ (Fertility) ಪಂಥದ ಮಾತೃದೇವತೆ ಗೌರಿ ಮತ್ತು ಶಿವ ಇಬ್ಬರೂ ಗಂಡ- ಹೆಂಡತಿಯಾಗುವುದು, ಇವೆಲ್ಲಾ ಆದಿಮ ದ್ರಾವಿಡ ಬೇಸಾಯಗಾರ ಮತ್ತು ದ್ರಾವಿಡ ಪಶುಪಾಲಕ ಸಮುದಾಯಗಳ ನಡುವಿನ ಹೊಂದಾಣಿಕೆ ಎಂದು ನೋಡಿದಾಗ ಯಾವುದೇ ಗೊಂದಲಕ್ಕೆ ಅವಕಾಶವಿರುವುದಿಲ್ಲ. ಇವತ್ತಿಗೂ ನಮ್ಮ ಮಲೆನಾಡಿನಲ್ಲಿ ಗೌರಿ ಎಂದರೆ ದ್ರಾವಿಡ ಮೂಲದ ಪ್ರಕೃತಿ ಆರಾದನೆ ಮತ್ತು ಜಲ ಸಂಸ್ಕೃತಿಗಳು ಮೇಳೈವಿಸಿದ ಆಚರಣೆಯೇ ಆಗಿದೆ.  ಗೌರಿಯನ್ನು ತರುವುದು ಹೇಗೆ ಗೊತ್ತೆ? ಬಾವಿಯಿಂದ ಎತ್ತಿಕೊಂಡು, ಆ ನೀರನ್ನು ತಾಮ್ರದ ತಂಬಿಗೆಯಲ್ಲಿ ತುಂಬಿ, ಅದಕ್ಕೆ ಹೆಣ್ಣುಮಕ್ಕಳು, ಸೀರೆ ಉಡಿಸಿ ತಮ್ಮ ತಾಳಿ, ಓಲೆ ಆಭರಣ ತೊಡಿಸಿ ಬಣ್ಣ ಬಣ್ಣದ ಬೀಸಣಿಕೆ ಇಟ್ಟು, ʼಜೀವಕಳೆʼ ತುಂಬಿ ಮನೆಯೊಳಗೆ ಚಪ್ಪರದಲ್ಲಿ ಕೂರಿಸುತ್ತಾರೆ. ಈ ಚಪ್ಪರವಾದರೂ ಎಂತಹುದು? ಅಪ್ಪಟ ಪ್ರಕೃತಿಯ ಪಲವಂತಿಕೆಯನ್ನೇ ಬಿಂಬಿಸುವ ಚಪ್ಪರ. ಈ ಚಪ್ಪರಕ್ಕೆ ಪಳವಳಿಕೆ ಎಂದು ಹಾಕುವ ಸಸ್ಯಗಳು ಎಂದರೆ- ಕಂಗನಹಳ್ಳು, ಮದ್ದಾರೆ ಕಾಯಿ, ಮತ್ತಿ ಕಾಯಿ, ಹುಣಾಲು ತೆನೆ, ಪಡಂಗ, ಮುತ್ತು ಬಳ್ಳಿ, ಸೂರನ ಕುಂಡಿಗೆ, ಬೆನಪ್ಪನ ಗೆಜ್ಜೆ ಅತವಾ ಹಾಡೇಗಡ್ಡೆ ಎಂಬ ಔಶದಿ ಸಸ್ಯ, ಕೊಡಚಿನ ಕೋಡು,ಸೀರಣಿಗೆ ಕಾಯಿ, ಗೌರಿ ತಲೆಕೂದಲು ಎನ್ನುವ ಒಂದು ಜಾತಿಯ ಸಸ್ಯದ ಎಲೆಗಳು, ವಾಟೆಕಾಯಿ, ಕಂಚಿಕಾಯಿ, ಜುಮ್ಮನ ಕಾಯಿ, ಚಪ್ಪಚೌಳಿ, ಶಿವನೀರುಳ್ಳಿ ಗಡ್ಡೆ, ನೆಲವಾಟೆ, ಬಳ್ಳಿವಾಟೆ, ಪಾತಾಳ ಗರುಡ, ತಟಮಟ್ಟೆ ಕಾಯಿ, ಹೆಗ್ಗಾಣೆ ಕಾಯಿ, ಕಾಗದಂಡೆ ಕಾಯಿ..ಹೀಗೆ. ಇದೆಲ್ಲಾ ಏನನ್ನು ತೋರಿಸುತ್ತದೆ ಎಂದರೆ ಗೌರಿ ಹಬ್ಬ ಎನ್ನುವುದು ಯಾವುದೇ ವೈದಿಕ ಆಚರಣೆಯಾಗಿರದೇ ಅಪ್ಪಟ ಪ್ರಕೃತಿಯ ಫಲವಂತಿಕೆ ಮತ್ತು ಸ್ತ್ರೀ ಪಲವಂತಿಕೆಯನ್ನು ಬಿಂಬಿಸುವ ಹಾಗೂ ದ್ರಾವಿಡ ಸಂಸ್ಕೃತಿಯ ಪ್ರಮುಕ ಲಕ್ಷಣವಾದ ಜಲ ಅತವಾ ಗಂಗೆ ಪೂಜೆಯ ಆಚರಣೆಯಾಗಿದೆ.

ಚಪ್ಪರದಲ್ಲಿ ಪವಡಿಸಿದ ಗೌರಮ್ಮ

ಪುರಾಣಗಳನ್ನು ಆರ್ಯ ವೈದಿಕರು ಬರೆಯಲು ಕುಳಿತಾಗ ಮಾಡಿದ ಎಡವಟ್ಟುಗಳು ಹುನ್ನಾರಗಳು ಒಂದೆರಡಲ್ಲ. ಮೊದಲು ಅವರು ವೇದಗಳಲ್ಲೆಲ್ಲೂ ಇಲ್ಲದ ಶಿವನನ್ನು ಆಪೋಶನಕ್ಕೆ ತೆಗೆದುಕೊಂಡರು. ಹಾಗೆಯೇ ದ್ರಾವಿಡ ಬುಡಕಟ್ಟುಗಳ ಒಂದೊಂದೇ ದೇವತೆಗಳನ್ನು ತಮ್ಮ ಸಂಸ್ಕೃತಿಗಳ ಒಳಕ್ಕೆ ತೆಗೆದುಕೊಂಡು ಸಮಾಜದ ದೊಡ್ಡ ಸಂಖ್ಯೆಯ ಜನರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಪುರಾಣ ಬರೆಯುವಾಗ ಜನ ಸಂಸ್ಕೃತಿ ಒಳಗಿನ ಸಂಗತಿಗಳನ್ನು ಕಾಲ್ಪನಿಕ ದೇವರುಗಳೊಂದಿಗೆ ಸಮೀಕರಿಸಿ ಎಲ್ಲವನ್ನೂ ವೈದಿಕಮಯಗೊಳಿಸಿದರು. ಪಾರ್ವತಿ ಸ್ನಾನಕ್ಕೆ ಹೋಗುವಾಗ ಬೆವರಿನಿಂದ ಮಾಡಿದ ಗಣಪತಿಯನ್ನು ಕೂರಿಸುವುದು, ನಂತರ ಶಿವ ಬಂದು ಅವನ ತಲೆ ಕಡೆಯುವುದು, ನಂತರ ವಿಷಯ ತಿಳಿದು ಉತ್ತರ ದಿಕ್ಕಿಗೆ ಮುಕ ಮಾಡಿದ್ದ ಆನೆಯ ತಲೆ ಕಡಿದು ತರುವುದು ಇದೆಲ್ಲಾ ಅವಿವೇಕಿ ವೈದಿಕ ಪುರಾಣಕರ್ತರ ತಗಡು ಕತೆಯಷ್ಟೆ. ಯಾಕೆ ಆನೆ ಉತ್ತರ ದಿಕ್ಕಿಗೇ ಮುಕ ಮಾಡಿಕೊಳ್ಳಬೇಕು? ಯಾಕೆಂದರೆ ದಕ್ಷಣ ದಿಕ್ಕಿನ ಬಗ್ಗೆ ತಪ್ಪು ಸಂದೇಶ ಕೊಡುವುದು. ಯಾಕೆಂದರೆ ಇಡೀ ಬಾರತದ ತುಂಬೆಲ್ಲಾ ಇದ್ದ ದ್ರಾವಿಡ ಬಾಷಿಕ ಸಮುದಾಯಗಳನ್ನು ದಕ್ಷಿಣಕ್ಕೆ ತಳ್ಳಿದ್ದ ಆರ್ಯ ವೈದಿಕರು ಉತ್ತರ ದಿಕ್ಕಿನ ಬಗ್ಗೆಯೇ ತಮ್ಮ ಪುರಾಣಗಳಲ್ಲೆಲ್ಲಾ ಹೆಚ್ಚು ಹೊಗಳುವುದು. ವೈದಿಕರು ಹೀಗೆ ಮಾಡಿದಾಗ ಅವರಿಗೆ ಎರಡು ಲಾಭಗಳಾದವು. ಹೀಗೆ ಪುರಾಣಗಳನ್ನು ಬರೆದುಕೊಂಡು ಅವುಗಳನ್ನು ಜನರು ನಂಬುವಂತೆ ಮಾಡಿದಾಗ ಜನರು ವೈದಿಕರೆಲ್ಲಾ ದೇವಾಂಶ ಸಂಬೂತರೆಂದು ನಂಬಿದ್ದು ಒಂದಾದರೆ, ತಮ್ಮ ದೇವರ ಪೂಜೆಗೆ ಸೂಕ್ತರಾದವರೂ ವೈದಿಕರೇ ಎಂಬ ತೀರ್ಮಾನಕ್ಕೂ ಬಂದು ತಮ್ಮ ದೇವರನ್ನು ಪೂಜಿಸಲು ವೈದಿಕರಿಗೇ ಬಿಟ್ಟುಕೊಡಲು ಆರಂಭಿಸಿದರು. ಇದಕ್ಕೆ ಸರಿಯಾಗಿ ವೈದಿಕರು ದ್ರಾವಿಡ ಬಾಶೆಗಳ ಮೇಲೆ ಸಂಸ್ಕೃತ ಬಾಶೆಯ ಹೆಜೆಮನಿ ಸ್ಥಾಪಿಸಿದ್ದರು. ದೇವರಿಗೆ ಅರ್ಥ ಆಗುವ ಭಾಷೆ ಎಂದರೆ ಸಂಸ್ಕೃತವೇ ಎಂದೂ ಜನರನ್ನು ನಂಬಿಸಿದ್ದರು. ಹೀಗಾಗಿ ವೈದಿಕರಿಗೆ ಮುಂದೆ ರಾಜರ ಕಾಲದಲ್ಲಿ ದೇವಸ್ಥಾನಗಳು ರಚನೆಯಾದಾಗ ಯಥೇಚ್ಚ ಉಂಬಳಿಗಳು, ದಾನಗಳು ಬಂದವು.

ನಾವೀಗ ಇಂತಹ ಪುರಾಣಗಳನ್ನು ಓದಿಕೊಳ್ಳುವಾಗ ಅವುಗಳನ್ನು ಯಥಾವತ್ತಾಗಿ ನಂಬಿದರೆ ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಹಾಕಿಕೊಂಡಂತೆ. ಪುರಾಣಗಳನ್ನು ಭಾರತೀಯ ವಾಸ್ತವಿಕ ಸಾಮಾಜಿಕ ಸಂಗತಿಗಳ ಜೊತೆ ಸೇರಿಸಿ ನೋಡಿ ಯಾವುದು ಹೇಗೆ ಉಂಟಾಯಿತು ಎಂದು ಅರ್ಥ ಮಾಡಿಕೊಳ್ಳುವ ಪ್ರಬುದ್ದತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ನಮ್ಮ ವಚನ ಚಳವಳಿಯ ಶರಣರಾದ ಅಲ್ಲಮ ಪ್ರಭುಗಳು “ಪುರಾಣ ಎಂಬುದು ಪುಂಡರ ಗೋಷ್ಟಿ” ಎಂದಿದ್ದಾಗಲೀ ಪೆರಿಯಾರ್‌ ಮತ್ತು ಅಂಬೇಡ್ಕರ್‌ ಅವರು ವೈದಿಕ ಪುರಾಣಗಳನ್ನು ಭಂಜಿಸಿದ್ದರಲಿ, ಇವುಗಳ ಹಿಂದಿನ ಸದುದ್ದೇಶವನ್ನೂ ನಾವು ಅರಿಯಬೇಕು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಹರ್ಷಕುಮಾರ್‌ ಕುಗ್ವೆ
ಲೇಖಕ, ಪತ್ರಕರ್ತ

You cannot copy content of this page

Exit mobile version