ರಾಜ್ಯಾದ್ಯಂತ ಗಣೇಶ ಹಬ್ಬದ ವಿಶೇಷವಾಗಿ ಎಲ್ಲೆಡೆ ಗಣಪತಿ ಪ್ರತಿಷ್ಠಾಪಿಸಿ ಸಂಭ್ರಮದಿಂದ ಗಣೇಶ ಉತ್ಸವ ಆಚರಿಸಲಾಯಿತು. ರಾಜ್ಯದ ಬಹುತೇಕ ಕಡೆಗಳಲ್ಲಿ ಅಂತಹ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆಯೂ ವರದಿ ಆಗಿಲ್ಲ. ವಿಶೇಷ ಎಂದರೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟ ಸಾವರ್ಕರ್ ಗಣೇಶ ಉತ್ಸವಕ್ಕೆ ಯಾವುದೇ ಮನ್ನಣೆ ಸಿಗದೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ವಾತಂತ್ರ್ಯ ದಿನದಿಂದಲೂ ಸಾವರ್ಕರ್ ಮತ್ತು ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಭಾಗಿಯ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇತ್ತು. ಅದರ ಮುಂದುವರಿದ ಭಾಗದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿನ ಗಣೇಶ ಉತ್ಸವಗಳಲ್ಲಿ ಸಾವರ್ಕರ್ ಭಾವಚಿತ್ರ ಬಳಸಲು ಶ್ರೀರಾಮ ಸೇನೆ, ಭಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ಆ ಮೂಲಕ ಸಾವರ್ಕರ್ ಘನತೆಯನ್ನು ಎಲ್ಲೆಡೆ ಹಬ್ಬುವಂತೆ ಮಾಡಲು ತನ್ನೆಲ್ಲಾ ಕಾರ್ಯಕರ್ತರಿಗೆ ತಿಳಿಸಲಾಗಿತ್ತು.
ಇದರ ಜೊತೆಗೇ ಕನ್ನಡಪರ ಸಂಘಟನೆಗಳು ಸಂಗೊಳ್ಳಿ ರಾಯಣ್ಣ ಮತ್ತು ಪುನೀತ್ ರಾಜಕುಮಾರ್ ಭಾವಚಿತ್ರ ಬಳಸಿದ ಗಣೇಶ ಉತ್ಸವಕ್ಕೂ ಕರೆ ನೀಡಿದ್ದವು. ಮೇಲ್ನೋಟಕ್ಕೆ ಇದು ಸಾವರ್ಕರ್ ಗಣೇಶೋತ್ಸವಕ್ಕೆ ಪ್ರತಿತಂತ್ರದಂತೆ ಕಂಡುಬಂದರೂ ನೆಲದ ಅಸ್ಮಿತೆ ಮತ್ತು ಕನ್ನಡ ನೆಲಕ್ಕೆ ಈ ಇಬ್ಬರೂ ಮಹನೀಯರು ಕೊಟ್ಟ ವಿಶೇಷ ಕೊಡುಗೆಗಳನ್ನು ನೆನೆಯುವುದು ನಮ್ಮ ಜವಾಬ್ದಾರಿ ಎಂಬುದು ಕನ್ನಡಪರ ಸಂಘಟನೆಗಳ ಅಭಿಪ್ರಾಯ.
ಬೆಂಗಳೂರು ಸೇರಿದಂತೆ ಪ್ರಮುಖ ನಗರ ಪ್ರದೇಶಗಳಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ಇಟ್ಟ ಗಣೇಶೋತ್ಸವಗಳು ನಡೆದರೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಸಂಗೊಳ್ಳಿ ರಾಯಣ್ಣನ ಫೋಟೋ ಇಟ್ಟ ಗಣೇಶೋತ್ಸವಕ್ಕೆ ಬೆಂಬಲ ವ್ಯಕ್ತವಾಗಿದೆ. ಇನ್ನು ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷದ ಮಾಮೂಲಿನಂತೆ ಯಾವ ಸಿದ್ಧಾಂತಗಳ ಗಂಧಗಾಳಿ ಇಲ್ಲದ ಗಣೇಶೋತ್ಸವ ನಡೆದಿವೆ.

ಕೆಲವೊಂದು ಬೆರಳೆಣಿಕೆಯ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ಸಾವರ್ಕರ್ ಗಣೇಶೋತ್ಸವ ನಡೆದಿದೆ. ಅದರಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಹುಬ್ಬಳ್ಳಿ ಈದ್ಗಾ ಮೈದಾನದ ಗಣಪತಿ ಉತ್ಸವಗಳಲ್ಲಿ ಗಣೇಶ ಉತ್ಸವ ಸಮಿತಿಗಳು ಸಾವರ್ಕರ್ ಭಾವಚಿತ್ರ ಇಟ್ಟಿವೆ. ಇದರ ಮಧ್ಯೆ ಸ್ವತಃ ನಾಸ್ತಿಕರಾದ ಸಾವರ್ಕರ್ ಭಾವಚಿತ್ರ ಇಟ್ಟರೆ ಗಣೇಶ ಉತ್ಸವಕ್ಕೆ ನಿಜವಾದ ಅರ್ಥವೇ ಇರುವುದಿಲ್ಲ ಎಂಬುದು ಬಹುತೇಕ ಹಿಂದೂಪರ ಸಂಘಟನೆ ಮುಖ್ಯಸ್ಥರ ಅಭಿಪ್ರಾಯ.