ನವದೆಹಲಿ : ಅಹಮದಾಬಾದ್ನಲ್ಲಿ (Ahmedabad) ನಡೆದ ಏರ್ ಇಂಡಿಯಾ (Air India) ವಿಮಾನ ಅಪಘಾತ ಎಲ್ಲರ ನೋವಿಗೂ ಕಾರಣವಾಗಿದ್ದರೆ ಇದೀಗ ರಾಜಕೀಯ ವಾದ-ವಿವಾದಗಳಿಗೂ ವೇದಿಕೆಯಾಗಿದೆ. ಈ ಅಪಘಾತದ ಬಗ್ಗೆ ಗೃಹ ಸಚಿವ ಅಮಿತ್ ಶಾ (Amit Shah) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jai Ram Ramesh) ಅಸಂವೇದನಾಶೀಲ ಹೇಳಿಕೆ ಎಂದು ಟೀಕಿಸಿದ್ದಾರೆ.
ಅಮಿತ್ ಶಾ ವಿರುದ್ಧ ಆಕ್ರೋಶ
ಗುರುವಾರ ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಾಘತದ ಬಗ್ಗೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಇದು ಒಂದು ಅಪಘಾತ, ಮತ್ತು ಯಾರೂ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಗೃಹ ಸಚಿವರು ಈಗ ಮಾತನಾಡಬೇಕಿದ್ದ ಮಾತು ಇದಾ? ಇದು ನಿಜಕ್ಕೂ ಅಸಂವೇದನಾಶೀಲ ಎಂದು ಜೈರಾಮ್ ರಮೇಶ್ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ವಿಮಾನ ಅಪಘಾತಕ್ಕೀಡಾಗಿ ಜನರು ಸತ್ತಾಗ, ಗೃಹ ಸಚಿವರು ಈ ರೀತಿ ಹೇಳಿಕೆ ನೀಡುವುದನ್ನ ಬಿಟ್ಟು ಭರವಸೆ ನೀಡಬೇಕು, ಉಪನ್ಯಾಸ ನೀಡುವುದು ಸರಿಯಲ್ಲ. ಯಾವುದನ್ನೂ ತಡೆಯಲು ಸಾಧ್ಯವಾಗದಿದ್ದರೆ, ನಮಗೆ ಸಚಿವಾಲಯಗಳು ಏಕೆ ಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ವಿಮಾನ ಅಪಘಾತಗಳು ದೇವರು ಮಾಡುವುದಲ್ಲ, ಅದನ್ನ ತಡೆಯಬಹುದು, ಅದಕ್ಕಾಗಿಯೇ ನಮ್ಮಲ್ಲಿ ವಾಯುಯಾನ ನಿಯಂತ್ರಕಗಳು, ಸುರಕ್ಷತಾ ಪ್ರೋಟೋಕಾಲ್ಗಳ ವ್ಯವಸ್ಥೆ ಇದೆ. ಆದರೆ ಗೃಹ ಸಚಿವರ ಹೇಳಿಕೆ ನೋಡಿದರೆ ನಾವು ಸುರಕ್ಷತಾ ಮೂಲಸೌಕರ್ಯಗಳಿಗೆ ಹೂಡಿಕೆ ಮಾಡಬಾರದು ಅನಿಸುತ್ತದೆ ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಟ್ಟುಹೋದ 125,000 ಲೀಟರ್ ಇಂಧನ
ಲಂಡನ್ನ ಗ್ಯಾಟ್ವಿಕ್ಗೆ ತೆರಳುತ್ತಿದ್ದ AI-171 ಬೋಯಿಂಗ್ ಡ್ರೀಮ್ಲೈನರ್ 787-8 ವಿಮಾನ ಗುರುವಾರ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಮಾತ್ರವಲ್ಲದೇ ವಿಮಾನ ಪತನಗೊಂಡ ವೈದ್ಯಕೀಯ ಕಾಲೇಜ್ ಹಾಸ್ಟೆಲ್ ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಮಾಹಿತಿ ಪ್ರಕಾರ ವಿಮಾನದಲ್ಲಿ ಸುಮಾರು 125,000 ಲೀಟರ್ ಇಂಧನ ಇತ್ತು, ಅದು ಸುಟ್ಟುಹೋದ ಕಾರಣ ಹೆಚ್ಚಿನ ತಾಪಮಾನ ಉಂಟಾಗಿ ಪ್ರಯಾಣಿಕರ ಜೀವ ಉಳಿಸಲು ಸಾಧ್ಯವಾಗಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಅಪಘಾತಕ್ಕೀಡಾದ ವಿಮಾನದಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಏಳು ಪೋರ್ಚುಗೀಸ್ ಪ್ರಜೆಗಳು ಮತ್ತು ಒಬ್ಬ ಕೆನಡಾದ ಪ್ರಜೆ ಇದ್ದರು.