ಎಂಎಸ್ಸಿ ಪ್ರವೇಶ ಪರೀಕ್ಷೆಯಲ್ಲಿ ರೋಹಿತ್ ಭಾರತ ಮಟ್ಟದಲ್ಲಿ ಐದನೇ ಸ್ಥಾನ ಪಡೆದಿದ್ದರು. ಅವರು ಜೆಆರ್ಎಫ್ ಗೂ ಎರಡು ಬಾರಿ ಅರ್ಹತೆ ಪಡೆದಿದ್ದರು. ರೋಹಿತ್ ವೇಮುಲಾ ಅವರ ಪ್ರಮಾಣಪತ್ರಗಳನ್ನು ನಕಲಿ ಎಂದು ಕರೆಯಬಾರದು. ನಾನು ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ಜನರು ಗಮನಿಸುತ್ತಾರೆ. ನಕಲಿ ಎಂಬುದು ರಾಜಕೀಯ ಪಿತೂರಿ. ನಾವು ದಲಿತರು. ನಾವು ಯಾವುದೇ ತಪ್ಪು ಮಾಡುವುದಿಲ್ಲ.
ರೋಹಿತ್ ವೇಮುಲಾ ಎಂಟು ವರ್ಷಗಳ ಹಿಂದೆ, ಅವರು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈಗ ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ರೋಹಿತ್ ವೇಮುಲಾ ದಲಿತರಲ್ಲ (ಎಸ್ಸಿ) ಎಂದು ತೆಲಂಗಾಣ ಪೊಲೀಸರು ನ್ಯಾಯಾಲಯಕ್ಕೆ ನೀಡಿದ ವರದಿ ಇದೀಗ ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ.
ರೋಹಿತ್ ಆತ್ಮಹತ್ಯೆಗೆ ಕಾರಣರಾದವರು ಈ ಪ್ರಕರಣದಲ್ಲಿ ಆರೋಪಿಗಳು ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಇದಲ್ಲದೆ, ರೋಹಿತ್ ಎಸ್ಸಿ ಅಲ್ಲ ಎಂದು ಹೇಳುವ ಮೂಲಕ ಪೊಲೀಸ್ ವರದಿ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ತೆಲಂಗಾಣ ಸರ್ಕಾರ ಈಗಾಗಲೇ ಮಧ್ಯಪ್ರವೇಶಿಸಿದೆ. ತೆಲಂಗಾಣ ಡಿಜಿಪಿ ಕಚೇರಿ ಈ ಪ್ರಕರಣದ ಮರು ತನಿಖೆ ನಡೆಸುವುದಾಗಿ ಘೋಷಿಸಿದೆ.
ಆದರೆ ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲಾ ತನಿಖೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲವೂ ಪಿತೂರಿ ಎಂದು ಅವರು ದೂಷಿಸುತ್ತಾರೆ.
ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ರಾಧಿಕಾ, ತಮ್ಮ ಮಗನ ಆತ್ಮಹತ್ಯೆಗೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗುವವರೆಗೂ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಅವರೊಂದಿಗೆ ಬಿಸಿಸಿ ನಡೆಸಿದ ಸಂದರ್ಶನದ ಅನುವಾದ ಇಲ್ಲಿದೆ:
ಬಿಬಿಸಿ: ರೋಹಿತ್ ದೂರವಾಗಿ ಎಂಟು ವರ್ಷಗಳಾಗಿವೆ. ನಿಮ್ಮ ಬದುಕು ಈಗ ಹೇಗಿದೆ?
ರಾಧಿಕಾ ವೇಮುಲಾ: ಇವು ಬಹಳ ಕಷ್ಟದ ದಿನಗಳು. ಪೊಲೀಸರ ಇತ್ತೀಚಿನ ವರದಿ ಇನ್ನಷ್ಟು ನೋವು ತಂದಿದೆ. ಪ್ರಕರಣವನ್ನು ಮುಕ್ತಾಯಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ನನಗೆ ಸಾಕಷ್ಟು ನೋವು ತಂದಿತು. ನಾವು ತಕ್ಷಣ ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿಯಾದೆವು. ಅವರು ನ್ಯಾಯವನ್ನೂ ಒದಗಿಸುವುದಾಗಿ ಹೇಳಿದ್ದಾರೆ. ಪ್ರಕರಣವನ್ನು ಮತ್ತೆ ತೆರೆಯಲಾಗುವುದು ಎಂದು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಆ ಪ್ರಕರಣದ ಜೊತೆಗೆ, ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸುವಂತೆ ನಾನು ವಿನಂತಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ದೊರಕಿಸಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಬಿಬಿಸಿ: ರೋಹಿತ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರಾಧಿಕಾ ವೇಮುಲಾ: ಅವೆಲ್ಲವೂ ಸುಳ್ಳು ಆರೋಪಗಳು. ಪೊಲೀಸರು ಜಾತಿಯನ್ನು ಹೇಗೆ ಕಂಡುಹಿಡಿಯುತ್ತಾರೆ? ಕ್ಯಾಸ್ಟ್ ಸರ್ಟಿಫಿಕೇಟ್ ಬಗ್ಗೆ ತನಿಖೆ ನಡೆಸುವಲ್ಲಿ ಪೊಲೀಸರ ಕೆಲಸವೇನು? ನಾವು 2017-18ರಲ್ಲೇ ಕಲೆಕ್ಟರ್ ಗೆ ವರದಿ ಮಾಡಿದ್ದೇವೆ. 2019ರಲ್ಲಿ ಚುನಾವಣೆ, 2020 ಮತ್ತು 21ರ ಕೊರೊನಾ ನೆಪದಲ್ಲಿ ತನಿಖೆ ನಡೆಸಿಲ್ಲ. ನಿಜವಾದ ತನಿಖೆಯನ್ನು ಪೂರ್ಣಗೊಳಿಸದೆ ನೀವು ಹೇಗೆ ಜಾತಿಯನ್ನು ಕಂಡುಹಿಡಿಯಲು ಸಾಧ್ಯ? ಇದೆಲ್ಲವೂ ಬಿಜೆಪಿಯ ಪಿತೂರಿಯಿಂದ ನಡೆಯುತ್ತಿದೆ.
ಎಂಎಸ್ಸಿ ಪ್ರವೇಶ ಪರೀಕ್ಷೆಯಲ್ಲಿ ರೋಹಿತ್ ಭಾರತ ಮಟ್ಟದಲ್ಲಿ ಐದನೇ ಸ್ಥಾನ ಪಡೆದಿದ್ದರು. ಅವರು ಜೆಆರ್ಎಫ್ ಗೂ ಎರಡು ಬಾರಿ ಅರ್ಹತೆ ಪಡೆದಿದ್ದರು. ರೋಹಿತ್ ವೇಮುಲಾ ಅವರ ಪ್ರಮಾಣಪತ್ರಗಳನ್ನು ನಕಲಿ ಎಂದು ಕರೆಯಬಾರದು. ನಾನು ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ಜನರು ಗಮನಿಸುತ್ತಾರೆ. ನಕಲಿ ಎಂಬುದು ರಾಜಕೀಯ ಪಿತೂರಿ. ನಾವು ದಲಿತರು. ನಾವು ಯಾವುದೇ ತಪ್ಪು ಮಾಡುವುದಿಲ್ಲ.
ಬಿಬಿಸಿ: ಪೊಲೀಸರ ಪ್ರಕಾರ, ರೋಹಿತ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಮತ್ತು ಈ ವಿಷಯ ಬೆಳಕಿಗೆ ಬರುತ್ತದೆ ಎಂಬ ಭಯದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರಲ್ಲ?
ರಾಧಿಕಾ ವೇಮುಲಾ: ರೋಹಿತ್ ಪರಿಶಿಷ್ಟ ಜಾತಿಗೆ ಸೇರದಿದ್ದರೆ, ಅವರಿಗೆ ವಿಶ್ವವಿದ್ಯಾಲಯಕ್ಕೆ ಪ್ರವೇಶ ಹೇಗೆ ದೊರಕಿತು? ಅವರ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರವೇ ಅವರಿಗೆ ಪ್ರವೇಶ ನೀಡಲಾಯಿತಲ್ಲವೇ? ಇದು ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ. ರೋಹಿತ್ ಪರಿಶಿಷ್ಟ ಜಾತಿಯವರಾಗಿಯೇ ನಿಧನರಾದರು ಎಸ್ಸಿ ಅಲ್ಲದೆ ಹೋಗಿದ್ದರೆ, ಅವರನ್ನು ಏಕೆ ಅಮಾನತುಗೊಳಿಸಲಾಯಿತು? ಸಾವಿನ ನಂತರ ಜಾತಿಯ ಮೇಲೆ ಆರೋಪ ಹೊರಿಸುವುದು ಬಹಳ ತಪ್ಪು.
ಬಿಬಿಸಿ: ರೋಹಿತ್ ಅವರ ಜಾತಿಯ ಬಗ್ಗೆ ಗುಂಟೂರು ಕಲೆಕ್ಟರ್ ಮತ್ತು ಗುರಜಾಲ ತಹಶೀಲ್ದಾರ್ ನೀಡಿದ ವರದಿಯ ಆಧಾರದ ಮೇಲೆ, ಅವರು ವಡ್ಡರ ಜಾತಿಗೆ ಸೇರಿದವರು ಎಂದು ಪೊಲೀಸರು ತೀರ್ಮಾನಿಸಿದ್ದಾರೆ.
ರಾಧಿಕಾ ವೇಮುಲಾ: ಹೇಗೆ ನಿರ್ಧರಿಸುತ್ತೀರಿ? ಅದಕ್ಕೆ ನನ್ನನ್ನು ವಿಚಾರಣೆಗೆ ಒಳಪಡಿಸಬೇಕು. ನೀವು ನನ್ನ ಮಾತನ್ನು ಕೇಳಬೇಕು. ಗಚಿಬೌಲಿ ಪೊಲೀಸರು ನನ್ನನ್ನು ಎಂದೂ ವಿಚಾರಣೆಗೆ ಕರೆದಿಲ್ಲ. ರೋಹಿತ್ ಸಾವಿನ ನಂತರ, ಗುಂಟೂರಿನ ಕಲೆಕ್ಟರ್ ಆಗಿದ್ದ ಕಾಂತಿಲಾಲ್ ದಂಡೆ ರೋಹಿತ್ ಅವರನ್ನು ಎಸ್ಸಿ ಎಂದು ಘೋಷಿಸಿದರು. ಆದರೆ ಅವರು ತಕ್ಷಣ ತನ್ನ ಮನಸ್ಸನ್ನು ಬದಲಾಯಿಸಿದರು. ಈಗ ಎಂಟು ವರ್ಷಗಳ ನಂತರ, ಅವರು ಮತ್ತೆ ಎಸ್ಸಿ ಅಲ್ಲ ಎಂದು ಸುಳ್ಳು ಪ್ರಚಾರವನ್ನು ಹರಡುತ್ತಿದ್ದಾರೆ.
ಬಿಬಿಸಿ: ರೋಹಿತ್ ಪ್ರಕರಣದಲ್ಲಿ ನ್ಯಾಯಕ್ಕಾಗಿ ನೀವು ದೇಶಾದ್ಯಂತ ಪ್ರಯಾಣಿಸಿದ್ದೀರಿ, ಆದರೆ ಈಗ ನೀವು ಬಯಸಿದ ನ್ಯಾಯ ಸಿಕ್ಕಿಲ್ಲ, ಮತ್ತೆ ರೋಹಿತ್ ಅವರನ್ನೇ ದೂಷಿಸಲಾಗಿದೆ ಎಂಬ ವರದಿಗಳಿವೆ. ಅದರ ಬಗ್ಗೆ ನೀವು ಏನು ಹೇಳುತ್ತೀರಿ?
ರಾಧಿಕಾ ವೇಮುಲಾ: ಇದೊಂದು ಉದ್ದೇಶಪೂರ್ವಕ ಪ್ರಯತ್ನ. ಚುನಾವಣೆಯ ಸಮಯದಲ್ಲಿ ಪಿತೂರಿ ಮಾಡಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ನ್ಯಾಯ ಒದಗಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈಗ ಈ ಪ್ರಯತ್ನದ ಮೂಲಕ ಅವರನ್ನು ದಿಕ್ಕುತಪ್ಪಿಸಲು ಪ್ರಯತ್ನಿಸಲಾಗುತ್ತಿದೆ.
ಬಿಬಿಸಿ: ಪ್ರಕರಣದ ಮರು ತನಿಖೆಯಿಂದ ರೋಹಿತ್ಗೆ ನ್ಯಾಯ ಸಿಗಬಹುದೆಂದು ನೀವು ಭಾವಿಸುತ್ತೀರಾ?
ರಾಧಿಕಾ ವೇಮುಲಾ: ಈ ಬಾರಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಬಿಜೆಪಿ ಮತ್ತು ಬಿಆರ್ಎಸ್ ಸರ್ಕಾರಗಳಿಲ್ಲದೆ ತನಿಖೆ ಮುಂದುವರಿದರೆ ಸಂಪೂರ್ಣ ನ್ಯಾಯ ಸಿಗುತ್ತದೆ.
ಬಿಬಿಸಿ: ನೀವು ಯಾವ ರೀತಿಯ ನ್ಯಾಯವನ್ನು ನಿರೀಕ್ಷಿಸುತ್ತಿದ್ದೀರಿ?
ರಾಧಿಕಾ ವೇಮುಲಾ: ರೋಹಿತ್ ವೇಮುಲಾ ಸಾವಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗಬೇಕು. ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವವರು ಭಯಪಡಬೇಕು.
ಬಿಬಿಸಿ: ರೋಹಿತ್ ಪ್ರಕರಣದ ನಂತರವೂ ಐಐಟಿಗಳಂತಹ ಸ್ಥಳಗಳಲ್ಲಿ ಅನೇಕ ಜನರ ಮೇಲೆ ಹಲ್ಲೆ ನಡೆದಿದೆ. ಅದನ್ನು ಹೇಗೆ ನೋಡುತ್ತೀರಿ?
ರಾಧಿಕಾ ವೇಮುಲಾ: ರೋಹಿತ್ ವೇಮುಲಾ ಅವರಂತೆ ಯಾರಿಗೂ ಆಗಬಾರದು ಎಂದು ನಾನು ಹೋರಾಡುತ್ತಿದ್ದೇನೆ. ಭಾರತದ ಎಲ್ಲಾ ವಿದ್ಯಾರ್ಥಿಗಳು ನನಗೆ ರೋಹಿತ್ ಇದ್ದಂತೆ. ನಾನು ಒಂದು ಮಗುವನ್ನು ಕಳೆದುಕೊಂಡಿದ್ದೇನೆ. ಮುಂದೆ ಹಾಗಾಗಬಾರದು.
ಬಿಬಿಸಿ: ನಿಮ್ಮ ಕುಟುಂಬದ ಪರಿಸ್ಥಿತಿ ಹೇಗಿದೆ?
ರಾಧಿಕಾ ವೇಮುಲಾ: ದಿನಗಳು ಹೀಗೇ ಸಾಗುತ್ತಿವೆ. ನಾನು ಟೈಲರಿಂಗ್ ಮಾಡುತ್ತಿದ್ದೇನೆ: ಚಿಕ್ಕ ಮಗ ರಾಜಾ ಹೈಕೋರ್ಟಿನಲ್ಲಿ ಕೆಲ ಕಾಲ ವಕೀಲಿ ವೃತ್ತಿ ನಡೆಸಿದ. ಕುಟುಂಬಕ್ಕೆ ಹೆಚ್ಚಿನ ಬೆಂಬಲವಿರಲಿಲ್ಲ. ಹೀಗಾಗಿ ಅವನೀಗ ಸಣ್ಣ ಕೆಲಸ ಮಾಡುತ್ತಿದ್ದಾನೆ.
ಬಿಬಿಸಿ: ರೋಹಿತ್ ವೇಮುಲಾ ಕಾಯ್ದೆಯ ಹಿಂದಿನ ಉದ್ದೇಶವೇನು?
ರಾಧಿಕಾ ವೇಮುಲಾ: ಕಾನೂನು ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಅದು ಬಂದರೆ ದಲಿತ ಮಕ್ಕಳ ಮೇಲಿನ ಅನ್ಯಾಯಕ್ಕೆ ಕಡಿವಾಣ ಬೀಳುತ್ತದೆ. ಹೀಗಾಗಿ ಆ ಕಾನೂನು ಬರಬೇಕೆಂದು ನಾನು ಬಯಸುತ್ತೇನೆ.
ಮೂಲ: BBC