Sunday, June 23, 2024

ಸತ್ಯ | ನ್ಯಾಯ |ಧರ್ಮ

ಹೃದಯಕ್ಕಾಗಿ ಹೃದಯ..

ಈ ದಿನಗಳಲ್ಲಿ ಯುವ ಜನತೆಯೂ ಸೇರಿದಂತೆ ಜನ ಸಮುದಾಯವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಹೃದಯ ಸಂಬಂಧಿ  ಸಮಸ್ಯೆಗಳಿಗೆ ಸ್ಪಂದಿಸಲು ಬದಲಾದ ಜೀವನ ಶೈಲಿ, ಕೆಲಸದ ಒತ್ತಡದ ನಡುವೆ ಮನಸು, ಸಮಯ ಇದೆಯಾ ಎನ್ನುವುದೇ  ನಮ್ಮ ಮುಂದಿನ ಬಲು ದೊಡ್ಡ ಪ್ರಶ್ನೆಯಾಗಿದೆ. ಲೇಖಕಿ ಆಯೇಷಾ ಝಬಿಯವರ ಈ ಲೇಖನ ಓದಿ..  

ಹೃದಯದ ಆರೋಗ್ಯ ಕಾಳಜಿ ಕುರಿತು ವಿಶ್ವದ ಜನರಿಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಮಟ್ಟದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಹೃದ್ರೋಗ ಜಾಗತಿಕ ಮಟ್ಟದಲ್ಲಿ ನಂ.1 ಮಾರಣಾಂತಿಕ ರೋಗ ಎಂಬುದರ ಬಗ್ಗೆ ಜಗತ್ತಿನಾದ್ಯಾಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನದ ಪರಿಕಲ್ಪನೆಯನ್ನು ಸೃಷ್ಟಿಸಿದೆ. ಹೃದಯದ ಆರೋಗ್ಯ, ಹೃದಯ ರಕ್ತನಾಳದ  ಕಾಯಿಲೆಗಳು, ಹೃದಯದ ಮೇಲೆ ಅತಿಯಾದ ವ್ಯಾಯಾಮದ ಪರಿಣಾಮ, ಹೃದಯದ ಆರೈಕೆ ಇತ್ಯಾದಿ ಅತ್ಯಂತ ಮಹತ್ತ್ವದ ಅಂಶಗಳ ಕುರಿತು ಜಾಗೃತಿ ಮೂಡಿಸುವ ಸಂದರ್ಭ ಇದಾಗಿದೆ. ʼಪ್ರತಿಯೊಂದು  ಹೃದಯಕ್ಕಾಗಿ ಹೃದಯʼ ಎಂಬುದು ಈ ಬಾರಿಯ ವಿಶ್ವ ಸಂದೇಶವಾಗಿದೆ. ಅಂದರೆ ಹೃದಯವನ್ನು ಇತರರ ಒಳಿತಿಗಾಗಿ ಬಳಸುವುದು, ಆರೋಗ್ಯಕರ ನಿರ್ಧಾರಗಳನ್ನು ತಳೆಯುವುದು, ಸಹನೆಯಿಂದ ವರ್ತಿಸುವುದು.. ಇತ್ಯಾದಿ.

ಹೃದಯಾಘಾತ ಮತ್ತು ಹೃದಯಾಘಾತದಿಂದ ಹಠಾತ್ತನೇ ಉಂಟಾಗುವ ಆಕಸ್ಮಿಕ ಮರಣಗಳು ಆಧುನಿಕ ಸಮಾಜದಲ್ಲಿ ಬಹು ದೊಡ್ಡ ಪಿಡುಗಾಗಿದೆ. ಕೋಟ್ಯಂತರ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಈ ಶತಮಾನ ತುಂಬುವುದರಲ್ಲಿ ಭಾರತ ದೇಶದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಹೃದಯಾಘಾತಕ್ಕೆ ತುತ್ತಾಗುವ ಸಂಭವವಿದೆಯಂದು ತಿಳಿದು ಬಂದಿದೆ. ಹೃದಯಾಘಾತವು ಇಷ್ಟು ಪ್ರಮಾಣದಲ್ಲಿ ಹರಡಲು ಕಾರಣವೇನು? ಇತ್ತೀಚಿನ ವರ್ಷಗಳಲ್ಲಿ ಜನಜೀವನ ಶೈಲಿಯೇ ಬದಲಾಗಿದೆ. ಹೃದಯಾಘಾತವನ್ನು ತಡೆಗಟ್ಟಬೇಕಾದರೆ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ಇಡೀ ಜನಾಂಗವೇ ಎಚ್ಚೆತ್ತು ದಿನನಿತ್ಯದ ಶೈಲಿಯನ್ನು ಕೂಡಲೇ ಬದಲಾಯಿಸಿಕೊಳ್ಳಬೇಕು.

ಹೃದ್ರೋಗಕ್ಕೆ ಮುಖ್ಯವಾದ ಕಾರಣಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳು. ಅದರಲ್ಲೂ ಅಧಿಕ ರಕ್ತದೊತ್ತಡವು ಗುಪ್ತವಾಗಿ ಹೃದಯಕ್ಕೆ ಹಾನಿ ಮಾಡುತ್ತಾ ಬರುತ್ತದೆ. ಸದ್ದಿಲ್ಲದೇ ಒಂದು ವಯಸ್ಸಿನ ನಂತರ ಪ್ರತಿಯೊಬ್ಬರೂ ಕಾಲ ಕಾಲಕ್ಕೆ ರಕ್ತದೊತ್ತಡ, ರಕ್ತ ಮತ್ತು ಮೂತ್ರದಲ್ಲಿನ ಸಕ್ಕರೆ ಅಂಶ ಪರೀಕ್ಷೆ ಮಾಡಿಸಿಕೊಂಡು ಈ ರೋಗಗಳು ಕಂಡು ಬಂದಲ್ಲಿ ಸೂಕ್ತ ವೈದ್ಯ ಸಲಹೆಯಿಂದ ಈ ರೋಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಧೂಮಪಾನ, ಮದ್ಯಪಾನ ಹೃದಯಾಘಾತಕ್ಕೆ ಅಹ್ವಾನ. ಧೂಮಪಾನಿಗಳು ಸಂಪೂರ್ಣವಾಗಿ ಈ ಚಟವನ್ನು ಬಿಡಬೇಕು. ಮದ್ಯಪಾನವನ್ನು ನಿಷೇಧಿಸಬೇಕು. ಕೆಲವು ಬಗೆಯ ಮದ್ಯಪಾನಗಳು ಹೃದಯ ಬೇನೆಗೆ ಒಳ್ಳೆಯದು ಎಂಬ ಊಹಾಪೋಹಗಳನ್ನು ಕೇಳುತ್ತೇವೆ. ಇದು ನಮ್ಮ ಸಮಾಜಕ್ಕೆ ಸಮಂಜಸವಲ್ಲ. ಮದ್ಯಪಾನ ಮಾಡದೆ ಇರುವುದು ಜಾಣತನ.

ಬೊಜ್ಜು, ಕುಳಿತಲ್ಲೇ ಕುಳಿತು ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಹೃದಯಾಘಾತ ತಂದು ಕೊಡುವ ರೋಗಗಳಿಗೂ ತವರುಮನೆ. ಮಿತವಾಗಿ ತಿನ್ನಬೇಕು. ಶರೀರದ ಬೊಜ್ಜನ್ನು ಕರಗಿಸಬೇಕು. ದೈಹಿಕ ವ್ಯಾಯಾಮವನ್ನು ಪ್ರತಿದಿನ ಚಾಚೂ ತಪ್ಪದೆ ಮಾಡಬೇಕು. ದೈಹಿಕ ಶ್ರಮ ಬೊಜ್ಜನ್ನು ಕರಗಿಸುತ್ತದೆ. ರಕ್ತದೊತ್ತಡ ಮಧುಮೇಹ ರೋಗಗಳನ್ನು ಇಳಿಸುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ನ್ನು ಕಡಿಮೆ ಮಾಡುತ್ತದೆ. ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಮನಸ್ಸನ್ನು  ಆಹ್ಲಾದಕರವಾಗಿಸುತ್ತದೆ. ಹೃದಯಾಘಾತವನ್ನು ಹಿಮ್ಮೆಟ್ಟಿಸುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುವವರಲ್ಲಿ ಹೃದಯಾಘಾತ ಹೆಚ್ಚು. ಫಾಸ್ಟ್ ಫುಡ್, ಬೇಕರಿ ತಿಂಡಿಗಳು, ಹೆಪ್ಪುಗಟ್ಟುವ ಜಿಡ್ಡುಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದಲೂ, ಕೆಲವು ಮದ್ದುಗಳ ಪ್ರಯೋಗದಿಂದಲೂ ರಕ್ತದಲ್ಲಿ ಕೊಲೆಸ್ಟ್ರಾಲ್‌  ಕಡಿಮೆ ಮಾಡಿಕೊಳ್ಳಬಹುದು.

ಈ ದಿನಗಳಲ್ಲಿ ಯುವ ಜನತೆಯೂ ಸೇರಿದಂತೆ ಜನ ಸಮುದಾಯವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಹೃದಯ ಸಂಬಂಧಿ  ಸಮಸ್ಯೆಗಳಿಗೆ ಸ್ಪಂದಿಸಲು ಬದಲಾದ ಜೀವನ ಶೈಲಿ, ಕೆಲಸದ ಒತ್ತಡದ ನಡುವೆ ಸಮಯ ಇದೆಯಾ ಎನ್ನುವುದೇ  ನಮ್ಮ ಮುಂದಿನ ಬಲು ದೊಡ್ಡ ಪ್ರಶ್ನೆಯಾಗಿದೆ. ನಗರ ಪ್ರದೇಶಗಳ ಜೀವನ ತರಾತುರಿಯ ಜೀವನ. ಕೂರಲು ಸಮಯವಿಲ್ಲ. ನಿಲ್ಲಲು ಸಮಯವಿಲ್ಲ. ಮಲಗಿ ವಿಶ್ರಮಿಸಲು ವ್ಯವಧಾನವಿಲ್ಲ. ದುಡಿಯಬೇಕು-ದುಡಿಯುತ್ತಲೇ ಇರಬೇಕು. ಸಾಧಿಸಬೇಕು-ಸಾಧಿಸಿ ಗೆಲ್ಲಬೇಕು. ಅದು ತುರ್ತಾಗಿ ಆಗಬೇಕು. ಇದು ಸಮಾಜದ ಆಗ್ರಹ. ಜೀರ್ಣಿಸಿಕೊಳ್ಳುವ ಶಕ್ತಿ ಇರಲಿ ಇಲ್ಲದಿರಲಿ ತಿನ್ನಬೇಕು. ತಿನ್ನುತ್ತಲೇ ಇರಬೇಕು. ಹೃದಯಾಘಾತ ಈ ಜೀವನ ಶೈಲಿಯ  ಫಲಿತಾಂಶವಾಗಿರುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ, ತರಾತುರಿಗೆ ಬಲಿಯಾಗಬಾರದು. ತಮ್ಮ ದೈಹಿಕ ಮಾನಸಿಕ ಶಕ್ತಿ ಇರುವಷ್ಟು ಕಷ್ಟ ಪಡಬೇಕು. ಮನ:ಶಾಂತಿ ಕಳೆದು ಕೊಳ್ಳಬಾರದು.

ಪರದ್ರೋಹ ದುಃಖಕ್ಕೆ ಕಾರಣ. ದೇಹಕ್ಕೂ, ಮನಸ್ಸಿಗೂ ನಿತ್ಯ ತಕ್ಕಷ್ಟು ವಿಶ್ರಾಂತಿ ಬೇಕೇ ಬೇಕು. ತಾಯಿಯ ಗರ್ಭದಿಂದ ನಮ್ಮ ಉಸಿರಿನ ಕೊನೆಯವರೆಗೂ ಕೆಲಸ ಮಾಡುವ ಹೃದಯವನ್ನು ಜೋಪಾನ ಮಾಡಿಕೊಳ್ಳಬೇಕು. ವಿಶ್ವ ಹೃದಯ ಒಕ್ಕೂಟದ ಪ್ರಕಾರ ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ)ತಡೆಯ ಬಹುದು. ಜನಸಾಮಾನ್ಯರು ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆದು ಅಕಾಲಿಕವಾಗಿ ಸಂಭವಿಸುವ ಸಾವುಗಳು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.

ಆಯೇಷಾ ಝಬಿ
ಲೇಖಕಿ, ಮೈಸೂರು

🔸ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ಕರ್ನಾಟಕವನ್ನು ಪ್ರವೇಶಿಸುತ್ತಿದ್ದು, ಈ ಸಂಬಂಧ ಕಾಂಗ್ರೆಸ್ ಮುಖಂಡರು ಹಾಕಿದ್ದ ಹಿಂದಿ ಬ್ಯಾನರುಗಳಿಗೆ ಕರವೇ ಮುಖಂಡರು ಮಸಿ ಬಳಿದು, ಕನ್ನಡ ಬಳಸಲು ತಾಕೀತು ಮಾಡಿದರು. ಕರವೇ ಮೈಸೂರು ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಹಿಂದಿ ಬ್ಯಾನರುಗಳಿಗೆ ಮಸಿ ಬಳಿಯಲಾಯಿತು.

https://fb.watch/fR8P43WrnC/

Related Articles

ಇತ್ತೀಚಿನ ಸುದ್ದಿಗಳು