ಹುಬ್ಬಳ್ಳಿ : ನ್ಯಾಯಾಲಯದ ಆದೇಶ (Court order) ಜಾರಿಗೆ ಬಾರದ ಕಾರಣ ಹುಬ್ಬಳ್ಳಿಯಲ್ಲಿ (Hubli) ರೈಲ್ವೆ ಇಲಾಖೆಯ (Railway department) ಕಚೇರಿಯನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ (Farmers) ಭೂ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಡೆಪ್ಯೂಟಿ ಚೀಫ್ ಎಂಜಿನಿಯರ್ ಕಚೇರಿಯ ಟೇಬಲ್, ಕಂಪ್ಯೂಟರ್ ಸೇರಿದಂತೆ ಹಲವು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. 2017ರಲ್ಲಿ ಗಂಗಾವತಿ ರೈಲು ನಿಲ್ದಾಣ ನಿರ್ಮಾಣಕ್ಕಾಗಿ 16 ರೈತರಿಂದ 12.5 ಎಕರೆ ಕೃಷಿ ಜಮೀನು ಸ್ವಾಧೀನ ಮಾಡಲಾಗಿತ್ತು. ಪ್ರತಿ ಎಕರೆಗೆ 18 ಲಕ್ಷ ರೂ. ನೀಡಲಾಗಿದ್ದರೂ, ಅದು ಸರಿಯಾದ ಪರಿಹಾರವಲ್ಲ ಎಂದು ರೈತರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ನ್ಯಾಯಾಲಯ, ಪ್ರತಿ ಚದರ ಅಡಿಗೆ 800 ರೂ. ನೀಡುವಂತೆ ಆದೇಶಿಸಿತ್ತು. ಬಳಿಕ ಪ್ರಕರಣ ಹುಬ್ಬಳ್ಳಿ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಯಾಯಿತು. ಹೈಕೋರ್ಟ್ ಮಧ್ಯಂತರವಾಗಿ 50% ಪರಿಹಾರ ಪಾವತಿಸಲು ಸೂಚಿಸಿದ್ದರೂ ಇಲಾಖೆ ಪಾಲನೆ ಮಾಡಲಿಲ್ಲ. 9 ಪ್ರಕರಣಗಳಲ್ಲಿ 90 ಕೋಟಿ ರೂ. ಪಾವತಿಸಬೇಕಿದ್ದಲ್ಲಿ ಕೇವಲ 7 ಕೋಟಿ ಮಾತ್ರ ಜಮೆಯಾಗಿತ್ತು. ಹೀಗಾಗಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶಿಸಿದೆ.
