Saturday, June 21, 2025

ಸತ್ಯ | ನ್ಯಾಯ |ಧರ್ಮ

ಆನೆಗಳ ಹೈವೇ ಮೇಲೆ ಮಾನವನ ಅಧಿಕಾರ ಸ್ಥಾಪನೆ

“ನನ್ನ ಹಿರಿಯ ಮಿತ್ರರೊಬ್ಬರ  ಕಾಫಿತೋಟದಲ್ಲಿ ಆನೆಗಳು ಹಾವಳಿ ಮಾಡಿದ್ದವು. ಅವರ ನಾಲ್ಕು ಎಕರೆ ಬಾಳೆತೋಟ ಸಂಪೂರ್ಣ ನೆಲ ಕಚ್ಚಿತ್ತು. ನೀರಾವರಿ ಯಂತ್ರ ಮತ್ತು ಪೈಪುಗಳನ್ನು ಆನೆಗಳು ಎಳೆದುಕೊಂಡು ಹೋಗಿ ದೂರಕ್ಕೆ ಎಸೆದಿದ್ದವು…..”ಹೀಗೆ ನೆನಪಿನಂಗಳದಿಂದ ಹೆಕ್ಕಿ ಬರೆಯುತ್ತಾರೆ ಪ್ರಸಾದ್‌ ರಕ್ಷಿದಿಯವರು ಕಾಡುಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ.

ಭಾರತವು ಏಷ್ಯಾದ ಆನೆಗಳ ಬಹುದೊಡ್ಡ ನೆಲೆ. ಇತ್ತೀಚಿನ ಗಣತಿಯ ಪ್ರಕಾರ ಆರು ಸಾವಿರಕ್ಕೂ ಹೆಚ್ಚು ಆನೆಗಳು ಭಾರತದಲ್ಲಿವೆ ಎಂದು ಸರ್ಕಾರಿ ಅಂಕಿಸಂಖ್ಯೆಗಳು ಹೇಳುತ್ತವೆ. ಅದರಲ್ಲಿ ಸುಮಾರು ಒಂದೂವರೆ ಸಾವಿರದಷ್ಟು ಆನೆಗಳು ಕರ್ನಾಟಕದಲ್ಲೇ ಇವೆ. ಅಂದರೆ ದೇಶದ ಒಟ್ಟು ಆನೆಗಳ ಸಂಖ್ಯೆಯಲ್ಲಿ ಕಾಲು ಭಾಗದಷ್ಟು ನಮ್ಮಲ್ಲೇ ಇವೆ. ಮತ್ತು ಇವು  ಕರ್ನಾಟಕದ ದಕ್ಷಿಣದ ಮೈಸೂರು ಚಾಮರಾಜನಗರ ಬೆಂಗಳೂರು ಜಿಲ್ಲೆಗಳು, ಪಶ್ಚಿಮದ ಭಾಗವಾದ ಕೊಡಗು, ಹಾಸನ, ಚಿಕ್ಕಮಗಳೂರು ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯ ದಾಂಡೇಲಿ ಅರಣ್ಯಗಳಲ್ಲಿ ಇವೆ. ಇತ್ತೀಚಿನ ವರ್ಷಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ.

ಈ ಆನೆ ಮಾನವ ಸಂಘರ್ಷ ವಿಶ್ವವ್ಯಾಪಿಯೆಂದೂ, ಆನೆಗಳಿರುವ ಪ್ರತಿಯೊಂದು ಸ್ಥಳದಲ್ಲಿಯೂ ಈ ಸಮಸ್ಯೆ ಇದೆಯೆಂದೂ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಹೇಳುತ್ತಲೇ ಇದ್ದಾರೆ. ಅದು ನಿಜವೂ ಹೌದು. ಅವರಲ್ಲಿ ಕೆಲವರಾದರೂ ಅದಕ್ಕೆ ಕಾರಣಗಳನ್ನೂ ಧೈರ್ಯದಿಂದ ಹೇಳುತ್ತಲೇ ಬಂದಿದ್ದಾರೆ. ಅವರು ಹೇಳುತ್ತಿರುವ ಕಾರಣಗಳು ಎಲ್ಲ ಕಡೆಗಳಲ್ಲಿಯೂ ಆಳುವವರಿಗೆ, ಮತ್ತು ಅಭಿವೃದ್ಧಿ ಮಂತ್ರ ಜಪಿಸುವವರಿಗೆ ಇಷ್ಟವಾಗುತ್ತಿಲ್ಲವಾದ್ದರಿಂದ ಪ್ರತಿ ಸಲವೂ  ಪರಿಹಾರದ ಕ್ರಮಗಳು ಮಾತ್ರ ದಿಕ್ಕು ತಪ್ಪುತ್ತಲೇ ಇದೆ.

ಪ್ರತಿಯೊಂದು ಪ್ರದೇಶದ ಆನೆ ಮಾನವ ಸಂಘರ್ಷಗಳನ್ನು ಪಟ್ಟಿ ಮಾಡಿದರೆ ವಿಭಿನ್ನ ಕಾರಣಗಳಿವೆ ಹಾಗೆಯೇ ಎಲ್ಲ ಕಡೆಗಳಿಗೂ ಸಾಮಾನ್ಯವಾದ ಅನೇಕ ಅಂಶಗಳಿವೆ. ಆದರೆ ಎಲ್ಲಾ ಸಮಸ್ಯೆಗಳ ಮೂಲ ಮಾತ್ರ ಮನುಷ್ಯನೇ ಎನ್ನುವುದಂತೂ ನಿರ್ವಿವಾದ ಸಂಗತಿಯಾಗಿದೆ.

ಸುಮಾರು ಹದೈದು ವರ್ಷಗಳ ಹಿಂದೆ  ಸಕಲೇಶಪುರ ತಾಲ್ಲೂಕಿನ ಕೊಡಗು ಜಿಲ್ಲೆಯ ಅಂಚಿನ ಗ್ರಾಮವೊಂದರಲ್ಲಿ ನನ್ನ ಹಿರಿಯ ಮಿತ್ರರೊಬ್ಬರ  ಕಾಫಿತೋಟದಲ್ಲಿ ಆನೆಗಳು ಹಾವಳಿ ಮಾಡಿದ್ದವು. ಅವರ ನಾಲ್ಕು ಎಕರೆ ಬಾಳೆತೋಟ ಸಂಪೂರ್ಣ ನೆಲ ಕಚ್ಚಿತ್ತು. ನೀರಾವರಿ ಯಂತ್ರ ಮತ್ತು ಪೈಪುಗಳನ್ನು ಆನೆಗಳು ಎಳೆದುಕೊಂಡು ಹೋಗಿ ದೂರಕ್ಕೆ ಎಸೆದಿದ್ದವು. ಆ ಕಾಲಕ್ಕೇ ಸುಮಾರು ಮೂರು ನಾಲ್ಕು ಲಕ್ಷ ರೂಪಾಯಿಗಳಷ್ಟು ನಷ್ಟವಾಗಿತ್ತು. ಪತ್ರಿಕೆಗಳಲ್ಲಿಯೂ ಸುದ್ದಿಯಾಗಿದ್ದ ವಿಷಯವದು. ಕೆಲವು ದಿನಗಳ ನಂತರ ಅವರನ್ನು ಭೇಟಿಯಾಗಿದ್ದಾಗ ಪರಿಹಾರ ಕೇಳಿ ಅರ್ಜಿಯೇನಾದರೂ ಕೊಟ್ಟಿದ್ದೀರಾ ಎಂದು ವಿಚಾರಿಸಿದೆ. ಆಗ ಅವರು “ಏನು ಮಾಡೋದು ಅವರು ನಮಗಿಂತ ಸಾವಿರಾರು ವರ್ಷಗಳ ಮೊದಲೇ ಬಂದವರು, ಅವರ ಜಾಗದಲ್ಲಿ ನಾವು ಬಂದು ಕೂತಿದ್ದೇವೆ. ಏನು ಮಾಡುವುದು? ಅನುಭವಿಸಬೇಕು ಅಷ್ಟೇ” ಎಂದರು.

ಅವರ ಮಾತು ನಿಜ. ಆನೆಗಳು  ಮನುಷ್ಯನಿಗಿಂತ ಮೊದಲೇ ಭೂಮಿಯಲ್ಲಿ ವಿಕಾಸಗೊಂಡ ಪ್ರಾಣಿಗಳು. ಅವು ಮನುಷ್ಯನಿಗಿಂತ ಮೊದಲೇ ತಮ್ಮ ನೆಲೆಗಳನ್ನು ಜೀವನ ವಿಧಾನವನ್ನು, ತಮ್ಮ ಸಂಚಾರದ ದಾರಿಗಳನ್ನು ರೂಢಿಸಿಕೊಂಡಿದ್ದವು. ನಂತರ ಬಂದ ಮನುಷ್ಯನಿಗೆ ಅವುಗಳಿಗಿಲ್ಲದ ಹಲವು ಸೌಲಭ್ಯಗಳನ್ನು ಪ್ರಕೃತಿ ಕೊಟ್ಟಿತು. ಇನ್ನೂ ಹಲವಾರನ್ನು ಅವನೇ ರೂಢಿಸಿ ಬೆಳೆಸಿಕೊಂಡ, ಪ್ರಕೃತಿಯ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸತೊಡಗಿದ. ತನ್ನ ಅನುಕೂಲಕ್ಕೆ ಹಲವಾರು ಪ್ರಾಣಿಗಳನ್ನು ಪಳಗಿಸಿ ಬಳಸಿಕೊಂಡ, ಅಂತಹವುಗಳಲ್ಲಿ ಆನೆಯೂ  ಒಂದು.

ದುಡಿಮೆ, ಯುದ್ಧಗಳಿಗೆ, ಧಾರ್ಮಿಕ ಆಚರಣೆಗಳಿಗೆ, ರಾಜರ ವೈಭವಕ್ಕೆ ಆನೆಗಳು ಬಳಕೆಯಾದವು. ಇದಕ್ಕಾಗಿಯೇ ಕಾಡಾನೆಗಳನ್ನು ಹಿಡಿದು ಪಳಗಿಸುವ ಪದ್ಧತಿಯೂ ಪ್ರಾರಂಭವಾಯಿತು. ಚರಿತ್ರೆಯ ಕಾಲದಿಂದ ಬ್ರಿಟಿಷ್ ಆಳ್ವಿಕೆಯವರೆಗೂ ಮುಂದುವರೆದು ಇದು ತೀರ ಇತ್ತೀಚಿನವರೆಗೂ ಇತ್ತು. ಮೈಸೂರು ಸಂಸ್ಥಾನದಲ್ಲಿ ಆನೆಗಳನ್ನು ಹಿಡಿಯುವ ಖೆಡ್ಡಾ ಆಚರಣೆ ವಿಶ್ವಖ್ಯಾತಿಯನ್ನೂ, ಪ್ರವಾಸಿ ಆಕರ್ಷಣೆಯನ್ನೂ ಹೊಂದಿತ್ತು. ಆನೆಗಳನ್ನು ಹಿಡಿದು ಪಳಗಿಸುವುದು, ಅವುಗಳನ್ನು ನೋಡಿಕೊಳ್ಳುವುದೂ ಒಂದು ವೃತ್ತಿಯೇ ಆಯಿತು. ಎಲ್ಲ ಸಂಸ್ಥಾನಗಳಲ್ಲಿಯೂ ಕಾವಾಡಿಗರು, ಮಾವುತರು ಇರುತ್ತಿದ್ದರು.

ಆದರೆ ಆಗ ಎಲ್ಲ  ದೇಶಗಳಲ್ಲಿಯೂ ಅರಣ್ಯದ ಪ್ರಮಾಣ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಇತ್ತು ಮತ್ತು ಜನಸಂಖ್ಯೆ  ಇಂದಿಗೆ ಹೋಲಿಸಿದರೆ ಬಹಳ ಕಡಿಮೆ ಇತ್ತು. ಆ ಕಾರಣದಿಂದ ಮನುಷ್ಯ ಪ್ರಾಣಿ ಸಂಘರ್ಷ ಇರಲಿಲ್ಲ ಅಥವಾ ಇದ್ದರೂ ಕಡಿಮೆ ಪ್ರಮಾಣದಲ್ಲಿ ಇತ್ತು. ಕಾಡಿನ ಒಳಗೇ ಜೀವಿಸುತ್ತಿದ್ದ ಅನೇಕ ಜನಾಂಗಗಳು  ಬೇಟೆಯಾಡುತ್ತಿದ್ದರೂ ಪ್ರಾಣಿ ಮತ್ತು ಪರಿಸರದೊಂದಿಗೆ ಒಂದು ರೀತಿಯ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು.

ಕಳೆದ ಶತಮಾನದಿಂದ ಇವೆಲ್ಲ ಬದಲಾಗುತ್ತ ಹೋದವು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು

You cannot copy content of this page