ಬೆಂಗಳೂರು ಸೆ 11: ಮಾನವರ ಅಳಿವು ಉಳಿವು ಅರಣ್ಯದ ಉಳಿವಿನ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅರಣ್ಯ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ನುಡಿದರು.
ಅರಣ್ಯ ಇಲಾಖೆ ಆಯೋಜಿಸಿದ್ದ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025″ನ್ನು ಉದ್ಘಾಟಿಸಿ ಮಾತನಾಡಿದರು.
ಹಸಿರಿನ ಹೊದಿಕೆ ಹೆಚ್ಚಾದರೆ ಅರಣ್ಯವೂ ಹೆಚ್ಚುತ್ತದೆ. ಅರಣ್ಯ ಸಂಪತ್ತೂ ಹೆಚ್ಚುತ್ತದೆ. ಕಾಡು ಪ್ರಾಣಿ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕಾಡು ಪ್ರಾಣಿಗಳಿಗೆ ಅಗತ್ಯವಾದ ಆಹಾರ, ನೀರು ಕಾಡಿನಲ್ಲೇ ಸಾಕಷ್ಟು ಸಿಗುವಂತೆ ಮಾಡಿದರೆ ಅರಣ್ಯ ಮಾನವ ಸಂಘರ್ಷವನ್ನು ತಡೆಗಟ್ಟಬಹುದು ಎಂದರು.
ಕಾಡು ಪ್ರಾಣಿಗಳ ಮತ್ತು ಮಾನವರ ಸಂಘರ್ಷ ತಪ್ಪಿಸಲು ರೈಲ್ವೇ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ಮತ್ತು ಇವುಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಅರಣ್ಯ ಇಲಾಖೆ ಬಳಿಯೂ ಸಾಕಷ್ಟು ಹಣ ಇದೆ. ಅಗತ್ಯಬಿದ್ದರೆ ಸರ್ಕಾರ ಕೂಡ ಹಣ ಕೊಡಲು ಸಿದ್ದವಿದೆ. ಆದ್ದರಿಂದ ಸಮರ್ಪಕವಾಗಿ ಬ್ಯಾರಿಕೇಡ್ ನಿರ್ಮಿಸಿ ಆನೆ-ಮಾನವ ಸಂಘರ್ಷ ತಪ್ಪಿಸಬೇಕು ಎಂದರು.
ಹಿರಿಯ ಅಧಿಕಾರಿಗಳು ಆಗಿಂದ್ದಾಗೇ ಕಾಡಿಗೆ ಭೇಟಿ ನೀಡಿ, ಹೆಚ್ಚೆಚ್ಚು ಕಾಡಿನಲ್ಲೇ ಉಳಿಯಬೇಕು. ಆಗ ಮಾತ್ರ ಕೆಳ ಹಂತದ ಸಿಬ್ಬಂದಿ ಕೂಡ ಕಾಡೊಳಗೇ ಇದ್ದು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.