(ಈ ವರೆಗೆ…)
ಆಸ್ಪತ್ರೆಯಿಂದ ಬಿಡುಗಡೆಗೊಂಡು ಲಕ್ಷ್ಮಿ ಗಾಡಿ ಏರಿದಳು. ಸೋಪಾನ ಪೇಟೆಯ ಬಳಿ ಬಂದಾಗ ಗಾಡಿ ನಿಲ್ಲಿಸಿ ಅಲ್ಲಿಯೇ ಇದ್ದ ಕರೆಂಟಿನ ಆಫೀಸು ನೋಡಿ ಹದಿನೈದು ವರ್ಷಗಳ ಹಿಂದೆ ಅಲ್ಲಿ ಕೆಲಸ ಮಾಡುತ್ತಿದ್ದುದನ್ನು ನೆನಪಿಸಿಕೊಂಡಳು. ಲಕ್ಷ್ಮಿಯ ಚಿತ್ರ ವಿಚಿತ್ರ ವರ್ತನೆಗಳಿಂದ ಸಿಟ್ಟಿಗೆದ್ದ ಚಂದ್ರಹಾಸ ಆಕೆಯ ಬೆನ್ನಿಗೆ ಒಂದೇಟು ಬಿಗಿಯುತ್ತಾನೆ. ಸಿಟ್ಟು ನೆತ್ತಿಗೇರಿದ ಲಕ್ಷ್ಮಿಯನ್ನು ಹೇಗೋ ಸಮಾಧಾನಿಸಿ ಮನೆಗೆ ಕರೆತರುತ್ತಾರೆ. ಲಕ್ಷ್ಮಿಯ ಸಿಟ್ಟು ಕರಗಿತೇ? ಓದಿ ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆಯ 16 ನೇ ಕಂತು.
ಲಕ್ಷ್ಮಿ ದೊಡ್ಡ ಆಸ್ಪತ್ರೆ ಸೇರಿದಂದಿನಿಂದ ಹಳೆ ನಾರಿ ಪುರದ ಎಲ್ಲಾ ಮನೆ ಮನೆಗಳಲ್ಲೂ ಅವಳ ವಿಚಾರವೇ ತುಂಬಿ ರೆಕ್ಕೆ ಪುಕ್ಕ ಮೂಡಿ ಊರ ತುಂಬಾ ಹಾರಾಡತೊಡಗಿತ್ತು. ಅಂದು ಲಕ್ಷ್ಮಿಯನ್ನು ಹೊತ್ತ ಎತ್ತಿನ ಗಾಡಿ ಮನೆಯ ಮುಂದೆ ಬಂದು ನಿಂತದ್ದೇ ಅವಳ ವಿಚಾರವನ್ನೇ ಮೆಲುಕು ಹಾಕುತ್ತಿದ್ದ ಹೆಂಗಸರು ಗಂಡಸರು ಮಕ್ಕಳು ಮರಿಗಳು ಎದ್ದೆನೋ ಬಿದ್ದೆನೋ ಎಂಬಂತೆ ಗಾಡಿಯ ಬಳಿ ದೌಡಾಯಿಸಿ ಬಂದರು. ಯಾರೊಂದಿಗೂ ಮಾತಾಡದೆ ಬಿಗಿಮೋರೆ ಹೊತ್ತು ಕೋಪೋದ್ರಿಕ್ತಳಾಗಿ ಕುಳಿತಿದ್ದ ಲಕ್ಷ್ಮಿ” ಮೊದ್ಲು ಆ ಮನೆ ಮುರ್ಖುರುನೆಲ್ಲಾ ಇಲ್ಲಿಂದ ಓಡ್ಸಿ” ಎಂದು ಗುಟುರು ಹಾಕಿದಳು. ಗಾಡಿಯಿಂದ ಕೆಳಗಿಳಿದ ಅವ್ವ ಜನರ ಕಡೆ ತಿರುಗಿ “ನಿಮ್ಮ ದಮ್ಮಯ್ಯ ಎಲ್ರು ಇಲ್ಲಿಂದ ಹೋಗಿ” ಎಂದು ಗೋಗರೆದುಕೊಂಡಳು. ಒಂದು ನಾಲ್ಕೈದು ಜನ ಹಿರಿಯ ಹೆಂಗಸು ಗಂಡಸರನ್ನುಳಿದು ಮಿಕ್ಕವರೆಲ್ಲ ಜೋಲು ಮೋರೆ ಹೊತ್ತು ತಮ್ಮ ತಮ್ಮ ಮನೆ ಕಡೆ ಹೆಜ್ಜೆ ಹಾಕಿದರು.
ಒಳಗೆ ಬಂದ ಅವ್ವ ಲಕ್ಷ್ಮಿಯನ್ನು ಮಲಗಿಸಲು ನಡು ಮನೆಯಲ್ಲಿ ಹಾಕಿದ್ದ ಮಂಚವನ್ನು ಅಣಿಗೊಳಿಸಲು ಮುಂದಾದಳು. ಅವ್ವನನ್ನು ತಡೆದ ಲಕ್ಷ್ಮಿ “ಇನ್ನೆಷ್ಟೊತ್ತು ಇದ್ದಾನು ಮ್ಯಾಲ್ ಬ್ಯಾಡ ಕೆಳಗೆ ಹಾಸು ಸಾಕು” ಎಂದಳು ಆ ಮಾತು ಕೇಳಿದ ಅವ್ವನಿಗೆ ಜೀವವೇ ಬಾಯಿಗೆ ಬಂದಂತಾಗಿ “ನಿನ್ನ ದಮ್ಮಯ್ಯ ಕನವ್ವ ಅಂತ ಕೆಟ್ಟ್ ಮಾತಾಡಬ್ಯಾಡ” ಎಂದು ಲಕ್ಷ್ಮಿಯ ಬಾಯಿ ಮೇಲೆ ತನ್ನ ಕೈ ಇಟ್ಟಳು. ಮಾರು ದೂರ ನಿಂತಿದ್ದ ಚಂದ್ರಹಾಸ ಕೆಂಗಣ್ಣು ಬಿಡುತ್ತ “ನನ್ ತಂಗಿಗ್ ಏನಾದ್ರು ಹೆಚ್ಚು ಕಮ್ಮಿ ಮಾಡ್ದೋ ನಿನ್ನ್ ಗತಿ ನೆಟ್ಗಿರಕಿಲ್ಲ ತಿಳ್ಕೋ” ಎಂದು ದಮಕಿ ಹಾಕಿದ. ಚಂದ್ರಹಾಸನ ದನಿ ಕಿವಿ ಮೇಲೆ ಬಿದ್ದದ್ದೆ ಲಕ್ಷ್ಮಿಯ ಮೈ ಸೆಟೆದು ಮುಖ ವಿಕಾರವಾಯಿತು. ಎದುರಿಗಿದ್ದ ಮರದ ದೊಡ್ಡ ಊಟದ ಟೇಬಲ್ ಅನ್ನು ತನ್ನ ಎರಡು ಕೈಗಳಿಂದ ಎತ್ತಿ ಚಂದ್ರಹಾಸನ ಕಡೆಗೆ ತೂರಿ ಬಿಟ್ಟಳು. ಇಷ್ಟರಲ್ಲೇ ಆ ಏಟಿನಿಂದ ತಪ್ಪಿಸಿಕೊಂಡ ಚಂದ್ರಹಾಸ ಅಡಿಗೆ ಕೋಣೆಯ ಕಡೆಗೆ ಓಡಿದ. ನೋಡ ನೋಡುತ್ತಿದ್ದಂತೆ ಆ ಭಾರಿ ಗಾತ್ರದ ಟೇಬಲ್ ಗೋಡೆಗೆ ಅಪ್ಪಳಿಸಿ ಚಟಪಟ ಮುರಿದು ಮುದುರಿ ನೆಲದ ಮೇಲೆ ಬಿದ್ದಿತು. ಆ ನಡು ಮನೆಯಲ್ಲಿ ಸೇರಿಕೊಂಡವರೆಲ್ಲ ಕ್ಷಣ ಸ್ತಂಭೀಭೂತರಾಗಿ ಉಸಿರೇ ಆಡುವುದನ್ನು ಮರೆತು ಗಪ್ಪಾಗಿ ಕುಳಿತುಬಿಟ್ಟರು. ಆಚೆ ಮನೆಯ ಗಟವಾಣಿ ಅಕ್ಕಜಕ್ಕ ಮಾತ್ರ ರೊಚ್ಚಿಗೆದ್ದವಳಂತೆ “ಅಯ್ಯೋ ಬಿಕನಾಸಿ ದಯ್ಯ್ ಮುಂಡೇದೆ ಮುತ್ತಿನಂತ ಮಗಿನ ಅಟ್ಕಾಯಿಸ್ಕೊಂಡ್ ಕೂತಿದ್ಯಲ್ಲಾ ಎಲ್ರುಲ ಆ ಎಕ್ಕಡನು ಬರ್ಲು ಕಡ್ಡಿನೂ ತನ್ರುಲ ಇಲ್ಲಿ ಯಾವ್ ಸೂಳೇಮಗ ಅಂತ ಬಾಯ್ ಬುಡ್ಸಾನ ಎಂದು ಕೂಗು ಹಾಕಿದಳು.
ಹೆದರಿದ ಲಕ್ಷ್ಮಿ ನಿಂತ ಜಾಗದಲ್ಲಿಯೇ ಮುದುರಿ ಕೂತು “ಅಯ್ಯೋ ನಿಮ್ಮ ದಮ್ಮಯ್ಯ ಹಂಗ್ ಮಾತ್ರ ಮಾಡಬೇಡಿ ನೀವೇನಾದ್ರೂ ಎಕ್ಕಡ ಬರ್ಲಲ್ಲಿ ಹೊಡುದ್ರೆ ನನ್ನ ಕುಲದೋರು ನನ್ನ ಅನ್ನಕ್ಕೆ ಸೇರ್ಸಕ್ಕಿಲ್ಲ” ಎಂದು ಕಣ್ಣೀರು ಹಾಕತೊಡಗಿದಳು. ಕೆಳಗಿನ ಬೀದಿಯ ಅಂಬಕ್ಕ ಲಕ್ಷ್ಮಿಯ ಕೆನ್ನೆ ತಿವಿದು “ನೀನು ಯಾರು ಅಂತ ಬೇಗ ಬೊಗಳಿದ್ರೆ ಸರಿ. ಇಲ್ಲ ಅಂದ್ರೆ ಎಕ್ಕಡುದ್ ಏಟೇಯ” ಎಂದಳು. ಕಣ್ಣು ಕೆಕ್ಕರಿಸಿ ಅಂಬಕ್ಕನನ್ನು ತಿನ್ನುವಂತೆ ನೋಡಿದ ಲಕ್ಷ್ಮಿ “ಅಯ್ಯೋ ಸೂಳೆ ಮುಂಡೆ ಎಲೆ ಅಡಿಕೆಗೆ, ಕಾಚಿಗೆ, ಕಡ್ಡಿಪುಡಿಗೆ ಅಂತ ಮಕ್ಕಳುನ್ನೇ ತಲೆ ಹಿಡ್ಕೊಂಡು ತಿನ್ನೋಳು ನೀನು ಬಂದ್ಬುಟ್ಲು ನಂದೆಲ್ಲಿಡ್ಲಿ ಅಂತ. ಇನ್ನೂಂದಪ್ಪ ನನ್ ಮೈ ಮುಟ್ಟಿದ್ರೆ ನಿನ್ ಗತಿ ನೆಟ್ಗಿರಕಿಲ್ಲ ತಿಳ್ಕೋ” ಎಂದು ಗದರಿ ತನ್ನ ಕಥೆ ಆರಂಭಿಸಿದಳು.
” ನಾನು ಬೊಂಬುಲವಾಡಿ ಚೆನ್ನಪ್ಪ. ಕರೆಂಟ್ ಆಫೀಸ್ನಲ್ಲಿ ಲೈನ್ ಮ್ಯಾನ್ ಆಗಿದ್ದೆ. ಈತಕೆ ಹದ್ನೇಳು ವರ್ಷದ ಹಿಂದೆ ಈ ಪಕ್ಕದ ಕೆನೆಯೂರಿಗೆ ಒಂದು ಮದುವೆಗೆ ಅಂತ ಬಂದಿದ್ದೆ. ಬಡ್ಡೆತ್ತಿದ್ದು ಅದೇನು ಗ್ಯಾನ ಬಂತೋ ಕಾಣೆ, ಅಲ್ಲಿದ್ದ ಒಂದು ಚೆಂದುಳ್ಳೆ ಹೆಂಗ್ಸಿನ್ ಮೇಲೆ ನನ್ನ ಕಣ್ ಬಿತ್ತು. ತಡಿಯಕ್ ಆಗ್ಲಿಲ್ಲ. ಹೆಂಗಾದ್ರು ಅವುಳುನ್ನ ಒಂದಪ್ಪನಾದ್ರು ಹಿಡ್ಕಬೇಕು ಅನ್ನೋ ಆಸೆ ಒದ್ದ್ಕೊಂಡು ಬಂತು ನೋಡು ಅವ್ಳ್ ಹಿಂದೆನೇ ಹೊಂಚಾಕಿ ಹಾಕಿ ಒಬ್ಬಳೇ ಇದ್ದ ಗಳಿಗೆ ನೋಡಿ ಹೋಗಿ ತಬ್ಕೊಂಡೇ ಬುಟ್ಟೆ. ಅಯ್ಯಯ್ಯೋ ಏನ್ ಹೇಳ್ಳಿ ಆ ರಂಡೆ ಭೂಮಿ ಆಕಾಶ ಒಂದಾಗೋ ಹಂಗೆ ಕಿರ್ಚಾಡಿ ಅವಾಂತ್ರ ಎಬ್ಬುಸ್ ಬುಟ್ಲು” ಎಂದು ಹೇಳಿ ಕೆಲವು ಘಳಿಗೆ ಆ ಹೆಂಗಸಿಗೆ ಬಾಯಿಗೆ ಬಂದಂತೆ ಬಯ್ಯತೊಡಗಿದಳು ಲಕ್ಷ್ಮಿ. ಅನತಿ ದೂರದಲ್ಲಿ ಅಂಬಕ್ಕನ ಬೆನ್ನ ಹಿಂದೆ ನಿಂತಿದ್ದ ಕೆನೆಯೂರಿನ ದೊಡ್ಡಮ್ಮ ಆ ಬಯ್ಗುಳ ಕೇಳಲಾರದೆ “ಥೂ ಮಾನ್ ಗೆಟ್ಟ್ ಸೂಳೆ ಮಗನೆ ಅವಳು ಹಿಡ್ಕೊಂಡು ನಿಂಗೆ ಮುತ್ತ್ ಕೊಡ್ಬೆಕಿತ್ತಾ ಮತ್ತೆ” ಎಂದು ಗೊಣಗಿ ಕೊಂಡಳು. ” ಯಾವಳೆ ಅವಳು ಹಿಂದ್ ನಿಂತ್ಕೊಂಡು ಗೊಣುಗ್ತಿರದು ಧೈರ್ಯ ಇದ್ರೆ ಮುಂದ್ ಬಂದು ಬೊಗುಳು” ಎಂದು ಅವಳೆಡೆಗೆ ಕೆಕ್ಕರಿಸಿ ನೋಡಿದಳು ಲಕ್ಷ್ಮಿ. ಪಕ್ಕದಲ್ಲಿದ್ದ ಅವ್ವ ಆ ದೊಡ್ಡವ್ವನಿಗೆ ಜೋರು ಮಾಡಿದವಳಂತೆ ಮಾಡಿ, “ನೀನು ಮುಂದೊರ್ಸಪ್ಪ ಆ ತಿಳಿಗೇಡಿಗೊಳ್ ಮಾತ್ಗೆ ಕಿವಿ ಕೊಡ್ಬ್ಯಾಡ” ಎಂದು ಸಮಾಧಾನಿಸಿದಳು. “ಹೂಂ ನಿನ್ ಮಖಾ ನೋಡ್ಕೊಂಡು ಇವರ್ನೆಲ್ಲಾ ಸೈಸ್ಕೊತಿದಿನಿ ತಿಳ್ಕೊ” ಎಂದು ಹೇಳಿ ತನ್ನ ಕತೆ ಮುಂದುವರೆಸಿದಳು ಲಕ್ಷ್ಮಿ.
“ಇನ್ನು ಅಲ್ಲಿ ಸೇರಿದ ಜನ ನನ್ನ ಬುಟ್ಟಾರ ಬೆರ್ಸ್ಕೊಂಡು ಬಂದ್ರು. ಸತ್ನೋ ಕೆಟ್ನೋ ಅಂತ ಓಡ್ದೆ ಓಡ್ದೆ… ಇನ್ನು ಎಷ್ಟ್ ಓಡಿದ್ರು ಅವ್ರು ನನ್ನ ಬುಡಕಿಲ್ಲ ಅಂತ ಗೊತ್ತಾಯ್ತು. ಇದ್ರು ಮರಿಯಾದಿ ಹಾಳು, ತಲೆ ಎತ್ಕೊಂಡು ಓಡಾಡಕಂತೂ ಆಗಕಿಲ್ಲ ಅನ್ಸಿ ಅಲ್ಲೇ ಇದ್ದ ಲೈಟ್ ಕಂಬವ ಸರಸರನೇ ಹತ್ತಿ ಕರೆಂಟ್ ಹರಿತಿದ್ದ್ ವಯರ್ನ ಹಿಡ್ಕೊಂಡೇ ಬುಟ್ಟೇ. ಇನ್ನು ಹೇಳೋದೇನು ದೇಹವೇನೋ ಸುಟ್ ಕರುಕ್ಲಾಯಿತು. ಆದ್ರೆ ಈ ಆಯಸ್ ಮುಗಿದಿದ್ದ್ ಜೀವ ಏನ್ ಮಾಡ್ತದೇಳು. ಇಲ್ಲಿಗಂಟ ಗಾಳಿಲಿ ತೇಲ್ಕೊಂಡು ಹಾರಾಡ್ತಾನೆ ಇದ್ದೆ. ಅವತ್ತು ಹಿಂಗೆ ಲೈಟ್ ಕಂಬುದ್ ಮೇಲೆ ಕೂತ್ಕೊಂಡಿದ್ದೆ. ಇವಳು ಊಟ ಹೊತ್ಕೊಂಡು ಗದ್ದೆ ಕಡಿಕೆ ಹೊಯ್ತಿದ್ ನೋಡ್ದೆ. ಇಲ್ಲಿ ಗಂಟ ಇವಳುನ್ನ ನೋಡೇ ಇಲ್ವಲ್ಲ ಅಂದ್ಕೊಂಡು ಇವಳ ಹಿಂದು ಗುಟ್ಲೆ ಹೋದೆ. ಆಹಾ ಬಟ್ಟೆ ಬಿಚ್ಚಿ ಸ್ನಾನುಕ್ಕಿಳುದ್ಲು ನೋಡು, ನನಗವತ್ತು ಮದುವೆ ಮನೆಲ್ ಆದಂಗೆ ಆಯ್ತು. ಅಲ್ಲೊಂದ್ ಜೀರುಂಡೆ ಹಾರಾಡ್ತಾ ಇತ್ತು. ಹೋಗಿ ಅದ್ರೊಳಗೆ ಸೇರ್ಕೊಂಡಿದ್ದೇ ದುಂಡ್ ದುಂಡಾಗಿ ಕೆಂಪು ಕೆಂಪಾಗಿದ್ದ ಇವಳ ತೊಡೆಗೆ ಮುತ್ತಿಕ್ಕೇ ಬುಟ್ಟೇ. ಪಾಪ ಬರ್ ಗುಟ್ಕೊಂಡು ರಕ್ತ ಉಕ್ಕಿ ಹರ್ದೇ ಬುಡ್ತು. ಅಯ್ಯೋ ಈ ಚಂದುಳ್ಳೆ ಚೆಲುವೆಗೆ ಹಿಂಗ್ ಮಾಡ್ಬುಟ್ನಲ್ಲ ಅನ್ಸಿ ಹೊಟ್ಟೆ ಉರ್ದೋಯ್ತು. ಇನ್ನು ಇವುಳುನ್ನ ಬುಟ್ಟು ಇರಕಾಗಕ್ಕಿಲ್ಲ ಅನ್ಸಿ ಇವಳ ಹಿಂದ್ಗುಟ್ಲೇ ಬಂದುಬುಟ್ಟೆ ಎಂದು ಹೇಳಿದಳು. ಪಕ್ಕದಲ್ಲಿಯೇ ಕುಳಿತಿದ್ದ ಮೇಗಳ ಬೀದಿಯ ಜಂಬಮ್ಮ ” ಅಲ್ಲ ಕನಾ ಚನ್ನಪ್ಪ ಅಲ್ಲೇ ಹನುಮಣ್ಣನ ಮನೆ ನಾಕ್ ಜನ ಹೆಣ್ಮಕ್ಳು ತೊಲೆ ತುಂಡ್ನಂಗಿದ್ವಲ್ಲ ಅವ್ಯಾವು ನಿನ್ ಕಣ್ಣುಗೆ ಬೀಳ್ಳಿಲ್ವ. ಪಾಪ ಈ ನಮ್ಮ ಮೂಗಮುತ್ನಂತ ಮಗೀನೇ ಬೇಕಿತ್ತ” ಎಂದು ಲೊಚಗುಟ್ಟುತ್ತಾ ಕೇಳಿದಳು. “ಥೂ…” ಎಂದು ಜಂಬಮ್ಮನ ಕಡೆಗೆ ಉಗಿದ ಲಕ್ಷ್ಮಿ “ಅವುನ್ಯಾರಾದ್ರು ಹೆಣ್ಣು ಮಕ್ಕಳು ಅಂದಾರೇನಮ್ಮ. ಬಜಾರ್ ಬಸವಿರು. ಒಳ್ಳೆ ಕರಿ ಕೊಂತಿದ್ದಂಗವೆ. ನನಗೆ ಅವರ್ತಕ್ಕೋಗಿವೋ ಅಂತಿದ್ದಿಯಲ್ಲ ನಿನಗೆ ಏನ್ರಲ್ಲಿ ಹೊಡಿಬೇಕು ಹೇಳ್ ಮತ್ತೆ” ಎಂದು ದಮಕಿ ಹಾಕಿ “ನೋಡ್ರವ್ವ ತಾಯಿರ ನಿಮಗೆ ಬೇಕಾಗಿದ್ದುನ್ನೆಲ್ಲಾ ಇಲ್ಲಿಗಂಟ ಹೇಳಿದಿನಿ. ಇನ್ನು ಯಾರು ಏನು ಕೇಳ್ದಂಗೆ ನನ್ ಪಾಡಿಗೆ ನನ್ ಬುಟ್ಟು ನಿಮ್ಮ್ ನಿಮ್ಮ್ ಮನೆಗ್ ಹೋಗಿ ಬಿದ್ಕೊಂಡ್ರೆ ಸರಿ; ನನಗೂ ಬೆಳಗಿಂದ ಸಾಕಾಗೈತೆ” ಎಂದು ಹೇಳಿ ಕೆಳಗೆ ಹಾಸಿದ್ದ ದಟ್ಟದ ಮೇಲೆ ತಲೆ ತುಂಬ ಕಂಬಳಿ ಎಳೆದುಕೊಂಡು ಮಲಗಿಯೇ ಬಿಟ್ಟಳು ಲಕ್ಷ್ಮಿ.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ