ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಸಂಚಲನಕಾರಿ ಆರೋಪ ಮಾಡಿದ್ದಾರೆ.
ನಿನ್ನೆಯವರೆಗೂ ತಮ್ಮ ಪಕ್ಷದ ಶಾಸಕರು ಹಾಗೂ ರಾಯಭಾರಿ ಕಚೇರಿಗಳಿಗೆ 25 ಕೋಟಿ ರೂಪಾಯಿ ಆಮಿಷ ಒಡ್ಡಿ ಬಿಜೆಪಿ ಸೇರಲು ಆಮಿಷವೊಡ್ಡುತ್ತಿದ್ದರು ಎಂದು ಕೇಜ್ರಿವಾಲ್ ಆರೋಪ ಮಾಡಿರುವುದು ಈಗಾಗಲೇ ಸುದ್ದಿಯಲ್ಲಿದೆ. ಬಿಜೆಪಿ ದೆಹಲಿ ಮುಖ್ಯಸ್ಥ ವೀರೇಂದ್ರ ಸಚ್ ದೇವಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕೇಜ್ರಿವಾಲ್ಗೆ ಈ ಕುರಿತು ವಿವರಣೆ ನೀಡುವಂತೆ ನೋಟಿಸ್ ಕಳುಹಿಸಿದ್ದಾರೆ.
ಈಗ ಹೊಸದಾಗಿ, ಭಾನುವಾರ ನಡೆದ ಸಭೆಯೊಂದರಲ್ಲಿ ಕೇಜ್ರಿವಾಲ್ ಪಕ್ಷದ ಕಾರ್ಯಕರ್ತರಿಗಲ್ಲದೆ ತನಗೂ ಬಿಜೆಪಿ ಸೇರುವಂತೆ ಆಮಿಷ ಒಡ್ಡಲಾಗುತ್ತಿದೆಯೆಂದು ಆರೋಪಿಸಿದ್ದಾರೆ. ಮುಂದುವರೆದು ಅವರು ಬಿಜೆಪಿಯ ಮುಸುಕು ಹಾಕಿಕೊಂಡರೆ ಮಾಡಿದ ತಪ್ಪುಗಳಿಗೆಲ್ಲ ಮಾಫಿ ದೊರೆಯುತ್ತದೆ ಎಂದು ಕಟಕಿಯಾಡಿದ್ದಾರೆ.
ಬಿಜೆಪಿಯ ಈ ನಡೆಯನ್ನು ಟೀಕಿಸಿರುವ ಅವರು, “ತಪ್ಪು ಮಾಡಿರುವವರು ಬಿಜೆಪಿ ಸೇರುತ್ತಾರೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ ಹೀಗಾಗಿ ಬಿಜೆಪಿಗೆ ಹೆದರುವ ಅಥವಾ ಆ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಖಾರವಾಗಿ ನುಡಿದಿದ್ದಾರೆ. ದೆಹಲಿಯ ಅಭಿವೃದ್ಧಿಗೆ ತಾವು ಮತ್ತು ತಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ಶಾಲೆ, ಆಸ್ಪತ್ರೆ, ರಸ್ತೆ ನಿರ್ಮಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ತಮ್ಮ ಮತ್ತು ತನ್ನ ಪಕ್ಷದ ನಾಯಕರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ ಎಂದು ಆರೋಪಿಸಿದರು. ಆ ಎಲ್ಲಾ ಪ್ರಕರಣಗಳು ಇಂದಲ್ಲ ನಾಳೆ ವಜಾ ಆಗಲಿವೆ ಎಂದು ಈ
ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಆದರೆ, ದೆಹಲಿಯ ಅಭಿವೃದ್ಧಿ ಕಾರ್ಯಗಳು ನಿಲ್ಲಬಾರದು ಎಂದೂ ಅವರು ಹೇಳಿದರು.
ನನ್ನ ದೇಹದಲ್ಲಿ ಜೀವ ಇರುವವರೆಗೂ ದೆಹಲಿಯ ಅಭಿವೃದ್ಧಿಗೆ ಕಟಿಬದ್ಧನಾಗಿ ದುಡಿಯುವುದಾಗಿ ಅವರು ಭರವಸೆ ನೀಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಪ್ ಪಕ್ಷವನ್ನು ಹೇಗಾದರೂ ಕಟ್ಟಿ ಹಾಕಲು ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಈಗಿನ ರಾಜಕೀಯ ಬೆಳವಣಿಗೆಗಳು ರಾಜಕೀಯ ಆಸಕ್ತರ ಗಮನವನ್ನು ಸೆಳೆದಿರುವುದು ಸುಳ್ಳಲ್ಲ.