Home ದೆಹಲಿ ರೈತರ ಮೇಲೆ ವಿನಾಕಾರಣ ಎಫ್ಐಆರ್ ಹಾಕಿದ್ದಾರೆ, ಮೊದಲು ನನ್ನನ್ನು ಬಂಧಿಸಿ – ಎಚ್‌.ಡಿ ಕುಮಾರಸ್ವಾಮಿ

ರೈತರ ಮೇಲೆ ವಿನಾಕಾರಣ ಎಫ್ಐಆರ್ ಹಾಕಿದ್ದಾರೆ, ಮೊದಲು ನನ್ನನ್ನು ಬಂಧಿಸಿ – ಎಚ್‌.ಡಿ ಕುಮಾರಸ್ವಾಮಿ

ನವದೆಹಲಿ : ಬಿಡದಿಯ ಮಂಡಲಹಳ್ಳಿ ಗ್ರಾಮದ ರೈತರ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿದ ಕೇಂದ್ರ ಸಚಿವ ಎಚ್‍.ಡಿ.ಕುಮಾರಸ್ವಾಮಿ, ನಾಡಿದ್ದು ಆ ಗ್ರಾಮಕ್ಕೆ ನಾನು ಹೋಗುತ್ತೇನೆ. ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಿ ಎಂದು ಸವಾಲು ಹಾಕಿದರು.ನವದೆಹಲಿಯಲ್ಲಿ ಮಾತನಾಡಿದ ಅವರು, ಸಂಬಂಧವಿಲ್ಲದವರು ಕೊಟ್ಟ ದೂರಿನ ಮೇರೆಗೆ ರೈತರ ಮೇಲೆ ವಿನಾಕಾರಣ ಎಫ್ಐಆರ್ ಹಾಕಿದ್ದಾರೆ. ಅಕ್ರಮವಾಗಿ ಜಮೀನಿಗೆ ಸರ್ವೆ ಮಾಡಲು ಬಂದಾಗ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಸರ್ಕಾರದ ಚಿತಾವಣೆಯಿಂದಲೇ ಅಧಿಕಾರಿಗಳು ಸರ್ವೆಗೆ ಬಂದಿದ್ದಾರೆ. ಮುಖ್ಯಮಂತ್ರಿಗೆ ಇಷ್ಟೊಂದು ಹಟ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರ ಮೇಲೆ ಎರಡು ಎಫ್ಐಆರ್‌ಗಳನ್ನು ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ಹಾಕಲಿ. ನಾನೇ ಚಿತಾವಣೆ ಮಾಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನನ್ನೇ ಮೊದಲ ಆರೋಪಿಯನ್ನಾಗಿ ಮಾಡಿ ಎಂದರು.

ಊರಿನಲ್ಲಿ ಇಲ್ಲದವರು, ದೆಹಲಿಗೆ ಬಂದಿದ್ದವರ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಇಂತಹ ಬೆದರಿಕೆ ಮತ್ತು ಪ್ರಕರಣಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ರೈತರು ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಬೇಕು. ನ್ಯಾಯಾಲಯದ ಮುಂದೆ ನಾವೆಲ್ಲ ಹೋರಾಟ ಮಾಡೋಣ ಎಂದು ಅವರು ಹೇಳಿದರು. ಬಿಡದಿ ಟೌನ್‌ಶಿಪ್‌ ವಿವಾದ ತಾರಕಕ್ಕೇರುತ್ತಿದ್ದಂತೆ, ಪೊಲೀಸ್‌ ಇನ್ಸ್‌ಪೆಕ್ಟರ್‌ ರಮೇಶ್‌ ಮತ್ತು ರೈತರ ದಾಳಿಯಲ್ಲಿ ಜಖಂಗೊಂಡ ಇನ್ನೊವಾ ಕಾರು ಚಾಲಕ ಸಮೀರ್‌ ನೀಡಿದ ದೂರಿನ ಅನ್ವಯ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಟ್ಟು 22ಕ್ಕೂ ಹೆಚ್ಚು ಸೆಕ್ಷನ್‌ ದಾಖಲಿಸಲಾಗಿದೆ.

ಇವುಗಳಲ್ಲಿ ಪ್ರಮುಖವಾಗಿ ಬಿಎನ್‌ಎಸ್‌ ಸೆಕ್ಷನ್‌ 109(1) ಕೊಲೆ ಯತ್ನ, ಸೆಕ್ಷನ್‌ 118(1) ಅಪಾಯಕಾರಿ ಆಯುಧಗಳಿಂದ ತೀವ್ರ ಗಾಯಗೊಳಿಸುವುದು, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆಯಂತಹ ಜಾಮೀನು ರಹಿತ ಅಪರಾಧದ ಸೆಕ್ಷನ್‌ ಸೇರಿಸಲಾಗಿದೆ. ಇನ್ನು, ಮಂಡಲಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಯಾವ ರೈತರನ್ನೂ ಬಂಧಿಸಿಲ್ಲ.

You cannot copy content of this page

Exit mobile version