ಕೂಡಲಸಂಗಮ: “ಜಗತ್ತಿನಲ್ಲಿ ಯಾರೂ ನನ್ನನ್ನು ಉಚ್ಚಾಟಿಸುವ ಅಧಿಕಾರ ಹೊಂದಿಲ್ಲ. ನಾನು ಭಕ್ತರ ಹೃದಯದಲ್ಲಿ ಪೀಠವನ್ನು ಕಟ್ಟಿದ್ದೇನೆ. ಪೀಠಕ್ಕೂ ಮತ್ತು ಟ್ರಸ್ಟಿಗೂ ಯಾವುದೇ ಸಂಬಂಧವಿಲ್ಲ” ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.
ಸೋಮವಾರ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಖಂಡನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಧರ್ಮಗುರುಗಳನ್ನು ಉಚ್ಚಾಟಿಸುವ ಅಧಿಕಾರ ಇರುವುದು ದೇವರಿಗೆ ಮತ್ತು ದೇವಸ್ವರೂಪಿ ಭಕ್ತರಿಗೆ ಮಾತ್ರ. ಉಚ್ಚಾಟನೆ ಏಕಪಕ್ಷೀಯ ಮತ್ತು ಕಾನೂನು ಬಾಹಿರವಾಗಿದೆ. ಭಕ್ತರ ತೀರ್ಮಾನವೇ ಅಂತಿಮ” ಎಂದರು.
ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಭಕ್ತರ ಸಭೆ ಕರೆಯುವುದಾಗಿ ತಿಳಿಸಿದ ಸ್ವಾಮೀಜಿ, ಭಕ್ತರು ಹೇಳಿದಂತೆ ನಡೆದುಕೊಳ್ಳುವುದಾಗಿ ಹೇಳಿದರು. ಇಲ್ಲೇ ಮತ್ತೊಂದು ಮಠ ಕಟ್ಟುವ ವಿಚಾರವಿದೆ ಎಂದೂ ತಿಳಿಸಿದರು.
“ಕೂಡಲಸಂಗಮದಲ್ಲಿ 13 ಗುಂಟೆ ಮತ್ತು ದಾವಣಗೆರೆಯಲ್ಲಿ ಭಕ್ತರು ಭೂಮಿ ದಾನ ಮಾಡಿದ್ದಾರೆ. ನಾನು ಯಾವುದೇ ಚಟುವಟಿಕೆ ಮಾಡಿಲ್ಲ, ಭಕ್ತರ ಕಾಣಿಕೆ ಅಥವಾ ಮಠದ ಆಸ್ತಿಯಿಂದ ಯಾವುದೇ ಆಸ್ತಿ ಮಾಡಿಲ್ಲ. ಸುಮ್ಮನೆ ನನ್ನ ತೇಜೋವಧೆ ಮಾಡಬಾರದು. ಕೃತಕ ಬುದ್ಧಿಮತ್ತೆ (AI) ಯಿಂದ ಏನಾದರೂ ಕೃತ್ಯ ಮಾಡಿದರೂ ಅದನ್ನು ಭಕ್ತರು ನಂಬುವುದಿಲ್ಲ. ಜನರಿಗೆ ಸತ್ಯ ಏನು ಎಂಬುದು ಗೊತ್ತಿದೆ. ಏನೇ ಬಂದರೂ ಗಟ್ಟಿಯಾಗಿ ಎದುರಿಸುತ್ತೇನೆ” ಎಂದು ಸ್ವಾಮೀಜಿ ಹೇಳಿದರು.
“ಪಾದಯಾತ್ರೆ ಶುರುವಾದಾಗಿನಿಂದಲೂ ಇಂತಹ ಷಡ್ಯಂತ್ರಗಳು ನಡೆಯುತ್ತಲೇ ಬಂದಿವೆ. ನಾನು ತಲೆಕೆಡಿಸಿಕೊಂಡಿಲ್ಲ. ಭಕ್ತರು ಎಲ್ಲಿ ತೋರಿಸುತ್ತಾರೋ, ಅಲ್ಲಿಯೇ ಪೀಠವನ್ನು ಆರಂಭಿಸುತ್ತೇನೆ” ಎಂದರು.
ಮಧ್ಯಾಹ್ನ ಮೂರು ಗಂಟೆಗೆ ಕೂಡಲಸಂಗಮದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶ್ರೀಗಳನ್ನು ಭಕ್ತರು ಸ್ವಾಗತಿಸಿದರು.
ಘೋಷಣೆಗಳನ್ನು ಕೂಗುತ್ತಾ ಕಾಲ್ನಡಿಗೆಯಲ್ಲಿ ಸಂಗಮೇಶ್ವರ ದೇವಾಲಯಕ್ಕೆ ತೆರಳಿದ ಭಕ್ತರು, ದೇವಾಲಯದ ಆವರಣದಲ್ಲಿರುವ ನದಿದಡದ ಆಲದ ಮರದ ಕೆಳಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮುಖಂಡರಾದ ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಮಲ್ಲನಗೌಡ ಪಾಟೀಲ, ವಿಜಯಪುರದ ರುದ್ರಗೌಡ ಪಾಟೀಲ ಮತ್ತು ಬಾಗಲಕೋಟೆಯ ಧರಿಯಪ್ಪ ಸಾಂಗ್ಲೀಕರ್ ಉಪಸ್ಥಿತರಿದ್ದರು.