Home ಆಟೋಟ ಮೊಹಮ್ಮದ್ ಶಮಿ ಬಗ್ಗೆ ಸರಿಯಾದ ಮಾಹಿತಿ ಯಾಕೆ ಇಲ್ಲ? ಅವರನ್ನೇಕೆ ಆಸ್ಟ್ರೇಲಿಯಾ ಸರಣಿಗೆ ಕರೆದೊಯ್ಯಲಿಲ್ಲ? ರವಿಶಾಸ್ತ್ರಿ

ಮೊಹಮ್ಮದ್ ಶಮಿ ಬಗ್ಗೆ ಸರಿಯಾದ ಮಾಹಿತಿ ಯಾಕೆ ಇಲ್ಲ? ಅವರನ್ನೇಕೆ ಆಸ್ಟ್ರೇಲಿಯಾ ಸರಣಿಗೆ ಕರೆದೊಯ್ಯಲಿಲ್ಲ? ರವಿಶಾಸ್ತ್ರಿ

0

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಕಹಿ ಅನುಭವವಾಗಿತ್ತು. ಹ್ಯಾಟ್ರಿಕ್ ಸಾಧನೆ ಮಾಡಲು ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಕಾಲಿಟ್ಟಿತ್ತು.

ಅಂತಿಮವಾಗಿ ಒಂದೇ ಒಂದು ಪಂದ್ಯವನ್ನು ಗೆದ್ದು ಸರಣಿಯನ್ನು 1-3 ಅಂತರದಿಂದ ಕಳೆದುಕೊಂಡಿತು. ಸ್ಟಾರ್ ಆಟಗಾರರ ವೈಫಲ್ಯ, ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯ ಕೊರತೆ ಮತ್ತು ಇತರ ಬೌಲರ್‌ಗಳಿಂದ ಬುಮ್ರಾಗೆ ಸರಿಯಾದ ಬೆಂಬಲ ಸಿಗದಿರುವುದು ಟೀಮ್ ಇಂಡಿಯಾವನ್ನು ಘಾಸಿಗೊಳಿಸಿತು. ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಇದ್ದಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ಆದರೆ, ಶಮಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿರಲಿಲ್ಲ. ಆರಂಭದಿಂದಲೂ ಅವರು ಆಡುವ ಕುರಿತು ಗೊಂದಲವಿತ್ತು.

ಗಾಯದಿಂದ ಚೇತರಿಸಿಕೊಂಡಿರುವ ಶಮಿ ದೇಸಿ ಕ್ರಿಕೆಟ್ ನಲ್ಲಿ ಮಿಂಚಿದ್ದು, ಆಸೀಸ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಲಿದ್ದಾರೆ ಎಂಬ ಊಹಾಪೋಹ ಇತ್ತು. ಬಿಸಿಸಿಐ ವೈದ್ಯಕೀಯ ತಂಡ ಸಂಪೂರ್ಣ ಫಿಟ್ ಆಗಿಲ್ಲ ಎಂದು ತೀರ್ಮಾನಿಸಿದ ಬಳಿಕ ಶಮಿ ಭಾರತದಲ್ಲಿಯೇ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ, ಶಮಿ ಬಗ್ಗೆ ಸರಿಯಾದ ಮಾಹಿತಿ ಏಕೆ ಹೊರಬಿದ್ದಿಲ್ಲ ಎಂದು ಪ್ರಶ್ನಿಸಿದ್ದಾರೆ. ಅನುಭವಿ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ದಿದ್ದರೆ ಭಾರತ ತಂಡ ಬಲಿಷ್ಠವಾಗುತ್ತಿತ್ತು, ಅವರನ್ನು ಆಡಿಸಬೇಕೇ, ಬೇಡವೆ ಎನ್ನುವುದನ್ನು ನಂತರ ತೀರ್ಮಾನಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.

“ನಿಜ ಹೇಳಬೇಕೆಂದರೆ ಮೊಹಮದ್‌ ಶಮಿ ವಿಚಾರದಲ್ಲಿ ನಡೆಯುತ್ತಿರುವುದನ್ನು ಮಾಧ್ಯಮಗಳಲ್ಲಿ ಓದಿ ನನಗೆ ಆಶ್ಚರ್ಯವಾಗಿದೆ. ಅವರು ಚೇತರಿಸಿಕೊಂಡಿದ್ದಾರೆಯೇ? ಅವರು ಎಲ್ಲಿದ್ದಾರೆ? NCA ಗೆ ಹೋದ ಅವರು ನಂತರ ಅಲ್ಲಿ ಎಷ್ಟು ದಿನ ಇದ್ದರು ಎನ್ನುವುದರ ಕುರಿತು ಮಾಹಿತಿಯಿಲ್ಲ. ಅವರ ಕುರಿತಾದ ಸರಿಯಾದ ಮಾಹಿತಿ ಏಕೆ ಹೊರಗೆ ಬರುತ್ತಿಲ್ಲ?

ಅವರೊಬ್ಬ ಸಮರ್ಥ ಆಟಗಾರ. ನಾನಾಗಿದ್ದರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಆಸ್ಟ್ರೇಲಿಯಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ತಂಡದೊಂದಿಗೆ ಇದ್ದು ಒಳ್ಳೆಯ ಚಿಕಿತ್ಸೆ ಪಡೆಯುವಂತೆ ಮಾಡುತ್ತಿದ್ದೆ. ಒಳ್ಳೆಯ ಫಿಸಿಯೋಗಳ ಬಳಿ ಥೆರಪಿ ಮಾಡಿಸುತ್ತಿದ್ದೆ. ಶಮಿ ಆಸ್ಟ್ರೇಲಿಯದಲ್ಲಿರುವ ಅಂತಾರಾಷ್ಟ್ರೀಯ ಫಿಸಿಯೋಗಳಿಂದ ಸಲಹೆ ಪಡೆದು ಅಂಗಣದತ್ತ ಹೆಜ್ಜೆಯಿಡುತ್ತಿದ್ದರು. ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಶಮಿ ಸರಣಿಯ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎನ್ನಿಸಿದರೆ ಅವರನ್ನು ಕೈಬಿಡುತ್ತಿದ್ದೆ” ಎಂದು ರವಿಶಾಸ್ತ್ರಿ ಹೇಳಿದ್ದಾರೆ.

You cannot copy content of this page

Exit mobile version