ಒಂದು ವೇಳೆ ಬಾಬಾ ಸಿದ್ದಿಕಿಯಂತೆ ನನ್ನ ಸಾವಾದರೆ ಅದಕ್ಕೆ ಕಾರಣ ಈ ಅಧಿಕಾರಿ: ಗಂಭೀರ ಆರೋಪ ಮಾಡಿದ ಜಿಗ್ನೇಶ್‌ ಮೇವಾನಿ

ಹಿರಿಯ ಪೊಲೀಸ್ ಅಧಿಕಾರಿಯೊಂದಿಗಿನ ತೀವ್ರ ವಾಗ್ವಾದದ ನಂತರ, ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ವಿಶೇಷಾಧಿಕಾರ ಉಲ್ಲಂಘನೆಗಾಗಿ ಪೊಲೀಸ್‌ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ವಿಶೇಷ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಎಡಿಜಿ ಎಸ್‌ಸಿ-ಎಸ್‌ಟಿ ಸೆಲ್ ರಾಜ್‌ಕುಮಾರ್ ಪಾಂಡಿಯನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ.

ಹಿರಿಯ ಐಪಿಎಸ್ ರಾಜ್‌ಕುಮಾರ್ ಪಾಂಡಿಯನ್ ಅವರು ಮೊಬೈಲ್ ಹೊರಗೆ ಇಡುವಂತಹ ಸಿಂಪಲ್ ವಿಚಾರಕ್ಕೆ ಶಾಸಕರ ಜೊತೆ ಸರಿಯಾಗಿ ನಡೆದುಕೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಚರ್ಚಿಸಲು ನಾವು ಎಸ್‌ಸಿ-ಎಸ್‌ಟಿ ಸೆಲ್‌ನ ಹೆಚ್ಚುವರಿ ಡಿಜಿ ಆಗಿರುವ ರಾಜ್‌ಕುಮಾರ್ ಪಾಂಡಿಯನ್ ಅವರನ್ನು ಭೇಟಿಯಾಗಲು ಹೋಗಿದ್ದೆವು ಎಂದು ಮೇವಾನಿ ಹೇಳಿದರು.

ಮೊಬೈಲ್ ಇಟ್ಟುಕೊಂಡಿದ್ದಕ್ಕೆ ಐಪಿಎಸ್ ಅಧಿಕಾರಿ ಸಿಟ್ಟು

ಶಾಸಕರ ಬಳಿ ಮೊಬೈಲ್ ಇದ್ದ ಕಾರಣ ಕೋಪಗೊಂಡು ಮೊಬೈಲ್ ಹೊರಗೆ ಇಡುವಂತೆ ಕೇಳಿದ್ದು, ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡುವ ವೇಳೆ ಮೊಬೈಲ್ ಇಟ್ಟುಕೊಳ್ಳುವಂತಿಲ್ಲ ಎಂದು ಎಲ್ಲಿ ಬರೆದಿದೆ ಎಂದು ಶಾಸಕರು ಪ್ರಶ್ನಿಸಿದರು. ಅವರು ತಮ್ಮ ಸಿಬ್ಬಂದಿಗೆ ಶಾಸಕರು ಮತ್ತು ಅವರ ಸಹಚರರ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗುವಂತೆ ಹೇಳಿದರು. ಬಳಿಕ ಮಾತನಾಡಿದ ಮೇವಾನಿ, ನಾವು ದಲಿತರ ಪ್ರಶ್ನೆಗಳು ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಲು ಬಂದಿದ್ದೇವೆ. ಬೇಕಿದ್ದರೆ ಮೊಬೈಲ್ ಹೊರಗೆ ಇಟ್ಟುಕೊಳ್ಳಬಹುದು ಆದರೆ ನೀವು ಮಾತನಾಡುವ ಭಾಷೆ ಸೂಕ್ತವಾಗಿಲ್ಲ ಎಂದು ಅಧಿಕಾರಿಗೆ ಹೇಳಿದ್ದಾರೆ. ಜಿಗ್ನೇಶ್ ಅವರು ಶಾಸಕರೊಂದಿಗೆ ಮಾತನಾಡುವಾಗ ಅಧಿಕಾರಿ ಮಾತುಕತೆಯ ಪ್ರೋಟೋಕಾಲ್ ಅನುಸರಿಸದಿರುವುದನ್ನು ವಿರೋಧಿಸಿದರು.

ಈ ವಿಷಯವಾಗಿ ಟ್ವೀಟ್‌ ಮಾಡಿರು ಮೇವಾನಿ, ತಮ್ಮ ಟ್ವೀಟಿನಲ್ಲಿ “ನನ್ನ ಕೊಲೆಯಾದರೆ ನನ್ನ ಸಾವಿಗೆ ಐಪಿಎಸ್ ಅಧಿಕಾರಿ ರಾಜಕುಮಾರ್ ಪಾಂಡಿಯನ್ ಹೊಣೆ! ಬಾಬಾ ಸಿದ್ದಿಕಿ ಅವರಂತೆ ನಾನು, ನನ್ನ ಕುಟುಂಬ ಸದಸ್ಯರು ಅಥವಾ ನನ್ನ ತಂಡದ ಸದಸ್ಯರು ಕೊಲೆಯಾದರೆ ಅದಕ್ಕೆ ಐಪಿಎಸ್ ರಾಜ್‌ಕುಮಾರ್ ಪಾಂಡಿಯನ್ ಮಾತ್ರ ಹೊಣೆಯಾಗುತ್ತಾರೆ.

ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ 7 ವರ್ಷ ಜೈಲು ವಾಸ ಅನುಭವಿಸಿದ ಈ ಅಧಿಕಾರಿಯ ಗುಣ ಇಡೀ ಗುಜರಾತ್‌ಗೆ ಗೊತ್ತಿದೆ. ಏನೇ ಆಗಲಿ ಗುಜರಾತ್ ಮತ್ತು ದೇಶದ ದಲಿತರು, ಹಿಂದುಳಿದ ವರ್ಗಗಳು ಮತ್ತು ಬಹುಜನರ ಸ್ವಾಭಿಮಾನದ ಹೋರಾಟವನ್ನು ನಾನು ಎಂದಿಗೂ ಕೈಬಿಡುವುದಿಲ್ಲ” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು