ದೆಹಲಿ: ತಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಾವ ಮತ್ತು ಗಾಂಧಿ ಕುಟುಂಬದ ಸದಸ್ಯನಾಗಿರುವುದರಿಂದ ನನ್ನನ್ನು ಇಷ್ಟು ಸತಾಯಿಸಲಾಗುತ್ತಿದೆ ಎಂದು ಉದ್ಯಮಿ ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.
ತಾನು ಬಿಜೆಪಿಗೆ ಸೇರಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಬುಧವಾರ ಹೇಳಿದರು. ನಾನು ಒಬ್ಬ ಸಮಾಜ ಸೇವಕ. 1999 ರಿಂದ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಶೀಘ್ರದಲ್ಲೇ ರಾಜಕೀಯ ಪ್ರವೇಶಿಸುತ್ತೇನೆ ಎಂದು ಅವರು ಹೇಳಿದರು.
2008ರ ಭೂಮಿ ಖರೀದಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಅವರು ಎರಡನೇ ದಿನದ ವಿಚಾರಣೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು. ವಾದ್ರಾ ಅವರ ಕಂಪನಿಯು ಗುರುಗ್ರಾಮ್ನ ಶಿಕೋಪುರದಲ್ಲಿ ಫೆಬ್ರವರಿ 2008 ರಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್ನಿಂದ 7.5 ಕೋಟಿ ರೂ. ಮೌಲ್ಯದ 3.5 ಎಕರೆ ಭೂಮಿಯನ್ನು ಖರೀದಿಸಿತು ಮತ್ತು ನಂತರ ಆ ಭೂಮಿಯನ್ನು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ಎಫ್ಗೆ 58 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ಇಡಿ ಆರೋಪಿಸಿದೆ.
ರಾಬರ್ಟ್ ವಾದ್ರಾ ತಮ್ಮ ಪತ್ನಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಬೆಳಿಗ್ಗೆ 11 ಗಂಟೆಗೆ ಇಡಿ ಕಚೇರಿಗೆ ಆಗಮಿಸಿದರು. ಮಧ್ಯಾಹ್ನ 1.10ಕ್ಕೆ ಅವರಿಗೆ ಊಟಕ್ಕೆ ಮನೆಗೆ ಹೋಗಲು ಅವಕಾಶ ನೀಡಲಾಯಿತು.