Saturday, June 21, 2025

ಸತ್ಯ | ನ್ಯಾಯ |ಧರ್ಮ

ಸಂವಿಧಾನ ಉಳಿದರೆ ದೇಶ; ಇಲ್ಲವಾದರೆ ಸಮಾನತೆ ಸರ್ವನಾಶ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ವಿಶೇಷ

ಕರ್ನಾಟಕ ಆರಂಭಿಸಿದ ಸಂವಿಧಾನ ಉಳಿಸಿ ಅಭಿಯಾನ ಆಂದೋಲನವಾಗಿ ದೇಶಾದ್ಯಂತ ಹರಡಬೇಕಿದೆ. ಆಗ ಮಾತ್ರ ಹುಸಿ ರಾಷ್ಟ್ರೀಯವಾದವನ್ನು ಸೋಲಿಸಲು ಸಾಧ್ಯ. ಮನುವಾದಿ ಮನಸ್ಥಿತಿಯವರನ್ನು ಹಿಮ್ಮೆಟ್ಟಿಸಲು ಸಾಧ್ಯ. ಸನಾತನಿಗಳು ಪ್ರಚಾರ ಮಾಡುತ್ತಿರುವ ಧಾರ್ಮಿಕ ಭಾವತೀವ್ರತೆಯ ಭ್ರಮೆಯನ್ನು ಒಡೆಯಲು ಸಾಧ್ಯ. ಮತಾಂಧತೆಯನ್ನು ಮಟ್ಟ ಹಾಕಲು ಸಾಧ್ಯ. ವಿಶ್ವ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಬಾಬಾಸಾಹೇಬ ಅಂಬೇಡ್ಕರರ ಆಶಯಗಳನ್ನು ಈಡೇರಿಸಲು ಸಾಧ್ಯ – ಶಶಿಕಾಂತ ಯಡಹಳ್ಳಿ

ಇರಲಿ ಸದ್ಯಕ್ಕೆ ಒಪ್ಪಿಕೊಳ್ಳೋಣ ನಮ್ಮದು ಹಿಂದೂ ಧರ್ಮ, ಭಗವದ್ಗೀತೆ ನಮ್ಮ ಧರ್ಮಗ್ರಂಥ. ನಿಮ್ಮ ಧರ್ಮ ಇಸ್ಲಾಂ,  ಧರ್ಮಗ್ರಂಥ ಕುರಾನ್. ಅವರು ಕ್ರಿಶ್ಚಿಯನ್, ಧರ್ಮಗ್ರಂಥ ಬೈಬಲ್..  ಹೀಗೆ ಎಲ್ಲಾ ಧರ್ಮಗಳೂ, ಅವರವರ ಧರ್ಮಗ್ರಂಥಗಳು ಹಾಗೂ ಆಯಾ ಧರ್ಮಾನುಯಾಯಿಗಳೂ ಬಹುತ್ವ ಭಾರತದಲ್ಲಿ ಇರಲಿ. ಪರಸ್ಪರ ಗೌರವಿಸುತ್ತಾ ಸಹಬಾಳ್ವೆ ಮಾಡಲಿ ಎನ್ನುವ ಉದಾತ್ತ ಆಶಯದ ಪರಮಧರ್ಮವೊಂದು ಸಮಸ್ತ ದೇಶವಾಸಿಗಳದ್ದಾಗಿದೆ. ಅದೇ ನಮ್ಮ ರಾಷ್ಟ್ರೀಯ ಧರ್ಮವಾದ ಪ್ರಜಾಪ್ರಭುತ್ವ ಅರ್ಥಾತ್‌ ಪ್ರಜಾತಂತ್ರ. ಅದು ಕೇವಲ ಧರ್ಮ ಮಾತ್ರವಲ್ಲ ಈ ದೇಶವಾಸಿಗಳೆಲ್ಲರ ಹಿತರಕ್ಷಣೆ ಮಾಡುವ ವ್ಯವಸ್ಥೆ. ಸಂವಿಧಾನವೇ ಪ್ರಜಾತಂತ್ರದ ಪರಮೋಚ್ಛ ಗ್ರಂಥ. ಸಮಾನತೆ ಸೌಹಾರ್ದತೆ ಪ್ರತಿಪಾದಿಸುವ ಮಾನವೀಯ ದರ್ಶನ. ಯಾರು ಯಾವುದೇ ಜಾತಿ ಧರ್ಮದ ಅನುಯಾಯಿಯಾಗಿರಲಿ ಇಲ್ಲವೇ ಸಮರ್ಥಕರಾಗಿರಲಿ, ಅವರೆಲ್ಲರೂ ಮಾನ್ಯಮಾಡಿ ಅನುಸರಿಸಲೇ ಬೇಕಾದದ್ದು ರಾಷ್ಟ್ರೀಯ ಗ್ರಂಥವಾದ ಸಂವಿಧಾನವನ್ನು, ಗೌರವಿಸಲೇ ಬೇಕಾದದ್ದು  ರಾಷ್ಟ್ರೀಯ ಧರ್ಮವಾದ ಪ್ರಜಾಪ್ರಭುತ್ವವನ್ನು. 

ಸೆಪ್ಟಂಬರ್ 15, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ವಿಶ್ವಸಂಸ್ಥೆಯ ನಿರ್ಣಯದಂತೆ 2007 ರಿಂದ ಪ್ರತಿವರ್ಷ ಸೆಪ್ಟಂಬರ್ 15 ರಂದು ಜಗತ್ತಿನಾದ್ಯಂತ  “ಇಂಟರ್ ನ್ಯಾಶನಲ್ ಡೆಮಾಕ್ರಸಿ ಡೇ”  ಎಂದು ಆಚರಿಸಲಾಗುತ್ತದೆ. ಇದನ್ನು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಭಾರತೀಯರೆಲ್ಲರೂ ರಾಷ್ಟ್ರೀಯ ಸಂಭ್ರಮದ ದಿನವನ್ನಾಗಿ ಆಚರಿಸಬೇಕಾಗಿದೆ. 

ಯಾಕೆಂದರೆ ಕಳೆದೊಂದು ದಶಕದಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನವನ್ನೇ ಬದಲಾಯಿಸುವ ಹುನ್ನಾರಗಳು ಹೆಚ್ಚುತ್ತಿವೆ. ಹಿಂದೂರಾಷ್ಟ್ರ ಮಾಡಬೇಕೆನ್ನುವ ಸಂಘಟನಾತ್ಮಕ ಷಡ್ಯಂತ್ರಗಳೂ ವೇಗ ಪಡೆದುಕೊಂಡಿವೆ. ಪ್ರಜಾತಂತ್ರವನ್ನು ದುರ್ಬಲಗೊಳಿಸಿ  ಸರ್ವಾಧಿಕಾರ ಸ್ಥಾಪಿಸುವ ಹುನ್ನಾರಗಳು ಗೋಚರಿಸುತ್ತಿವೆ. ಪ್ರಜಾತಂತ್ರದ ಅಸ್ತಿತ್ವವೇ ಆತಂಕದಲ್ಲಿರುವ ಪ್ರಸ್ತುತ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ, ಸಮಾನತೆ ಆಧಾರದ ಸಂವಿಧಾನವನ್ನು ಉಳಿಸಿಕೊಳ್ಳುವ ಕರ್ತವ್ಯವನ್ನು ಈ ದೇಶವಾಸಿಗಳೆಲ್ಲರೂ ಮಾಡಬೇಕಿದೆ.

ಹೆಚ್ಚುತ್ತಿರುವ ಮತಾಂಧತೆಯನ್ನು ಮೆಟ್ಟಿ ನಿಲ್ಲಲು,  ಹುಟ್ಟಿಸಲಾಗುತ್ತಿರುವ ಹುಸಿ ರಾಷ್ಟ್ರೀಯವಾದವನ್ನು ಸೋಲಿಸಲು  ದೇಶವಾಸಿಗಳಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲೇಬೇಕಿದೆ. ಅಂತಹ ಒಂದು ಸ್ತುತ್ಯರ್ಹ ಕೆಲಸಕ್ಕೆ ಕರ್ನಾಟಕವು ಸಜ್ಜಾಗಿದೆ. ಪ್ರಜಾಪ್ರಭುತ್ವದ ದಿನದಂದು ಜನಸಮೂಹದ ಜೊತೆ ಸಂವಿಧಾನದ ಪೀಠಿಕೆ ಓದುವ ಹಾಗೂ ಓದಿಸುವ ಮೂಲಕ ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕಾಯಕವನ್ನು ಕರ್ನಾಟಕ ಸರಕಾರ ಮಾಡುತ್ತಿದೆ. ಇದು ನಿಜಕ್ಕೂ ಆಗಲೇಬೇಕಾದ ಅಭಿನಂದನಾರ್ಹ ಕೆಲಸವಾಗಿದೆ.

“ಭಾರತೀಯ ನಾಗರಿಕರಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜ್ಯಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತಾ ದೃಢಮನಸ್ಸಿನಿಂದ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ನಾಗರಿಕರಿಗೆ ಈ ಕೆಳಗಿನ ಹಕ್ಕುಗಳನ್ನು ಖಾತರಿಪಡಿಸಲಾಗುತ್ತದೆ” ಎಂದು ಸಂವಿಧಾನ ಪೀಠಿಕೆಯು ಆರಂಭವಾಗುತ್ತದೆ. ಇದರಲ್ಲಿ ಬಳಸಲಾದ ಒಂದೊಂದು ಶಬ್ದವೂ ಭಾರತದ ಜನತಂತ್ರದ ಆಶಯವನ್ನು ಎತ್ತಿ ಹಿಡಿದು ಒತ್ತಿ ಹೇಳುತ್ತವೆ. ಅದರಲ್ಲೂ ಸಮಾಜವಾದಿ, ಜ್ಯಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ಎನ್ನುವ ಮೂರು ಶಬ್ದಗಳು ಈ ದೇಶ ಹೇಗಿರಬೇಕು ಎಂಬುದರ ನಿಲುವಾಗಿದೆ. ಆದರೆ ಈಗ ಈ ಮೂರು ಶಬ್ದಗಳ ಅರ್ಥವನ್ನೇ ಅಣಕಿಸುವಂತಹ ವಿದ್ಯಮಾನಗಳು ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಂದ ಹಾಗೂ ಅವರ ಹಿಂದಿರುವ ಸನಾತನವಾದಿ ಸಿದ್ಧಾಂತವಾದಿಗಳಿಂದ ನಡೆಯುತ್ತಿದೆ. ಸಮಾಜವಾದಿ ದೇಶವೆಂಬುದು ಆರಂಭದಿಂದಲೂ ಬಂಡವಾಳವಾದಿ ದೇಶವಾಗಿ ಬದಲಾಗುತ್ತಾ ಬಂದು ಈಗ ಕಾರ್ಪೋರೇಟ್ ವಾದಿ ದೇಶವಾಗಿದೆ. ಇಡೀ ದೇಶವನ್ನು ನೇಪಥ್ಯದಲ್ಲಿ ನಿಂತು ಆಡಿಸುತ್ತಿರುವವರು ಕಾರ್ಪೋರೇಟ್ ಬಂಡವಾಳದ ದೈತ್ಯ ಶಕ್ತಿಗಳು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಜಾತ್ಯಾತೀತ  ಎನ್ನುವುದಕ್ಕೂ ವಿರುದ್ಧವಾಗಿ ಜಾತಿವಾದದ ಬೇರುಗಳು ಇನ್ನಷ್ಟು ಗಟ್ಟಿಗೊಳ್ಳುತ್ತಲೇ ಇವೆ. ಜಾತ್ಯಾತೀತ ರಾಷ್ಟ್ರದ ಬದಲು ಹಿಂದೂರಾಷ್ಟ್ರ ಮಾಡುವ ಪ್ರಯತ್ನಗಳು ತೀವ್ರವಾಗಿವೆ. ಜಾತಿ ಶ್ರೇಷ್ಠತೆ ಹಾಗೂ ಅನ್ಯಧರ್ಮ ದ್ವೇಷದ ಮೂಲಕ ಕೋಮುವಾದ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. 

ಇನ್ನು ಮೂರನೇ ಆಶಯವಾದ ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೂ ಕುತ್ತು ಬಂದಿದೆ. ಇದರ ಬದಲಾಗಿ ಏಕಾಧಿಪತ್ಯವನ್ನು ಜಾರಿಗೆ ತರುವ ಹುನ್ನಾರ ಬೇರೆ ಬೇರೆ ಸ್ವರೂಪಗಳಲ್ಲಿ ಕಾರ್ಯನಿರತವಾಗಿದೆ. ಈ ದೇಶ ಹಲವಾರು ರಾಜ್ಯಗಳ ಒಕ್ಕೂಟವಾಗಿದ್ದರಿಂದಲೇ ಗಣರಾಜ್ಯವೆಂದು ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಲಾಗಿದೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಒಡೆದು ಹಾಕಿ ಕೇಂದ್ರದ ಅಧಿಪತ್ಯವಿರುವ ಏಕೀಕೃತ ಆಡಳಿತ ವ್ಯವಸ್ಥೆಯನ್ನು ರಾಜ್ಯಗಳ ಮೇಲೆ ಹೇರಲಾಗುತ್ತಿದೆ. ರಾಜ್ಯಗಳಿಗಿತ್ತ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲಾಗುತ್ತಿದೆ. ರಾಜ್ಯಗಳ ಆದಾಯ ಸಂಪನ್ಮೂಲಗಳನ್ನು ರಾಜ್ಯದ ಅಭಿವೃದ್ಧಿಗಾಗಿ ಬಳಸದೇ ಕೇಂದ್ರವೇ ಬಹುಪಾಲನ್ನು ಕಬಳಿಸುತ್ತಿದೆ. ರಾಷ್ಟ್ರೀಯ ಭಾಷೆಗಳೆಂದು ಘೋಷಿಸಲಾದ ರಾಜ್ಯಗಳ ಭಾಷೆಯ ಮೇಲೆ ಹಿಂದಿ ಭಾಷಾ ಹೇರಿಕೆಯನ್ನು ಸ್ಥಾಪಿಸಲಾಗುತ್ತಿದೆ.  ಒಂದು ದೇಶ ಒಂದು ಚುನಾವಣೆ ಎನ್ನುವ ಕಾಯಿದೆ ರೂಪಿಸುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಕೇಂದ್ರೀಕೃತ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜ್ಯಗಳಲ್ಲಿರುವ ಸರಕಾರಗಳನ್ನೇ ಬೀಳಿಸಲಾಗುತ್ತಿದೆ, ಅಕ್ರಮ ಮಾರ್ಗಗಳಲ್ಲಿ ತಮ್ಮ ಸರಕಾರ ರಚಿಸಲು ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ ಪಕ್ಷ ಪ್ರಯತ್ನ ಮಾಡುತ್ತಲೇ ಬಂದಿದೆ, ಇಲ್ಲವಾದರೆ ಮೈತ್ರಿಯ ಹೆಸರಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಡೆದೋ ಇಲ್ಲವೇ ದುರ್ಬಲಗೊಳಿಸಿಯೋ ರಾಜ್ಯಾಧಿಕಾರವನ್ನು ವಶಪಡಿಸಿಕೊಳ್ಳುವ ಯತ್ನಗಳು ಬೇಕಾದಷ್ಟಾಗಿವೆ. ಹೀಗೆಯೇ ಮುಂದುವರೆದು ದೇಶಾದ್ಯಂತ ಏಕಪಕ್ಷ, ಏಕ ಭಾಷೆ, ಏಕ ಸಿದ್ಧಾಂತ, ಏಕ ಸಂಸ್ಕೃತಿ ಎನ್ನುವುದನ್ನು ಜಾರಿ ಮಾಡಿ ಒಕ್ಕೂಟ ವ್ಯವಸ್ಥೆಯನ್ನೇ ಸರ್ವನಾಶ ಮಾಡಿ ಏಕಾಧಿಪತ್ಯವನ್ನು ಸ್ಥಾಪಿಸುವುದೇ ಬಿಜೆಪಿ ಪಕ್ಷ ಹಾಗೂ ಅದರ ಹಿಂದಿರುವ ಸಂಘ ಪರಿವಾರದ ಉದ್ದೇಶವಾಗಿದೆ. 

ಸಂವಿಧಾನದ ಮೂಲ ಆಶಯಗಳಾದ ಸಮಾಜವಾದ, ಜ್ಯಾತ್ಯಾತೀತತೆ ಹಾಗೂ ಗಣರಾಜ್ಯದ ಪರಿಕಲ್ಪನೆಗಳು ವಿಕೃತಗೊಳ್ಳದೇ ಸಾಕಾರಗೊಳ್ಳಬೇಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನದ ಪೀಠಿಕೆಯನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿದೆ. ಹಾಗೆಯೇ ಪ್ರಜಾಪ್ರಭುತ್ವದ ದಿನವಾದ ಸೆಪ್ಟಂಬರ್ 15 ರಂದು ಪೀಠಿಕೆ ಓದುವ ಅಭಿಯಾನವನ್ನು ಆರಂಭಿಸಿದೆ. 

ಇದನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ನಿರಂತರವಾಗಿ ಸಂವಿಧಾನದ ಓದು ವ್ಯಾಖ್ಯಾನ ಚರ್ಚೆ ಸಂವಾದಗಳನ್ನು ಶಾಲೆ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಆರಂಭಿಸಬೇಕಿದೆ. “ಸಂವಿಧಾನ ಉಳಿದರೆ ಸಮಾನತೆ ಉಳಿಯುತ್ತದೆ, ಸೌಹಾರ್ದತೆ ಬೆಳೆಯುತ್ತದೆ” ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಸಂವಿಧಾನದ ಆಶಯಗಳನ್ನು ಹಾಡುಗಳ ಮೂಲಕ, ಕಲೆ, ಸಾಹಿತ್ಯ, ನಾಟಕಗಳ ಮೂಲಕ ಜನರಿಗೆ ತಲುಪಿಸಲು ಸಂಸ್ಕೃತಿ ಇಲಾಖೆ ಕಾರ್ಯಪ್ರವೃತ್ತವಾಗಬೇಕಿದೆ. ಕರ್ನಾಟಕ ಆರಂಭಿಸಿದ ಸಂವಿಧಾನ ಉಳಿಸಿ ಅಭಿಯಾನ ಆಂದೋಲನವಾಗಿ ದೇಶಾದ್ಯಂತ ಹರಡಬೇಕಿದೆ. ಆಗ ಮಾತ್ರ ಹುಸಿ ರಾಷ್ಟ್ರೀಯವಾದವನ್ನು ಸೋಲಿಸಲು ಸಾಧ್ಯ. ಮನುವಾದಿ ಮನಸ್ಥಿತಿಯವರನ್ನು ಹಿಮ್ಮೆಟ್ಟಿಸಲು ಸಾಧ್ಯ. ಸನಾತನಿಗಳು ಪ್ರಚಾರ ಮಾಡುತ್ತಿರುವ ಧಾರ್ಮಿಕ ಭಾವತೀವ್ರತೆಯ ಭ್ರಮೆಯನ್ನು ಒಡೆಯಲು ಸಾಧ್ಯ. ಮತಾಂಧತೆಯನ್ನು ಮಟ್ಟ ಹಾಕಲು ಸಾಧ್ಯ. ವಿಶ್ವ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಬಾಬಾಸಾಹೇಬ ಅಂಬೇಡ್ಕರರ ಆಶಯಗಳನ್ನು ಈಡೇರಿಸಲು ಸಾಧ್ಯ. 

“ಸಂವಿಧಾನ ಉಳಿದರೆ ಪ್ರಜಾತಂತ್ರ ಉಳಿಯುತ್ತದೆ. ಸಂವಿಧಾನ ದುರ್ಬಲವಾದರೆ ಸರ್ವಾಧಿಕಾರ ಮೆರೆಯುತ್ತದೆ” ಎನ್ನುವುದನ್ನು ನಾಗರೀಕ ಪ್ರಜ್ಞೆಯ ಭಾಗವನ್ನಾಗಿ ಮಾಡುವ ಮೂಲಕ ಪ್ರಜಾಪ್ರಭುತ್ವ ದಿನವನ್ನು ಆಚರಿಸೋಣ. ಪ್ರತಿ ಮನೆಯಲ್ಲೂ ಮುದ್ರಿತ ಸಂವಿಧಾನದ ಚಿತ್ರವನ್ನು ಹಾಕಿ ಮಕ್ಕಳಿಗೆ ಓದಿಸೋಣ. ಬಹುತ್ವ ಭಾರತವನ್ನು ಕಟ್ಟೋಣ, ಅಸಲಿ ದೇಶಪ್ರೇಮವನ್ನು ಬೆಳೆಸೋಣ, ನಕಲಿ ರಾಷ್ಟೀಯವಾದವನ್ನು ಸೋಲಿಸೋಣ. 

ಶಶಿಕಾಂತ ಯಡಹಳ್ಳಿ

ಹಿರಿಯ ಪತ್ರಕರ್ತರು

ಇದನ್ನೂ ಓದಿ-ಸಂವಿಧಾನ ರಕ್ಷಣೆ | ಆದ್ಯತೆಗಳೂ ಬಾಧ್ಯತೆಗಳೂ

Related Articles

ಇತ್ತೀಚಿನ ಸುದ್ದಿಗಳು

You cannot copy content of this page