ಉಡುಪಿ ಕಾಲೇಜಿನ ವಿಡಿಯೋ ಪ್ರಕರಣದ ಬೆನ್ನಲ್ಲೇ ಈಗ ತೀರ್ಥಹಳ್ಳಿ ಎಬಿವಿಪಿ ಮುಖ್ಯಸ್ಥನ ಅಶ್ಲೀಲ ವಿಡಿಯೋ ಪ್ರಕರಣ ಕೂಡಾ ಮತ್ತೆ ಸುದ್ದಿಗೆ ಬಂದಿದೆ. ಉಡುಪಿ ಮತ್ತು ತೀರ್ಥಹಳ್ಳಿ ಎರಡೂ ಪ್ರಕರಣವನ್ನು ಸಮೀಕರಿಸಿ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಮುತುವರ್ಜಿ ವಹಿಸಿರುವ ಬಿಜೆಪಿ ಮಂದಿ, ತೀರ್ಥಹಳ್ಳಿ ಎಬಿವಿಪಿ ಮುಖ್ಯಸ್ಥ ಕಾಲೇಜಿನ ಯುವತಿಯರ ಜೊತೆಗೆ ನಡೆಸಿದ ಅಶ್ಲೀಲ ವಿಡಿಯೋ ವಿಚಾರದಲ್ಲಿ ಮೌನ ವಹಿಸಿದ ಬಗ್ಗೆ ಕಿಡಿಕಾರಿದ್ದಾರೆ.
“ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಉಡುಪಿ ಶೌಚಾಲಯದ ವಿಡಿಯೋ ಪ್ರಕರಣದಲ್ಲಿ ಇಲಿ ಹೋಗಿದ್ದನ್ನು ಹುಲಿ ಹೋಯ್ತು ಎಂಬಂತೆ ಬಿಂಬಿಸುತ್ತಿದ್ದಾರೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿ ಎಬಿವಿಪಿ ಘಟಕದ ಅಧ್ಯಕ್ಷ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ಎಲ್ಲಿ ಹೋಗಿದ್ರಿ?” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
“ಈಗ ಧರ್ಮ ರಕ್ಷಕರ ಸೋಗು ತೊಟ್ಟು ಅಖಾಡಕ್ಕೆ ಇಳಿದಿದ್ದೀರಿ. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಚಿತ್ರಿಸಿ ಅದನ್ನು ಹರಿಬಿಟ್ಟ ‘ಪ್ರತೀಕ್’ ಜಾಗದಲ್ಲಿ ‘ಅಥೀಕ್’ ಇದ್ದಿದ್ದರೆ ಮಾತ್ರ ನಿಮ್ಮ ಹೋರಾಟವೇ?” ಎಂದು ಬಿಜೆಪಿ ನಾಯಕರನ್ನು ದಿನೇಶ್ ಗುಂಡೂರಾವ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಉಡುಪಿ ವಿಡಿಯೋ ಪ್ರಕರಣದಲ್ಲಿ ಆಸ್ಥೆಯಿಂದ ಮುಂದೆ ನಿಂತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಉಲ್ಲೇಖಿಸಿ “ಬೊಮ್ಮಾಯಿಯವರೇ, ಪೊಲೀಸರು ನಿಮ್ಮ ಆಡಳಿತದಲ್ಲಿ ರಾಜಕೀಯದ ಒತ್ತಡಕ್ಕೆ ಮಣಿದಿರಬಹುದು. ಆದರೆ ನಾವು ಪೋಲಿಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರತೀಕ್ ಗೌಡ ಎಂಬಾತನನ್ನು ನಮ್ಮ ಪೊಲೀಸರು ಒದ್ದು ಒಳಗಾಕ್ಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದ್ದೇ ಜಾಸ್ತಿ ಇದೆಯಲ್ಲವೇ?” ಎಂದು ಬೊಮ್ಮಾಯಿಯವರಿಗೆ ಟಾಂಗ್ ಕೊಟ್ಟಿದ್ದಾರೆ.
ಅವಶ್ಯಕವೋ ಅನಾವಶ್ಯಕವೋ.. ಬಿಜೆಪಿ ಪಕ್ಷ ಉಡುಪಿ ಪ್ರಕರಣಕ್ಕೆ ಬಿಜೆಪಿ ತೋರಿಸಿರುವ ಆಸ್ಥೆಯನ್ನು ತೀರ್ಥಹಳ್ಳಿ ಪ್ರಕರಣಕ್ಕೆ ತೋರಿಸಿಲ್ಲ ಎಂಬುದಂತೂ ಸತ್ಯ. ತೀರ್ಥಹಳ್ಳಿ ಅಶ್ಲೀಲ ವಿಡಿಯೋದಲ್ಲಿ ಹರಿದಾಡಿದ್ದು ಹಿಂದೂ ಹೆಣ್ಣು ಮಕ್ಕಳದ್ದೇ. ಆ ಕೃತ್ಯ ಮಾಡಿದ್ದು ಹಿಂದೂ, ಅದರಲ್ಲೂ ಎಬಿವಿಪಿ ಅಧ್ಯಕ್ಷ ಆದ ಕಾರಣಕ್ಕೆ ಬಿಜೆಪಿ ಆ ಪ್ರಕರಣದ ಬಗ್ಗೆ ದನಿ ಎತ್ತಲಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಸರಿಯಾಗಿ ಬಿಜೆಪಿ ನಡೆದುಕೊಂಡದ್ದಂತೂ ಸುಳ್ಳಲ್ಲ.