ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಿಗರ ಮತ್ತು ಕರ್ನಾಟಕದ ರೈತರ ರಕ್ಷಣೆ ನಿಟ್ಟಿನಲ್ಲಿ ನೀರಾವರಿ ತಜ್ಞರು, ರೈತ ಮುಖಂಡರು, ಕಾನೂನು ತಜ್ಞರು, ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳನ್ನು ಒಳಗೊಂಡಂತೆ ‘ನಮ್ಮ ಜಲ – ನಮ್ಮದು’ ಎಂಬ ಮಹತ್ವದ ಸಭೆಯನ್ನು ರಾಜ್ಯ ಆಮ್ ಆದ್ಮಿ ಪಕ್ಷ ಆಯೋಜಿಸಿದೆ.
ಮಂಗಳವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಕರೆಯಲಾದ ಈ ಸಭೆಯ ನೇತೃತ್ವವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ‘ನಮ್ಮ ಜಲ – ನಮ್ಮದು’ ಸಭೆ ನಡೆಯಲಿದೆ.
ಎಷ್ಟು ವರ್ಷಗಳ ಕಾಲ ಕಾವೇರಿ ನೀರಿಗಾಗಿ ಸಾಕಷ್ಟು ಹೋರಾಟ ಮಾಡಿರುವ ಕರ್ನಾಟಕದ ಅನೇಕ ಪ್ರಮುಖರನ್ನು ಬಿಟ್ಟು ಕೇವಲ ಮೂರು ಪಕ್ಷಗಳು ನಡೆಸಿದ ಸಭೆಯನ್ನು ಸರ್ವಪಕ್ಷ ಸಭೆಯೆಂದು ಕರೆಯಲಾಗದು ಎಂದಿದ್ದಾರೆ.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ ಸಹ ಮುಂಜಾಗ್ರತೆಯಿಂದ ಮೊದಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಸಂಕಷ್ಟ ಕಾಲದಲ್ಲಿ ನೀರನ್ನು ಬಿಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಲು ರಾಜ್ಯ ಸರ್ಕಾರ ವೈಫಲ್ಯಗೊಂಡಿದೆ. ರಾಜ್ಯದ ರೈತರ ನೆಲ, ಜಲ ವಿಚಾರದಲ್ಲಿ ಸರ್ಕಾರವು ತಾತ್ಸಾರ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ತಜ್ಞರು ಮತ್ತು ರೈತರನ್ನು ಒಳಗೊಂಡ ಸಭೆಯನ್ನು ನಡೆಸುವ ಮೂಲಕ ವಾಸ್ತವವನ್ನು ಅರಿತು ಹೋರಾಟದ ಮುಂದಿನ ಹೆಜ್ಜೆ ಇರಿಸಲಿದ್ದೇವೆ ಎಂದು ಪಕ್ಷದ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ ಅಭಿಪ್ರಾಯ ಪಟ್ಟಿದ್ದಾರೆ.