ಪ್ರತಿದಿನ ತಮಿಳುನಾಡಿಗೆ 5 ಟಿಎಂಸಿ ನೀರು ಬಿಡಲು ಕಾವೇರಿ ನದಿ ನೀರು ಪ್ರಾಧಿಕಾರ ಸೂಚನೆ ನೀಡಿದೆ. ಇಂದು ನಡೆದ ಕಾವೇರಿ ನದಿ ನೀರು ಪ್ರಾಧಿಕಾರ ಸಭೆಯಲ್ಲಿ ಕರ್ನಾಟಕಕ್ಕೆ ಈ ಸೂಚನೆಯನ್ನು ನೀಡಲಾಗಿದೆ. ಮುಂದಿನ ಹದಿನೈದು ದಿನದ ತನಕ 5 ಟಿಎಂಸಿ ನೀರು ಬಿಡಲು ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿದೆ.
ಪ್ರಾಧಿಕಾರಕ್ಕೆ ವಿಶೇಷ ಅಧಿಕಾರ ನೀಡಿದ ಸು.ಕೋರ್ಟ್
ಕಾವೇರಿ ನದಿ ನೀರು ಹಂಚಿಕೊಳ್ಳಲು ಹೊಸ ಕ್ರಮವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಅದರಂತೆ ಕೇಂದ್ರ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಿದೆ. ಇದರ ಮುಖ್ಯ ಕಚೇರಿ ಹೊಸದಿಲ್ಲಿಯಲ್ಲಿದೆ. ಪ್ರಾಧಿಕಾರದ ಕಾರ್ಯನಿರ್ವಹಣೆಯ ವೆಚ್ಚವನ್ನು ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ 40:40:15:5 ಅನುಪಾತದಲ್ಲಿ ಹಂಚಿಕೊಳ್ಳಬೇಕಿದೆ.
ಕಾವೇರಿ ಪ್ರಾಧಿಕಾರಕ್ಕೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಯೇ ಮುಖ್ಯಸ್ಥರಾಗಿರುತ್ತಾರೆ. ಪ್ರಾಧಿಕಾರದಲ್ಲಿ ಒಟ್ಟು 10 ಮಂದಿ ಸದಸ್ಯರಿರುತ್ತಾರೆ. ನೀರಾವರಿ, ಕೃಷಿ ಸಂಬಂಧಿತ ಇಬ್ಬರು ಅಧಿಕಾರಿಗಳು ಕಾಯಂ ಸದಸ್ಯರಾಗಿರುತ್ತಾರೆ. ಇಬ್ಬರು ಅರೆಕಾಲಿಕ, ನಾಲ್ಕು ರಾಜ್ಯಗಳ ಜಲಸಂಪನ್ಮೂಲ ಕಾರ್ಯದರ್ಶಿಗಳು ಸದಸ್ಯರಾಗಿ ಇರುತ್ತಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಬರಗಾಲ’ ಘೋಷಣೆ ಸಾಧ್ಯತೆ
ಈ ನಡುವೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಅಂತ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ಸೆಪ್ಟೆಂಬರ್ 4ರೊಳಗೆ ಬರ ಘೋಷಣೆ ಬಗ್ಗೆ ತೀರ್ಮಾನ ಮಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ ಎಂದು ತಿಳಿಸಿದರು.