Thursday, June 19, 2025

ಸತ್ಯ | ನ್ಯಾಯ |ಧರ್ಮ

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ: DCW ಅಧ್ಯಕ್ಷರಿಂದ ರಾಷ್ಟ್ರಪತಿಗೆ ಶಿಫಾರಸು

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತುರ್ತಾಗಿ ಹೇರಬೇಕು ಮತ್ತು ರಾಜ್ಯದಲ್ಲಿನ ಘರ್ಷಣೆಗಳ ತನಿಖೆಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಗೆ SITಯನ್ನು ಸ್ಥಾಪಿಸಬೇಕು ಎಂದು ದೆಹಲಿ ಮಹಿಳಾ ಆಯೋಗವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲಾದ ಮಧ್ಯಂತರ ಶಿಫಾರಸುಗಳಲ್ಲಿ ಹೇಳಿದೆ.

DCW ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕಳೆದ ಒಂದು ವಾರದಿಂದ ಮಣಿಪುರದಲ್ಲಿ ಮೇ ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಸಂತ್ರಸ್ಥರೊಡನೆ ಸಂವಾದ ನಡೆಸುತ್ತಿದ್ದರು.

“ಎರಡೂ ಸಮುದಾಯಗಳ ನಡುವಿನ ಹಿಂಸಾಚಾರ ಮತ್ತು ಧ್ರುವೀಕರಣದ ಪ್ರಮಾಣವನ್ನು ಗಮನಿಸಿದರೆ, ಭಾರತೀಯ ಸಂವಿಧಾನದ 356ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ರಾಜ್ಯದಲ್ಲಿ ತುರ್ತಾಗಿ ಹೇರಬೇಕು. ಎರಡೂ ಸಮುದಾಯಗಳು ನಂಬಬಹುದಾದ ತಟಸ್ಥ ವ್ಯಕ್ತಿಗಳಿಂದ ಆಡಳಿತವನ್ನು ನಡೆಸಬೇಕು.” ಎಂದು ವರದಿ ಹೇಳಿದೆ.

ಮಧ್ಯಂತರ ಶಿಫಾರಸುಗಳ ಭಾಗವಾಗಿ, DCW ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಜನಾಂಗೀಯ ಘರ್ಷಣೆಗಳು ಮತ್ತು ಸರ್ಕಾರದ ಪ್ರತಿಕ್ರಿಯೆಯನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಎಂದು ಹೇಳಿದೆ.

ಜತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ತುರ್ತಾಗಿ ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ವರದಿ ತಿಳಿಸಿದೆ.

ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತೇಯ್ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಿ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3ರಂದು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜನೆಯ ನಂತರ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿ, ಅಂದಿನಿಂದ ಕನಿಷ್ಠ 150 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page