Tuesday, July 29, 2025

ಸತ್ಯ | ನ್ಯಾಯ |ಧರ್ಮ

ಇಂಧನ ಸಚಿವರ ವಿರುದ್ಧ ಸಿದ್ದರಾಮಯ್ಯ ಗರಂ

ಬೆಂಗಳೂರು: ಪರಿಶಿಷ್ಟಜಾತಿ, ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನುಹಿಂದಕ್ಕೆ ಪಡೆದಿರುವ ಕುರಿತು ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಕಳ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪರಿಶಿಷ್ಟಜಾತಿ, ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಕಳ ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ? ಎಂದು ಟೀಕಿಸಿದ್ದಾರೆ.

ಇಂದನ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರೇ, ನಿಮ್ಮದೇ ಲೆಕ್ಕದ ಪ್ರಕಾರ ಉಚಿತವಾಗಿ ಹೆಚ್ಚುವರಿ ಉಚಿತ ವಿದ್ಯುತ್ ನೀಡಲು ಬೇಕಾಗಿರುವುದು ರೂ.979 ಕೋಟಿ ಮಾತ್ರ. ಆದರೆ ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆಯಡಿ ರೂ.28,233 ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆಯಲ್ಲಾ, ಆ ಹಣ ಯಾರ ಕಲ್ಯಾಣಕ್ಕೆ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ರಾಜ್ಯ ಯೋಜನಾ ವೆಚ್ಚದ ಶೇಕಡಾ 25ರಷ್ಟನ್ನು ಮೀಸಲಿಡುವ ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತಂದಾಗ, ನಮ್ಮ ಸರ್ಕಾರ ಸುನಿಲ್ ಕುಮಾರ್ ಕಾರ್ಕಳ ಸರ್ಕಾರದಂತೆ ಹಣದ ಲೆಕ್ಕ ಹಾಕಿ ಕೂತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಳಜಿ ಭಾಷಣದಲ್ಲಿ, ಜಾಹೀರಾತಿನಲ್ಲಿ ಅಲ್ಲ, ಕೃತಿಯಲ್ಲಿರಲಿ. ಕುಂಟು ನೆಪಗಳನ್ನೊಡ್ಡದೆ ನುಡಿದಂತೆ ನಡೆಯಲು ಕಲಿಯಿರಿ. ಉಚಿತ ವಿದ್ಯುತ್ 75 ಯುನಿಟ್ ನಿಂದ 100 ಯುನಿಟ್ ಗೆ ಹೆಚ್ಚಿಸಿ. ಇದನ್ನು ಪಡೆಯಲು ನೀವು ರೂಪಿಸಿರುವ ನೂರೆಂಟು ನಿಯಮಗಳನ್ನು ಪರಿಷ್ಕರಿಸಿ ಸುಲಭದಲ್ಲಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ನೆರವಾಗಿ ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page