Home ಜನ-ಗಣ-ಮನ ಯುವ ನೋಟ ನನ್ನ ಕನಸಿನ ಭಾರತ

ನನ್ನ ಕನಸಿನ ಭಾರತ

0

ಕನಸುಗಳಿಲ್ಲದ ಬದುಕಿಲ್ಲ. ಹಾಗೆಂದು ಕಂಡ ಎಲ್ಲ ಕನಸುಗಳು ನಿಜವಾಗಲಾರವು. ಈ ಸತ್ಯ ಗೊತ್ತಿದ್ದೂ ಹೊಸ ಹೊಸ ಕನಸುಗಳನ್ನು ಕಟ್ಟುತ್ತಲೇ ಹೋಗುತ್ತೇವೆ. ಯುವ ಬರಹಗಾರ ನಾಗಾರ್ಜುನ್‌ ಅಪ್ಪು ಭಾರತದ ಕುರಿತು ತಮ್ಮ ಹಲವು ಕನಸುಗಳನ್ನು ವಾಸ್ತವದ ಬಿಕ್ಕಟ್ಟುಗಳನ್ನು ತೋರಿಸುತ್ತಲೇ ಬಿಚ್ಚಿಟ್ಟಿದ್ದಾರೆ ಇಂದಿನ ಯುವ ನೋಟದಲ್ಲಿ.

2022ನೇ ಇಸವಿ

ಒಬ್ಬ ವ್ಯಕ್ತಿ ಕಾರಣಾಂತರಗಳಿಂದ ವಿದೇಶಕ್ಕೆ ತೆರಳ ಬೇಕಾಯ್ತು. ಅವನು ಸುಮಾರು ವರ್ಷ ಅಲ್ಲೇ ನೆಲೆಸಿ ಬಿಟ್ಟ. ಆತನಿಗೆ ತಾನು, ತನ್ನವರು, ತನ್ನ ನಾಡು, ತನ್ನ ದೇಶದ ಜನರ ಸುಳಿವೇ ಇಲ್ಲದೆ ಸುಮಾರು ೨೧ ವರ್ಷಗಳಾಗಿದ್ದವು. ಆದರೆ ಕಾರಣಾಂತರಗಳಿಂದ  ತನ್ನ ದೇಶಕ್ಕೆ ಹೊರಡೋ ಸಮಯ ಆತನಿಗೆ ಬಂತು. ಆಗ ಆತನಿಗೆ ನಾಳೆ ನನ್ನ ದೇಶ, ನಾಡು, ನನ್ನವರನ್ನ ಯಾವಾಗ ನೋಡುತ್ತೇನೋ ಅನ್ನೋ ಹಂಬಲ. ಇನ್ನೊಂದು ಕಡೆ ನನ್ನ ದೇಶ ಈಗಲಾದರು ಬದಲಾಗಿದೆಯೋ ಅಥವಾ ಹಾಗೇ ಮುಂಚಿನ ತರ ಇದೆಯೋ ಅನ್ನೋ ಆತಂಕವೂ ಇತ್ತು. ಕೊನೆಗೂ ಆ ಸಮಯ ಒದಗಿ ಬಂತು. ಈ ದೇಶದ ಸಹವಾಸವೇ ಬೇಡ ಅಂದು ತೆರಳಿದ್ದ ಆತ ಕೊನೆಗೂ ತನ್ನ ದೇಶಕ್ಕೆ ಮತ್ತೊಮ್ಮೆ ಕಾಲಿಟ್ಟ.

 ತನ್ನ ನಾಡಿಗೆ ಕಾಲಿಟ್ಟಾಗ ಆತನಿಗೆ ಅಚ್ಚರಿಯ ದೃಶ್ಯಗಳು ಕಾಣ ತೊಡಗಿದವು.  ಆತ ಈ ಹಿಂದೆ ನೋಡಿದ ಪ್ರದೇಶಗಳು, ನಗರಗಳು, ಹಳ್ಳಿಗಳು, ಎಲ್ಲವೂ ಬದಲಾವಣೆ ಹೊಂದಿದ್ದವು. ಕಾರಿನಲ್ಲಿ ಮನೆಗೆ ತೆರಳುವಾಗ ಕಣ್ಣಿಗೆ ಕಂಡ ದೃಶ್ಯಗಳು ಅಚ್ಚರಿಯನ್ನುಂಟು ಮಾಡತೊಡಗಿದವು.  ಅದೇನೆಂದರೆ, ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿದ. ಆ ದೊಡ್ಡ ಕಟ್ಟಡಗಳು ಬೇರೆ ಯಾವುದೂ ಅಲ್ಲ-ಅವು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಾಗಿದ್ದವು. ಅಲ್ಲಿ ಸಾವಿರಾರು ಮಕ್ಕಳು, ಸರ್ಕಾರಿ ಶಾಲಾ ವಾಹನಗಳು, ದೊಡ್ಡ ಕ್ರೀಡಾ ಮೈದಾನ. ಇದನ್ನು ಕಂಡ ಆತ ಕಾರ್ ಡ್ರೈವರನ್ನು ಕೇಳುತ್ತಾನೆ “ಏನಪ್ಪಾ? ಇವು ನಿಜವಾಗಲೂ ನಮ್ಮ ಸರ್ಕಾರಿ ಶಾಲೆಗಳಾ” ಅಂತ. ಆಗ ಡ್ರೈವರ್ ಹೇಳ್ತಾನೆ “ಹೌದು ಸರ್. ಇದು ನಮ್ಮ ಸರ್ಕಾರಿ ಶಾಲೆನೇ”. “ಸರ್ಕಾರಿ ಶಾಲೆಗಳು  ಈ ತರ ಅಭಿವೃದ್ಧಿ ಆಗಿದವಾ” ಎಂದು ಆತ ಕುತೂಹಲ ವ್ಯಕ್ತಪಡಿಸಿದ. “ಈಗ ನಮ್ಮ ಜನ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನ ಕಳ್ಸಲ್ಲ ಸರ್. ಎಷ್ಟೇ ಶ್ರೀಮಂತ ವ್ಯಕ್ತಿ ಆದ್ರೂ ಸರ್ಕಾರಿ ಶಾಲೆಗೇ ಮಕ್ಳನ್ನು ಕಳ್ಸೋದು. ನೀವೇ ನೋಡಿದ್ರಲ್ಲಾ, ಈವಾಗ ಎಲ್ಲಾ ಚೇಂಜ್ ಆಗಿದೆ ಎಂದ ಡ್ರೈವರ್.

ಆ ಕ್ಷಣ ಆತನ ಮನಸಲ್ಲಿ ಸುಳಿದಾಡಿದ್ದು ಸುಮಾರು  ವರ್ಷಗಳ ಹಿಂದೆ ಆತ ಓದಿದ ಸರ್ಕಾರಿ ಶಾಲೆಯ ನೆನಪುಗಳು. ಆ ವ್ಯಕ್ತಿ ಕಾರಿನಲ್ಲಿ ಕುಳಿತು ಹಳೆಯ ನೆನಪುಗಳನ್ನ ಮೆಲುಕು ಹಾಕುತ್ತಾ ಅದನ್ನು ಡ್ರೈವರ್‌ಗೆ ಹೇಳುತ್ತಾ ಹೋದ – “ನಾನು ಓದುವಾಗ, ನನ್ನ ಶಾಲೆ ಹೇಗಿತ್ತು ಅಂದರೆ, ಸಣ್ಣದೊಂದು ಮೈದಾನ, ಆ ಮೈದಾನದಲ್ಲಿ ಏಳೆಂಟು ಕೊಠಡಿಗಳು ಇರುವ ಹಳೆಯ ಹಂಚಿನ ಶಾಲೆ. ತರಗತಿ ನಡೆಯುತ್ತಿದ್ದ ಸಮಯದಲ್ಲಿ ಗಗನದಲ್ಲಿ ಯಾವುದಾದರು ವಿಮಾನದ ಶಬ್ದ ಕೇಳಿದ್ರೆ ಸಾಕು ತಲೆ  ಎತ್ತಿ ನೋಡುತಿದ್ವಿ. ಯಾಕೆಂದರೆ  ಅಲ್ಲಲ್ಲಿ ಒಡೆದ ಹಂಚಿನ ಎಡೆಗಳಲ್ಲಿ ಬಾನು ಕಾಣಿಸುತಿತ್ತು.  ಇದನ್ನ ಕೇಳಿದ್ರೆ ಗೊತ್ತಾಗುತ್ತೆ ನಿನಗೆ, ನನ್ನ  ಶಾಲೆ ಎಷ್ಟೊಂದು ಚೆಂದ ಅಂತಾ! ಆದರೆ ನನ್ನ ಮನೆಯ ಪಕ್ಕದ ಒಬ್ಬ ಹುಡುಗ ಖಾಸಗಿ ಶಾಲೆಗೆ ಹೋಗುತ್ತಿದ್ದ. ಅವನ  ಶಾಲೆ ಐದರಿಂದ ಆರು ಅಂತಸ್ತಿನ ಕಟ್ಟಡಗಳ ಶಾಲೆ. ಮನೆಯ ಬಳಿ ಬಂದು ಅವನನ್ನು ಹೊತ್ತೊಯ್ಯುವ ಶಾಲಾ ವಾಹನ. ವಿಶಾಲವಾದ ಆಟದ ಮೈದಾನ. ಆತ ಇವ್ರನ್ನು ನೋಡಿ ಗೇಲಿ ಮಾಡುತ್ತಿದ್ದ”.  ಹೀಗೆ, ಬಾಲ್ಯದ ನೆನಪುಗಳನ್ನ ಕಾರ್‌ ಡ್ರೈವರ್‌ಗೆ ಹೇಳುತ್ತಾ ಹೋದ. 

ಆತನ ಹಳ್ಳಿ ಪ್ರವೇಶಿಸುವ ರಸ್ತೆಗೆ ಕಾರು ತಲುಪಿತು. ನೋಡಿದರೆ ಅಲ್ಲೂ ಕೂಡಾ ಬದಲಾವಣೆಯಾಗಿದೆ! ಹೈವೇ ತರದ ರಸ್ತೆ. ಆತನಿಗೆ ಇದು ನನ್ನ ಹಳ್ಳಿಯ ರಸ್ತೆನಾ ಅನ್ನುವ ಸಂಶಯ ಮೂಡ‌ ತೊಡಗಿತು. ಆತನ ಮನಸನ್ನು ಓದಿದವನಂತೆ ಡ್ರೈವರ್‌ “ಯಾಕೆ ಸರ್‌ ನೀವ್ ಇದ್ದ ಟೈಮ್‌ನಲ್ಲಿ, ರಸ್ತೆಗಳು ಹಿಂಗೆ ಇರಲಿಲ್ವಾ” ಅಂತಾ ಕೇಳಿದ. ಆತ ಮುಗುಳ್ನಕ್ಕು “ರಸ್ತೆ ಹೇಗಿತ್ತು ಅಂತಾ ಹೇಳ್ತೀನಿ ಕೇಳು  “ನಮ್ಮ ಹಳ್ಳಿ ರಸ್ತೆ ಉದ್ದಕ್ಕೂ ದೊಡ್ಡದೊಡ್ಡ ಗುಂಡಿಗಳು. ಅಲ್ಲಲ್ಲಿ ಚೆನ್ನಾಗಿರೋ ರಸ್ತೆ. ಯಾವ  ರೀತಿ  ಇತ್ತು ಅಂದ್ರೆ, ಯಾವುದಾದರು ಶವವನ್ನ ಆ ರಸ್ತೆಲಿ ವಾಹನದಲ್ಲಿ ಇಟ್ಟುಕೊಂಡು ಹೋದ್ರೆ ಶವವೇ ಎದ್ದು ಇದು ಇಂತದ್ದೆ ಹಳ್ಳಿ ರಸ್ತೆ  ಎಂದು ಹೇಳುವ  ರೀತಿ” ಎಂದು ನಗುತ್ತಾ ಮುಂದೆ ಹೋದರು.

ದಾರಿಯಲ್ಲಿ ಸಾಗುತ್ತಿರುವಾಗ ಆತನ ಸ್ನೇಹಿತ ಸಿಗುತ್ತಾನೆ. ಕಾರ್‌ ನಿಲ್ಲಿಸಿ ಸ್ನೇಹಿತನನ್ನು ಮಾತಾಡಿಸುತ್ತಾನೆ. ಹೀಗೆ ಮಾತನಾಡುತ್ತಾ, ಈವಾಗ ಏನು ಕೆಲಸ ಮಾಡ್ತಾ ಇದ್ದೀಯ? ಎಷ್ಟು ಕೊಡ್ತಾರೆ ಸಂಬಳ? ಅಂತ ಸ್ನೇಹಿತನನ್ನು ಕೇಳಿದ. ಆಗ ಆತನ ಗೆಳೆಯ ನಮಗೆ ಯಾರು ಸಂಬಳ ಕೊಡ್ತಾರೋ.. ನಾನು ಹೊಲ, ಮನೆಕೆಲಸ ಮಾಡ್ತಾ ಅರಾಮಾಗಿ ಇದೀನಿ ಅಂದ. ಆತ “ಅಲ್ಲೋ ರೈತರ ಕೆಲಸ ನಂಗು ಗೊತ್ತು. ಮಳೆ ಬಂದ್ರೆ ಬೆಳೆ ಸರಿಯಾಗಿ ಬರಲ್ಲ. ಬೆಳೆ ಸರಿಯಾಗಿ ಬಂದ್ರೆ ರೈತರಿಗೆ ಸರಿಯಾಗಿ ಬೆಲೆ ಸಿಗಲ್ಲ, ನಾನೇ ನೋಡಿಲ್ವ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿರೋದು ಅಂತ ಹೇಳತೊಡಗಿದ. ಆಗ ಆತನ ಸ್ನೇಹಿತ “ಲೋ ಹುಚ್ಚ, ಸುಮಾರು 20 ವರ್ಷದ ಹಿಂದೆ ಇದ್ದ ರೈತರು ಮತ್ತು  ಈಗಿನ ರೈತರು ಬೇರೆಯೇ. ಈಗ ಸರಿಯಾಗಿ  ಸಾರಿಗೆ ವ್ಯವಸ್ಥೆ  ಇದೆ.  ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಸಿಗ್ತಾ ಇದೆ. ರೈತರಿಗೆ ಏನಾದ್ರು ಸಮಸ್ಯೆ ಆದ್ರೆ ತಕ್ಷಣ ಸಮಸ್ಯೆ ಪರಿಹರಿಸೋ ಸರ್ಕಾರ ಇದೆ. ಈಗ ರೈತರು ಸಾಲ ಸೋಲ ಅಂತ ಅಳುವುದಿಲ್ಲ. ಆತ್ಮಹತ್ಯೆ ಮಾಡ್ಕೊಳ್ಳೋದೂ ಇಲ್ಲ. ಹಾಗಾಗಿ ಅವ್ರು ನೆಮ್ಮದಿಯಾಗಿ ಇದ್ದಾರೆ. ಇಷ್ಟೇ ಅಲ್ಲ ನನ್ನಂಗೆ  ಓದಿ ಕೆಲಸ  ಸಿಗದೇ ಇರೋರು ಕೃಷಿಯಲ್ಲಿ ತಮ್ಮನ್ನ ತೊಡಗಿಸಿಕೊಂಡು ತಮ್ಮ ಕಾಲ್ಮೇಲೆ ನಿಂತುಕೊಂಡು ಜೀವನ  ನಡೆಸ್ತಾ ಇದಾರೆ ಅಂದ. ಅದನ್ನ ಕೇಳಿ ಆತನ ಮುಖದಲ್ಲಿ ಮುಗುಳ್ನಗೆ ಹಾದು ಹೋಯ್ತು.

ಇನ್ನೇನು ಮನೆ  ತಲಪಬೇಕು ಅನ್ನೋ ಸಮಯದಲ್ಲಿ ಊರಲ್ಲಿ ಇರೋ ಶಿವನ  ದೇವಾಲಯಕ್ಕೆ ಹೋಗಿ ನಮಸ್ಕಾರ ಹಾಕ್ಕೊಂಡು ಹೋಗೋಣ ಅಂತಾ ನಿರ್ಧಾರ ಮಾಡಿ ಗುಡಿ ಒಳಗೆ ಹೋಗಿ, ಕೈ ಮುಗಿದು ತಿರುಗಿ ನೋಡಿದ. ಅಲ್ಲಿ ಆತನಿಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಅಲ್ಲೊಬ್ಬ ತಳಸಮುದಾಯದ ವ್ಯಕ್ತಿ ದೇವರ ದರ್ಶನಕ್ಕೆ  ಗುಡಿಯೊಳಗೆ ಬರುತ್ತಿದ್ದ. ಅದನ್ನು ಕಂಡ  ಆತ ಆ  ವ್ಯಕ್ತಿಯನ್ನು ಪೂಜಾರಿ ಕಣ್ಣಿಗೆ ಬೀಳದಂತೆ ಹೊರಗೆ ಕರೆದುಕೊಂಡು ಹೋಗಿ “ಅಲ್ಲಾ ಅಣ್ಣಾ ನಿಮಗೆ ಏನಾಗಿದೆ, ಆ ಪೂಜಾರಿ ಏನಾದ್ರೂ ನಿಮ್ಮನ್ನ ನೋಡಿದ್ರೆ ಬೈದು ಹೊರಗಾಕ್ತಾನೆ. ಭಯ  ಇಲ್ವಾ ನಿಮಗೆ? ಆವತ್ತು ಯಾವಾಗ್ಲೋ ನಿಮ್ಮ ಜಾತಿಯವರು ದೇವಸ್ಥಾನದ ಒಳಗೆ ಬಂದರು ಅಂತ ಊರು ಮುಂದೆ ಇರೋ ಕಂಬಕ್ಕೆ ಕಟ್ಟಿಹಾಕಿ ಹೊಡೆದಿರಲಿಲ್ವಾ” ಅಂದ. ಆ ವ್ಯಕ್ತಿ “ಅಣ್ಣಾ. ಗುಡಿಯಿಂದ ಹೊರಗೆ  ಹಾಕೋದು, ಬಯ್ಯೋದು, ಜಾತಿ ನಿಂದನೆ  ಮಾಡಿದ್ದು ಎಲ್ಲ 10 ವರ್ಷದ  ಹಿಂದೇನೇ ಹೋಯ್ತು. ಇವಾಗೆಲ್ಲಾ ಆ ರೀತಿ ಜಾತಿ ಗೀತಿ ನೋಡಲ್ಲ.. ಇನ್ನು ಏನೇನೋ ಬದಲಾಗಿದೆ. ಮುಂದೆ ನಿಮಗೆ ತಿಳಿಯುತ್ತೆ ಬಿಡಿ” ಎಂದು ದೇವರ  ದರ್ಶನ  ಪಡೆಯಲು  ಹೋದ.

ತುಂಬಾ ವರ್ಷಗಳ ನಂತರ ಬಂದ ಮನೆ ಮಗನನ್ನು ನೋಡಿ, ಮನೆಯವರು ತುಂಬಾ ಖುಷಿ ಪಟ್ಟರು. ಬಹಳ ವರ್ಷದಿಂದ ಬಂದ ಆತನಿಗೆ ಇಷ್ಟು ಸಮಯ ಕಳೆದು ಕೊಂಡಿದ್ದ ಕುಟುಂಬದ ಪ್ರೀತಿ, ಕಾಳಜಿ ಹೆಚ್ಚು- ಹೆಚ್ಚು ಸಿಗ್ತಾ ಹೋಯಿತು.

ಹೀಗೆ ಎರಡು ಮೂರು ದಿನ ಆದ ಮೇಲೆ, ಊರಲ್ಲಿ ಗಣೇಶನ  ಹಬ್ಬ ಬಂತು. ಅಲ್ಲಿ ಇನ್ನೂ ಆಶ್ಚರ್ಯ ಕಾದಿತ್ತು.  ಅಲ್ಲಿ ಹಿಂದೂಗಳಲ್ಲದೆ ಮುಸ್ಲಿಂ ಬಾಂಧವರು, ಕ್ರೈಸ್ತರೆಲ್ಲ ಸೇರಿ ಹಬ್ಬ ಮಾಡುತ್ತಿದ್ದರು. ಈ ಹಿಂದೆ ಹಿಂದು- ಮುಸಲ್ಮಾನರ ನಡುವೆ ಜಗಳ ಶುರುವಾಗಿ ದೊಡ್ಡ ರಾದ್ಧಾಂತವೇ ನಡೆದು ಹೋಗುತ್ತಿತ್ತು, ಹಾಗಾಗಿ ಈ ಸುಂದರ ಕ್ಷಣ ನೋಡಿ, ನಾನು ಕಾಣ ಬೇಕಿದ್ದ  ನಾಡು, ದೇಶ  ಇದುವೇ ಅಂತಾ ಆತನಿಗೆ ಅನಿಸ್ತು.

ದಿನ  ಕಳೆದಂತೆ  ಇನ್ನೊಂದು ಮುಖ್ಯವಾದ  ಅಂಶ ಆತನ ಗಮನಕ್ಕೆ  ಬಂತು.  ಮಹಿಳೆಯರು ಹಿಂದೆ ಕೆಲವು ಕ್ಷೇತ್ರಗಳಲ್ಲಿ ಮಾತ್ರ  ಕಾರ್ಯ ನಿರ್ವಹಿಸುತ್ತಿದ್ದರು.  ಆದ್ರೆ  ಇಂದು ಮಹಿಳೆಯರು  ಪುರುಷರ ಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಚ್ಚರಿ ಅಂದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಮಂತ್ರಿ ಮಹಿಳೆಯರೇ ಆಗಿದ್ದರು. ಮಹಿಳೆಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ  ನಡೆದಲ್ಲಿ ಅದರ ವಿರುದ್ಧ ತಿರುಗಿ ನಿಂತು ಪ್ರಶ್ನಿಸಿ ನ್ಯಾಯ ಪಡೆಯುವಷ್ಟು ಅವರು ಪ್ರಗತಿ ಹೊಂದಿದ್ದರು. ಎಲ್ಲಾ ಲಿಂಗಿಗಳಿಗೂ ಸಮಾನ ಅವಕಾಶ ಸಿಕ್ಕಿತ್ತು.

ಪೊಲೀಸರಿಗೆ ಕಾನೂನು ಕ್ರಮದಂತೆ ಕಾನೂನು ಪಾಲಿಸುವ ಕೆಲಸವನ್ನು ಮಾತ್ರ ಮಾಡುವಂತ ಸಂದರ್ಭ ಒದಗಿತ್ತು. ಅತ್ಯಾಚಾರ , ಹಿಂಸೆ, ಕಳ್ಳತನ, ಭ್ರಷ್ಟಾಚಾರ, ಎಲ್ಲವೂ ಕಡಿಮೆಯಾಗಿತ್ತು. ಬಡತನದಿಂದ ಹಸಿದು ಸಾಯುವ ಪರಿಸ್ಥಿತಿ ಇರಲಿಲ್ಲ, ನಿರುದ್ಯೋಗ ಕಣ್ಮರೆಯಾಗಿತ್ತು, ಬಂಡವಾಳಶಾಹಿಯ ಪ್ರಭಾವ ನಾಶವಾಗಿತ್ತು. ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮುಂತಾದ ವ್ಯವಸ್ಥೆಗಳು ಸುಧಾರಣೆ ಕಂಡು, ಸಮಾಜದಲ್ಲಿ ಒಳ್ಳೆಯ ಪ್ರಭಾವ ಬೀರಿದ್ದವು.

ಆತ ಕಂಡ ಕನಸಿನ ಸಮಾಜ ಇದುವೇ ಆದ್ದರಿಂದ, ವಿದೇಶವನ್ನು ಬಿಟ್ಟು ಆತ  ತನ್ನ ನಾಡಿನಲ್ಲೇ ಉಳಿದು ಬಿಟ್ಟ.

ನಾಗಾರ್ಜುನ್‌ ಅಪ್ಪು

ಉದಯೋನ್ಮುಖ ಲೇಖಕ

You cannot copy content of this page

Exit mobile version