ಜನಸಾಮಾನ್ಯರಿಗೆ ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ರೈತರು ತಾವು ಬೆಳೆದ ಫಸಲನ್ನು ಮನೆಗೆ ತರುವ ದಿನಗಳಿವು. ಸುಗ್ಗಿ ಹಬ್ಬದ ಸಂಭ್ರಮದ ನಡುವೆ ಕಲಬುರಗಿಯಲ್ಲಿ ಸಂಕ್ರಾಂತಿಯಂದು ಊಟದ ತಟ್ಟೆಯಲ್ಲಿ ಇರಲೇಬೇಕಾಗಿದ್ದ ಸಜ್ಜೆ ರೊಟ್ಟಿಯನ್ನು ನೆನೆಯುತ್ತಾ ಸಜ್ಜೆ ಬೆಳೆಯ ಕಷ್ಟ ಸುಖಗಳ ಬಗ್ಗೆ ಬರೆದಿದ್ದಾರೆ ಪತ್ರಿಕೋದ್ಯಮ ವಿದ್ಯಾರ್ಥಿ ಕುಮಸಿಯ ಮಹೇಶ ಕೇವಂಟಗಿ.
ಸಂಕ್ರಾಂತಿ ಹಬ್ಬದಂದು ಸಂಭ್ರಮದಿಂದ ಎಳ್ಳು ಬೆಲ್ಲ ಸೇವಿಸಿ ಜನರೆಲ್ಲ ಸಂತೋಷದಿಂದ ಸಂಭ್ರಮ ಪಡುತ್ತಿದ್ದರೆ ಇತ್ತ ನಮ್ಮ ಕಲಬುರಗಿಯ ಪ್ರತಿಯೊಬ್ಬರ ಮನೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಸಜ್ಜೆ ರೊಟ್ಟಿ ಸಿದ್ಧವಾಗುತ್ತಿತ್ತು. ಈ ಹಬ್ಬಕ್ಕೆ ಸಜ್ಜೆ ಸಿಗಲಿಲ್ಲ ಅಂದರೆ ಯಾರು ಬೆಳೆದಿರುತ್ತಾರೋ ಅವರನ್ನು ಹುಡುಕಿಕೊಂಡು ಹೋಗಿ ಕಾಡಿ ಬೇಡಿಯಾದರು ತಂದು ರೊಟ್ಟಿ ಮಾಡುವ ಪದ್ಧತಿ ಇತ್ತು. ಸಂಕ್ರಾಂತಿ ಹಬ್ಬಕ್ಕೆ ಸಜ್ಜೆ ರೊಟ್ಟಿ ಮಾಡಿಲ್ಲ ಅಂದರೆ ಆ ಹಬ್ಬ ಅಪೂರ್ಣ ಆಗುತ್ತದೆ ಎಂದು ನಮ್ಮ ಕಡೆಯ ಕೆಲವರ ಅಭಿಪ್ರಾಯ. ಈ ಸಜ್ಜೆ ಬೆಳೆಯ ಹಿಂದೆ ಅಡಗಿದ ಸಾರ ಏನಿದೆ ಎಂಬುದನ್ನು ಕಿಂಚಿತ್ತಾದರೂ ತಿಳಿಸಲು ಈ ಲೇಖನವನ್ನು ಬರೆಯುತ್ತಿದ್ದೇನೆ.
ನನಗೆ ಸುಮಾರು ಹತ್ತು ವರ್ಷ ಆದಾಗಿನಿಂದ ಸಜ್ಜಿ ರೊಟ್ಟಿ, ಸಜ್ಜಿ ಕಡುಬು ತಿಂದಿರುವುದು ನನಗೆ ನೆನಪಿದೆ. ನಮ್ಮ ಅವ್ವ ಆಗ ದಿನಾಲೂ ಸಜ್ಜೆ ರೊಟ್ಟಿನೇ ಮಾಡುತಿದ್ದಳು. ಮನೆಯಲ್ಲಿ ಆಗ ಬಡತನದ ಮಳೆ ಒಂದೇ ಸಮನೆ ಜಿನುಗುತ್ತಿತ್ತು. ನಮ್ಮ ಉತ್ತರ ಕರ್ನಾಟಕದ ಬಡವರ ಮನೆಗೆ ಥಟ್ಟನೆ ಹೊಂದಿಕೊಳ್ಳೋದು ಈ ಸಜ್ಜೆ ಒಂದೇ ಆಗಿತ್ತು. ಹಾಗಾಗಿ ಇದೇ ನಮಗೆಲ್ಲಾ ಮೃಷ್ಟಾನ್ನವಾಗಿತ್ತು. ನಮ್ಮ ತೋಟದಲ್ಲಿ ನವಣೆ, ಸಜ್ಜೆ, ಕಳವಿ, ಜವಿಗೋಧಿ ಬೆಳೆಯುತ್ತಿದ್ದರು. ಆದರೆ ಈ ಸಜ್ಜೆ ಬೆಳೆಯನ್ನು ಮಾತ್ರ ಯಥೇಚ್ಛವಾಗಿ ಎಲ್ಲರೂ ಬೆಳೀತಿದ್ರು. ಮೂರು ವರ್ಷಗಳ ಹಿಂದೆ ಒಂದು ಸೇರಿಗೆ ಕೇವಲ 8ರಿಂದ 10 ರೂ.ಮಾತ್ರ ಇತ್ತು.
ಕುಮಸಿವಾಡಿಯ ವೈಶಿಷ್ಟ್ಯ
ಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಘಟನೆ ಇದು. ಕುಮಸಿ ಗ್ರಾಮ ತಗ್ಗಿನ ಪ್ರದೇಶದಲ್ಲಿ ಇರುವ ಕಾರಣ ಕೆರೆ ಒಡೆಯುತ್ತೆ ಎಂದು ಊರಿನ ಜನರು ಭಯದಿಂದ ಜೀವನ ನಡೆಸುತ್ತಿದ್ದರು. ಊರಿನ ಕುರುಬ ಸಮುದಾಯದ ಒಂದಿಷ್ಟು ಜನರು ಕೆರೆಯ ಉತ್ತರ ಭಾಗದ ಎತ್ತರ ಪ್ರದೇಶದಲ್ಲಿ ವಾಸಿಸ ತೊಡಗಿದರು. ಆ ಪ್ರದೇಶಕ್ಕೆ ಮೊದಲು ‘ಕುರಬನವಾಡಿ’ ಎಂದು ಕರೆಯುತ್ತಿದ್ದರು. ತದನಂತರ ಕುಮಸಿ ಊರಿನಿಂದ ಬೇರ್ಪಟ್ಟಿದ್ದರಿಂದ ಇದನ್ನು ‘ಕುಮಸಿವಾಡಿ’ ಎಂದು ಕರೆಯಲು ಆರಂಭಿಸಿದರು. ಈಗ ಕುಮಸಿ ಮತ್ತು ಕುಮಸಿವಾಡಿ ನಡುವೆ ಇರುವ ಅಂತರ 3 ಕಿ.ಮೀ.
ಈ ಕುಮಸಿವಾಡಿ ಊರಿನಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸಜ್ಜೆ ಇಲ್ಲದ ಮನೆ ಇಲ್ಲ ಎಂಬಂತೆ ತಮ್ಮ ಹೊಲಗಳಲ್ಲಿ ಅಷ್ಟೊಂದು ಸಜ್ಜೆ ಬೆಳೆಯುತ್ತಿದ್ದರು. ಈ ಸಜ್ಜೆಯನ್ನು ಸಂಗ್ಟಿ, ನುಚ್ಚು, ರೊಟ್ಟಿ, ಕಡುಬು, ಸಂಡಿಗೆ, ಹಪ್ಪಳ, ಕುರುಡಿಗೆ ಹೀಗೆ ಬಹು ವಿಧವಾಗಿ ಉಪಯೋಗಿಸುತ್ತಿದ್ದರು. ಪಶುಗಳಿಗೆ ಚುನ್ನಿ, ಸಜ್ಜೆ ಹಿಂಡಿ, ಕಳಿಕೆ ತಿನ್ನಲು ಕೊಡುತ್ತಿದ್ದರು. ಪ್ರತಿ ಮನೆಯಲ್ಲಿ 5ರಿಂದ 6 ಚೀಲಗಳು ಯಾವಾಗಲೂ ಇರುತ್ತಿದ್ದವಾದರೂ ಕೆಲವರು 150ಕ್ಕೂ ಹೆಚ್ಚು ಚೀಲಗಳು ಬೆಳೆದ ಉದಾಹರಣೆ ಇದೆ. ನಾನು ಕೇಳಿದ ಹಾಗೆ 2018 ರಿಂದ ಸಜ್ಜೆ ಬೆಳೆಯುದನ್ನೇ ನಿಲ್ಲಿಸಿದ್ದಾರೆ. ಈಗ ಕುಮಸಿವಾಡಿಯ ಪ್ರಮುಖ ಬೆಳೆ ಎಂದರೆ ಎಲೆಕೂಸು, ಹೂ ಕೂಸು ಹಾಗೂ ಬದನೆಕಾಯಿ. ಯಾಕೆ? ಎಂದು ಅಲ್ಲಿಯ ನಿವಾಸಿಗಳನ್ನು ಕೇಳಿದರೆ ಹಕ್ಕಿ, ಹಂದಿಗಳು ಬೆಳೆ ಹಾನಿ ಮಾಡತ್ತಿದ್ದಾವೆ ಎಂದು ಹೇಳುತ್ತಾರೆ ಇದು ನಿಜವಿರಬಹುದೇ ? ಅಲ್ಲ..ಅಲ್ಲಿಯ ಜನರ ಮನಸ್ಥಿತಿ ಬದಲಾಗಿದೆಯೇ?
ಈ ವರ್ಷ ನಮ್ಮ ಕುಮಸಿ ಊರಿನಲ್ಲಿಯೇ ನನ್ನ ಅಪ್ಪ- ಅವ್ವ ಸೇರಿಕೊಂಡು ಅರ್ಧ ಎಕರೆಯಲ್ಲಿ ಸಜ್ಜೆ ಬೆಳೆದಿದ್ದಾರೆ. ಆದರೆ, ಪಕ್ಷಿಗಳು ಎಲ್ಲಾ ಸಜ್ಜೆಯನ್ನು ತಿಂದು ಖಾಲಿ ತೆನೆ ಮಾಡಿ ಬಿಟ್ಟಿದ್ದವು. 9 ರಿಂದ10 ಚೀಲಗಳು ಆಗೋದು ಕೇವಲ 1 ಚೀಲ ಆಯಿತು. ರಾಶಿ ತಂದು ಮನೆಗೆ ಹಾಕುತ್ತಿದ್ದಂತೆ ಊರಿನ ಜನ ಮನೆಗೆ ಬಂದು ನನಗೆ ಎರಡು ಸೇರು ಕೊಡಿ ಎಂದು ಒಂದೇ ಸಮನೆ ಕೇಳುತ್ತಿದ್ದರು. ಮೂರು ವರ್ಷಗಳ ಹಿಂದೆ ಒಂದು ಸೇರಿಗೆ 12 ರೂ. ಇದ್ದ ಸಜ್ಜೆಯನ್ನು ಅಪ್ಪ ಊರಿನ ಸಂತೆಯಲ್ಲಿ ಸೇರಿಗೆ 80 ರೂ.ಗೆ ಮಾರಾಟ ಮಾಡಿದ್ದಾರೆ! ನಂಬಲಾಗುತ್ತಿಲ್ಲ!
ಸಜ್ಜೆ ಬೆಳೆ ಯಾಕೆ ನಶಿಸುತ್ತಿದೆಯೆಂದರೆ…
ಆಗಲೇ ಹೇಳಿದ ಕುಮಸಿವಾಡಿಯಲ್ಲಿ ಈ ಸಜ್ಜೆ ಬೆಳೆ ಕಣ್ಮರೆಯಾಗಲು ಸಾಮಾಜಿಕ, ವರ್ಗ, ಬಣ್ಣ , ಶ್ರೇಷ್ಠ- ಕನಿಷ್ಠ, ಬೇರೆ ಆಹಾರ ಪದ್ಧತಿಯ ಹೇರಿಕೆ, ಹಕ್ಕಿ- ಪಕ್ಷಿಗಳು ನಡುವೆ ಹಂದಿಗಳ ಕಾಟ ಹೀಗೆ ನಾನಾ ಕಾರಣಗಳಿವೆ. ಜನರೂ ಕಾರಣರಾಗಿದ್ದಾರೆ! ಸಜ್ಜೆ ಬೆಳೆಯುತ್ತಿದ್ದರೆ ಅವರ ಬಗ್ಗೆ ಕೊಂಕು ಮಾತನಾಡೋದು “ಓ..ಅವರು ಬಡವರು ಅದು ಬಡವರ ಬೆಳೆ” ಎಂದು ಹೇಳೋದು. ಸಜ್ಜೆ ರೊಟ್ಟಿ, ಕಡುಬು, ನುಚ್ಚು ಮಾಡಿ ತಿನ್ನುತ್ತಿದ್ದರೆ, ಜನರು “ಅದೇನದು ಕರಿ ರೊಟ್ಟಿ, ನುಚ್ಚು, ಕಡುಬು ತಿನ್ನೋದು ಅಂತ ಮೂದಲಿಸೋದು. ಕರಿಮಣ್ಣಾ ಅಥವಾ ಸಜ್ಜೆ ಯಾರ ಉಣ್ಣುತ್ತಾರೆ ತಗಿರಿ ಅಕಡಿ ” ಎಂದು ವ್ಯಂಗ್ಯ ಮಾಡೋದು.. ಜನರ ಇಂತಹ ಪ್ರತಿಕ್ರಿಯೆಗಳು ಈ ಬೆಳೆ ಬೆಳೆಯಲು ರೈತರಲ್ಲಿ ಉತ್ಸಾಹ ಕುಂದಿಸಿವೆ ಅಂದರೆ ತಪ್ಪಾಗಲಾರದು.
ಸಜ್ಜೆಗೆ ಧಾರ್ಮಿಕ ಸ್ಪರ್ಶ
ಈ ಸಜ್ಜೆಯ ಬಗ್ಗೆ ಹೇಳಬೇಕು ಅಂದರೆ, ಇದು ಪ್ರಮುಖವಾಗಿ ಧಾರ್ಮಿಕ ಆಚರಣೆಯಲ್ಲಿ ಬಳಕೆಯಾಗುತ್ತಿದೆ. ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ ಭಾಗದ ಜನರ ಆರಾಧ್ಯದೈವ ಎಂದು ಮಹಾರಾಷ್ಟ್ರ ರಾಜ್ಯದ ತುಳುಜಾಪೂರದ ‘ಜಗದಂಬ’ಳನ್ನು ಕರೆಯಲಾಗುತ್ತದೆ. ದಸರ ಹಬ್ಬದ ಪ್ರಯುಕ್ತ ಮೊದಲ ಖಾರಿಫ್ (ಮುಂಗಾರು) ಬೆಳೆಗಳಾದ ನವಣೆಯ ಬಾನ(ಅನ್ನ), ಸಜ್ಜೆಯ ಕಡುಬು, ನೈವೇದ್ಯ ಕೊಡುತ್ತಾರೆ. ದೀಪಾವಳಿ, ಸಂಕ್ರಾಂತಿ, ಎಳ್ಳಮವಾಸ್ಯೆ ಹಬ್ಬದಂದು ಸಜ್ಜೆ ರೊಟ್ಟಿ ಪ್ರತಿಯೊಬ್ಬರ ಮನೆಯಲ್ಲಿ ಮಾಡುತ್ತಾರೆ. ಇದು ಹಿಂದಿನ ಕಾಲದಿಂದಲೂ ಬಂದ ಪದ್ಧತಿಯಾಗಿದೆ.
ಹಾಗೆ ಕಲಬುರಗಿಯ ಜಿಲ್ಲೆಯ ಮುಸ್ಲಿಂ ಸಮುದಾಯದ ಹಜರತ್ ರುಕ್ಕಮೋದ್ದೀನ ತೋಲಾ ದರ್ಗ, ಹಜರತ್ ಖಾಜೆ ಬಂದೇನವಾಜ ದರ್ಗಾಗಳಲ್ಲಿ ಅದೇ ವರ್ಷ ಬೆಳೆದ ಸಜ್ಜೆಯ ‘ಮಾಲ್ದಿ’ಯನ್ನು ನೈವೇದ್ಯವಾಗಿ ಮುಸ್ಲಿಮೇತರರು ‘ಫಕೀರರಿ’ಗೆ ಉಣಿಸುತ್ತಾರೆ. ಇದು ರೂಢಿಗತವಾಗಿ ನಡೆದು ಬಂದ ಸಂಪ್ರದಾಯವಾಗಿದೆ. ಇಲ್ಲಿ ಸಜ್ಜೆ ಬೆಳೆಯ ಹಿಂದೆ ಅಡಗಿ ಕುಳಿತ ಸೌಹಾರ್ದತೆಯನ್ನು ಕಾಣಬಹುದು. ಆದರೆ ಈಗ ನಮ್ಮ ಬಹುತ್ವದ ನಗರಿಯಲ್ಲಿ ಜನರು ಸಜ್ಜೆ ಬೆಳೆಯುವುದೇ ನಿಲ್ಲಿಸಿದ್ದಾರೆ.
ಸಜ್ಜೆ ಮತ್ತು ಆರೋಗ್ಯ..
ಆರೋಗ್ಯದ ದೃಷ್ಟಿಯಿಂದ ನೋಡಿದರೆ ಸಜ್ಜೆ ಪ್ರತಿಯೊಬ್ಬ ಮನುಷ್ಯರಿಗೆ ಬೇಕಾದ ಪದಾರ್ಥ. ಸಜ್ಜೆಯನ್ನು ಚಳಿಗಾಲದಲ್ಲಿ ಅತಿಯಾಗಿ ಉಪಯೋಗಿಸುತ್ತಾರೆ. ಇದು ದೇಹದ ತೂಕ ಕಡಿಮೆ ಮಾಡಿಕೊಳ್ಳಲು, ಮುಖದ ಮೇಲಿನ ಚುಕ್ಕೆಗಳು ಹೋಗಲು, ಮಧುಮೇಹದ ತೊಂದರೆ, ಜೀರ್ಣ ಶಕ್ತಿಯನ್ನು ಹೆಚ್ಚಿಸಲು, ಹೃದಯವನ್ನು ಆರೋಗ್ಯವಾಗಿಡಲು, ದೇಹವನ್ನು ಬಿಸಿಯಾಗಿಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ಇದೊಂದು ಪ್ರಮುಖವಾದ ಮದ್ದು ಎಂದೂ ವೈದ್ಯರು ಹೇಳುತ್ತಾರೆ.
ಕೆಳದರ್ಜೆಯ ಪದಾರ್ಥ ಎಂದು ಕರೆಸಿಕೊಳ್ಳುತ್ತಿದ್ದ ಸಜ್ಜೆ, ಈಗ ‘ಸಿರಿ ಧಾನ್ಯ’ ದ ಪಟ್ಟಿಗೆ ಸೇರಿದೆ. ಸರ್ಕಾರ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ‘ರೈತ ಸಿರಿ ಯೋಜನೆ 2022’ ಜಾರಿ ಮಾಡಿದೆ. ಸಿರಿಧಾನ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಪ್ರತಿ ಹೆಕ್ಟೇರ್ಗೆ 10,000 ರೂಪಾಯಿ ಅನುದಾನವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ ಎಂದು ಈ ಯೋಜನೆ ತಿಳಿಸಿದೆ.
ಸಜ್ಜೆ ಸಿರಿಧಾನ್ಯವಲ್ಲವೇ?
ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರು (ಫೈಬರ್) ಕ್ಯಾಲ್ಶಿಯಂ ಮತ್ತು ಖನಿಜಾಂಶಗಳು ಇದ್ದು ಆಹಾರದಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸುತ್ತದೆ. ವಿಶೇಷವಾಗಿ ಈ ಬೆಳೆಗಳನ್ನು ಶುಷ್ಕ ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಭೂಮಿಗಳಲ್ಲೂ ಬೆಳೆಯಬಹುದು ಎಂದು ತಿಳಿದು ಬಂದಿದೆ. ಊದಲು ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಒತ್ತು ನೀಡಲಾಗುವುದು ಎಂದು ತನ್ನ ಯೋಜನೆಯಲ್ಲಿ ಸರ್ಕಾರ ತಿಳಿಸಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಸಜ್ಜೆಯನ್ನು ಸಿರಿಧಾನ್ಯ ಎಂದು ಕರೆದರೂ ಸರ್ಕಾರವು ಈ ಬೆಳೆಯನ್ನು ತನ್ನ ಯೋಜನೆಯಲ್ಲಿ ಸೇರಿಸದಿರುವುದು ವಿಷಾದನೀಯ.
ಸರ್ಕಾರ ತನ್ನ ‘ರೈತ ಸಿರಿ’ ಯೋಜನೆಯಲ್ಲಿ ಸಜ್ಜೆ ಬೆಳೆಯನ್ನು ಸೇರಿಸಿಕೊಳ್ಳಬೇಕು. ಹಾಗೆ ಮಾಡದಿದ್ದಲ್ಲಿ ಹಿಂದಿನ ಅನೇಕ ಬೆಳೆಗಳ ಕಣ್ಮರೆಗೆ ಕಾರಣರಾಗುತ್ತೇವೆ. ಈಗಾಗಲೇ ವರ್ತಮಾನದ ಪೀಳಿಗೆಯ ನಿರ್ಲಕ್ಷ್ಯವು ಈ ಸಜ್ಜೆ ಬೆಳೆಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದೆ. ಮುಂದಿನ ಪೀಳಿಗೆಗಳು ಸಜ್ಜೆ ಮತ್ತು ಸಜ್ಜೆ ಬೆಳೆಯುವುದನ್ನು ವಿಡಿಯೋ, ಫೋಟೋಗಳಲ್ಲಿ ನೋಡ ಬೇಕಾಗಬಹುದು. ಇದನ್ನು ನಾವೆಲ್ಲರೂ ಅರಿತುಕೊಂಡು ಮುಂದೆ ಸಾಗಬೇಕು. ಎಲ್ಲಾ ಬೆಳೆಗಳಿಗೆ ಅಂಟಿದ ಶ್ರೇಷ್ಠ-ಕನಿಷ್ಠ ಎಂಬ ಅಮಲಿನ ರೋಗ ಹೋಗಲಾಡಿಸ ಬೇಕು. ನಮ್ಮ ರೈತ ಬಂಧುಗಳಿಗೆ ಸರ್ಕಾರಗಳು ಅರಿವಿನ ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರತಿ ಹಳ್ಳಿಗಳಿಗೂ ಅದನ್ನು ತಲುಪಿಸಿ ಸಜ್ಜೆ ಬೆಳೆ ಕಣ್ಮರೆಯಾಗದ ಹಾಗೆ ರೈತರನ್ನು ಹುರಿದುಂಬಿಸುವ ಕೆಲಸ ಮಾಡಬೇಕು.

ಮಹೇಶ ಕೇವಂಟಗಿ, ಕುಮಸಿ,
ʼಸಂವಾದʼ ದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ