Tuesday, June 10, 2025

ಸತ್ಯ | ನ್ಯಾಯ |ಧರ್ಮ

ಭಾರತ ಬಹುವಚನದ ಭಾರತ ಏಕವಚನ ಭಾರತ ಅಲ್ಲ – ಬರಗೂರು ರಾಮಚಂದ್ರಪ್ಪ

ಹಾಸನ : ಜಿಲ್ಲೆ ಎಂದರೆ ಕನ್ನಡದ ಪ್ರಥಮ ಶಾಸನ ಹಲ್ಮಿಡಿಯಿಂದ ಇಂದು ಬೂಕರ್ ಪ್ರಶಸ್ತಿವರೆಗೂ ಕೊಡುಗೆ ನೀಡಿರುವ ವಿಶಿಷ್ಟ ಸಾಂಸ್ಕೃತಿಕ ಜಿಲ್ಲೆಯಾಗಿದೆ. ಇಂದು ನಾನು ತುಂಬಾ ಸಂತೋಷದಿಂದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ಸಂಸ್ಕೃತಿ ಚಿಂತಕರು, ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬಾನು ಮುಷ್ತಾಕ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ನಂತರ ಉದ್ದೇಶಿಸಿ ಮಾತನಾಡಿದ ಅವರು, ಸನ್ಮಾನವು ಸಂತೋಷ ಅನುಭವವಾಗಿರಬೇಕು. ಆದರೆ ಸಂತೋಷವನ್ನು ಹುಡುಕಿಕೊಂಡು ಹೋಗುವಂತಹ ಸ್ಥಿತಿ ಇಂದು ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಲ್ಮಿಡಿಯಿಂದ ಬುಕರ್‌ವರೆಗೆ ಹಾಸನ ಜಿಲ್ಲೆ ಎಂದರೆ ಕನ್ನಡದ ಪ್ರಥಮ ಶಾಸನ ಹಲ್ಮಿಡಿಯಿಂದ ಇಂದು ಬೂಕರ್ ಪ್ರಶಸ್ತಿವರೆಗೂ ಕೊಡುಗೆ ನೀಡಿರುವ ವಿಶಿಷ್ಟ ಸಾಂಸ್ಕೃತಿಕ ಜಿಲ್ಲೆಯಾಗಿದೆ. ಇಂದು ನಾನು ತುಂಬಾ ಸಂತೋಷದಿಂದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಅಭಿನಂದಿಸುತ್ತಿದ್ದೇನೆ. 1973ರಲ್ಲಿ ಬಂಡಾಯ ಸಾಹಿತ್ಯ ಕಟ್ಟಿದಾಗ ಅದೇ ಸಾಹಿತ್ಯದಲ್ಲಿ ಬೆಳೆದ ಬಾನು ಅವರು ಬಂಡಾಯ ಸಾಹಿತ್ಯದಿಂದ ಪ್ರೇರಣೆಗೊಂಡು ಬೆಳೆದಿದ್ದನ್ನು ಇಂದು ಪ್ರಶಸ್ತಿ ಸ್ವೀಕರಿಸಿದಾಗ ಎಲ್ಲ ಸಂದರ್ಶನಗಳಲ್ಲೂ ಸ್ಮರಿಸಿಕೊಂಡಿದ್ದಾರೆ. ಪ್ರತಿ ಸಂದರ್ಶನದಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದು ಜನಪರ, ಸಂಘಟನೆ, ಚಳವಳಿ ಸಂದಿರುವ ಗೌರವ ಎಂದರು. ಇಲ್ಲಿ ಇಬ್ಬರೂ ಲೇಖಕಿಯರು ಮುಖ್ಯ. ಮೂಲ ಲೇಖಕರು ಬಹುಮುಖ್ಯ. ಎದೆಯ ಹಣತೆ ಕೃತಿ ಕನ್ನಡಕ್ಕೆ ಹೊಸ ಆಯಾಮ ಒದಗಿಸಿಕೊಟ್ಟಿದ್ದು ಬಹಳ ವಿಶೇಷ. ಇದನ್ನು ಭಾಸ್ತಿ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇಬ್ಬರನ್ನು ಅಭಿನಂದಿಸಲು ಉದ್ದೇಶಿಸಿದ್ದು ಜನಪರ ಮಾದರಿಯಾಗಿದೆ. ಬಾನು ಅವರು ಬದುಕಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅನುಭವ ದ್ರವ್ಯವನ್ನು ಕೊಟ್ಟಿದ್ದಾರೆ. ಅದೇ ಕನ್ನಡದ ಸೊಗಡನ್ನು ದೀಪಾ ಭಾಸ್ತಿಯವರು ಮೂಲ ಲೇಖಕಿಯ ಆಶಯ ಅರಿತು ಭಾಷಾಂತರ ಅಷ್ಟೇ ಅಲ್ಲದೇ ಭಾವಾಂತರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು. ಮುಸ್ಲಿಂ ಸಮುದಾಯದ ಸಂಕಟಗಳನ್ನು ತೆರೆದಿಟ್ಟಿದ್ದಾರೆ. ಅಲ್ಲಿನ ಆಚರಣೆ, ಪದ್ಧತಿ ತೆರೆದಿಟ್ಟರೂ ಅದು ಅಂತಿಮವಾಗಿ ಎಲ್ಲ ಸಮುದಾಯದ ಮಹಿಳೆಯರ ಸಂಕಟಗಳನ್ನು ಅನಾವರಣಗೊಳಿಸಿದ್ದಾರೆ. ಪರ ವಿಚಾರವನ್ನು, ಪರ ಧರ್ಮವನ್ನು ಸಹಿಸುವ ಗುಣ ನಮ್ಮಲ್ಲಿ ಬರಲಿ. ಬಾನು ಅವರಿಗೆ ಲಂಡನ್‌ನಲ್ಲಿ ಪತ್ರಕರ್ತರೊಬ್ಬರು `ಭಾರತದಲ್ಲಿ ಮುಸ್ಲಿಮರು ಬದುಕುವುದು ಕಷ್ಟವಾಗಿದೆ, ನಿಮಗೆ ಬದುಕಲು ಬೇರೆ ದೇಶದ ಅವಶ್ಯಕತೆ ಇದೆಯಾ? ಎಂದು ಪ್ರಶ್ನೆ ಕೇಳಿದಾಗ ಎಲ್ಲ ದೇಶದಲ್ಲೂ ಸಮಸ್ಯೆಗಳಿವೆ. ನನ್ನ ದೇಶದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಉತ್ತರಿಸುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ ಎಂದು ಹೇಳಿದರು.


ಹಿರಿಯ ಸಾಹಿತಿ ಎಚ್.ಎಸ್. ಅನುಪಮಾ ಅಭಿನಂದನಾ ನುಡಿಗಳಲ್ಲಿ ಮಾತನಾಡಿ, ಕಳೆದ ವರ್ಷ ಜಿಲ್ಲೆಗೆ ಕವಿದಿದ್ದ ಕರಾಳ ಕತ್ತಲಿಗೆ ಬಾನು ಮುಷ್ತಾಕ್ ಅವರು ಹಚ್ಚಿದ ಎದೆಯ ಹಣತೆಯಿಂದ ಕತ್ತಲು ಕರಗಿ ಜಿಲ್ಲೆ ಪ್ರಕಾಶಿಸುತ್ತಿದೆ. ಬಾನು ಮುಷ್ತಾಕ್ ನಿರ್ವಾತದಿಂದ ಬಂದವರಲ್ಲ, ಕುಟುಂಬ, ಸಮುದಾಯ, ಒತ್ತಡ, ದುಗುಡು, ಚಳವಳಿ, ಪ್ರಕೃತಿಯಿಂದ ಬಂದವರು. ಇಂದು ಅಕ್ಷರಕ್ಕೆ ಸಿಕ್ಕ ಬಹುದೊಡ್ಡ ಗೌರವವನ್ನು ಸಂಭ್ರಮಿಸುವ ಸುವರ್ಣ ಕ್ಷಣ ನಮ್ಮದಾಗಿದೆ. ಒಳ್ಳೆಯದು ಎಲ್ಲವನ್ನೂ ಸ್ವೀಕರಿಸುವ ಗುಣ ಎಲ್ಲರಲ್ಲೂ ಬೆಳೆಯಬೇಕು ಎಂಬುದನ್ನು ನಮ್ಮ ಉಪನಿಷತ್‌ಗಳು ಹೇಳಿವೆ. ಬುಕರ್ ಪ್ರಶಸ್ತಿಯ ಆಶಯ ಮತ್ತು ಸಂಕೇತ ಕೂಡ ಅದೆ. ಉರ್ದು ಮಾತೃಭಾಷೆಯ ಲೇಖಕಿ ಕನ್ನಡದಲ್ಲಿ ಬರೆದು ಅದು ಇಂಗ್ಲಿಷ್‌ಗೆ ಅನುವಾದಗೊಂಡು ಗಡಿಯನ್ನು ದಾಟಿ ಈ ಗೌರವ ಭಾಜನವಾಗಿರುವುದೇ ಬಾನು ಮುಷ್ತಾಕ್ ಬರವಣಿಗೆಯ ಶಕ್ತಿ ಎಂದರು. ಇಂದಿನ ಕಾಲ ತುಂಬಾ ಸಂಕೀರ್ಣವಾಗಿದೆ. ಒಂದು ಭಾರತದಲ್ಲಿ ಹಲವು ಭಾರತ, ಒಂದು ಹಾಸನದಲ್ಲಿ ಹಲವು ಹಾಸನಗಳು, ಬಹು ಸಾಂಸ್ಕೃತಿಗಳ ಭಾರತ. ಇಂದು ಸಮಾಜದಲ್ಲಿ ಅಂಚಿಗೆ ಸರಿಸಲ್ಪಟ್ಟ ಹಲವು ಸಮುದಾಯಗಳಿವೆ. ಇದು ಇಲ್ಲಿ ಅಂತ ಮಾತ್ರವಲ್ಲ. ಇಡೀ ವಿಶ್ವದಲ್ಲಿಯೇ ಒಂದು ಸಮುದಾಯದ ವಿರುದ್ಧವಾಗಿ ಸುಳ್ಳು ಸುದ್ದಿ ಹಬ್ಬಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.


ಮಹಿಳೆಯರು ಬಿಕ್ಕಟ್ಟಿಗೆ ಹೆದರಿದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಎಂತಹ ವಿಷಮ ಕಾಲದಲ್ಲೂ ಸುಮ್ಮನಾಗದೆ ಬೆಳೆದ ಜೀವ ಬಾನು ಮುಷ್ತಾಕ್. ದೇಹಕ್ಕೆ ಆದ ಗಾಯ ಮಾಯುತ್ತದೆ. ಆದರೆ ಕಣ್ಣಿಗೆ ಆದ ಗಾಯ ಮಾಯುವುದು ಹೇಗೆ ? ಇದು ತಲೆಮಾರಿನಿಂದ ತಲೆಮಾರಿಗೆ ಬೆಳೆದು ಬರುತ್ತದೆ. ಇಂತಹ ನೋವು, ಸಂಕಟಗಳನ್ನು ಕಣ್ಣಾರೆ ಕಂಡ ಬಾನು ಮುಷ್ತಾಕ್ ತಮ್ಮ ತುಮುಲಗಳನ್ನು ಕತೆಗಳ ಮೂಲಕ ಹೊರಹಾಕಿದರು. ಅಲ್ಲಿ ಮಹಿಳೆಯರ ನೋವುಗಳಿವೆ, ತಾವು ಕಂಡುಂಡ ಕಷ್ಟಗಳ ಸರಮಾಲೆಯ ಅನಾವರಣ ಮಾಡಿದ್ದಾರೆ. ಅಮಾನವೀಯ ಸ್ಥಿತಿಯಲ್ಲಿ ಇದ್ದವರು ಮಾತ್ರ ಕತೆ ಹೇಳುತ್ತಾರೆ ಹೊರತು ವಿರಾಮದಲ್ಲಿ ಇದ್ದವರು ಹೇಳುವುದಿಲ್ಲ. ತನ್ನ ಅನುಭವವನ್ನು ಅಭಿವ್ಯಕ್ತಪಡಿಸಲು, ನಮ್ಮೊಳಗಿನ ಬೆಂಕಿಯನ್ನು ಬರೆದು ದಹಿಸಿಕೊಳ್ಳುಲು, ಒತ್ತಡ, ಆಕ್ರೋಶ ಹೊರಹಾಕಲು ಹಾಗೂ ಬದುಕಲು ಬರೆಯಬೇಕಾಗಿದೆ. ಇದನ್ನೇ ಬಾನು ಮುಷ್ತಾಕ್ ಅವರು ಕತೆಗಳ ರೂಪದಲ್ಲಿ ಹೊರಹಾಕಿದ್ದಾರೆ ಎಂದು ಹೇಳಿದರು. ಬಾನು ಮುಷ್ತಾಕ್ ಅವರ ಹಸೀನಾ ಕಥಾ ಸಂಕಲನದಲ್ಲಿ 47 ಕತೆಗಳಿವೆ. ಅಷ್ಟು ಕತೆಗಳನ್ನು ಕಾದಂಬರಿಗಳನ್ನಾಗಿ ಬರೆಯಬಹುದಿತ್ತು. ಅಷ್ಟೊಂದು ಗಂಭೀರ ವಿಷಯಗಳನ್ನು ಅವರು ಕತೆಯಲ್ಲಿ ಹುದುಗಿಸಿ ಇಟ್ಟಿದ್ದಾರೆ. ಅಕಾಡೆಮಿಕ್ ವಲಯ ಬಾನು ಅವರ ಕತೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಚಳವಳಿಯಲ್ಲಿ ನಮ್ಮಂಥ ಲೇಖಕರನ್ನು ಗುರುತಿಸುವಿಕೆ ಆಗುತ್ತಿಲ್ಲ. ಬುಕರ್ ಮುಖಾಂತರ ಈ ಪ್ರವೃತ್ತಿ ಬದಲಾಗಲಿ. ಶಾಲೆ ಪಠ್ಯಗಳಲ್ಲಿ ಬಾನು ಮುಷ್ತಾಕ್ ಅವರ ಕತೆಗಳನ್ನು ಸೇರಿಸಲಿ. ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕತೆಗಳ ಮೂಲಕ ಹೆಣ್ಣಿನ ನೋವುಗಳು ಅರ್ಥವಾಗಲಿ ಎಂದು ಅಭಿಪ್ರಾಯಪಟ್ಟರು.


ಜಿಲ್ಲಾ ನಾಗರಿಕರಿಂದ ಸನ್ಮಾನ ಸ್ವೀಕರಿಸಿದ ಬಾನುಮುಷ್ತಾಕ್ ಉದ್ದೇಶಿಸಿ ಮಾತನಾಡಿ, ಎಲ್ಲಾ ಕೆಲಸ ಕಾರ್ಯಗಳನ್ನ ಬದಿಗಿಟ್ಟು ಇದೊಂದು ಸಂತೋಷ ಮತ್ತು ಸಂಭ್ರಮಾಚರಣೆಯಲ್ಲಿ ಭಾಗವಹಿಸಿರುವುದಕ್ಕೆ ಇಲ್ಲಿ ಏನು ಬಂದಿದ್ದೀರಿ ನಿಮಗೆಲ್ಲಾ ನಾನು ಅತ್ಯಂತ ವಿನಯಪೂರ್ಣವಾಗಿ ವಿನಿತರಾಗಿ ಮೊದಲಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನೀವೆಲ್ಲರೂ ಕೂಡ ಈ ಹಿಂದೆ ಒಂದು ಸಾರಿ ಹಸಿನಾ ಚಲನಚಿತ್ರಕ್ಕೆ ಮೂರು ರಾಷ್ಟç ಪ್ರಶಸ್ತಿಗಳು ಬಂದಿದ್ದಾಗ ಇದೇ ಬಹಳ ಅದ್ಭುತವಾದ ಕಾರ್ಯಕ್ರಮದಲ್ಲಿ ಮೊದಲನೇ ಗೌರವ ಮನೆ ಮಗಳಿಗೆ ಅಂತ ಹೇಳಿ ನನ್ನನ್ನು ಗೌರವಸಿದ್ದೀರಿ, ಈಗ ಬೂಕರ್ ಪ್ರಶಸ್ತಿ ಬಂದಾಗಲೂ ಸನ್ಮಾನಿಸಲಾಗುತ್ತಿದೆ ಎಂದರು. ನನ್ನ ಬರಹ ನಿಮ್ಮ ಮನಸನ್ನು ಕದಡಿದ್ದರೇ ಅದು ನಿಜವಾಗಲು ನನ್ನ ಬರವಣಿಗೆ ಉದ್ದೇಶ ಸಫಲವಾಯಿತು ಎಂದರ್ಥ. ಬೂಕರ್ ಪ್ರಶಸ್ತಿ ಬಗೆ ತಿಳಿದ ಮೇಲೆ ಫಲ ಬಿಡುತ್ತಿದ್ದು, ಅದರ ಶ್ರೇಯಸ್ ಎಲ್ಲಾ ನಿಮಗೆ ಸಿಗಬೇಕು ಎಂದು ಹೇಳಿದರು. ನಾವು ಎಲ್ಲಾರು ನಮ್ಮ ಜವಬ್ಧಾರಿ ನಿಬಾಯಿಸಬೇಕು. ನಮ್ಮ ಮನಸ್ಸಗಳನ್ನು ಮತ್ತೆ ಗಟ್ಟಿಗಳಿಸಿ ಸೌಹಾರ್ಧಿತವಾದಂತಹ ಬದುಕಿನ ಜೊತೆ ಬಾಳೋಣ ಎಂದು ಕರೆ ನೀಡಿದರು.


ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಬೂಕರ್ ಪ್ರಶಸ್ತಿ ನಮ್ಮ ಜಿಲ್ಲೆಗೆ ಅದರಲ್ಲೂ ನಮ್ಮ ಬಾನು ಮುಷ್ತಾಕ್ ಅವರಿಗೆ ಸಿಕ್ಕಿರುವುದು ಎಂದು ಮರೆಯಲಾಗದ ದಿನ ಎಂದು ಹೇಳಬಹುದು. ಇಡೀ ಪ್ರಪಂಚವು ಬೂಕರ್ ಪ್ರಶಸ್ತಿಯತ್ತ ತಿರುಗಿ ನೋಡಿದೆ. ವಿಶ್ವದ ಹೆಮ್ಮೆಯ ಹೋರಾಟಗಾರರು, ಸಾಹಿತಿಗಳು, ನಗರಸಭೆ ಸದಸ್ಯರು ಕೂಡ ಆಗಿದ್ದರು. ಅವರ ಒಂದು ಕಥೆ ಓದಿದ್ದು, ಮುಂದೆ ಎಲ್ಲಾ ಪುಸ್ತಕಗಳನ್ನು ಓದಲಾಗುವುದು. ಆಗೇ ಎಲ್ಲಾರು ಇವರ ಪುಸ್ತಕ ಓದುವಂತೆ ಕೋರಿದರು. ಜಿಲ್ಲಾಡಳಿತದಿಂದ ಮುಂದೆ ಪೌರ ಸನ್ಮಾನ ಮಾಡಲಾಗುವುದು ಎಂದರು. ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಎದೆ ಅಳತೆ ಕೃತಿಯನ್ನು ಬಾನು ಮುಷ್ತಾಕ್ ಅವರು ಬರೆದಿದ್ದು, 1983 ರಲ್ಲಿ ನಮ್ಮ ತಂದೆ ದಿವಂಗತ ಹೆಚ್.ಎಸ್. ಪ್ರಕಾಶ್ ಜೊತೆಗೆ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡಿದ್ದರು. ನಮ್ಮ ಕುಟುಂಬಕ್ಕೆ ಸಹಕಾರ ಮಾಡಿದ್ದು, ಅವರೊಂದಿಗೆ ವೈಯಕ್ತಿಕವಾಗಿ ಬಹಳ ಒಳ್ಳೆಯ ಒಡನಾಟವನ್ನು ಹೊಂದಿದ್ದೇನೆ ಎಂದರು. ಹಾಗೂ ಈ ಬೂಕರ್ ಪ್ರಶಸ್ತಿ ನಮ್ಮ ಹಾಸನದವರಿಗೆ ಬಂದಿರುವುದು ಬಹಳ ಹೆಮ್ಮೆಯ ವಿಷಯವೆಂದು ಸಂತೋಷ ವ್ಯಕ್ತಪಡಿಸಿದರು.


ಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ, ಸಾಹಿತಿಗಳು ಹೇಳಿದ ಮಾತುಗಳು ಅರ್ಥಪೂರ್ಣವಾಗಿದ್ದು, ಕನ್ನಡ ಸಾಹಿತ್ಯಕ್ಕೆ, ಹಾಸನ ಜಿಲ್ಲೆಯ ನಾಗರಿಕರಿಗೂ ಕರ್ನಾಟಕ ಹಾಗೂ ಭಾರತದವರೆಲ್ಲಾ ಹೆಮ್ಮೆ ಪಡುವ ವಿಷಯ ಇದಾಗಿದೆ. ಈತರ ಅನುವಾದ ಸರಿಯಾಗಿ ಆದರೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದರೇ ಈ ಕನ್ನಡ ಭಾಷೆಗೆ ಮಹತ್ವ ಬರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಬಾನು ಮುಷ್ತಾಕ್ ಅವರಿಗೆ ಉಸ್ತುವಾರಿ ಸಚಿವರ ಸಮುಖದಲ್ಲಿ ಗೌರವವನ್ನು ಸಲ್ಲಿಸಲಾಗುವುದು ಎಂದು ಹೇಳಿದರು. ಮಹಾನಗರ ಪಾಲಿಕೆಯ ಅಧ್ಯಕ್ಷ ಎಂ. ಚಂದ್ರೇಗೌಡ ಅವರು ಮಾತನಾಡಿ, ಹೋರಾಟಗಾರ್ತಿ, ಸಾಹಿತಿ, ಪತ್ರಕರ್ತರಾಗಿ ಅವರನ್ನು ಎಂದಿಗೂ ಮರೆಯುವಾಗಿಲ್ಲ. ಬಾನು ಅವರು ಬಿದಿರಿನ ಹಾಗೆ ತಮ್ಮ ಜೀವನವನ್ನು ಹಂತ ಹಂತವಾಗಿ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಸಂದ ಈ ಪ್ರಶಸ್ತಿಯು ಬಹಳ ಅರ್ಥಪೂರ್ಣವಾಗಿದ್ದು, ಅವರ ಬಗ್ಗೆ ಹೆಮ್ಮೆಯಿದೆ. ಸಾಹಿತಿಗಳಿಂದ ನಾವು ಕಲಿಯುವುದು ಬಹಳಷ್ಟು ಇದೆ ಎಂದು ಹೇಳಿದರು.


ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಬಿ.ಆರ್. ಪೂರ್ಣಿಮ ಅವರು ಮಾತನಾಡಿ, ಬಾನುಮುಷ್ತಾಕ್ ಅವರ ಈ ಸಾಧನೆ ಎಲ್ಲಾರಿಗೆ ಮಾರ್ಗದರ್ಶನವಾಗಬೇಕು. ಎದೆಯ ಹಣತೆ ಕಥಾ ಸಂಕಲನವನ್ನು ನಾವೆಲ್ಲರೂ ಒದಿದರೆ ಅದೇ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, ಏನಾದರು ಹೊಸತನ ಕೊಡುವ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಾನುಮುಷ್ತಾಕ್ ಅವರ ಎದೆಯ ಹಣತೆ ಕಥಾ ಸಂಕಲನವನ್ನು ನಾವು ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಅಳವಡಿಸಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. ಬೂಕರ್ ಪ್ರಶಸ್ತಿ ವಿಜೇತರಾದ ಬಾನುಮುಷ್ತಾಕ್ ಅವರನ್ನು ಸನ್ಮಾನಿಸಲು ವಿವಿಧ ಸಂಘ ಸಂಸ್ಥೆಯ ನಾಗರಿಕರು ಮುಗಿ ಬಿದ್ದರು. ಎದೆಯ ಹಣತೆ ಪುಸ್ತಕವನ್ನು ಖರೀದಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಕಲಾಭವನದ ಹೊರಭಾಗದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್ ಗೌಡ, ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್, ತೋಫಿಕ್ ಅಹಮದ್, ನಾರಾಯಣದಾಸ್, ಧರ್ಮೇಶ್, ರಾಜು ಗೊರೂರು, ಎಂ.ಜಿ. ಪೃಥ್ವಿ, ರಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ವಿಜಯಕುಮಾರ್, ಹೆಚ್.ಕೆ. ಸಂದೇಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page