ನವದೆಹಲಿ: ಇನ್ನೇನು ಫಲಿತಾಂಶದ ನಿರೀಕ್ಷೆಯಲ್ಲಿರುವ ಲೋಕಸಭಾ ಚುನಾವಣೆಯು ಈ ಸಲ ನಿರ್ಣಾಯಕ ಜನಾಭಿಪ್ರಾಯ ಪಡೆಯಲಿದೆ. ಇಂಡಿಯಾ ಕೂಟ ಆಧಿಕಾರ ಹಿಡಿಯಲಿದ್ದು, 48 ಗಂಟೆಯಲ್ಲಿ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟವು ಸರಳ ಬಹುಮತಕ್ಕೆ ಅಗತ್ಯ ಇರುವ 272ಕ್ಕಿಂತ ಅಧಿಕ ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಇಂಡಿಯಾ ಒಕ್ಕೂಟದ ಪಕ್ಷದ ಪರವಾಗಿ ಜನಾಭಿಪ್ರಾಯ ಇರಲಿದೆ. ಎನ್ಡಿಎ ಮೈತ್ರಿಕೂಟದ ಕೆಲವೊಂದು ಪಕ್ಷಗಳು ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಪರ್ಕದಲ್ಲಿವೆ. ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
‘2004ರಲ್ಲಿ ಬಿಜೆಪಿ ಭಾರತ ಪ್ರಕಾಶಿಸಲಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿತು. ಆಗ ಕಾಂಗ್ರೆಸ್ ಗೆಲುವು ಸಾಧಿಸಿ ಮೈತ್ರಿ ಸರ್ಕಾರ ರಚಿಸಿತ್ತು. 2024ರಲ್ಲಿ ಅದೇ ಪುನರಾವರ್ತನೆಯಾಗಲಿದೆ. ರಾಜಸ್ಥಾನ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಸೀಟುಗಳಿಕೆ ಹೆಚ್ಚಳವಾಗಲಿದೆ. ಛತ್ತೀಸಗಢ, ಮಧ್ಯಪ್ರದೇಶ ಹಾಗೂ ಅಸ್ಸಾಂನಲ್ಲೂ ನಮಗೆ ಹೆಚ್ಚು ಸೀಟುಗಳು ಲಭಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಸೀಟು ಗಳಿಕೆ ಹೆಚ್ಚಳವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಬಿಜೆಪಿ 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ. ಪಶ್ಚಿಮ ಬಂಗಾಳದಲ್ಲೂ ಅವರ ಗಳಿಕೆ ಕಡಿಮೆಯಾಗಲಿದೆ ಎಂದರು.