Saturday, June 21, 2025

ಸತ್ಯ | ನ್ಯಾಯ |ಧರ್ಮ

2003 ವಿಶ್ವಕಪ್‌ ಸೋಲಿನ ಸೇಡು ತೀರಿಸಿಕೊಳ್ಳುವುದೇ ಭಾರತ?

ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಇದೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈಗ ಇತಿಹಾಸ ಮರುಕಳಿಸಿದೆ. ಭಾರತ ತಂಡ ವಿಶ್ವಕಪ್ ಎತ್ತಿಹಿಡಿಯಲು ಬೇಕಿರುವುದು ಇನ್ನೊಂದೇ ಗೆಲುವು. ಅದಕ್ಕೆ ಅಡ್ಡವಾಗಿ ನಿಂತಿರುವುದು ಆಸ್ಟ್ರೇಲಿಯಾ. 2003ರ ವಿಶ್ವಕಪ್ ಫೈನಲ್ ನಲ್ಲಿ ಇದೇ ಆಸ್ಟ್ರೇಲಿಯಾ ಭಾರತ ತಂಡವನ್ನು ಅಧಿಕಾರಯುತವಾಗಿ ಸದೆಬಡಿದು ಕಪ್ ಮುಡಿಗೇರಿಸಿಕೊಂಡಿತ್ತು. ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎದೆಬಡಿತವೇ ನಿಂತುಹೋದಂತಾಗಿತ್ತು. ಈ ಸೋಲಿನ ಸೇಡನ್ನು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತೀರಿಸಿಕೊಳ್ಳಲಿದೆಯೇ?

2003ರ ಮಾರ್ಚ್ 23ರಂದು ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಂದೆ ಬೆಟ್ಟದಂಥ ಸವಾಲನ್ನು ಒಡ್ಡಿತ್ತು ಆಸ್ಟ್ರೇಲಿಯಾ. ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧಾರ ಮಾಡಿದ ನಾಯಕ ಸೌರವ್ ಗಂಗೂಲಿಯ ನಿರ್ಧಾರ ದುಬಾರಿಯಾಯಿತು. ಆರಂಭಿಕ ಆಟಗಾರರಾದ ಆಡಂ ಗಿಲ್ ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್ ಭಾರತೀಯ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಗಿಲ್ ಕ್ರಿಸ್ಟ್ 57 ರನ್ ಗಳಿಸಿ ಔಟಾದರೆ, ಹೇಡನ್ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಕಿ ಪಾಂಟಿಂಗ್ ಭಾರತದ ಪಾಲಿಗೆ ಬಿರುಗಾಳಿಯಾದರು. 121 ಎಸೆತಗಳಲ್ಲಿ 140 ರನ್ ಚೆಚ್ಚಿದ ರಿಕಿ ಪಾಂಟಿಂಗ್ ಅಂದು ಎಂಟು ಸಿಕ್ಸರ್ ಗಳನ್ನು ಸಿಡಿಸಿದ್ದರು. ಅವರ ಜೊತೆಗೆ ಡೇಮಿಯನ್ ಮಾರ್ಟಿನ್ 88 ರನ್ ಗಳಿಸಿ ಗಾಯದ ಮೇಲೆ ಬರೆ ಎಳೆದರು. ಜಾವಗಲ್ ಶ್ರೀನಾಥ್, ಜಹೀರ್ ಖಾನ್ ರಂಥ ಪ್ರತಿಭಾವಂತ ಬೌಲರ್ ಗಳಿಂದ ಈ ರನ್ ಪ್ರವಾಹ ತಡೆಯಲು ಆಗಲೇ ಇಲ್ಲ. ಆಸ್ಟ್ರೇಲಿಯಾ ಭಾರತಕ್ಕೆ ನೀಡಿದ ಟಾರ್ಗೆಟ್ 360 ರನ್! ಈಗಿನಂತೆ ಎರಡು ಚೆಂಡುಗಳು ಬಳಕೆಯಲ್ಲಿ ಇಲ್ಲದ, ಈಗಿನಂತೆ ಎರಡು ಪವರ್ ಪ್ಲೇ ಇಲ್ಲದ ಕಾಲದಲ್ಲಿ ಅಷ್ಟು ರನ್ ಗಳನ್ನು ಚೇಸ್ ಮಾಡುವುದು ಬಹುತೇಕ ಅಸಾಧ್ಯದ ಮಾತಾಗಿತ್ತು.

ಭಾರತ ಬ್ಯಾಟಿಂಗ್ ಆರಂಭಿಸಿದಾಗ ಎಲ್ಲರ ಚಿತ್ತ ಇದ್ದಿದ್ದು ಸಚಿನ್ ತೆಂಡೂಲ್ಕರ್ ಅವರ ಮೇಲೆ. ಇಷ್ಟು ದೊಡ್ಡ ಟಾರ್ಗೆಟ್ ದಾಟಬೇಕು ಎಂದರೆ ಸಚಿನ್ ಆಡಲೇಬೇಕಿತ್ತು. ಆದರೆ ರನ್ ರೇಟ್ ಹೆಚ್ಚಿಸುವ ಧಾವಂತದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕೆಟ್ಟ ಹೊಡೆತಗಳಿಗೆ ಕೈಹಾಕಿ ಔಟಾದರು. ಆ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು ಹನ್ನೊಂದು ಪಂದ್ಯಗಳಿಂದ ಸಚಿನ್ ಕಲೆಹಾಕಿದ್ದು 673 ರನ್ ಗಳು! ಈ ಬಾರಿಯ ವಿಶ್ವಕಪ್ ನಲ್ಲಿ ಬುಧವಾರ ನಡೆದ ಸೆಮಿಫೈನಲ್ ನಲ್ಲಿ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮುರಿಯುವವರೆಗೆ ಒಂದು ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ಅವರದಾಗಿತ್ತು. ಆದರೆ ಫೈನಲ್ ನಲ್ಲಿ ಸಚಿನ್ ಬ್ಯಾಟು ಮಾತಾಡಲಿಲ್ಲ. ಭಾರತದ ಸೋಲು ಆಗಲೇ ಬರೆದಿಟ್ಟಂತಾಗಿತ್ತು. ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೆ ವೀರೇಂದ್ರ ಸೆಹವಾಗ್ ಒಂದಷ್ಟು ಹೋರಾಟ ನಡೆಸುತ್ತಲೇ ಇದ್ದರು. ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದಾಗ ಸೆಹ್ವಾಗ್ 81 ಎಸೆತಗಳಲ್ಲಿ 88 ರನ್ ಗಳಿಸಿದ್ದರು. ಅಲ್ಲಿಗೆ ಭಾರತದ ಹೋರಾಟವೂ ಮುಗಿದುಹೋಗಿತ್ತು. 39.2 ಓವರ್ ಗಳಲ್ಲಿ ಭಾರತ ತಂಡ ಗಳಿಸಲು ಸಾಧ್ಯವಾಗಿದ್ದು ಕೇವಲ 234 ರನ್ ಮಾತ್ರ. ಭಾರತ ಗೆದ್ದೇಗೆಲ್ಲುತ್ತದೆ ಎಂದು ನಂಬಿಕೆಯಿಟ್ಟಿದ್ದ ಭಾರತದ ಅಭಿಮಾನಿಗಳು ಜೋಹನ್ಸ್ ಬರ್ಗ್ ನ ವಾಂಡರೆರ್ಸ್ ಕ್ರೀಡಾಂಗಣದಿಂದ ಕಣ್ಣೀರಿಡುತ್ತ ಹೋಗಿದ್ದರು. ಆಸ್ಟ್ರೇಲಿಯಾ ಎರಡನೇ ಬಾರಿ ವಿಶ್ವಕಪ್ ಗೆದ್ದು ಬೀಗಿತ್ತು.

ವಿಶ್ವಕಪ್ ಇತಿಹಾಸ ಗಮನಿಸಿದರೆ ಆಸ್ಟ್ರೇಲಿಯಾದ ಗೆಲುವಿನ ದಾಹಕ್ಕೆ ಸಾಟಿಯೇ ಇಲ್ಲ. 1999 ರಲ್ಲೂ ಕಪ್ ಗೆದ್ದಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತಿನಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿಕೊಂಡಿತು. ಆನಂತರ 2007 ರಲ್ಲಿ ಮತ್ತು 2015ರಲ್ಲಿ ಮತ್ತೆ ಕಪ್ ಗೆದ್ದು ಒಟ್ಟು ಐದುಬಾರಿ ವಿಶ್ವಕಪ್ ಗೆದ್ದ ಖ್ಯಾತಿಯನ್ನು ಹೊಂದಿದೆ. ಭಾರತ 2011ರ ವಿಶ್ವಕಪ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಗೆದ್ದು ಎರಡನೇ ಬಾರಿ ವಿಶ್ವಕಪ್ ತನ್ನದಾಗಿಸಿಕೊಂಡಿತು. ಈಗ ಮೂರನೇ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿ ಭಾರತ ತಂಡವಿದೆ. ಲೀಗ್ ಹಂತದಲ್ಲಿ ಎಲ್ಲ ಒಂಭತ್ತು ಪಂದ್ಯಗಳನ್ನು ಲೀಲಾಜಾಲವಾಗಿ ಗೆದ್ದ ಭಾರತ ಸೆಮಿಫೈನಲ್ ನಲ್ಲೂ ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಫೈನಲ್ ಗೇರಿದೆ. ಲೀಗ್ ಹಂತದಲ್ಲಿ ಮೊದಲ ಎರಡು ಪಂದ್ಯಗಳನ್ನು ಸೋತರೂ ನಂತರ ಗೆಲುವಿನ ಹಳಿ ಹಿಡಿದು ಸಾಗಿರುವ ಆಸ್ಟ್ರೇಲಿಯಾ ಭಾನುವಾರ ಪ್ರಬಲ ಪೈಪೋಟಿ ನೀಡಲಿರುವುದಂತೂ ನಿಶ್ಚಿತ.

ಹಾಗೆ ನೋಡಿದರೆ ಈಗ ಭಾರತ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಒದಗಿಬಂದಿದೆ. ಅಂದು ಆಡಿದ ಯಾವ ಆಟಗಾರರೂ ಉಭಯ ತಂಡಗಳಲ್ಲಿ ಇಲ್ಲ. ಎರಡೂ ಹೊಸಬಗೆಯ ತಂಡಗಳು. ಕಾಗದದ ಮೇಲೆ ಆಸ್ಟ್ರೇಲಿಯಾಗಿಂತ ಭಾರತವೇ ಬಲಶಾಲಿ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಇಡೀ ತಂಡದಲ್ಲಿ ಹಿಂದೆಂದೂ ಕಾಣದಂಥ ಒಗ್ಗಟ್ಟು, ಉತ್ಸಾಹ ಕಂಡುಬರುತ್ತಿದೆ. ಭಾರತದ ಬೌಲಿಂಗ್ ಪಡೆ ಈ ಎದುರಾಳಿಗಳಲ್ಲಿ ಎದೆನಡುಕ ಹುಟ್ಟಿಸುತ್ತಿದೆ. ಮಹಮದ್ ಶಮಿ, ಜಸ್ಪೀತ್ ಬೂಮ್ರಾ ಅವರ ಚೆಂಡುಗಳನ್ನು ಎದುರಿಸುವುದು ಯಾವುದೇ ಬ್ಯಾಟ್ಸ್ಮನ್ ಗೆ ಅಷ್ಟು ಸುಲಭವಲ್ಲ. ಮಹಮದ್ ಸಿರಾಜ್ ಯಾವಾಗ ಸಿಡಿಯುತ್ತಾರೋ ಹೇಳಲು ಬಾರದು. ಇನ್ನು ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಸ್ಪಿನ್ ಜೋಡಿ ಅದ್ಭುತ ಲಯದಲ್ಲಿದೆ.

ಭಾರತದ ಬ್ಯಾಟಿಂಗ್ ಪಡೆ ಹಿಂದೆಂದಿಗಿಂತಲೂ ಬಲಶಾಲಿಯಾಗಿದೆ. ರೋಹಿತ್ ಶರ್ಮಾ ಆಡುತ್ತಿರುವ ರೀತಿಯನ್ನು ಗಮನಿಸಿದರೆ ಅವರೇನಾದರೂ ಐವತ್ತು ಓವರ್ ಬ್ಯಾಟ್ ಮಾಡಿದರೆ ತ್ರಿಶತಕ ಹೊಡೆದರೂ ಆಶ್ಚರ್ಯಪಡಬೇಕಿಲ್ಲ. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಧೈರ್ಯವನ್ನು ಮೆಚ್ಚಲೇಬೇಕು. ಎಂಥ ಬೌಲರ್ ಬಂದರೂ ನಾವು ನಮ್ಮ ಬೌಂಡರಿ ಸಿಕ್ಸರ್ ಹೊಡೆದೇ ಹೊಡೆಯುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಬ್ಯಾಟ್ ಬೀಸುತ್ತಾರೆ. ಇವರೆಲ್ಲರ ನಡುವೆ ಭಾರತ ಬ್ಯಾಟಿಂಗ್ ಆಧಾರಸ್ಥಂಭವಾಗಿರುವುದು ವಿರಾಟ್ ಕೊಹ್ಲಿ. ಅವರನ್ನು ಔಟ್ ಮಾಡುವುದು ಅಷ್ಟು ಸುಲಭವಲ್ಲ. ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50 ಶತಕ ಹೊಡೆದಿರುವ ಕೊಹ್ಲಿ ಫೈನಲ್ ನಲ್ಲೂ ಅಬ್ಬರಿಸಿದರೆ ಭಾರತದ ದಾರಿ ಸಲೀಸಾಗುತ್ತದೆ. ಇನ್ನು ಪಾರ್ಟ್ ಟೈಂ ವಿಕೆಟ್ ಕೀಪರ್ ಆಗಿ ಬಂದ ಕೆ.ಎಲ್. ರಾಹುಲ್ ಈಗ ಪರಿಪೂರ್ಣ ವಿಕೆಟ್ ಕೀಪರ್ ಆಗಿದ್ದಾರೆ. ಜಗತ್ತಿನ ಇನ್ಯಾವುದೇ ವಿಕೆಟ್ ಕೀಪರ್ ಗೂ ಸ್ಪರ್ಧೆ ನೀಡುವಷ್ಟು ಅವರು ಬೆಳೆದು ನಿಂತಿದ್ದಾರೆ. ಬ್ಯಾಟಿಂಗ್ ಗೆ ನಿಂತರೆ ಅವರ ಬ್ಯಾಟಿಂದ ರನ್ ಪ್ರವಾಹ ಹರಿಯುತ್ತದೆ.

ಒಂದು ವಿಶೇಷವೆಂದರೆ ಭಾರತದ ಹನ್ನೊಂದು ಮಂದಿ ಆಟಗಾರರೂ ಅದ್ಭುತ ಲಯದಲ್ಲಿದ್ದಾರೆ. ಹೇಳಿಕೇಳಿ ತಂಡದ ಕೋಚ್ ಆಗಿರುವವರು ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್. ಅವರ ಅಪಾರ ಅನುಭವವನ್ನು ಇಡೀ ತಂಡಕ್ಕೆ ಧಾರೆಯೆರೆಯುತ್ತಿದ್ದಾರೆ. ಹತ್ತು ಪಂದ್ಯಗಳಲ್ಲಿ ಭಾರತ ಆಟಗಾರರು ಏನನ್ನು ಮಾಡಿದರೋ ಅದನ್ನೇ ಹನ್ನೊಂದನೇ ಪಂದ್ಯದಲ್ಲೂ ಮಾಡಿದರೆ ಸಾಕು ವಿಶ್ವಕಪ್ ಈ ಬಾರಿ ಭಾರತಕ್ಕೆ ಸೇರುತ್ತದೆ. 2003ರಲ್ಲಿ ಆದ ಗಾಯವನ್ನು 2023ರಲ್ಲಿ ಮರೆಸುವುದೇ ಭಾರತ ತಂಡ? ಕಾದುನೋಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page