ಕರ್ನಾಟಕದ ರೈತರಿಗೆ ದಿನಕ್ಕೊಂದು ಬಗೆಯಲ್ಲಿ ಕಿರುಕುಳ ನೀಡುತ್ತಿರುವ ರಾಜ್ಯ ಸರಕಾರ ಈಗ ಗೋಣಿ ಚೀಲವಿಲ್ಲ ಎನ್ನುವ ಕಾರಣ ನೀಡಿ ಕೊಬ್ಬರಿ ಮಾರಲು ಬಂದ ರೈತರನ್ನು ಬರಿಗೈಯಲ್ಲಿ ಕಳುಹಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು X ವೇದಿಕೆಯಲ್ಲಿ ಪೋಸ್ಟ್ ಮಾಡಿರು ಅಶೋಕ “ರೈತರಿಗೆ ದಿನನಿತ್ಯ ಒಂದಲ್ಲ ಒಂದು ರೀತಿ ಕಿರುಕುಳ ಕೊಡುತ್ತಲೇ ಇರಬೇಕು ಎಂದು ನಿರ್ಧರಿಸಿರುವ @INCKarnataka ಸರ್ಕಾರ, ಗೋಣಿ ಚೀಲದ ಕೊರತೆ ನೆಪ ಹೇಳಿ ಕೊಬ್ಬರಿ ಖರೀದಿ ಮಾಡದೆ ರೈತರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿದೆ.
ಸಿಎಂ @siddaramaiah ನವರೇ, ನಿಮ್ಮ ಸರ್ಕಾರ ನಿಜವಾಗಿಯೂ ಬದುಕಿದೆಯೋ ಅಥವಾ ಸತ್ತಿದೆಯೋ ಒಮ್ಮೆ ಸ್ಪಷ್ಟವಾಗಿ ಹೇಳಿಬಿಡಿ. ಯಾವುದಾದರೂ ಒಂದು ಇಲಾಖೆ, ಒಬ್ಬ ಸಚಿವ ನೆಟ್ಟಗೆ ಕಾರ್ಯನಿರ್ವಹಣೆ ಮಾಡುತ್ತಿರುವ ಉದಾಹರಣೆ ನೀಡಿ ನೋಡೋಣ. ತಮ್ಮ ಆಡಳಿತದಲ್ಲಿ ಇಡೀ ಆಡಳಿತ ಯಂತ್ರ ಸ್ಟಬ್ಧವಾಗಿದೆ. ಸಚಿವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ, ಅಧಿಕಾರಿಗಳು ನಿಯಂತ್ರಣದಲಿಲ್ಲ.
ಯಾವುದಕ್ಕೂ ಪೂರ್ವಸಿದ್ಧತೆ ಇಲ್ಲ, ಮುಂದಾಲೋಚನೆ ಇಲ್ಲ. ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಅಂತ ಕೈಚೆಲ್ಲೋದು ಇಲ್ಲವೇ ಚುನಾವಣಾ ನೀತಿ ಸಂಹಿತೆಯ ನೆಪ ಹೇಳಿ ಜಾರಿಕೊಳ್ಳೋದು. ಇದಕ್ಕಾ ಕನ್ನಡಿಗರು ನಿಮಗೆ ಮತ ನೀಡಿದ್ದು?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಗೋಣಿ ಚೀಲಗಳು ಸರಬರಾಜು ಆಗುತ್ತಿರುವುದು ಪಶ್ಚಿಮ ಬಂಗಾಳದಿಂದ. ಆದರೆ ಅಲ್ಲಿ ಪ್ರಸ್ತು ಚುನಾವಣೆ ನಡೆಯುತ್ತಿದೆ. ಹೀಗಾಗಿ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆಂದು ರೈತರು ದೂರುತ್ತಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.