ಮಂಡ್ಯ: “ನಾವು ಕೆಲಸವಿಲ್ಲದವರು ನಿಜ. ಆದರೆ ಕೆಲಸವಿರುವ ನೀವು ಏನು ಮಾಡುತ್ತಿದ್ದೀರಿ?” ಎಂದು ಬಿಜೆಪಿ ನಾಯಕ ಡಾ. ಅಶ್ವತ್ಥ್ ನಾರಾಯಣ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರಿಗೆ ಕೆಲಸವಿಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗಲಭೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಹೇಳಿದರು.
“ಇದನ್ನು ನಾವು ಖಂಡಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ನಮ್ಮನ್ನು ಕೆಲಸವಿಲ್ಲದವರು ಎಂದು ಹೇಳುತ್ತಿದ್ದಾರೆ. ನಮಗೆ ಕೆಲಸವಿಲ್ಲ ನಿಜ. ಆದರೆ ಕೆಲಸವಿರುವ ನೀವು ಏನು ಮಾಡುತ್ತಿದ್ದೀರಾ? ಮಸಾಲೆ ದೋಸೆ ತಿನ್ನುತ್ತಿದ್ದೀರಾ?” ಎಂದು ಪ್ರಶ್ನಿಸಿದರು.
“ಕೆಲಸವಿರುವ ಸರ್ಕಾರದ ನಾಯಕರು ಎಲ್ಲಿಗೆ ಹೋಗಿದ್ದಾರೆ? ಒಬ್ಬನೇ ಒಬ್ಬ ಸಚಿವನಾಗಲಿ, ಶಾಸಕನಾಗಲಿ ಮದ್ದೂರಿಗೆ ಬಂದು ಜನರ ಸಂಕಷ್ಟವನ್ನು ಆಲಿಸಿಲ್ಲ. ಈ ಸರ್ಕಾರ ಸತ್ತು ಹೋಗಿದೆಯಾ? ಜೀವಂತವಾಗಿದೆಯಾ?” ಎಂದು ಅಶ್ವತ್ಥ್ ನಾರಾಯಣ್ ತೀವ್ರ ವಾಗ್ದಾಳಿ ನಡೆಸಿದರು.
“ಜನರು ಬಹುಮತದಿಂದ ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದು, ನಿಮಗೆ ಆಡಳಿತವನ್ನು ಕೊಟ್ಟಿದ್ದಾರೆ. ಅದಕ್ಕಾಗಿಯಾದರೂ ಗೌರವಿಸಿ ಉತ್ತಮ ಆಡಳಿತ ನೀಡಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಅದನ್ನು ಮೊದಲು ಸರಿಪಡಿಸಿ. ಕೆಲಸವಿರುವ ನೀವು ಏನಾದರೂ ಮಾಡಿ” ಎಂದು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮತ್ತು ಡಿಸಿಎಂ ವಿರುದ್ಧ ಗುಡುಗಿದರು.