ಛತ್ತೀಸ್ಗಢ: 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದ್ದಾರೆ. ಯಾತ್ರೆ ಕುರಿತು ಮಾತನಾಡಿರುವ ಅವರು, ಸಿಎಂ ಬಘೇಲ್ 'ಭಾರತ್ ಜೋಡೋ'ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಅವರು ಮೊದಲು ತಮ್ಮದೇ ಪಕ್ಷವನ್ನು ಹೊಂದುಗೂಡಿಸಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿ ನಮ್ಮ ಬುಡಕಟ್ಟು ಸಹೋದರರನ್ನು ಕೊಲ್ಲಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಸಿಎಂ ಬಘೇಲ್ ಆವರು ಕೇರಳದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದಾರೆ. ಹೀಗಾಗಿ ಸಿಎಂ ಭೂಪೇಶ್ ಬಘೇಲ್ ಅವರಂತಹ ಜನರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಕಿಡಿಕಾರಿದರು. ಮುಂದುವರೆದು ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ರಾಜಕಾರಣವನ್ನು ಬದಲಾಯಿಸಿದ್ದಾರೆ. ಈ ಹಿನ್ನಲೆ ಕಾಂಗ್ರೆಸ್ ಸಹೋದರ-ಸಹೋದರಿಯರ ಪಕ್ಷವಾದ್ದರಿಂದ ನಮ್ಮ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಎಂದು ವಾಗ್ದಾಳಿ ನಡೆಸಿದರು.