Sunday, June 8, 2025

ಸತ್ಯ | ನ್ಯಾಯ |ಧರ್ಮ

ತುರ್ತಾಗಿ ಜಸ್ಟೀಸ್‌ ನಾಗಮೋಹನ್‌ ದಾಸ್‌ ಸಮಿತಿಯು ತನ್ನ ವರದಿಯನ್ನು ನೀಡಬೇಕು : ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಗ್ರಹ

ಬೆಂಗಳೂರು, ಫೆ,07 : ಒಳಮೀಸಲಾತಿಯನ್ನು ಯಾವುದೇ ವಿಳಂಬ ಮಾಡದೆ ತುರ್ತಾಗಿ ಜಾರಿಗೆ ಆಗ್ರಹಿಸಿ ಇಂದು ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಪ್ರತಿಕಾಗೋಷ್ಠಿಯನ್ನು ಕರೆಯಲಾಗಿತ್ತು.

ಒಳಮೀಸಲಾತಿ ಜಾರಿಯಾಗುವ ತನಕ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿರುವುದೂ ಸಹಾ ಅನ್ಯಾಯ ಮಾಡಿದಂತೆ ಎಂಬ ಅಭಿಪ್ರಾಯವನ್ನು ಒಕ್ಕೊರಲಿನಿಂದ ಮಾತನಾಡಿದ ಒಕ್ಕೂಟವು ಯಾವುದೇ ವಿಳಂಬ ಮಾಡದಂತೆ ತುರ್ತಾಗಿ ಜಸ್ಟೀಸ್‌ ನಾಗಮೋಹನ್‌ ದಾಸ್‌ ಸಮಿತಿಯು ತನ್ನ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದರು.


ದಶಕಗಳ ಕಾಲ ಒಳಮೀಸಲಾತಿ ಪರವಾಗಿ ಹೋರಾಟಗಳು ನಡೆಯುತ್ತಲೇ ಬಂದಿವೆ. ಸುಪ್ರಿಂ ಕೋರ್ಟ್‌ ತೀರ್ಪಿನ ನಂತರ ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸುವ ವಿಚಾರವಾಗಿ ನಾಗಮೋಹನ್‌ ದಾಸ್‌ ಅವರ ಸಮಿತಿ ರಜಿಸಿದ್ದು ಸ್ವಾಗತಾರ್ಹವಾದರೂ, ಇವರ ಸಮಿತಿಯ ಕೆಲಸ ಶೀಘ್ರವಾಗಿ ಮುಗಿಯದೇ ಹೋದರೆ ಮತ್ತಷ್ಟು ಕಾಲ ದೂಡಿದಂತೆ ಆಗುತ್ತದೆ ಎಂಬ ಅಭಿಪ್ರಾಯದೊಂದಿಗೆ ಒಂದಷ್ಟು ಬೇಡಿಕಡಗಳನ್ನು ಮುಂದಿಟ್ಟಿದ್ದಾರೆ.

  1. ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ಹಾಗೆ ಒಳಮೀಸಲಾತಿ ವರ್ಗೀಕರಣ ಮಾಡಬೇಕು.
  2. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ʼಪ್ರಾಯೋಗಿಕ ದತ್ತಾಂಶʼವನ್ನು ಮಾನದಂಡವನ್ನಾಗಿ ವಿಧಿಸಿರುವುದರಿಂದ ಮುಂದಿನ ಜನಗಣತಿಯವರೆಗೆ ಅವಶ್ಯಕವಿರುವ ಅಂಶಗಳಿಗೆಲ್ಲ ʼಸ್ಯಾಂಪಲ್‌ ಸಮೀಕ್ಷೆʼ ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು.
  3. ಉದ್ಯೋಗಗಳಲ್ಲಿ ಅತಿ ಕಡಿಮೆ ಆಯ್ಕೆ/ಅವಕಾಶಗಳಿದ್ದಾಗ, ಪ.ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ನೀಡಬೇಕೆಂಬ ಶ್ರೇಣೀಕರಣವನ್ನು ನಿಗದಿಗೊಳಿಸಬೇಕು.
  4. ಬಡ್ತಿ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಪರಿಗಣಿಸಬೇಕು.
  5. ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು.
  6. ಗುತ್ತಿಗೆ ನೌಕರಿಗಳಲ್ಲಿಯೂ ಒಳಮೀಸಲಾತಿ ಪರಿಗಣಿಸಲು ಶಿಫಾರಸು ಮಾಡಬೇಕು.
  7. ಒಳಮೀಸಲಾತಿ ಅನುಷ್ಠಾನದಲ್ಲಿನ ಕುಂದುಕೊರತೆಗಳು ಹಾಗೂ ಪ್ರಗತಿಯ ಮೇಲ್ವಿಚಾರಣೆ ಮಾಡಲು ರಾಜ್ಯ ಪರಿಶಿಷ್ಟ ಆಯೋಗದಡಿಯಲ್ಲಿ ಒಂದು ಸ್ವತಂತ್ರ ಸಮಿತಿ ರಚಿಸಬೇಕು.
  8. ಇಂದಿರಾ ಸಹಾನಿ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ.50 ಮೀಸಲಾತಿ ಮಿತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಬೇಕು.
  9. ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು.

ಈ ಮೇಲಿನ ಮನವಿಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹಾಗೆ ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯಲ್ಲಿಯೂ ಎತ್ತಿಹಿಡಿಯುವಂತೆ ಒಕ್ಕೂಟವು ಆಗ್ರಹಿಸಿತು.

ಒಕ್ಕೂಟದ ಪರವಾಗಿ ಬಸವರಾಜ್‌ ಕೌತಾಳ್‌, ಪಿಚ್ಚಳ್ಳಿ ಶ್ರೀನಿವಾಸ್‌, ಮಾವಳ್ಳಿ ಶಂಕರ್‌, ಡಿ.ಟಿ ವೆಂಕಟೇಶ್‌, ಶಿವಣ್ಣ ಕನಕಪುರ, ವಿನಯ್‌ ಶ್ರೀನಿವಾಸ್‌, ಚಂದ್ರು ತರಹುಣಿಸೆ ಭಾಗವಹಿಸಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page