ಹೈದರಾಬಾದ್ನ ಕಾಂಚ ಗಚಿಬೌಲಿ ಪ್ರದೇಶದಲ್ಲಿ ಅರಣ್ಯನಾಶ ಮಾಡಿದ ತೆಲಂಗಾಣ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ (ಮೇ.15) ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಮತ್ತೆ ಅರಣ್ಯ ಬೆಳೆಸಿ, ಇಲ್ಲವೇ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಸಿದ್ಧರಾಗಿ” ಎಂದು ಎಚ್ಚರಿಕೆ ನೀಡಿದೆ.
“ಸರ್ಕಾರ ದೀರ್ಘ ವಾರಾಂತ್ಯದ (ಲಾಂಗ್ ವೀಕೆಂಡ್) ವೇಳೆ ಅರಣ್ಯ ನಾಶ ಮಾಡಿದೆ. ಹಾಗಾಗಿ, ಇದೊಂದು ಪೂರ್ವಯೋಜಿತ ಕೃತ್ಯ ಎಂದು ತೋರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಅವರ ಪೀಠ ಹೇಳಿದೆ ಎಂದು ವರದಿಯಾಗಿದೆ.
ಕಾಂಚ ಗಚಿಬೌಲಿಯ ಅರಣ್ಯದ ಸ್ಥಿತಿಯನ್ನು ಪರಿಶೀಲನೆ ನಡೆಸಿದ ಕೇಂದ್ರೀಯ ಸಬಲೀಕರಣ ಸಮಿತಿ (ಸಿಇಸಿ) ಆ ಪ್ರದೇಶವನ್ನು ಅರಣ್ಯವೆಂದು ಪರಿಗಣಿಸಿ, ರಾಜ್ಯ ಸರ್ಕಾರ ಮತ್ತೆ ಅರಣ್ಯ ಬೆಳೆಸಬೇಕೆಂದು ಶಿಫಾರಸು ಮಾಡಿ ಅಂತಿಮ ವರದಿಯನ್ನು ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಮೇಲಿನ ಆದೇಶ ನೀಡಿದೆ.
“ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ. ನೀವು ನಿಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಇದರಲ್ಲಿ ಎಲ್ಲಾ ಅಧಿಕಾರಿಗಳು ಭಾಗಿಯಾಗಿರುವುದರಿಂದ ನೀವು ದೊಡ್ಡ ತೊಂದರೆಗೆ ಸಿಲುಕುತ್ತೀರಿ. ದೀರ್ಘ ವಾರಾಂತ್ಯದ ಲಾಭ ಪಡೆದು ನೀವು ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದೀರಿ. ನೀವು ಪೋಟೋಗಳನ್ನು ನೋಡಿದ್ದೀರಾ? ಡಜನ್ಗಟ್ಟಲೆ ಬುಲ್ಡೋಜರ್ಗಳನ್ನು ತಂದು ನಿಲ್ಲಿಸಲಾಗಿತ್ತು. ಪ್ರಾಥಮಿಕವಾಗಿ, ಇದೆಲ್ಲವೂ ಪೂರ್ವ ಯೋಜಿತವಾಗಿದೆ ಎಂದು ತೋರುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹೇಳಿದ್ದಾರೆ.
“ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳನ್ನು ತಾತ್ಕಾಲಿಕ ಜೈಲಿಗೆ ಕಳುಹಿಸಬೇಕೆಂದು ನೀವು ಬಯಸಿದರೆ, ನಾವು ಅದನ್ನು ಮಾಡುತ್ತೇವೆ. ನಾವು ಯಾವಾಗಲೂ ಸುಸ್ಥಿರ ಅಭಿವೃದ್ಧಿಯ ಪ್ರತಿಪಾದಕರು, ಇಲ್ಲಿ ಪ್ರಶ್ನೆಯೆಂದರೆ 1,000 ಮರಗಳನ್ನು ತೆರವುಗೊಳಿಸಿರುವುದು ಮತ್ತು ದೀರ್ಘ ರಜೆಯ ಲಾಭವನ್ನು ದುರುಪಯೋಗ ಮಾಡಿಕೊಂಡಿರುವುದು (ಅರಣ್ಯ ನಾಶಕ್ಕೆ ಬಳಸಿರುವುದು)” ಎಂದಿದ್ದಾರೆ.
ತೆಲಂಗಾಣ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು, ವಾರಾಂತ್ಯದಲ್ಲಿ ತರಾತುರಿಯಲ್ಲಿ ಮರ ತೆರವು ಮಾಡಿಲ್ಲ. ಒಂದು ವರ್ಷದ ಸಾಂಸ್ಥಿಕ ಪ್ರಕ್ರಿಯೆ ಬಳಿಕ ತೆರವು ಮಾಡಲಾಗಿದೆ ಎಂದಿದ್ದಾರೆ. ಇದಕ್ಕೆ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.